ಮಹಾಬಲಿಗೊಂದು ಪತ್ರ

ಪ್ರೀತಿಯ ಮಾವೇಲಿ ಅಲಿಯಾಸ್ ಮಹಾಬಲಿ,


ಓಣಂ ಹಬ್ಬದ ಪ್ರಯುಕ್ತ ದೇವರ ಸ್ವಂತ ಊರಿಗೆ ಭೇಟಿ ನೀಡುವ ನಿನಗೆ ಸ್ವಾಗತ. ನಮ್ಮೂರಿಗೆ ಭೇಟಿ ನೀಡುವ ಮುನ್ನ ನಿನಗೆ ಹಲವಾರು ವಿಷಯಗಳ ಬಗ್ಗೆ ಹೇಳಬೇಕಾಗಿದೆ. ಅದಕ್ಕೆ ಈ ಪತ್ರ. ಕಾಸರಗೋಡಿಗೆ ದೀಪಾವಳಿ ಹಬ್ಬದ ವೇಳೆ ಬಲೀಂದ್ರನಾಗಿಯೂ, ಓಣಂ ಹಬ್ಬದಂದು ಮಹಾಬಲಿಯಾಗಿ ಬರುವ ನಿನಗೆ ಗಡಿನಾಡ ಕನ್ನಡಿಗರಂತೆ ಮಲಯಾಳಂ, ಕನ್ನಡ, ತುಳು ಹೀಗೆ ಐದಾರು ಭಾಷೆ ಗೊತ್ತಿರುತ್ತದೆ ಅಲ್ವಾ. ಆದ್ದರಿಂದ ಕನ್ನಡದಲ್ಲಿ ಬರೆದ ಈ ಪತ್ರ ಓದಲು ನಿನಗೆ ಸಮಸ್ಯೆ ಆಗಲ್ಲ ಅಂದುಕೊಂಡಿದ್ದೀನಿ.

ಊರಲ್ಲಿ ಸಿಕ್ಕಾಪಟ್ಟೆ ಮಳೆ ಬೇರೆ. ಮಳೆಯೊಂದಿಗೆ ರಸ್ತೆಯ ಡಾಂಬರು ಕಿತ್ತುಹೋಗಿದ್ದು, ರಸ್ತೆಯಲ್ಲಿರುವ ಗುಂಡಿಯಲ್ಲೆಲ್ಲಾ ನೀರು ತುಂಬಿ ಪುಟ್ಟ ಕೊಳದಂತಾಗಿದೆ. ಅಲ್ಲೇ ಬೇಕಾದರೆ ಮೀನು ಕೖಷಿ ಕೂಡಾ ಮಾಡಬಹುದು. ಬಸ್ಸಲ್ಲಿ ಪ್ರಯಾಣ ಮಾಡುವಾಗ ಒಂಟೆ ಸವಾರಿ ಅನುಭವ ನಿನಗಾಗಬಹುದು. ಒಂದಷ್ಟು ದಿನ ನೀನು ನಮ್ಮೂರಲ್ಲಿ ಓಡಾಡಿದರೆ ಸಾಕು, ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಕ್ಕಿ, ನಿನ್ನ ಡೊಳ್ಳು ಹೊಟ್ಟೆ ಕರಗಬಹುದು. ಬರುವ ಮುನ್ನ ಯಾವ ಜಿಲ್ಲೆಯಲ್ಲೂ ಬಂದ್ ಆಚರಣೆ ಮಾಡುತ್ತಿಲ್ಲ ಎಂಬುದನ್ನು ಖಾತರಿ ಪಡಿಸಿಕೋ. ಕೋಮುಗಲಭೆ, ರಾಜಕೀಯ ಕೊಲೆಗಳು ಇಲ್ಲಿ ಮಾಮೂಲಿ ಆಗಿ ಬಿಟ್ಟಿವೆ. ಕೆಂಪು, ಹಸಿರು, ಕೇಸರಿ ಧ್ವಜಗಳ ಕೆಳಗೆ ಯಾರ್ಯಾರದೋ ನೆತ್ತರು ಹರಿಯುತ್ತಿದೆ. ಜನರು ರಕ್ತದಾಹಿಗಳಂತೆ ಹೊಡೆದಾಡುತ್ತಿದ್ದಾರೆ. ಯಾವ ಮೂಲೆಯಿಂದ ಗುಂಡು ಹಾರುತ್ತದೋ, ಬಾಂಬ್ ಸಿಡಿಯುತ್ತದೋ ಎಂದು ಬಲ್ಲವರಾರು? ಆದ್ದರಿಂದ ನೀನು ಹುಷಾರು!

