Friday, December 30, 2011

ಮಣ್ಣು

ನಾನು ಸತ್ತ ಮೇಲೆ
ನಿಮ್ಮ ಅಪ್ಪನ ಗೋರಿ ಪಕ್ಕದಲ್ಲೇ
ನನ್ನನ್ನು ಮಣ್ಣು ಮಾಡಿ ಬಿಡಿ
ಎಂದಳಾ ಅಮ್ಮ...

ಅಮ್ಮನ ಇಚ್ಛೆ ನೆರವೇರಿಸಿದರು
ಮಕ್ಕಳು...
ಅಪ್ಪ ಅಮ್ಮ ಒಂದೇ ಕಡೆ
ನಿಶ್ಚಿಂತರಾಗಿ ಮಲಗಿದ್ದರು
ತಮ್ಮ ಗೋರಿಯೊಳಗೆ

ಕಾಲ ಉರುಳಿತು
ಕೊನೆಗೊಂದು ದಿನ
ಮಣ್ಣು ಮಾರಾಟವಾದಾಗ
ಅಮ್ಮ ಮಲಗಿದ್ದ ಮಣ್ಣು ಮಂಗಳೂರಿಗೂ
ಅಪ್ಪ ಮಲಗಿದ್ದ ಮಣ್ಣು ಕಣ್ಣೂರಿಗೂ
ಟಿಪ್ಪರ್ ಲಾರಿ ಮೂಲಕ ಸಾಗಿತ್ತು

ಗೋರಿಗಳು ಹೋಳಾಗಿ
ಕಲ್ಲು ಕೋರೆಯಲ್ಲಿ ಧೂಳು ಹಾರಿತ್ತು
ಕೆಂಪು ಕಲ್ಲುಗಳು
ಒಂದರ ಮೇಲೊಂದು ಏರುತಿತ್ತು.

Wednesday, November 9, 2011

ಬೆಂಗ್ಳೂರಲ್ಲಿ 'ಸ್ಲಟ್ ವಾಕ್' ಆವಶ್ಯಕತೆಯಿದೆಯಾ?

ಮಾಜದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಬೇಕೇ ಬೇಕು. ಆ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಚಿಕ್ಕದಾದ ಬಟ್ಟೆತೊಟ್ಟು ಅಂಗಾಂಗಳನ್ನು ಪ್ರದರ್ಶಿಸಿ ಬೀದಿಗಿಳಿಯುವ ಆವಶ್ಯಕತೆ ಇದೆಯೇ? ಹೀಗೊಂದು ಪ್ರಶ್ನೆ ಕಾಡಿದ್ದು ಸ್ಲಟ್ ವಾಕ್ ಬಗ್ಗೆ ಕೇಳಿದಾಗಲೇ.

'ಸ್ಲಟ್ ವಾಕ್ ' (ಅಸಭ್ಯ ನಡೆ)ಯ ಹುಟ್ಟು ಕೆನಡಾದಲ್ಲಾಗಿದ್ದರೂ, ಅದು ಬಹುಬೇಗನೆ ಎಲ್ಲಾ ರಾಷ್ಟ್ರಗಳಲ್ಲೂ ಹರಡಿ ಹೊಸ ದಿಶೆಯನ್ನೇ ಪಡೆದುಕೊಂಡಿದೆ ಎಂದು ಹೇಳಬಹುದು. ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರು "ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಮಹಿಳೆಯರು ನೀತಿಗೆಟ್ಟವರಂತೆ ಉಡುಪು ಧರಿಸಕೂಡದು" ಎಂದು ಸಲಹೆ ನೀಡಿದರು. ಅಷ್ಟಕ್ಕೇ ಜಗತ್ತಿನೆಲ್ಲೆಡೆ ಪ್ರತಿಭಟನೆ ಆರಂಭವಾಗಿಬಿಟ್ಟಿತು. 'ಸ್ಲಟ್ ' ಎಂಬ ಪದವನ್ನೇ ಹಿಂತೆಗೆದುಕೊಳ್ಳಬೇಕೆಂದು ಮಹಿಳೆಯರು ಬೀದಿಗಿಳಿದರು. ಚಿಕ್ಕದಾದ ಸ್ಕರ್ಟ್, ಬಿಕಿನಿ ಟಾಪ್, ಸ್ಲೀವ್ ಲೆಸ್, ಬ್ಯಾಕ್ ಲೆಸ್ ಒಟ್ಟಾರೆ ಎಲ್ಲಾ ಲೆಸ್ ಆಗಿರುವ ಉಡುಗೆ ತೊಟ್ಟು ಮಹಿಳಾಮಣಿಗಳು ಪ್ರತಿಭಟನೆ ಮಾಡಿದರು.
ಅತ್ಯಾಚಾರಕ್ಕೆ ಮಹಿಳೆಯರ ಉಡುಗೆ ಮಾತ್ರ ಕಾರಣವೇ? ಎಂಬ ಪ್ರಶ್ನೆ ಅವರದ್ದಾಗಿತ್ತು. ಅದೇ ವೇಳೆ ನಾವು ಪ್ರಚೋದನಾಕಾರಿ ಉಡುಗೆ ತೊಡುವ ಹಕ್ಕುಳ್ಳವರು, ನಾವು ಯಾವುದೇ ರೀತಿಯಲ್ಲಿ ದಿರಿಸು ಧರಿಸಿದರೆ ಏನಿವಾಗ? ಎಂಬ ವಾದವನ್ನು ಅವರು ಉಡುಗೆಗಳೇ ಪ್ರತಿಪಾದಿಸುತ್ತಿದ್ದವು. ಹಾಗಂತ ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸಾಮಾನ್ಯ ಮಹಿಳೆಯರಾಗಿರಲಿಲ್ಲ. ಬದಲಾಗಿ ಸ್ವೇಚಾಚಾರ ಬಯಸುವ ಮಹಿಳೆಯರೇ ಆಗಿದ್ದರು ಎಂಬುದು ಗುರುತಿಸಬೇಕಾದ ಅಂಶ.

