ಮನದ ಮೂಲೆಯಲ್ಲಡಗಿದ
ಒಂದಷ್ಟು ದುಗುಡಗಳು
ಇನ್ನೊಮ್ಮೆ ನನ್ನ ಮನವನ್ನರಳಿಸಿದ
ಒಂದಿಷ್ಟು ಭಾವನೆಗಳನ್ನ
ಹೆಕ್ಕಿ ಚಿತ್ತಾರ ಬಿಡಿಸಿದಾಗ
ಅದನ್ನು ಕವನವೆಂದು ಗೀಚಿದ್ದೆ...
ದುಗುಡ ದುಮ್ಮಾನಗಳು
ಎದೆಯ ಕುಕ್ಕಿ
ಕಣ್ಣೀರು ಹರಿಸಿದಾಗ
ಕಷ್ಟದಾ ಸುಳಿಯಲ್ಲಿ ಬೇಸತ್ತಿರಲು
ಈ ಜೀವನವ ನಾನಂದು
ನರಕವೆಂದು ಕರೆದಿದ್ದೆ....
ಏಳು ಬೀಳುಗಳ ನಡುವೆ
ಸಾಗುವುದೀ ಜೀವನವು
ಸುಖ ದುಃಖಗಳು ಇವು, ಕ್ಷಣಿಕವೆಂದಾಗ
ಒಮ್ಮೆ ಅತ್ತಿದ್ದೆ, ಮತ್ತೆ ನಕ್ಕಿದ್ದೆ
ಕಾಲ ಸರಿಯಲು ಹೀಗೆ.. ಜಗದ
ನಿಯಮವಿದೆಂದು ನಾನಾಗ ಅರಿತಿದ್ದೆ.
No comments:
Post a Comment