ಹಾಂ...ನೀನು ಬರುವಾಗ ಜಾಸ್ತಿ ಆಭರಣ ಹಾಕೊಂಡು ಬರ್ಬೇಡಪ್ಪಾ..ಬೈಕ್ ನಲ್ಲಿ ಸರ ಕಳ್ಳತನ ಮಾಡುವ ಹೈಟೆಕ್ ಕಳ್ಳರು ಜಾಸ್ತಿಯಾಗಿದ್ದಾರೆ. ಯಾವುದಕ್ಕೂ ನಿನ್ನ ಕೈಯಲ್ಲಿ ಒಂದು ಸ್ಮಾಟ್೯ ಫೋನ್ ಇಟ್ಟುಕೋ. ಯಾಕೆ ಗೊತ್ತಾ? ನಿನಗೇನಾದರೂ ಸಮಸ್ಯೆ ಆದರೆ ಜನರಲ್ಲಿ ಅದನ್ನು ಹೇಳುವ ಬದಲು ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡು. ಆಮೇಲೆ ಎಷ್ಟು ಲೈಕ್, ಕಾಮೆಂಟ್ ಬರುತ್ತೆ ಅಂತ ನೋಡ್ತಾ ಇರು...

ನನ್ನ ಸ್ವಂತ ಊರು ಅಲ್ವಾ ಇಲ್ಲಿನ ಮಕ್ಕಳಲ್ಲಿ ಮಾತನಾಡಿಸೋಣ ಅಂತ ಹೋಗುವಾಗ ಹುಷಾರಪ್ಪಾ..ಸ್ವಲ್ಪ ಇಂಗ್ಲೀಷ್ ಕಲಿತುಕೊಂಡು ಹೋಗು, ಇಲ್ಲಾಂದ್ರೆ ನಿನಗೆ ಅವರಲ್ಲಿ ಮಾತನಾಡಲು ಕಷ್ಟ ಆಗುತ್ತೆ. ಮಲಯಾಳಂಗಿಂತ ಇಂಗ್ಲಿಷ್ ಮೀಡಿಯಂನಲ್ಲೇ ಕಲಿಯುವ ಮಕ್ಕಳು ಇಲ್ಲಿ ಜಾಸ್ತಿ. ಅಷ್ಟೇ ಯಾಕೆ ಇಲ್ಲಿನ ಯುವಜನರು ಕೂಡಾ ಮಂಗ್ಲೀಷ್ ನಲ್ಲೇ ಮಾತನಾಡುವುದರಿಂದ ನಿನಗೆ ಅದನ್ನು ಅಥ೯ ಮಾಡಿಕೊಳ್ಳಲು ಕಷ್ಟವಾಗಬಹುದು. ನಮ್ಮೂರಿನ ಅಧ೯ಕ್ಕಧ೯ ಜನ ಬೆಂಗಳೂರು, ಚೆನ್ನೈ, ದುಬೈನಲ್ಲಿ ನೆಲೆಸಿರುವುದರಿಂದ ಮಲಯಾಳಿಗಳ ಸಂಖ್ಯೆಯೂ ಇಲ್ಲಿ ಕಡಿಮೆಯೇ. ಕೆಲಸಕ್ಕೆ ಬಂದ ಆಂಧ್ರದವರೂ, ಬಂಗಾಳಿಗಳು, ತಮಿಳರು ನಿನಗೆ ಅಲ್ಲಲ್ಲಿ ಸಿಗಬಹುದು. ಸ್ವಲ್ಪ ಸ್ವಲ್ಪ ಹಿಂದಿ,ತಮಿಳಲ್ಲಿ ಮಾತನಾಡಿ ಅವರನ್ನೆಲ್ಲಾ ಹ್ಯಾಂಡಲ್ ಮಾಡಬೇಕಾಗುತ್ತದೆ.