ಸರಿ, ಪುರುಷನಂತೆ ಮಹಿಳೆಗೂ ಕೂಡಾ ಎಲ್ಲಾ ಹಕ್ಕು, ಸ್ವಾತಂತ್ರ್ಯ ಇದೆ. ಆಕೆ ಪುರುಷರಂತೆಯೇ ಮದ್ಯಪಾನ ಮಾಡಬಹುದು, ಸ್ವಚ್ಛಂದ ಲೈಂಗಿಕತೆಯ ಅಭೀಪ್ಸೆಯನ್ನು ವ್ಯಕ್ತಪಡಿಸಬಹುದು, ತನಗೆ ಬೇಕಾದಂತೆ ವರ್ತಿಸಲು, ದಿರಿಸು ತೊಡಲು ಎಲ್ಲಾ ರೀತಿಯಲ್ಲೂ ಆಕೆ ಅರ್ಹಳೇ. ಆದರೆ ಇದನ್ನು ವ್ಯಕ್ತಪಡಿಸಲು ಬಿಗಿಯಾದ, ತುಂಡು ಬಟ್ಟೆ ತೊಟ್ಟು ಪರೇಡ್ ನಡೆಸಬೇಕಾದ ಆವಶ್ಯಕತೆ ಇದೆಯೇ? ವಿದೇಶಿಗಳ ವಿಷಯ ಬಿಡಿ, ಅದೂ ಭಾರತದಲ್ಲಿ ಇಂತಹ ಸ್ಲಟ್್ವಾಕ್ ಬೇಕೆ? ಈಗಾಗಲೇ ಭಾರತದ ಭೋಪಾಲ್, ನವದೆಹಲಿ, ಮುಂಬೈ ಮುಂತಾದ ನಗರಗಳಲ್ಲಿ ಸ್ಲಟ್ ವಾಕ್ ನಡೆದಿದೆ. ಇದೀಗ ಬೆಂಗಳೂರಿನಲ್ಲಿ ಡಿಸೆಂಬರ್ 5ಕ್ಕೆ ಸ್ಲಟ್ ವಾಕ್ (ಗೆಜ್ಜೆ ಹೆಜ್ಜೆ) ನಡೆಸಲು ಮುಹೂರ್ತ ಇಟ್ಟಾಗಿದೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಭಾರತದಲ್ಲಿ ಎಲ್ಲಾ ಪ್ರಕರಣಗಳಿಗಿಂತ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೆಚ್ಚಾಗಿ ಮಹಿಳೆಯ ಪರಿಚಿತರೇ ಆಕೆಯ ಮೇಲೆ ಅತ್ಯಾಚಾರವೆಸಗುತ್ತಾರೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ನೀಡಿದ ಮಾಹಿತಿಯಲ್ಲಿದೆ. ಅಂದ ಮಾತ್ರಕ್ಕೆ ಅತ್ಯಾಚಾರಕ್ಕೆ ಮಹಿಳೆಯರು ತೊಡುವ ಉಡುಗೆ ಮಾತ್ರ ಕಾರಣವೆ?. ಯಾಕೆಂದರೆ ಮೈ ತುಂಬಾ ಬಟ್ಟೆ ಹಾಕಿದ ಹುಡುಗಿಯೂ ಅತ್ಯಾಚಾರಕ್ಕೊಳಗಾಗುವುದಿಲ್ಲವೇ? ಮಗುವಿನಿಂದ ವೃದ್ಧೆಯವರೆಗೂ ಅತ್ಯಾಚಾರ ನಡೆಯುತ್ತದೆ. ಪ್ರಾಣಿಗಳನ್ನೂ ಬಿಡದ 'ಕಾಮುಕ' ಮನುಷ್ಯರ ಬಗ್ಗೆ ನಾವು ಕೇಳಿದ್ದೇವೆ. ಹೀಗಿರುವ ಅತ್ಯಾಚಾರಕ್ಕೆ ಇಂತದ್ದೇ ಕಾರಣ ಎಂದು ಹೇಳುವುದಾದರೂ ಹೇಗೆ?

ಇರಲಿ ಬಿಡಿ, ಬೀದಿಯಲ್ಲಿ ಅರ್ಧಂಬರ್ಧ ಡ್ರೆಸ್ ತೊಟ್ಟು ಹುಡುಗಿಯೊಬ್ಬಳು ನಡೆದರೆ ಹುಡುಗರು ನೋಡದೆಯೆ ಇರುತ್ತಾರೆಯೇ? 'ಆ ದೇವ್ರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರಿ' ಎನ್ನುತ್ತಾ ಕೆಲವೊಮ್ಮೆ ಶಿಳ್ಳೆ ಹೊಡೆಯಬಹುದು, ಕಾಮೆಂಟ್ ಮಾಡಬಹುದು ಇನ್ನು ಏನೇನೋ ಅಸಭ್ಯ ವರ್ತನೆ ತೋರಬಹುದು. ಹುಡುಗರ ಈ ವರ್ತನೆಯನ್ನು ಆ ಹೆಣ್ಮಗಳು ಪ್ರಶ್ನಿಸುತ್ತಾಳೆ ಅಂದಿಟ್ಟುಕೊಳ್ಳಿ. ಅದಕ್ಕೆ ಹುಡುಗ ನಿನ್ನನ್ನು ನೋಡುವ ಹಕ್ಕು ನನಗಿದೆ ಅಂತಾ ಉತ್ತರ ಕೊಟ್ಟರೆ ಏನಾಗುತ್ತೆ ಹೇಳಿ?. ಹುಡುಗಿ ಮೈ ತೋರಿಸಿ ನಡೆವ ಹಕ್ಕನ್ನು ಹೊಂದಿದ್ದಾಳೆ ಎಂದಾದರೆ ಹುಡುಗನಿಗೆ ಆಕೆಯನ್ನು ನೋಡುವ ಹಕ್ಕು ಇರುವುದಿಲ್ಲವೇ?
ಇನ್ನು, ಗಂಡಸರು ತನಗೂ ಸ್ವಾತಂತ್ಯವಿದೆ ಎಂದು ಹೇಳಿ ಎಲ್ಲೆಂದರಲ್ಲಿ ಬಟ್ಟೆ ಬಿಚ್ಚಿ ಓಡಾಡಲಿ. ಮಹಿಳೆಯರ ಗುಂಪಿನ ನಡುವೆ ಬಂದು ಅಂಗಿ ಬಿಚ್ಚಿ ಕುಳಿತುಕೊಳ್ಳಲಿ "ಛೀ..ಯಾವನು ಇವನು ಮಂಡೆ ಸಮ ಇಲ್ಲದವನು" ಎಂದು ಹೆಣ್ಮಕ್ಕಳು ಬೈಯ್ಯದೆ ಇರುತ್ತಾರೆಯೇ? ಆವಾಗ ಗಂಡು ತನಗೆ ಹೇಗೆ ಬೇಕಾದರು ಡ್ರೆಸ್ ಮಾಡುವ, ಬಿಚ್ಚುವ ಅಧಿಕಾರವಿದೆ ಎಂದು ಹೇಳಲಿ ನೋಡೋಣ. ಹೆಣ್ಮಕ್ಕಳ ಪ್ರತಿಕ್ರಿಯೆ ಹೇಗಿರುತ್ತದೆ? ಒಟ್ಟಿನಲ್ಲಿ ಮಹಿಳೆಯರು ತಮಗಿಚ್ಛೆ ಬಂದಂತೆ ವರ್ತಿಸಲು ಹಕ್ಕುಳ್ಳವರು ಎಂದಾದರೆ ಅದೇ ಹಕ್ಕು ಗಂಡಸಿಗೂ ಅನ್ವಯಿಸುತ್ತದೆ ಅಲ್ಲವೇ?

ಇಂತಿರ್ಪ, ಮಹಿಳೆಯ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಬೇಕಾದರೆ ಮಹಿಳೆಯರು ಅರ್ಧಬಂರ್ಧ ಡ್ರೆಸ್ ಹಾಕಿಕೊಂಡು ಸ್ತ್ರೀವಾದದ ಬಗ್ಗೆ ಬೊಬ್ಬೆ ಹಾಕುವುದು ಬೇಕಾ? ಅದೂ ಬೆಂಗಳೂರಲ್ಲಿ? ಆದಾಗ್ಯೂ, ಈ ಸ್ಲಟ್್ವಾಕ್್ನಲ್ಲಿ ಪಾಲ್ಗೊಳ್ಳುವ ಮಹಿಳೆಯರು ಸ್ವೇಚಾಚಾರ ಬಯಸುವ ಮಂದಿ ಅಲ್ಲವೇ? ಶ್ರೀಮಂತ ಕುಟಂಬದ ಇಲ್ಲವೇ ಫ್ಯಾಷನ್ ಲೋಕವನ್ನೇ ಮೆಚ್ಚಿಕೊಂಡಿರುವ ಹೈಫೈ ಎನ್ನುವಂತ ಮಂದಿ ಇಲ್ಲಿ ಹೆಜ್ಜೆ ಹಾಕಬಹುದು. ಸ್ತ್ರೀವಾದವನ್ನು ಪ್ರತಿಪಾದಿಸುವ ಇವರ ಈ ಹೆಜ್ಜೆ ಭಾರತದಲ್ಲಿರುವ ಸಾಮಾನ್ಯ ಹೆಣ್ಣು ಮಗಳ ಸಂಕಷ್ಟವನ್ನು ದೂರ ಮಾಡಬಲ್ಲುದೆ?

