ರಜೆಗಾಗಿ ಪ್ರಾರ್ಥಿಸಿದ್ದ ದಿನಗಳಿವು...

ನಾವು ಚಿಕ್ಕವರಿರುವಾಗ ಮನೆಗೆ ಕ್ಯಾಲೆಂಡರ್ ತಂದರೆ ಮೊದಲು ಅದರಲ್ಲಿ ಎಷ್ಟು ಕೆಂಪು ಬಣ್ಣದ ದಿನಗಳಿವೆ ಎಂದು ಎಣಿಸುತ್ತಿದ್ದೆವು. ಈ ವರ್ಷ ಎಷ್ಟು ರಜೆ ಇದೆ? ಎಂದು ಎಣಿಸಲು ನಾನು ಮತ್ತು ನನ್ನ ತಮ್ಮ ಜಗಳವಾಡುತ್ತಿದ್ದೆವು. ಕೆಲವೊಂದು ಹಬ್ಬ, ಸರಕಾರೀ ರಜೆಗಳು ಆದಿತ್ಯವಾರ ಬಂದರೆ ಅಯ್ಯೋ ..ಒಂದು ರಜೆ ನಷ್ಟವಾಯಿತಲ್ಲಾ ಎಂಬ ಬೇಜಾರು ಬೇರೆ. 7ನೇ ಕ್ಲಾಸಿನವರೆಗೆ ಈ ಚಾಳಿ ಇರುತ್ತಿತ್ತು. ಹೈಸ್ಕೂಲ್್ಗೆ ತಲುಪಿದಾಗ ರಜೆ ದಿನದಲ್ಲೂ ಸ್ಪೆಷಲ್ ಕ್ಲಾಸ್ ಇರುತ್ತಿತ್ತು. ಕೆಲವೊಮ್ಮೆ ಸ್ಪೆಷಲ್ ಕ್ಲಾಸ್ ಖುಷಿ ತಂದರೆ ಇನ್ನೊಮ್ಮೆ ಬಾರೀ ತಲೆನೋವು ಆಗಿ ಬಿಡುತ್ತಿತ್ತು. ನಮ್ಮ ಮನೆಯಿಂದ ಹೈಸ್ಕೂಲ್್ಗೆ ಹೋಗಬೇಕಾದರೆ ಕಾಸರಗೋಡು ನಗರಕ್ಕೆ ಬಸ್ಸಲ್ಲಿ ಹೋಗಬೇಕು. ಆವಾಗ ಬಸ್ ಮುಷ್ಕರ ಬಂದರೆ ಬಾರೀ ಸಂತೋಷ. ಹಾಗೆ ಒಂದು ರಜೆ ನಮಗೆ ಸಿಗುತ್ತಿತ್ತು. ನಮ್ಮ ರಾಜ್ಯದಲ್ಲಂತೂ ಆಗಾಗ ಮುಷ್ಕರಗಳು ನಡೆಯುತ್ತಲೇ ಇರುವುದರಿಂದ ಒಂದಷ್ಟು 'ಮುಷ್ಕರ ರಜೆ'ಗಳೂ ನಮ್ಮ ಪಾಲಿಗೆ ಒದಗುತ್ತಿತ್ತು. ನಾನಂತೂ ಯಾವಾಗಲೂ ರಜೆಗಾಗಿಯೇ ಕಾಯುತ್ತಿದ್ದೆ. ಇದು ಮಾತ್ರವಲ್ಲದೆ ನಮ್ಮ ಮನೆಯಿಂದ ಕಾಸರಗೋಡಿಗೆ ಹೋಗಬೇಕಾದರೆ ಎರುದುಂಕಡವ್ ಎಂಬ ಹೊಳೆಯೊಂದನ್ನು ದಾಟಿ ಹೋಗಬೇಕು. ಆ ಹೊಳೆಗೆ ಸೇತುವೆಯೇನೋ ಇದೆ ನಿಜ ಆದರೆ ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ಉಕ್ಕಿ ಹರಿಯುವುದರಿಂದಾಗಿ ಯಾವುದೇ ವಾಹನಗಳಿಗೆ ಅತ್ತ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇನ್ನೊಂದು