ನಿನ್ನ ಡ್ರೆಸ್ ಬಗ್ಗೆ ಹೇಳಲೇ ಬೇಕು. ಸಾಂಪ್ರದಾಯಿಕ ವೇಷ ತೊಟ್ಟು ಬಂದ ನಿನ್ನನ್ನು ನೋಡಿ ಜನ, ರಿಯಾಲಿಟಿ ಶೋ ಅಥವಾ ಇನ್ಯಾವುದೋ ಕಾರ್ಯಕ್ರಮದ ನಟ ಎಂದೇ ಗುರುತಿಸ್ತಾರೆ ವಿನಾ ಮಾವೇಲಿ ಅಂತ ಗುರುತಿಸಲ್ಲ ನೋಡು. ಒಂದು ವೇಳೆ ಅವರು ನಿನ್ನನ್ನು ಗುರುತಿಸಿದರೂ, ಅವರು ನಿನ್ನ ಜತೆ ಮಾತನಾಡುವುದನ್ನು ಬಿಟ್ಟು ನಿನ್ನ ಜತೆ ಸೆಲ್ಫೀ ತೆಗೆದು ಫೋಟೋ ಅಪ್ಲೋಡ್ ಮಾಡ್ತಾರೆ ಅಷ್ಟೇ. ಇನ್ನು ನೀನು ಮನೆಗಳಿಗೆ ಭೇಟಿ ಕೊಡುವುದಾದರೆ ಮನೆ ಮಂದಿಯೆಲ್ಲಾ ಟೀವಿ ಮುಂದೆಯೇ ಓಣಂ ಆಚರಿಸುವುದನ್ನು ನೋಡಬಹುದು. ಈ ಓಣಂಗೆ ಅದೆಷ್ಟು ಹೊಸ ಸಿನಿಮಾ, ಕಾರ್ಯಕ್ರಮಗಳನ್ನು ನಮ್ಮ ಚಾನೆಲ್ ಗಳು ಉಣಬಡಿಸುತ್ತವೆ ಗೊತ್ತಾ? ಅಂಗಳದಲ್ಲಿ ಹಾಕಿದ ರಂಗೋಲಿಯಲ್ಲಿ ಪ್ಲಾಸ್ಟಿಕ್ ಹೂ ಕಂಡರೆ ಅಚ್ಚರಿ ಬೇಡ, ಕಾಂಕ್ರೀಟ್ ನಾಡಲ್ಲಿ ಹೂವಿಗೂ ಬರ ಬಂದು ಬಿಟ್ಟಿದೆ. ಉಯ್ಯಾಲೆ ಎಲ್ಲಿದೆ ಅಂತ ಹುಡುಕ್ತಾ ಇದ್ದೀಯಾ? ಮರಗಳೇ ಇಲ್ಲದಿದ್ದರೆ ಉಯ್ಯಾಲೆ ಎಲ್ಲಿ ಕಟ್ತಾರೆ ಹೇಳು? ಹಾಗೆ ಈಗಿನವರಿಗೆ ಉಯ್ಯಾಲೆ ತೂಗುವುದೆಂದರೆ ಔಟ್ ಆಫ್ ಫ್ಯಾಷನ್ ಬಿಡು.