ನಮ್ಮ ದೇಶದಲ್ಲಿ ಅತ್ಯಾಚಾರವೊಂದನ್ನು ಬಿಟ್ಟರೆ ಇನ್ನಿತರ ಶೋಷಣೆ, ದೌರ್ಜನ್ಯಗಳು ಕಡಿಮೆ ಅಂತಾ ಹೇಳುವಂತಿಲ್ಲ. ಯಾಕೆಂದರೆ ಮನೆಯಿಂದ ಹಿಡಿದು ಆಫೀಸಿನವರೆಗೂ ಶಾರೀರಿಕ, ಮಾನಸಿಕ ದೌರ್ಜನ್ಯವನ್ನು ಮಹಿಳೆಯೊಬ್ಬಳು ಎದುರಿಸಲೇಬೇಕಾಗುತ್ತದೆ. ವಿಪರ್ಯಾಸ ಎಂದರೆ ಇದರಲ್ಲಿ ಬಹುತೇಕ ದೌರ್ಜನ್ಯಗಳು ಸುದ್ದಿಯಾಗುವುದೇ ಇಲ್ಲ. ಮನಸ್ಸಲ್ಲೇ ನೊಂದುಕೊಂಡು ಎಲ್ಲಾ ದೌರ್ಜನ್ಯವನ್ನು ಸಹಿಸಿಕೊಂಡಿರುವ ಹೆಣ್ಮಗಳು ಒಂದೆಡೆಯಾದರೆ ಇದರ ವಿರುದ್ಧ ದನಿಯೆತ್ತುವ ಹೆಣ್ಮಕ್ಕಳು ಕಡಿಮೆಯೇ ಎಂದು ಹೇಳಬಹುದು. ಕೆಲವೊಮ್ಮೆ ಹೆಣ್ಮಗಳೊಬ್ಬಳು ಈ ಬಗ್ಗೆ ದನಿಯೆತ್ತಿದ್ದಾಳೆ ಅಂತಾನೆ ಇಟ್ಕೊಳ್ಳಿ, ಅವಳಿಗೆ ಯಾರೂ ಬೆಂಬಲ ನೀಡಲು ಮುಂದಾಗದಿದ್ದರೆ ಆ ಹುಡುಗಿ ಮಾಡುವುದಾದರೂ ಏನು? ಮಹಿಳೆಯ ಮೇಲೆ ಮಹಿಳೆಯೇ ದೌರ್ಜನ್ಯವೆಸಗುವ ಪ್ರಕರಣಗಳ ಬಗ್ಗೆ ದಿನಾ ಪತ್ರಿಕೆಯಲ್ಲಿ ವರದಿಯಾಗುತ್ತದೆ. ಒಟ್ಟಿನಲ್ಲಿ ಲಿಂಗಭೇದವಿಲ್ಲದೆ ದೌರ್ಜನ್ಯಗಳು ನಡೆಯುತ್ತಲೇ ಇದೆ.

ಇದಕ್ಕೆಲ್ಲಾ ಕಡಿವಾಣ ಹಾಕಲು ಬಟ್ಟೆ ಬಿಚ್ಚಿ 'ಸ್ಲಟ್ ವಾಕ್' ಮಾಡಬೇಕಾ? ಜಾಗತೀಕರಣದ ಪ್ರಭಾವದಿಂದಾಗಿ ವಿದೇಶೀಯರು ಮಾಡಿದ್ದೆಲ್ಲಾ ನಾವು ನಕಲು ಹೊಡೆಯುತ್ತೇವೆಯೇ ಹೊರತು ಅದು ಭಾರತದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಲಟ್ ವಾಕ್ ಆಯೋಜಕರು ಚಿಂತಿಸಿದ್ದಾರೆಯೇ?

ಓರ್ವ ಹೆಣ್ಣು ಮಗಳಾಗಿಯೇ ಹೇಳುತ್ತಿದ್ದೇನೆ, ಪ್ರಜಾಪ್ರಭುತ್ವವಿರುವ ನಮ್ಮ ನಾಡಿನಲ್ಲಿ ಮಹಿಳೆಯರು ತಮಗಿಷ್ಟ ಬಂದಂತೆ ಉಡುಗೆ ತೊಟ್ಟು, ಮನಸೋಇಚ್ಛೆ ವರ್ತಿಸಲಿ. ಈ ಸ್ವಾತಂತ್ರ್ಯದ ಬಗ್ಗೆ ಯಾರೂ ಆಕ್ಷೇಪ ವ್ಯಕ್ತ ಪಡಿಸುವುದಿಲ್ಲ. ಆದರೆ ಪ್ರಚೋದನಾಕಾರಿಯಾದಂತಹ ಉಡುಗೆಗಳನ್ನು ತೊಟ್ಟು ಕಾಮುಕ ಕಣ್ಣಿಗೆ ಗುರಿಯಾದೆವು ಎಂದು ಅವಲತ್ತುಕೊಳ್ಳಬಾರದು ಅಷ್ಟೇ. ಹೆಣ್ಣು ಯಾವುದೇ ಉಡುಗೆ ಧರಿಸಿದರು ಅದನ್ನು ಚೆನ್ನಾಗಿ ನಿರ್ವಹಿಸಿಕೊಳ್ಳಲು ಆಕೆಗೆ ಗೊತ್ತಿರಬೇಕು. ಮಾತ್ರವಲ್ಲದೆ ತೊಡುವ ಉಡುಗೆ ಸಂದರ್ಭಕ್ಕನುಸಾರವಾಗಿ ಇದ್ದರೇನೆ ಚೆನ್ನ. ಒಂದು ವೇಳೆ ಪುರುಷರನ್ನು ತನ್ನೆಡೆಗೆ ಆಕರ್ಷಿಸಲು ಬಯಸುವಂತಹ ಉಡುಗೆಯನ್ನೇ ಆಕೆ ತೊಡುತ್ತಿದ್ದರೆ, ಆ ಆಕರ್ಷಣೆಯನ್ನು ಎದುರಿಸಲು ಆಕೆ ಸಿದ್ಧಳಾಗಿರಬೇಕು. ಯಾಕೆಂದರೆ ಸ್ತ್ರೀ ಸ್ವಾತಂತ್ರ್ಯ ಎಂಬುದಕ್ಕೂ ಎಲ್ಲೆಯಿದೆ, ಅದು ನಮ್ಮ ಹೊಣೆಗಾರಿಕೆಯೂ ಹೌದು ಎಂಬುದನ್ನು ಮರೆಯಬಾರದು ಅಲ್ವಾ?.

ಚಿತ್ರ ಕೃಪೆ: ಅಂತರ್ಜಾಲ

Monday, October 24, 2011

ಈ ಹೆಣ್ಮಗಳ ಹೋರಾಟಕ್ಕೆ ಕೊನೆ ಎಂದು?