ದಾರಿಯಿದ್ದರೂ ಅದರಲ್ಲಿ ಬಸ್್ಗಳಿಗೆ ಓಡಾಡಲು ಕಷ್ಟವಾಗಿರುತ್ತಿತ್ತು. ಕೇವಲ ಸಣ್ಣ ವಾಹನಗಳು ಮಾತ್ರ ಆ ದಾರಿಯನ್ನು ಬಳಸುತ್ತಿದ್ದವು. ಬಾರೀ ಮಳೆ ಬಂದರೆ ಸೇತುವೆಯ ಮೇಲೆ ನೀರು ಉಕ್ಕಿ ಹರಿಯುವುದು ಪಕ್ಕಾ ಆಗಿತ್ತು. ಆವಾಗ ರಾತ್ರಿ ಬಾರೀ ಮಳೆ ಬಂದರೆ, ನಾಳೆ ಸೇತುವೆಯ ಮೇಲೆ ನೀರಿರುತ್ತದೆ ಎಂದು ಯಾರಾದರೂ ಅಂದರೆ ಸಾಕು ನಾಳೆ ರಜೆ ಎಂದು ತೀರ್ಮಾನಕ್ಕೆ ಬಂದು ಬಿಡುತ್ತಿದ್ದೆವು. ನಮ್ಮ ಹೈಸ್ಕೂಲ್್ಗೆ ನಮ್ಮ ಹಳ್ಳಿಯಿಂದ ಹೋಗುವ ಹುಡುಗಿಯರೂ ಕಡಿಮೆಯಾಗಿದ್ದು, ಸೇತುವೆ ಮೇಲೆ ನೀರು ಬಂದರೆ ಯಾರೂ ಶಾಲೆಗೆ ಹೋಗಬೇಡಿರಿ ಎಂಬ ಒಳ ಒಪ್ಪಂದವನ್ನು ನಾವು ಮಾಡಿ ಬಿಡುತ್ತಿದ್ದೆವು. ಇದು ಮಾತ್ರವಲ್ಲದೆ ಮಗಳು ಈ ಮಳೆಯಲ್ಲಿ ಹೇಗೆ ಮನೆಗೆ ಬರುತ್ತಾಳೋ ಎಂಬ ಗಾಬರಿಯೂ ಅಮ್ಮನಿಗೆ ಇರುವುದರಿಂದ ನನಗೆ ರಜೆ ಅಮ್ಮನಿಂದ ಮೊದಲೇ ಜ್ಯಾರಿಯಾಗುತ್ತಿತ್ತು. ಕೆಲವೊಮ್ಮೆ ಅಣ್ಣ ಇವತ್ತು ಶಾಲೆಗೆ ನಾನು ಬೈಕ್್ನಲ್ಲಿ ಕರೆದುಕೊಂಡು ಹೋಗಿ ಬಿಡುತ್ತೇನೆ ಎಂದು ಹೇಳಿದರೆ ಒಲ್ಲದ ಮನಸ್ಸಿನಿಂದ ಬೈಕ್ ಹತ್ತುತ್ತಿದ್ದೆ.

ಅಬ್ಬಾ... ಈ ಗಣಿತ ಎಂದರೆ ನನಗೆ ಮೊದಲೇ ಕಬ್ಬಿಣದ ಕಡಲೆ ಕಾಯಿ. ಕೆಲವೊಂದು ದಿನ ಗಣಿತ ಕ್ಲಾಸು ಪರೀಕ್ಷೆ ಇದ್ದು, ನಾನೇನು ತಯಾರಿ ಮಾಡಿಕೊಂಡಿರದ ದಿನ ನಾಳೆ ಜೋರಾಗಿ ಮಳೆ ಬರಬೇಕು, ಸೇತುವೆ ಮೇಲೆ ನೀರು ತುಂಬಿ ಹರಿಯಬೇಕು ಎಂದು ಪ್ರಾರ್ಥಿಸುತ್ತಿದ್ದೆ. ಹೀಗೆ ಬಾರೀ ಮಳೆ ಬಂದು ತೊಂದರೆ ಅನುಭವಿಸುವಾಗ ಕೆಲಸಕ್ಕೆ ಹೋಗಲಾರದೆ ಮನೆಯಲ್ಲೇ ಕುಳಿತುಕೊಂಡ ಅಪ್ಪ ಇನ್ಯಾವಾಗ ಈ ಹೊಳೆಗೆ ಹೊಸತಾಗಿ ದೊಡ್ಡ ಸೇತುವೆಯೊಂದನ್ನು ನಿರ್ಮಿಸುತ್ತಾರೋ ಎಂದು ಹೇಳುವಾಗ, ಅಯ್ಯೋ....