Saturday, December 12, 2015

ನಾನೆಂಬ ಸ್ತ್ರೀ

ನಾನೆಂಬ ಸ್ತ್ರೀ

ನನ್ನೊಳಗಿನ ಅಗ್ನಿಕುಂಡದಲ್ಲುರಿದು

ಆಹುತಿಯಾಗಲಾರೆ

ಜ್ವಲಂತ ವಿಚಾರಗಳನ್ನೆಲ್ಲಾ

ಶಿಥಿಲವಾದ ಹೆಣ್ಣಿನ ರೆಕ್ಕೆ ಸದ್ದುಗಳಲ್ಲೇ

ಜೋಡಿಸಿಟ್ಟಿದ್ದೀನಿ

ಬಿಕ್ಕಳಿಸುತ್ತಾ ವಿಕಸಿತವಾಗುವ

ಮಣ್ಣಲ್ಲಿ

ನಿದಿರೆಗೆ ಜಾರುವಾಗಲೂ

ಬೆಳಕೆಂಬ ಅಮ್ಮ

ನಂದಾದೀಪವಾಗಿ ಉರಿಯುತಿರಲು

ಹುತ್ತರಿ ತೆನೆ ಗದ್ದೆಗಳ

ಪುಣ್ಯ ಭೂಮಿಯಲಿ

ಬೆಳೆಯುವ ಕ್ರಾಂತಿ ಬೀಜವನು

ಅವಳು ಬಿತ್ತುತ್ತಿದ್ದಾಳೆ



ನೀನಿನ್ನು ಮೈಕೊಡವಿ

ಎದ್ದು ಬಾ

ಅಂಧಕಾರದ ಆತ್ಮವೊಂದು ಕರೆಯುತ್ತಿದೆ



ಬಂಧನದ ಸರಪಳಿ

ನೋವಿನ ವೇಷಗಳನ್ನು ಕಿತ್ತೆಸೆದು

ಅವಳು ಮುಗುಳ್ನಕ್ಕಳು



ದೀರ್ಘ ಶಾಂತ ನಿಗೂಢ

ಜೋಕಾಲಿಯಲಿ ನಿದ್ರಿಸಿದ್ದ

ಬೆಳಗು ಕಿರಣಗಳು ಎಚ್ಚೆತ್ತು

ಮೌನಿ ಮುಕ್ತಿ ಕುಟೀರದ

ನೆತ್ತಿಯಲ್ಲುರಿದು ಕರಗಿ

ಅಗ್ನಿ ಜ್ವಾಲೆಯಾಗಿ

ಧಗಧಗಿಸಿದವು...


(ಆದಿವಾಸಿ ಮಹಾಸಭಾ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಸಿ.ಕೆ ಜಾನು ಬರೆದ ಮಲಯಾಳಂ ಕವಿತೆಯ ಅನುವಾದ) (ಚಿತ್ರ ಕೃಪೆ: ಕೆಪಿಎನ್)