ಶ್ವರ್ಯಾ ರೈ ನವಂಬರ್ ತಿಂಗಳಲ್ಲಿ ಯಾವ ದಿನಾಂಕ ಮಗುವಿಗೆ ಜನ್ಮ ನೀಡುತ್ತಾಳೆ? ಅದು ಹೆಣ್ಣೋ, ಗಂಡೋ? ಅಥವಾ ಅವಳಿಯೋ? ಐಶ್ವರ್ಯಾ ರೈಯ ಹೆರಿಗೆ ದಿನಾಂಕಕ್ಕೂ ಜನ ಬೆಟ್ಟಿಂಗ್ ಶುರುಮಾಡಿದ್ದಾರೆ! ಅಂದ ಹಾಗೆ ಐಶ್ವರ್ಯಾ ರೈ ಅಂದ್ರೆ ನಮ್ ತರಾನೇ ಇರುವ ಓರ್ವ ಹೆಣ್ಣು ಮಗಳು. ಮಿಸ್್ವರ್ಲ್ಡ್ ಪಟ್ಟ ಧರಿಸಿ, ಬಾಲಿವುಡ್್ನಲ್ಲಿ ಮಿಂಚಿ, ಹಾಲಿವುಡ್್ಗೂ ಹಾರಿ, ಬಿಗ್ ಬಿ ಬಚ್ಚನ್್ನ ಪುತ್ರ ಅಭಿಷೇಕ್ ಬಚ್ಚನ್್ರನ್ನು ವರಿಸಿದ ಕರುನಾಡ ಕುವರಿ. ಆಕೆ ಸೀನಿದ್ದು, ಕೆಮ್ಮಿದ್ದು, ನಕ್ಕಿದ್ದು ಎಲ್ಲವೂ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್! ಯಾಕೆಂದರೆ ಆಕೆ ಸೆಲೆಬ್ರಿಟಿ. ಅದೇ ವೇಳೆ ನಮ್ಮ ದೇಶದಲ್ಲಿ ಅದೆಷ್ಟೋ ಮಹಿಳೆಯರು ಹೆರಿಗೆಯ ವೇಳೆ ಸಾವನ್ನಪ್ಪುತ್ತಿದ್ದರೂ, ಅದೊಂದು ಚಿಕ್ಕ ಸುದ್ದಿಯಾಗಿ ಮಾರನೇ ದಿನಕ್ಕೆ ರದ್ದಿಯಾಗಿ ಬಿಡುತ್ತದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಟಿಆರ್್ಪಿ ಹೆಚ್ಚಿಸುವಲ್ಲಿ ನಿರತರಾಗಿರುವ ಸಮೂಹ ಮಾಧ್ಯಮಗಳು ಕೆಲವೊಮ್ಮೆ ಸತ್ಯಾವಸ್ಥೆಯನ್ನು ಮರೆತು ವರ್ತಿಸುತ್ತಿರುವುದು ನಿಜವಾಗಿಯೂ ಖೇದಕರ. ಇದೀಗ ಇಡೀ ಭರತ ಖಂಡವೇ ಐಶ್ವರ್ಯಾ ರೈ ಬಗ್ಗೆ ಮಾತನಾಡುತ್ತಿದೆ. ನವಂಬರ್ 1ರಂದು ಆಕೆಯ ಬರ್ತ್್ಡೇ. ಅದನ್ನು ಹೇಗೆ ಆಚರಿಸುತ್ತಾರೆ? ಅದೇ ತಿಂಗಳಲ್ಲಿ ಹೆರಿಗೆ ಬೇರೆ. ಮಗುವಿಗೆ ಯಾವ ಹೆಸರಿಡುತ್ತಾರೆ? ಹೀಗೆ ಚರ್ಚೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಈ ದೊಡ್ಡ ಸುದ್ದಿಗಳ ನಡುವೆ 39ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬಾಕೆ ಅಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸುದ್ದಿ ಹೈಲೈಟೇ ಆಗುವುದಿಲ್ಲ. ಯಾಕೆಂದರೆ ಆಕೆ ಸಾಮಾನ್ಯ ಮಹಿಳೆ, ಸೆಲೆಬ್ರಿಟಿ ಅಲ್ಲವೇ ಅಲ್ಲ.

ಅಂದು ನವಂಬರ್ 2, 2000 ಇಂಫಾಲ ಕಣಿವೆಯಲ್ಲಿರುವ ಮಾಲೋಮ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ 10 ಮಂದಿಯನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗುಂಡಿಕ್ಕಿ ಕೊಂದರು. 1958ರ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯಡಿ ಭದ್ರತಾಪಡೆ ಹಿಂಸಾಪೀಡಿತ ಪ್ರದೇಶದಲ್ಲಿ ಯಾರನ್ನು ಬೇಕಾದರೂ ಗುಂಡಿಕ್ಕಿ ಸಾಯಿಸಬಹುದು ಮತ್ತು ವಾರೆಂಟ್ ಇಲ್ಲದೆ ಬಂಧಿಸಬಹುದು. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಾಡಿದ್ದೂ ಅದನ್ನೇ. ಈ ಘಟನೆ 'ಮಾಲೋಮ್ ಹತ್ಯಾಕಾಂಡ'ವೆಂದೇ ಕರೆಯಲ್ಪಡುತ್ತದೆ. ಮರುದಿನ ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದ 28ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬ ಸಾಮಾಜಿಕ ಕಾರ್ಯಕರ್ತೆ ಇಂತಹ ಒಂದು ಕಠಿಣ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಮಾಯಕರ ಜೀವ ಅಪಹರಿಸಿದ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದು ಪಡಿಸಬೇಕು ಎಂಬುದು ಶರ್ಮಿಳಾ ಒತ್ತಾಯವಾಗಿತ್ತು. ತಮ್ಮ ಆಗ್ರಹವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಆಕೆ ಕೈಗೊಂಡ ನಿರ್ಧಾರ ಅಮರಣ ಉಪವಾಸ ಸತ್ಯಾಗ್ರಹ.

ನವಂಬರ್ 2 ನೇ ತಾರೀಖು ಗುರುವಾರ. ಚಿಕ್ಕಂದಿನಿಂದಲೂ ಪ್ರತೀ ಗುರುವಾರ ಉಪವಾಸ ಕೈಗೊಳ್ಳುತ್ತಿದ್ದ ಶರ್ಮಿಳಾ ಮಾರನೇ ದಿನ ಶುಕ್ರವಾರ ರಾತ್ರಿ ಭೋಜನ ಮುಗಿಸಿ 2000 ನವಂಬರ್ 4ರಂದು ಉಪವಾಸ ಸತ್ಯಾಗ್ರಹ ಆರಂಭಿದ್ದರು. ಉಪವಾಸ ಆರಂಭಿಸಿದ ಮೂರು ದಿನಗಳಲ್ಲಿ ಪೊಲೀಸರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ 309ನೇ ಸೆಕ್ಷನ್ ಪ್ರಕಾರ 'ಆತ್ಮಹತ್ಯೆಗೆ ಯತ್ನ' ಎಂಬ ಆರೋಪವನ್ನು ಹೊರಿಸಿ ಬಂಧಿಸಿದರು. ಅಂದಿನಿಂದ ಇಂದಿನ ವರೆಗೆ ಶರ್ಮಿಳಾ ಉಪವಾಸ ಸತ್ಯಾಗ್ರಹ ನಡೆಸುತ್ತಲೇ ಇದ್ದಾರೆ. ಇಡೀ ಮಣಿಪುರ ಆಕೆಯ ಬೆಂಬಲಕ್ಕಿದೆ. ಹಲವಾರು ಪ್ರಶಸ್ತಿಗಳು ದಕ್ಕಿವೆ. ಏತನ್ಮಧ್ಯೆ, 11 ವರ್ಷಗಳ ಉಪವಾಸದಿಂದ ಶರ್ಮಿಳಾರ ದೇಹ ಸೊರಗಿದೆ, ಆದರೆ ನಿರ್ಧಾರ ಇನ್ನೂ ಅಚಲವಾಗಿದೆ.