ಇನ್ಮೇಲೆ ಮಳೆ ರಜೆಗೂ ಕುತ್ತು ಬರುತ್ತದೆ ಎಂದು ಹಲುಬುತ್ತಿದ್ದೆ. ಆದ್ರೆ ನಂಗೇನೋ ಒಂದಿಷ್ಟು ಅದೃಷ್ಟವಿತ್ತು, ನಾನು ಪ್ಲಸ್ ಟು ಮುಗಿಸಿದ ನಂತರವೇ ಆ ಹೊಳೆಗೆ ದೊಡ್ಡದಾದ ಸೇತುವೆ ನಿರ್ಮಾಣವಾಯಿತು. ಇದಾದನಂತರ ನಮ್ಮೂರಿನ ಮಕ್ಕಳಿಗೆ ಸೇತುವೆಯ ಮೇಲೆ ನೀರು ಬಂದಿದೆ ಎಂದು ರಜೆಗೆ ನೆಪ ಹೇಳುವುದಕ್ಕೆ ಪೂರ್ಣ ವಿರಾಮ ಬಿತ್ತು.


ಮತ್ತೆ ಕಾಲೇಜು. ಅಲ್ಲಂತೂ ಶನಿವಾರ ಕೂಡಾ ಕ್ಲಾಸು. ಕೆಲವೊಮ್ಮೆ ಸ್ಪೆಷಲ್ ಕ್ಲಾಸ್ ಆದಿತ್ಯವಾರವೂ ಇರುತ್ತಿತ್ತು. ಅದು ಇಂಜಿನಿಯರಿಂಗ್್ಗೆ ಸೇರಿದ ಮೊದಲ ವರ್ಷ. ಕ್ಲಾಸು ತಪ್ಪಿಸುವಂತಿಲ್ಲ. ಹಾಜರಾತಿ ಕಡಿಮೆಯಾದರೆ ಮಾರ್ಕ್ ಕೂಡಾ ಕಟ್. ಹಾಗೇ ಪದವಿಗೆ ಬಂದ ಮೇಲೆ ಸ್ಪಲ್ಪ ಸೀರಿಯಸ್ ಆಗ್ಬೇಕು. ಇನ್ನು ಅದು ಇದು ಅಂತಾ ರಜಾ ತೆಗೆದುಕೊಳ್ಳುವಂತಿಲ್ಲ ಎಂದು ಅಮ್ಮ ಉಸುರಿದ್ದರು. ಒಂದು ದಿನ ರಜೆ ತೆಗೆದುಕೊಂಡರೆ ಸಾಕು ಮರು ದಿನ ಪಾಠ ಅರ್ಥವಾಗುತ್ತಿರಲಿಲ್ಲ. ನೋಟ್ಸ್ ಅಷ್ಟೇ ಇರುತ್ತಿತ್ತು. ಚಿಕ್ಕಂದಿನಲ್ಲಿ ನೋಟ್ಸ್ ಕಂಪ್ಲೀಟ್ ಮಾಡ್ಬೇಕಾದರೆ ಅಮ್ಮ, ಅಕ್ಕ, ಅಪ್ಪ ಎಲ್ಲರೂ ನನ್ನ ಸಹಾಯಕ್ಕೆ ಬರುತ್ತಿದ್ದರು. ಕಾಲೇಜು ಮೆಟ್ಟಲು ಹತ್ತಿದಾಗ ಅಮ್ಮ ಅಪ್ಪನಿಗಂತೂ ನನ್ನ ಸಬ್ಜೆಕ್ಟ್ ಅರ್ಥವಾಗುವುದಿಲ್ಲ. ಅಕ್ಕನಿಗೆ ಪುರುಸೋತ್ತಿಲ್ಲ. ಹಾಗಾಗಿ ನಾನೇ ನೋಟ್ಸ್ ಬರೀಬೇಕು. ಮಾತ್ರವಲ್ಲದೆ ಎಲ್ಲಾ ಟೀಚರ್ಸ್್ಗೆ ಯಾಕೆ ರಜಾ ತೆಗೆದುಕೊಂಡೆ? ಎಂಬ ಕಾರಣ ಹೇಳ್ಬೇಕು. ಸುಮ್ಮನೆ ಹಲ್ಲು ನೋವು, ಹೊಟ್ಟೆ ನೋವು ಅಂದರೆ ನೀನು ಆರಾಮವಾಗಿಯೇ ಇದ್ದಿಯಲ್ಲಾ...