ಮನೆಯಲ್ಲಿ ಭಜ೯ರಿ ಓಣಂ ಸದ್ಯ (ಔತಣ) ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡೂ ಹೋಗ್ಬೇಡ. ಈ ಟೈಮಲ್ಲಿ ಎಲ್ಲ ಹೋಟೆಲ್ ನಲ್ಲಿ ಗಡದ್ದಾಗಿ ಓಣಂ ಸದ್ಯ ಸ್ಪೆಷಲ್ ಊಟ ಇದ್ದೇ ಇರುತ್ತದೆ. ಅಲ್ಲೇ ಹೋಗಿ ಊಟ ಮಾಡಿದ್ರೆ ಆಯ್ತು. ಗಲ್ಲಿ ಗಲ್ಲಿಗಳಲ್ಲಿ ರಾಜಕೀಯ ಪಕ್ಷಗಳ, ಸಿನಿಮಾ ಜಾಹೀರಾತು ಜತೆಗೆ ಬೆಳ್ಳಗಾಗುವಂತೆ ಮಾಡುವ ಸೋಪು, ಉದ್ದ ಕೂದಲು ಬೆಳೆಯಲು ಎಣ್ಣೆ, ಹೇರ್ ಫಿಕ್ಸಿಂಗ್ ಇಂಥಾ ಜಾಹೀರಾತುಗಳ ದೊಡ್ಡ ದೊಡ್ಡ Hoardings ಗಳನ್ನೂ ನೀನು ಕಾಣಬಹುದು. ಹೌದು, ನಾವು ಬದಲಾಗುತ್ತಿದ್ದೇವೆ. ಸೋಪು, ಕ್ರೀಮ್, ಎಣ್ಣೆ ತಿಕ್ಕಿ ತಿಕ್ಕಿ ನಮ್ಮ ಎಣ್ಣೆಕಪ್ಪು ಚಮ೯ವನ್ನು ಬೆಳ್ಳಗಾಗಿಸುವುದರಲ್ಲಿ ನಾವು ಬ್ಯುಸಿಯಾಗಿದ್ದೇವೆ. ಏತನ್ಮಧ್ಯೆ, ಓಣಂ ಹಾಡುಗಳನ್ನು ಕೇಳ್ಬೇಕು ಅಂತ ಹಠ ಮಾಡ್ಬಾದು೯. ಎಲ್ಲ ಹಾಡುಗಳು ರಿಮಿಕ್ಸ್ ಆಗಿರುವುದರಿಂದ ಓಣಂ ಪಾಟ್ಟು ಕೂಡಾ ರಿಮಿಕ್ಸ್ ಆಗಿ ಕೇಳುವುದು ನಮಗಿಷ್ಟ. ಮನೆಯ ಹೆಂಗಸರೆಲ್ಲಾ ಸೇರಿ ತಿರುವಾದಿರಕ್ಕಳಿ ಆಡ್ತಾರೆ, ಮಕ್ಕಳು ತೆಂಗಿನ ಗರಿಯಿಂದ ಮಾಡಿದ ಚೆಂಡಾಟ ಆಡ್ತಾರೆ ಅದನ್ನು ನೋಡ್ಬೇಕು ಎಂಬ ಆಸೆಯಿದ್ದರೆ I am SORRY...ಅದಕ್ಕೆಲ್ಲಾ ಟೈಮ್ ಎಲ್ಲಿದೆ ಹೇಳು? ಇನ್ನು ಹಗ್ಗ ಜಗ್ಗಾಟ? ಮಡಕೆ ಒಡೆತ ? ಆಟಗಳು ಊಹೂಂ....ಆಡಳಿತಾರೂಢ ಪಕ್ಷ ಮತ್ತು ವಿಪಕ್ಷದ ನಡುವೆ ದಿನಾ ನಡೆಯುತ್ತಿರುವುದು ಅದೇ ಅಲ್ವಾ?

ಇಲ್ಲಿ ಕೇಳು, ಇದೀಗ ಕೇರಳದಲ್ಲಿ ಮದ್ಯಪಾನ ನಿಷೇಧ ಮಾಡಬೇಕೆಂದು ಸಕಾ೯ರ ತೀಮಾ೯ನಿಸಿದೆ. ಆದ್ದರಿಂದ ಬಾರ್ ಗಳ ಮುಂದೆ ನಮ್ಮ ಗಂಡಸರನ್ನು ಹುಡುಕಬೇಡ, ಅವರೆಲ್ಲಾ ಕಳ್ಳಭಟ್ಟಿ ತಯಾರಿಸುವ ಅಡ್ಡಾದಲ್ಲಿ ಕದ್ದು ಮುಚ್ಚಿ ಕುಡಿದು ಇಸ್ಪೇಟ್ ಆಡಿ ಜಗಳ ಮಾಡ್ತಿರಬಹುದು. ಮಕ್ಕಳು, ಯುವಕರು ಫೋನ್ ನಲ್ಲಿ ಬ್ಯುಸಿಯಾಗಿದ್ದಾರೆ. ನನ್ನದೇ ಊರು ಅಂತಾ ಸುಮ್ನೇ ಅಲ್ಲಿ ಇಲ್ಲಿ ಅಡ್ಡಾಡಬೇಡ, ಬೇಹುಗಾರನಿರಬಹುದು ಎಂದು ನಿನ್ನನ್ನು ಬಂಧಿಸಬಹುದು. ಹುಷಾರು!