ತನಗೆ ನ್ಯಾಯ ಸಿಗುವ ವರೆಗೆ ಉಪವಾಸ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಶರ್ಮಿಳಾ ತನ್ನ ಗಟ್ಟಿ ನಿಲುವು ತೆಗೆದು ಕೊಂಡಾಗ ಬಲವಂತವಾಗಿ ಆಕೆಗೆ ಮೂಗಿನ ಮೂಲಕ ದ್ರವಾಹಾರವನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಈಕೆಗೆ ಆಸ್ಪತ್ರೆಯೇ ಸೆರೆಮನೆ. ಪ್ರತೀ ಹದಿನೈದು ದಿನಕ್ಕೊಮ್ಮೆ ಶರ್ಮಿಳಾರನ್ನು ನ್ಯಾಯಾಂಗ ಬಂಧನವನ್ನು ವಿಸ್ತರಣೆಗೊಳಿಸುವ ಸಲುವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ. ಮೂಗಿಗೆ ನಳಿಕೆ ಸಿಕ್ಕಿಸಿಕೊಂಡು 'ನ್ಯಾಯ ಬೇಕೇ ಬೇಕು' ಎಂದು ಹಠ ಹಿಡಿದು ಕುಳಿತಿರುವ ಈ ಹೆಣ್ಮಗಳ ಧೈರ್ಯ ಮೆಚ್ಚಲೇಬೇಕು.

ಮಣಿಪುರದ 'ಉಕ್ಕಿನ ಮಹಿಳೆ' ಎಂದು ಕರೆಯಲ್ಪಡುವ ಶರ್ಮಿಳಾ ದೀರ್ಘಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪ್ರಪಂಚದ ಏಕೈಕ ವ್ಯಕ್ತಿ. ಸೆರೆಮನೆಯಲ್ಲಿ ಯೋಗಾಭ್ಯಾಸ, ಓದು ಹಾಗೂ ಕವಿತೆ ರಚನೆ ಮೂಲಕ ದಿನದೂಡುತ್ತಿರುವ ಶರ್ಮಿಳಾರಿಗೆ ಮನೆಯವರೊಂದಿಗೆ ಫೋನಿನಲ್ಲಿ ಮಾತನಾಡಲೂ ನಿರಾಕರಿಸಲಾಗಿದೆ. ತನ್ನ ಹೋರಾಟಕ್ಕೆ ಜಯ ಲಭಿಸಿದ ನಂತರವೇ ಪ್ರಿಯತಮ ಡೆಸ್ಮಂಡ್ ಕುಟ್ಹಿನೋ ಜತೆ ವಿವಾಹವಾಗುವ ನಿರ್ಧಾರ ಈಕೆಯದ್ದು. ಶರ್ಮಿಳಾ ತನ್ನ ಪ್ರಿಯತಮನನ್ನು ಭೇಟಿಯಾದದ್ದು ಕೇವಲ ಒಂದೇ ಒಂದು ಬಾರಿ. ಇವರ ನಡುವೆ ಇರುವುದು ಕೇವಲ ಪತ್ರ ವ್ಯವಹಾರವಷ್ಟೇ. ಅಭಿಮಾನಿಗಳು ಕಳುಹಿಸಿಕೊಡುವ ಪುಸ್ತಕವೇ ಬಂಧೀಖಾನೆಯಲ್ಲಿ ಈಕೆಯ ಸಂಗಾತಿ.

"ಮರಣಕ್ಕೆ ನಾನು ಅಂಜಲಾರೆ. ಯಾವುದೇ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ ನಾನು. ನನ್ನ ಹೋರಾಟಕ್ಕೆ ಉಪವಾಸ ಸತ್ಯಾಗ್ರಹವಲ್ಲದೆ ಬೇರೆ ಮಾರ್ಗವೇ ಇಲ್ಲ. ನನಗೂ ಇತರರಂತೆ ಬದುಕುವ ಹಂಬಲವಿದೆ" ಎಂದು ಹೇಳುವ ಶರ್ಮಿಳಾರ ಅಂತರಂಗದ ಮಾತಿನಲ್ಲಿ ನೋವಿದೆ. ದೇವರು ನನ್ನ ಹೋರಾಟಕ್ಕೆ ಶಕ್ತಿ ನೀಡುತ್ತಾನೆ. ಒಂದಲ್ಲ ಒಂದು ದಿನ ನನ್ನ ಜೀವನದಲ್ಲೂ ಸಂತೋಷದ ದಿನಗಳು ಬರಬಹುದು ಎಂಬ ಆಶಾವಾದ, ಗಾಂಧೀಜಿಯವರ ತತ್ವದಲ್ಲಿರುವ ಬಲವಾದ ನಂಬಿಕೆ ಈಕೆಯನ್ನು ಧೃತಿಗೆಡದಂತೆ ಕಾಪಾಡಿಕೊಂಡು ಬಂದಿದೆ.

ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು 11 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಈ ಹೆಣ್ಣುಮಗಳ ಯೌವನ, ಹೋರಾಟದಲ್ಲೇ ಸವೆದು ಹೋಗುತ್ತಿದೆ. ಆಕೆಗೂ ಒಂದು ಸುಂದರವಾದ ಬದುಕು ಇದೆ. ಎಲ್ಲಾ ಹೆಣ್ಮಕ್ಕಳಂತೆ ಮದುವೆಯಾಗಿ, ಸಂಸಾರ ನಡೆಸಿ ಬಾಳಬೇಕು ಎಂಬ ಕನಸಿದೆ. ಆದರೆ ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ಜಯಗಳಿಸಲೇ ಬೇಕು ಎಂದು ಮರಣಕ್ಕೂ ಅಂಜದೆ, ತನ್ನ ಆಸೆಗಳನ್ನೆಲ್ಲಾ ಬದಿಗೊತ್ತಿ ಹೋರಾಡುತ್ತಿರುವ ಇರೋಂ ಚಾನು ಶರ್ಮಿಳಾರ ದನಿ ಯಾರಿಗೂ ಕೇಳಿಸುತ್ತಿಲ್ಲವೇ? ಅಧಿಕಾರ ಮದದಿಂದ ಕಣ್ಣು ಮಂಜಾಗಿರುವ ನಮ್ಮ ರಾಜಕೀಯ ನಾಯಕರಿಗೆ ಈಕೆಯ ಹೋರಾಟ ಕಾಣಿಸುತ್ತಿಲ್ಲವೇ?

ಮುಂಬರುವ ನವಂಬರ್ 4ನೇ ತಾರೀಖಿಗೆ ಶರ್ಮಿಳಾರ ಅಮರಣ ಉಪವಾಸ ಸತ್ಯಾಗ್ರಹಕ್ಕೆ 11 ವರ್ಷ ಪೂರ್ತಿಯಾಗುತ್ತದೆ. ಕಳೆದ 11 ವರ್ಷಗಳಿಂದ ಶರ್ಮಿಳಾ ಅನುಭವಿಸಿದ ನೋವು ಯಾರಿಗಾದರೂ ಅರ್ಥವಾಗುವುದೇ? ಶರ್ಮಿಳಾರ ಉಪವಾಸ ಸುಖಾಂತ್ಯ ಕಾಣುವುದೇ? ಅಲ್ಲಿಯವರೆಗೆ ಕಾದು ನೋಡಬೇಕಾಗಿದೆ.

Saturday, September 24, 2011

"ಕರ್ನಾಟಕ ಚೆಕ್ ಪೋಸ್ಟ್ ಗಳಲ್ಲಿ ಮಾಮೂಲುದಾರರು"- ನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ

ಚೆಕ್ ಪೋಸ್ಟ್ ಗಳಲ್ಲಿ ಕತ೯ವ್ಯ ನಿರತರಾಗಿರುವ ಪೊಲೀಸರು ಲಂಚ ಕೇಳುವುದು ಹೊಸತೇನಲ್ಲ. ಅವರಿಗೆ 'ಮಾಮೂಲು' ಕೊಟ್ಟು ರಾಜ್ಯದ ಗಡಿ ದಾಟಿ ಬರುವ ಪ್ರತಿಯೊಬ್ಬ ಪ್ರಯಾಣಿಕನು ಪೊಲೀಸರಿಗೆ ಹಿಡಿಶಾಪ ಹಾಕುತ್ತಾನೆಯೇ ಹೊರತು ಯಾರೂ ಈ ಬಗ್ಗೆ ಕೇಸು ದಾಖಲಿಸುವುದಿಲ್ಲ ಎಂಬುದು ದುರದೃಷ್ಟಕರ. ಕೇರಳ-ಕನಾ೯ಟಕ ಗಡಿ ಪ್ರದೇಶದಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ಬಗ್ಗೆ ಮಲಯಾಳ ಮನೋರಮಾ ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಗಿದೆ. ಈ ಸುದ್ದಿ ಕನಾ೯ಟಕದ ಜನತೆಗೂ ತಲುಪಲಿ ಎಂಬ ಆಶಯದೊಂದಿಗೆ ಈ ಬ್ಲಾಗ್ ಬರೆಯುತ್ತಿದ್ದೇನೆ.