ಮುಖದಲ್ಲಿ ಒಂದಿಷ್ಟು ಸುಸ್ತಾಗಿದ್ದೇ ತಿಳಿಯುತ್ತಿಲ್ಲ ಎಂಬ ವಿವರಣೆಗಳು ಬೇರೆ. ಇಷ್ಟೆಲ್ಲಾ ಕಷ್ಟ ನೋಡಿದರೆ ರಜಾ ತೆಗೆದುಕೊಳ್ಳವುದೇ ಬೇಡ..ಕ್ಲಾಸಲ್ಲಿ ನಿದ್ದೆ ಮಾಡಿದ್ರೂ ಪರ್ವಾಗಿಲ್ಲ.. ಕ್ಲಾಸ್ ಮಿಸ್ ಮಾಡಿಕೊಳ್ಳಬಾರದು ಎಂಬ ತೀರ್ಮಾನಕ್ಕೆ ಬಂದೆ. (ನಾನೇನು ಸುಮ್ಮನೆ ನಿದ್ದೆ ಮಾಡುತ್ತಿರಲಿಲ್ಲ. ಆ ನಿದ್ದೆಯಲ್ಲಿ ಹಲವಾರು ಕನಸು ಕಾಣುತ್ತಿದ್ದೆ) :)

ಆದ್ರೆ ನನಗೆ ಅಲ್ಲಿಯೂ ಅದೃಷ್ಟವಿತ್ತು. ಅಂದರೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಆಗಾಗ ಮುಷ್ಕರ ನಡೆಸುತ್ತಿದ್ದರು. ನಮ್ಮ ಕಾಲೇಜಿನಲ್ಲಿ ರಾಜಕೀಯ ಕಾರುಬಾರು ಬಾರೀ ಜೋರಾಗಿದ್ದರಿಂದ ಸಮರಗಳಿಗೇನೂ ಕಡಿಮೆಯಿರಲಿಲ್ಲ. ಮೊದಲ ವರ್ಷ ಆ್ಯಂಟಿ ರ್ಯಾಗಿಂಗ್, ನಂತರದ ವರ್ಷ ಫ್ಯಾಷನ್ ಶೋ ನಿಲ್ಲಿಸಿ, ಗುಂಪು ಘರ್ಷಣೆ, ಅಧ್ಯಾಪಕರ ಕೊರತೆ, ಕಾಲೇಜು ಶುಲ್ಕದ ಏರಿಕೆ, ಪರೀಕ್ಷಾ ಫಲಿತಾಂಶ ತಡವಾಗಿ ಬರುತ್ತಿದೆ, ಪ್ಲೇಸ್್ಮೆಂಟ್ ಸೆಲ್ ಸ್ಥಗಿತಗೊಂಡಿದೆ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಅಲ್ಲಿ ಮುಷ್ಕರಗಳು ನಡೆಯುತ್ತಿದ್ದವು. ಇನ್ನೊಮ್ಮೆ ಅಮೆರಿಕದ ಧೋರಣೆಯನ್ನು ಖಂಡಿಸಿ, ರಷ್ಯಾದಲ್ಲಿನ ರಾಜಕೀಯ ವಿಚಾರಗಳು, ಇರಾನ್, ಇರಾಕ್್ನ ಸಮಸ್ಯೆಗಳು ಇವೆಲ್ಲದಕ್ಕೂ ನಮ್ಮಲ್ಲಿ ಮುಷ್ಕರ ಇದ್ದೇ ಇರುತ್ತಿತ್ತು. ಹೀಗೇ ಅವರು ಮುಷ್ಕರ ನಡೆಸುತ್ತಿದ್ದರು, ನಮಗೆ ರಜೆ ಸಿಗುತ್ತಿತ್ತು. ಕೆಲವೊಂದು ವಿಷಯಗಳಿಗೆ, ಅಂದರೆ ಕಾಲೇಜಿಗೆ ಸಂಬಂಧಪಟ್ಟ ವಿಷಯವಾಗಿದ್ದರೆ ನಾವೂ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದೆವು.