ಇನ್ನೊಂದು ಮುಖ್ಯ ವಿಷಯ. ಅಂಗಡಿಯಲ್ಲಿ ಏನಾದರೂ ವಸ್ತು ಖರೀದಿ ಮಾಡಿದ ನಂತರ ಸಿಗುವ ಬಾಕಿ ದುಡ್ಡನ್ನು ಸರಿಯಾಗಿ ಪರಿಶೀಲಿಸಿಕೋ. ಎಟಿಎಂ ಬಳಸುವಾಗಲೂ ಅಷ್ಟೇ... ಇಲ್ಲೆಲ್ಲಾ ಕಳ್ಳನೋಟುಗಳು ಜಾಸ್ತಿ ಹರಿದಾಡುತ್ತಿದೆ. ಈಗ ಓಣಂ ಕೈನೀಟ್ಟಂ ಸಿಕ್ಕಿದ ನೋಟುಗಳನ್ನು ಕೂಡಾ ಒರಿಜಿನಲ್ಲು ಹೌದೋ ಅಲ್ವೋ ಅಂತ ನೋಡ್ಬೇಕಾಗುತ್ತೆ. ರಾತ್ರಿ ವೇಳೆ ಜಾಗ್ರತೆ! ಗದ್ದೆ ನಡುವೆ ನಿಂತಿರುವ ಬೆಚ೯ಪ್ಪನನ್ನೂ ಬಿಡದೆ ರೇಪ್ ಮಾಡುವ ಕಾಮಾಂಧರು ಇದ್ದಾರೆ ಇಲ್ಲಿ. ಹೇಗಾಗಿದೆ ಅಂದ್ರೆ ದೇವರ ಸ್ವಂತ ಊರಿನಲ್ಲೀಗ ದೆವ್ವಗಳದ್ದೇ ಕಾರುಬಾರು! ಬೆಲೆ ಏರಿಕೆಯಿಂದ ಕೈ ಸುಟ್ಟುಕೊಂಡಿರುವ ಕಾಮಿ೯ಕರಿಗೆ ಇಲ್ಲಿ ಸರಿಯಾಗಿ ಕೆಲಸ ಇಲ್ಲ. ಅಷ್ಟೇ ಯಾಕೆ ಮುಕ್ಕಾಲು ಭಾಗ ಸಮುದ್ರದಿಂದ ಕೂಡಿರುವ ನಮ್ಮೂರಲ್ಲಿ ಮರಳು ದಂಧೆಯಿಂದಾಗಿ ಸಮುದ್ರದಡದಲ್ಲಿ ಮರುಳು ಕೂಡಾ ಖಾಲಿಯಾಗಿದೆ. ಇದನ್ನೆಲ್ಲಾ ಕೇಳಿದ ನಂತರ ನೀನು ಬರದೇ ಇರ್ಬೇಡಪ್ಪಾ...ಜನರ ನಂಬಿಕೆ ಹುಸಿ ಮಾಡ್ಬೇಡ

ನಾನಂತೂ ಅಂಗಳದಲ್ಲಿ ರಂಗೋಲಿ ಹಾಕಿ, ಪಾಯಸ ಮಾಡಿಟ್ಟು ನಿನ್ನ ಕಾಯ್ತಾ ಇರ್ತೀನಿ... ನೀ ಬರಲೇ ಬೇಕು....



ಇಂತಿ ನಿನ್ನ,
ಪೊನ್ನು ಮೋಳ್

ಚಿತ್ರ ಕೖಪೆ: http://www.maveli.co.uk/

Comments

ಆಸಕ್ತಿದಾಯಕ ಲೇಖನ...

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