ಕೇರಳ ಕನಾ೯ಟಕ ಗಡಿಪ್ರದೇಶವಾದ ಗುಂಡ್ಲುಪೇಟೆಯಲ್ಲಿ ರಂಜಿತ್ ನಿದೇ೯ಶನದ 'ಇಂಡಿಯನ್ ರುಪೀ' ಎಂಬ ಮಲಯಾಳಂ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಗಡಿಪ್ರದೇಶದಲ್ಲಿ ಕನಾ೯ಟಕ ಪೊಲೀಸರು ಲಂಚಕ್ಕಾಗಿ ತಮ್ಮನ್ನು ಪೀಡಿಸಿದ ಘಟನೆಯ ಬಗ್ಗೆ ಮಲಯಾಳಂ ಚಿತ್ರನಟ ಪೃಥ್ವೀರಾಜ್ ಹೇಳಿದ ರಿಯಲ್ ಸ್ಟೋರಿ.

"ರಾಜ್ಯದ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಮತ್ತು ಪೊಲೀಸ್ ಏಯ್ಡ್ ಪೋಸ್ಟ್ ಗಳಿರುವುದೇ ಪ್ರಯಾಣಿಕರ ಹಾಗೂ ಸರಕು ಸಾಗಾಟಗಾರರ ಭದ್ರತೆಗಾಗಿ. ಇವರಿಗೆ ಜನರಿಂದ 'ಮಾಮೂಲು' ವಸೂಲು ಮಾಡುವ ಅಧಿಕಾರವಿರುವುದಿಲ್ಲ. ಆದರೆ, ಬತ್ತೇರಿಯಿಂದ ಗುಂಡ್ಲುಪೇಟೆಗೆ ತಲುಪಲು ನಮ್ಮ ಸಿನಿಮಾ ಟ್ರೂಪ್ ಗೆ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಪ್ರತಿ ದಿನ ನೀಡಬೇಕಾಗಿ ಬಂದ ಹಣ 200 ರು. ಪ್ರತಿ ಪ್ರಯಾಣದ ನಡುವೆ 'ಹಣ' ನೀಡಲೇ ಬೇಕಾಗಿ ಬಂದ ಪರಿಸ್ಥಿತಿ ನಮ್ಮದಾದರೆ ಇಲ್ಲಿ 'ಅವರನ್ನು' ಕೇಳುವವರೇ ಇಲ್ಲ!

ಬತ್ತೇರಿಯಿಂದ ಒಂದೂವರೆ ಗಂಟೆ ಪ್ರಯಾಣಿಸಿದರೆ ಗುಂಡ್ಲುಪೇಟೆಗೆ ತಲುಪಬಹುದು. ಗಡಿ ಪ್ರದೇಶದಲ್ಲಿ ಮೊದಲು ಸಿಗುವುದೇ ಕೇರಳ ಚೆಕ್ ಪೋಸ್ಟ್. ನಂತರ ಆರ್ ಟಿ ಓ ಚೆಕ್ ಪೋಸ್ಟ್. ಇದಾದ ನಂತರ ಸಿಗುವ ಕನಾ೯ಟಕ ಚೆಕ್ ಪೋಸ್ಟ್ ದಾಟಬೇಕಾದರೆ 'ಮಾಮೂಲು' ನೀಡಲೇಬೇಕು.

ಲೊಕೇಶನ್ ನಿಂದ ಕಾರಿನಲ್ಲಿ ಮರಳುತ್ತಿದ್ದರೆ ನನ್ನಲ್ಲಿ ಅವರು ಹಣ ಕೇಳಲಿಲ್ಲ. ಆದರೆ ಇನ್ನಿತರ ವಾಹನ ಚಾಲಕರಲ್ಲಿ ಅವರು ದುಡ್ಡು ಇಸ್ಕೊಂಡಿದ್ದನ್ನು ನಾನು ನೋಡಿದ್ದೇನೆ. ಒಂದು ದಿನ ನಾವು ಹಣ ನೀಡಲು ನಿರಾಕರಿಸಿದಾಗ ಶೂಟಿಂಗ್ ಗಾಗಿ ನಾವು ಒಯ್ಯುತ್ತಿದ್ದ ಪೊಲೀಸ್ ಯುನಿಫಾಮ್೯, ಲಾಠಿ, ಟೋಪಿ ಎಲ್ಲವನ್ನೂ ತೆಗೆದುಕೊಂಡು ಹೋದರು. ಹಣ ಕೊಟ್ಟ ನಂತರವೇ ಅವರು ನಮಗದನ್ನು ಹಿಂತಿರುಗಿಸಿದ್ದು.

ಈ ರೀತಿ ಮಾಮೂಲು ಕೇಳುವ ಕನಾ೯ಟಕ ಪೊಲೀಸರ 'ಧನದಾಹ'ಕ್ಕೆ ಬಲಿಯುವಾಗುವವರಲ್ಲಿ ಕೇರಳಿಗರೇ ಹೆಚ್ಚು. ಇವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದು ತಿಳಿಯದಾಗಿದೆ.

ಈ ಬಗ್ಗೆ ಕೇರಳ ಮತ್ತು ಕನಾ೯ಟಕ ಸಕಾ೯ರಗಳು ಜಂಟಿಯಾಗಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವೇ, ಕೇರಳ ಸಕಾ೯ರ ಇದನ್ನು ಕನಾ೯ಟಕ ಸಕಾ೯ರದ ಗಮನಕ್ಕೆ ತರಬೇಕು. ದೆಹಲಿಯಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿರುವಾಗ ನಮ್ಮ ಸಿನಿಮಾ ಟ್ರೂಪ್ 'ಮಾಮೂಲು' ನೀಡಿ ಗಡಿ ದಾಟುತ್ತಿರುವುದು ಖೇದಕರ.

ಪ್ರಿಯ ಓದುಗ, ಇದಿಷ್ಟು ಪೃಥ್ವಿರಾಜ್ ರ ಅನುಭವದ ಮಾತುಗಳು.
ಇದೇ ರೀತಿ ನೀವೂ ರಾಜ್ಯದ ಗಡಿ ದಾಟುವಾಗ ಚೆಕ್ ಪೋಸ್ಟ್ ಗಳಲ್ಲಿ 'ಮಾಮೂಲು' ಕೊಟ್ಟಿರುತ್ತೀರಿ ಅಲ್ಲವೇ? ನಿಮಗೂ ಈ ರೀತಿಯ ಅನುಭವವಾಗಿದ್ದಲ್ಲಿ ದಯವಿಟ್ಟು ಈ ಅನ್ಯಾಯದ ಬಗ್ಗೆ ದನಿಯೆತ್ತಿ. ಈ ಮೂಲಕ ಭ್ರಷ್ಟಾಚಾರದಿಂದ ದೇಶವನ್ನು ಮುಕ್ತಗೊಳಿಸಲು ನೀವೂ ಸಹಕರಿಸಿ.