ಹೀಗಿದ್ದರೂ ಕಾಲೇಜಿಗೆ ಹೊರಡುವ ಮುನ್ನ 'ದೇಶಾಭಿಮಾನಿ' ಪೇಪರ್್ನತ್ತ ಒಂದು ಸಾರಿ ಕಣ್ಣಾಡಿಸುತ್ತಿದೆ. ಯಾಕೆಂದರೆ 'ಇಂದು ಶಾಲಾ ಕಾಲೇಜುಗಳಲ್ಲಿ ನಮ್ಮ ವಿದ್ಯಾರ್ಥಿಗಳು ಮುಷ್ಕರ ಹೂಡುವರು' ಅಥವಾ 'ಕಣ್ಣೂರ್ ಯುನಿವರ್ಸಿಟಿಯ ಕಾಲೇಜುಗಳಲ್ಲಿ ಇಂದು ಸಮರ 'ಎಂಬ ಸುದ್ದಿಯನ್ನು ಮಾತ್ರ ಯುನಿವರ್ಸಿಟಿ ಸುದ್ದಿ ವಿಭಾಗದಲ್ಲಿರುತ್ತಿದ್ದು ಇದನ್ನು ಮಾತ್ರ ನಾನು ಹುಡುಕಿ ಓದುತ್ತಿದ್ದೆ. ಆವಾಗ ಮುಷ್ಕರ ಇದೆ ಅಂತಾ ಗೊತ್ತಾದರೆ ಮತ್ತೆ ಕಾಲೇಜಿಗೆ ಹೋಗಲು ರೆಡಿಯಾಗಬೇಕಾಗಿಲ್ಲ. ಕೆಲವೊಂದು ಬಾರಿ ಮುಷ್ಕರವಿದ್ದರೂ ಕಾಲೇಜಿಗೆ ಬಂದು ಹೋದರೆ ಒಂದು ಹಾಜರಿ ಸಿಗುತ್ತಿತ್ತು. ಆದ್ರೂ ಹಾಜರಿ ಸಿಗಬೇಕಲ್ಲಾ ಎಂದು ಅರೆ ಮನಸ್ಸಿನಿಂದ ಕಾಲೇಜಿಗೆ ಹೊರಡಬೇಕು. ಕಾಲೇಜಿನ ವಿದ್ಯಾರ್ಥಿಗಳು ಮುಷ್ಕರ ಹೂಡುತ್ತಾರೆ ಎಂಬ ಸುದ್ದಿ ಸಿಕ್ಕಿದರೆ ಸಾಕು, ನಾನು ಕ್ಲಾಸಿನಲ್ಲಿ ಕುಳಿತಿದ್ದರೂ 'ಆನ್ ಸ್ಟ್ರೈಕ್ ಆನ್ ಸ್ಟ್ರೈಕ್್' ಎಂಬ ಕೂಗು ಎಲ್ಲಿಂದ ಕೇಳಿ ಬರುತ್ತದೋ ಎಂದು ಕಿವಿಯಗಲಿಸಿರುತ್ತಿದ್ದೆ. ಅದೂ ನಮ್ಮ ಕ್ಲಾಸ್ (ಐಟಿ ವಿಭಾಗ) ಕ್ಯಾಂಪಸ್್ನ ಮೂಲೆಯಲ್ಲಿತ್ತು. ಈ ಕಾರಣಕ್ಕಾಗಿ ಮುಷ್ಕರ ನಿರತರು ನಮ್ಮ ಕ್ಲಾಸಿನತ್ತ ತಲುಪುವಾಗ ಒಂದೋ ಎರಡೋ ಪೀರಿಯಡ್್ಗಳು ಮುಗಿದಿರುತ್ತಿತ್ತು. ಆವಾಗ ನಾನು ಮೆಕಾನಿಕಲ್ ಬ್ರಾಂಚ್್ನಲ್ಲಿದ್ದರೆ ಎಷ್ಟು ಒಳ್ಳೆಯದಿರುತ್ತಿತ್ತು ಎಂದು ಅನಿಸುತ್ತಿತ್ತು. ಯಾಕೆಂದರೆ ರಾಯಲ್ ಮೆಕ್ ಕ್ಲಾಸಿಗೆ ಮೊದಲು ಸಮರ ನಿರತರು ತಲುಪುತ್ತಿದ್ದು, ನಮ್ಮ ಗ್ಲೋಬಲ್ ಐಟಿ ಕ್ಲಾಸಿಗೆ ತಲುಪುವಾಗ ಒಂದಿಷ್ಟು ಕ್ಲಾಸು ಮುಗಿದಿರುತ್ತಿತ್ತು . :)

ಅಂತೂ ಇಂತು ಕಾಲೇಜು ಮುಗಿಯಿತು. ಮತ್ತೆ ಹೊಟ್ಟೆ ಪಾಡಿಗೆ ಉದ್ಯೋಗ. ಒಂದಿಷ್ಟು ತಿಂಗಳು ಖಾಸಗಿ ಸಂಸ್ಥೆಯೊಂದಲ್ಲಿ ಪ್ರೋಗ್ರಾಂ ಕಲಿಸಲು ಸೇರಿಕೊಂಡಾಗ ಮಕ್ಕಳಿಂದ ಹೆಚ್ಚು ನಾನು ಕಲಿತುಕೊಳ್ಳಬೇಕಾಗಿ ಬಂದಾಗ, ಕೆಲವೊಮ್ಮೆ ಮಕ್ಕಳಿಂದ ಕಲಿತುಕೊಳ್ಳಬೇಕಾಗಿ ಬಂದಾಗ ಅಯ್ಯೋ ...ರಜೆ ರಜೆ ಅಂತ ತಿಪ್ಪರಲಾಗ ಹಾಕಿ ಕಲಿಯದೆ ಕುಳಿತು ಬಿಟ್ಟದ್ದು ತುಂಬಾ ನಷ್ಟವಾಗಿ ಬಿಟ್ಟಿತು ಅಂತಾ ಅನಿಸಿದ್ದೂ ಇದೆ. ಮತ್ತೆ ಇನ್ನೊಂದು ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇರಿದಾಗ ವಿದ್ಯಾರ್ಥಿಗಳು ಸ್ಟೈಕ್ ಮಾಡಿದರೆ ಬಾರೀ ಬೇಜಾರು ಯಾಕೆಂದರೆ ಕ್ಲಾಸಿಲ್ಲ ಎಂಬ ಕಾರಣಕ್ಕೆ ಸಂಬಳವೂ ಕಟ್. ವಿದ್ಯಾರ್ಥಿಯಾಗಿರುವಾಗ ಮುಷ್ಕರಕ್ಕಾಗಿ ಹಾತೊರೆಯುತ್ತಿದ್ದ ನಾನು ಅಧ್ಯಾಪಕಿಯಾದಾಗ 'ಸ್ಟ್ರೈಕ್ ಮಾಡಬೇಡಿ ಮಕ್ಕಳೇ' ಎಂದು ಉಪದೇಶ ಕೊಡುವ ಹಂತಕ್ಕೆ ತಲುಪಿದ್ದೆ .