ಗುಂಡ್ಲುಪೇಟೆಯಲ್ಲಿ ಪೊಲೀಸರು ಮಾಮೂಲು ವಸೂಲಿ ಮಾಡುತ್ತಿರುವ ದೃಶ್ಯವನ್ನು ಸಿನಿಮಾ ಟ್ರೂಪ್ ಸೆರೆಹಿಡಿದಿದೆ. ಈ ಸುದ್ದಿ ಕನಾ೯ಟಕ ಸಕಾ೯ರದ ಗಮನಕ್ಕೆ ಬರಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಆಶಿಸೋಣ.

ಕೃಪೆ : ಮನೋರಮಾ ಆನ್ಲೈನ್

Friday, July 29, 2011

ಯಾಕೋ ಹಳೆಯದೆಲ್ಲಾ ನೆನಪಾಗುತಿದೆ...

ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ ಬುದ್ಧಿವಂತ ಗೆಳೆಯರೆಲ್ಲ ಪಾಸಾದಾಗ ನಾವು ಕಂಗ್ರಾಟ್ಸ್ ಹೇಳುವ ಗುಂಪಿನಲ್ಲಿ ನಿಲ್ಲಬೇಕಾಗಿ ಬಂತು. ನನ್ನ ಹಾಗೆಯೇ ಎಂಟು ಹುಡುಗಿಯರು ನಮ್ಮ ಗ್ಯಾಂಗ್್ನಲ್ಲಿದ್ದರು. ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ನಾವು ಕಂಪನಿಗಳಿಗೆ ರೆಸ್ಯೂಮೆ ಫಾರ್ವ್್ರ್ಡ್ ಮಾಡುತ್ತಿರಬೇಕಾದರೆ ನಿಮಗೆ ಯಾಕೆ ಕೆಲಸ? ಹೇಗಾದರೂ ಸಾಫ್ಟ್್ವೇರ್ ಇಂಜಿನಿಯರ್ ಒಬ್ಬ ಮದುವೆ ಆಗುತ್ತಾನೆ. ಆಮೇಲೆ ಗಂಡ, ಮನೆ ಮಕ್ಕಳು ಅಂತಾ ಲೈಫ್ ಕಳೆದುಹೋಗಿ ಬಿಡುತ್ತೆ ಎಂದು 'ಬಿಟ್ಟಿ' ಉಪದೇಶ ನೀಡುವ ಹುಡುಗರಿಗೂ ಏನೂ ಕಮ್ಮಿಯಿರಲಿಲ್ಲ.

ಇಂಟರ್್ವ್ಯೂನಲ್ಲಿ ಪಾಸಾಗುವ ಅರ್ಹತೆ ನಮಗಿರಲಿಲ್ಲವೋ, ನಮ್ಮನ್ನು ಆಯ್ಕೆ ಮಾಡುವ ಅರ್ಹತೆ ಅವರಿಗಿರಲಿಲ್ಲವೋ ಅಂತೂ ನಮ್ಮ ಬೆಂಗಳೂರು ಕನಸು ಕನಸಾಗಿಯೇ ಉಳಿದಿತ್ತು. ಬೆಂಗಳೂರು ಹೋಗಿ ಅಲ್ಲಿ ಕೆಲಸ ಹುಡುಕೋಣ ಎಂದರೆ ಅಷ್ಟೊಂದು ದುಡ್ಡು ಇರಬೇಕಲ್ವಾ? ಕೆಲವೊಮ್ಮೆ ಕೆಲಸ ಸಿಕ್ಕದೇ ಇದ್ದರೆ? ಮನಸ್ಸಲ್ಲಿ ನೂರಾರು ಚಿಂತೆಗಳು. ಕಾಲೇಜಿನಲ್ಲಿರುವಾಗ ಉತ್ತರ ಭಾರತದಿಂದಲೋ ಇನ್ನಾವುದೋ ರಾಜ್ಯದಿಂದ ಬಂದ ಮಕ್ಕಳು ಇಂಗ್ಲಿಷ್್ನಲ್ಲಿ ಮಾತನಾಡಿದರೆ, ಇದು ಕೇರಳ. ನಮ್ಮ ರಾಜ್ಯ ಇಲ್ಲಿ ಮಲಯಾಳಂ ಕಲಿತುಕೊಳ್ಳಿ ಎಂದು ಹೇಳಿ ಅವರಿಗೆ ಮಲಯಾಳಂನ ಕಷ್ಟ ಪದಗಳನ್ನು ಹೇಳಿಕೊಟ್ಟು ನಾಲಗೆ ಸರಿಪಡಿಸುವ ಕೆಲಸವನ್ನೂ ನಾವು ಮಾಡಿದ್ದುಂಟು. ಅಂತೂ ಆ ಮಕ್ಕಳು ನಾಲ್ಕು ವರ್ಷದಲ್ಲಿ ಕನಿಷ್ಠ ಅಂದರೆ ಊಣ್ ಕಳಿಚ್ಚೋ, ವೆರುದೇ ಪರಞದಾ, ಪಿನ್ನೆ ಕಾಣಾಂ.. ಪಡಿಚ್ಚೋ ಎಂಬ ವಾಕ್ಯಗಳನ್ನು ಕಲಿತು ನಮ್ಮ ಅಪ್ಪಂ, ಪುಳಿಶ್ಶೇರಿ, ಪುಟ್ಟುಂ ಕಡಲೆಯ ರುಚಿಗೆ ಶರಣಾಗುತ್ತಿದ್ದರು.

ಸರಿ, ಇಂಜಿನಿಯರ್ ಅಂತೂ ಆಗಲ್ಲ, ಸದ್ಯ, ಯಾವುದಾದರೂ ಕಾಲ್ ಸೆಂಟರ್ ಸೇರೋಣ, ಅಲ್ಲಿ ಚೆನ್ನಾಗಿ ಇಂಗ್ಲಿಷ್ ಕಲಿತ ಮೇಲೆ ಯಾವುದಾದರೂ ಕಂಪೆನಿಯಲ್ಲಿ ಟ್ರೈಮಾಡಿದರಾಯ್ತು ಎಂದು ನಮ್ಮ ಗುಂಪಿನಲ್ಲಿದ್ದ ಮಂಗಳೂರಿನ ಹುಡುಗಿಯೊಬ್ಬಳು ಸಲಹೆ ನೀಡಿದ್ದೂ ಆಯ್ತು. ಇದಕ್ಕೆಲ್ಲಾ ಮನೆಯವರು ಒಪ್ಪ ಬೇಕಲ್ವಾ? ಮೊದಲು ಇಂಗ್ಲಿಷ್ ಕಲಿಯಬೇಕು... ಅದಕ್ಕೆ ರ್ಯಾಪಿಡೆಕ್ಸ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕ ಹಿಡಿದು ನಾಲ್ಕೈದು ಪುಟ ಓದಿದ್ದೂ ಆಯ್ತು. ಒಂದಷ್ಟು ದಿನ ಅಕ್ಕನ ಜತೆ ಆಕೆಗೆ ಇಂಗ್ಲಿಷ್ ಮರೆತೇ ಹೋಗುವಂತೆ ಇಂಗ್ಲಿಷ್ ಮಾತನಾಡಿದ್ದೂ ಆಯ್ತು. ಏನೂ ಪ್ರಯೋಜನವಾಗಲಿಲ್ಲ. ಇಂಗ್ಲಿಷ್ ಅರ್ಥವಾಗುತ್ತಿತ್ತೇ ಹೊರತು ಅದಕ್ಕೆ ಇಂಗ್ಲಿಷ್ ನಲ್ಲೇ ಉತ್ತರ ನೀಡಲು ಎಲ್ಲಾ
ಭಾಷೆಗಳ ಕಿಚಡಿ ಮಾಡಬೇಕಾಗಿತ್ತು. ಕೆಲವೊಮ್ಮೆ ನಮ್ಮನ್ಯಾಕೆ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿಲ್ಲ? ಎಂದು ಅಪ್ಪನನ್ನು ಕೇಳಿದಾಗ ನಿಮ್ಮಮ್ಮ ನಮ್ ಮಕ್ಳು ಮಲಯಾಳಂ, ಇಂಗ್ಲಿಷ್ ಶಾಲೆಗೆ ಹೋಗುವುದು ಬೇಡ, ನನ್ನ ಭಾಷೆ ಕನ್ನಡವೇ ಕಲಿಯಲಿ ಅಂತಾ ಒತ್ತಾಯಿಸಿದ್ಳು ಎಂದು ಅಪ್ಪ ಅಮ್ಮನಿಗೆ 'ಖೋ' ಹೇಳುತ್ತಿದ್ದರು. ಅಮ್ಮನೋ, ಕನ್ನಡದ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿ ನಮ್ಮ ಬಾಯಿಂದ 'ಜೈ ಹೋ' ಹೇಳಿಸಿದ ಮೇಲೆ ಸುಮ್ಮನಾಗುತ್ತಿದ್ದರು.