ಆಮೇಲೆ ಚೆನ್ನೈಯಲ್ಲಿ ಒಂದು ವರ್ಷದ ದುಡಿತ. ಅಲ್ಲಿಯಂತೂ ನಮ್ಮೂರಿನಂತೆ ಮುಷ್ಕರ ಎಂದಾಕ್ಷಣ ಜನ ಜೀವನ ಸ್ತಂಭಿತವಾಗುವುದಿಲ್ಲ. 'ಭಾರತ್ ಬಂದ್್' ಆದ ದಿನ ಅಲ್ಲಿ ರಸ್ತೆಯಲ್ಲಿ ವಾಹನಗಳು ಓಡುವುದನ್ನು ಕಂಡಾಗ ನನಗಂತೂ ಅಚ್ಚರಿ. ಆವಾಗ ಅಲ್ಲಿರುವ ಗೆಳತಿಯೊಬ್ಬಳಲ್ಲಿ ಈ ಬಗ್ಗೆ ಕೇಳಿದಾಗ "ತಮಿಳುನಾಡು ಬಂದ್ ಆಗಬೇಕಾದರೆ ಕರುಣಾನಿಧಿ ಅಥವಾ ಜಯಲಲಿತಾ ಹೇಳಬೇಕು. ಬೇರೆ ಯಾರೇ ಹೇಳಿದರೂ ಇವರು ಕ್ಯಾರೇ ಅನ್ನಲ್ಲ" ಎಂದಿದ್ದಳು. ಅದು ನಿಜವೋ ಎಂದು ನನಗೆ ಗೊತ್ತಿಲ್ಲ. ಅದರ ಬಗ್ಗೆ ಇನ್ನಷ್ಟು ರಿಸರ್ಚ್ ಮಾಡಲು ಇನ್ನೊಂದು ಬಂದ್ ಬರಲಿ ಎಂದು ಕಾಯುತ್ತಿರುವಾಗ ನಾನು ಚೆನ್ನೈಯಿಂದ ಬೆಂಗಳೂರಿಗೆ ಹಾರಿದೆ. ಮತ್ತೆ ಚೆನ್ನೈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಬೆಂಗಳೂರಿಗೆ ಬಂದ ನಂತರ ಮುಷ್ಕರವಿದೆ ಎಂದು ಕೇಳಿದ್ದೇ ಇತ್ತೀಚೆಗೆ. ಅದೇ ತಿರುವಳ್ಳುವರ್ ಪ್ರತಿಮೆ ವಿವಾದವಾದಾಗ. ಅದೋ ಬಂತು ಬೆಂಗಳೂರಿಗೂ ಬಂದ್..ಬಸ್ಸು ಓಡಾಡಲಿಕ್ಕಿಲ್ಲ ಎಂದು ಅಂದು ಕೊಂಡಿದ್ದೆ. ಆದರೆ ಬಂದ್ ಇಲ್ಲ ಬರೀ ಬಂದೋಬಸ್ತು ಮಾತ್ರ ಎಂದು ಕೊನೆಗೆ ತಿಳಿದು ಬಂತು. ಮುಷ್ಕರ ಎಂದು ಹೇಳಿದ್ದರೂ ಎಲ್ಲವೂ ಎಂದಿನಂತೆಯೇ ಇತ್ತು. ಆಗ ನಮ್ಮೂರಿನ ಮುಷ್ಕರ ನೆನಪಿಗೆ ಬಂತು. 'ಮುಷ್ಕರ' ಎಂದ ಕೂಡಲೇ ಏನು? ಯಾಕೆ? ಯಾರು ಮಾಡುತ್ತಾರೆ? ಎಂಬುದರ ಬಗ್ಗೆ ಕೇಳುವ ಮೊದಲೇ ಅಂಗಡಿಗಳನ್ನು ಮುಚ್ಚಿ, ವಾಹನಗಳನ್ನು ರಸ್ತೆಗಿಳಿಸದೆ ಹೆದರಿಕೊಂಡು ಮನೆಯಲ್ಲಿ ಕೂರುವ ಪರಿಸ್ಥಿತಿ, ಮತ್ತೊಮ್ಮೆ ಮುಷ್ಕರದಂದು ನಡೆಯುತ್ತಿರುವ ಗಲಾಟೆ, ಪ್ರತಿಭಟನೆ, ಬಂಧನ, ರಕ್ತದೋಕುಳಿ...ಹೀಗೆ ನಮ್ಮೂರಲ್ಲಿ ನಡೆಯುತ್ತಿರುವ 'ಮುಷ್ಕರ ಆಚರಣೆ'ಯ ಎಲ್ಲಾ ದೃಶ್ಯಗಳು ಮನಪಟಲದಲ್ಲೊಮ್ಮೆ ಹಾದು ಹೋದವು.

Comments

Unknown said…
ರಶ್ಮಿ ಏನ್ರಿ ಇದು ನೀವು ತುಂಬಾ ಭಾವ ಜೀವಿ.
ನನ್ನನ್ನು ನನ್ನ ಹಿಂದಿನ ಜೀವನಕ್ಕೆ ಕರೆದುಕೊಂಡು ಹೋದಂತೆ ಆಗಿದೆ ಬಹಳ ಚೆನ್ನಾಗಿ ಬರೆದಿದ್ದೀರ - ಧನ್ಯವಾದಗಳು

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