ಅಂತೂ ಕಾಲೇಜು ಮುಗಿಯುತ್ತಾ ಬರುತ್ತಿದ್ದಂತೆ ನಮ್ಮ ರೆಸ್ಯೂಮೆಗಳು ದೇಶದ ಉದ್ದಗಲಕ್ಕೆ ಪ್ರಯಾಣಿಸಿ ಸುಸ್ತಾಗುತ್ತಿತ್ತು. ಏನೇ ಆದರೂ ಫಲಿತಾಂಶ ಬರಲಿ ಅಲ್ಲಿಯವರೆಗೆ ಊರಲ್ಲೇ ಏನಾದರೂ ಕೆಲಸ ಹುಡುಕಬೇಕೆಂದು ನಿರ್ಧರಿಸಿದೆ. ಊರಲ್ಲೇ ಇರುವ ಸರ್ಕಾರಿ ಐಟಿಐಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ ಇತ್ತು. ಅರ್ಜಿ ಹಾಕಿದೆ ಉತ್ತರವೂ ಬಂತು. ಕ್ಲಾಸಿನಲ್ಲಿ ನನ್ನಕ್ಕಿಂತ ದೊಡ್ಡವರಾದ ಹುಡುಗರು. ನನ್ನಕ್ಕಿಂತ ಎತ್ತರದ ಬೋರ್ಡ್, ಸಾರಿ ಉಟ್ಟು ಪಾಠ ಮಾಡಬೇಕು. ಮೊದಮೊದಲು ಸ್ವಲ್ಪ ಸಂಕೋಚವಾದರೂ ಕ್ರಮೇಣ ಎಲ್ಲಾ ಸರಿಹೋಯ್ತು. ಅದಾದ ಮೇಲೆ ಎನ್್ಐಐಟಿ ಸೆಂಟರ್್ನಲ್ಲಿ ಪ್ರೋಗ್ರಾಮರ್ ಕೆಲಸ ಖಾಲಿ ಇದೆ ಎಂಬ ಜಾಹೀರಾತು ನೋಡಿ ಅಲ್ಲಿಗೂ ಅರ್ಜಿ ಹಾಕಿದೆ. ಕೆಲಸ ಸಿಕ್ತು, ಅದೂ 1 ತಿಂಗಳು. ಆವಾಗ ಇಂಜಿನಿಯರಿಂಗ್್ನ ಫಲಿತಾಂಶವೂ ಬಂದಿತ್ತು. ಫಲಿತಾಂಶ ಬಂದ ಮೇಲೆ ಎಲ್ಲರೂ ನಿನಗೆ ಬೆಂಗಳೂರಲ್ಲಿ ಯಾಕೆ ಕೆಲಸ ಸಿಕ್ಕಿಲ್ಲ? ಎಂದು ಕೇಳುವವರೇ ಜಾಸ್ತಿ. ಇಂಜಿನಿಯರಿಂಗ್ ಓದಿದ್ದರೂ ಮನಸ್ಸಲ್ಲಿ ಪತ್ರಕರ್ತೆಯಾಗಬೇಕೆಂಬ ತುಡಿತ. ಸ್ಥಳೀಯ ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಬರೆದು ದಾಹ ತೀರಿಸಿದ್ದೂ ಆಯ್ತು.

ಅಂದೊಂದು ದಿನ ಚೆನ್ನೈಯಿಂದ ಕರೆ ಬಂತು. ಸುದ್ದಿ ಪೋರ್ಟಲ್್ವೊಂದರಲ್ಲಿ ಕೆಲಸ ಅದಾಗಿತ್ತು. ಸುದ್ದಿಪೋರ್ಟಲ್ ಅಂದಾಕ್ಷಣ ಮನಸ್ಸು ಪುಳಕಗೊಂಡಿತು. ಇದೇ ಸರಿಯಾದ ಟೈಮ್ ಅಂದ್ಕೊಂಡು ಅಪ್ಪನ ಜತೆ ಚೆನ್ನೈಗೆ ಹೋಗಿ ಇಂಟರ್್ವ್ಯೂಗೆ ಹಾಜರಾದೆ. ಎಲ್ಲವೂ ಸುಗಮವಾಗೇ ನೆರವೇರಿತು. ಕೆಲಸವೂ ಸಿಕ್ಕಿ ಬಿಡ್ತು. ಇನ್ನೇನು ಹೇಳುವುದು ಅಲ್ಲಿಯ ಕೆಲಸವೇ ಹಾಗಿತ್ತು. ಪೋರ್ಟಲ್್ನಲ್ಲಿ ಮೊದಲಬಾರಿಗೆ ನನ್ನ ಪ್ರೇಮಪತ್ರ ಪ್ರಕಟವಾಯ್ತು, ನಂತರ ಕೆಲವು ಲೇಖನಗಳು...ಕನ್ನಡ ಟೈಪಿಂಗ್ ಅಲ್ಲೇ ಕಲಿತು ಬ್ಲಾಗ್್ಲೋಕಕ್ಕೆ ಕಾಲಿರಿಸಿದೆ. ಅದರ ಅನುಭವ ವಿವರಣೆಗೆ ಅತೀತವಾದುದು. ಬ್ಲಾಗ್್ಲೋಕ ನನ್ನ ಜೀವನಕ್ಕೆ ಒಂದು ತಿರುವನ್ನು ನೀಡಿತ್ತು. ಅಲ್ಲಿ ನನಗೆ ಸಿಕ್ಕಿದ ಗೆಳೆಯ ಗೆಳತಿಯರೆಷ್ಟು!ನನ್ನ ಭಾವನೆಗಳಿಗೆ ಸ್ಪಂದಿಸಿದವರು, ನನ್ನ ತಪ್ಪನ್ನು ತಿದ್ದಿದವರೆಷ್ಟು...ಅವರೆಲ್ಲರಿಗೂ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.

ಚೆನ್ನೈಯಲ್ಲಿ ಒಂದೂವರೆ ವರ್ಷ ದುಡಿದಿದ್ದರೂ ಕನಸಿನ ಬೆಂಗಳೂರು ನನ್ನನ್ನು ಕರೆಯುತ್ತಲೇ ಇತ್ತು. 'ಪ್ರೆಸ್್' ಎಂಬ ಫಲಕ ಕಂಡ ಕೂಡಲೇ ನನ್ನೊಳಗಿನ ಪತ್ರಕರ್ತೆ ಜಾಗೃತವಾಗುತ್ತಿದ್ದಳು. ಆಮೇಲೆ ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ನೌಕರಿ ಸಿಕ್ಕಿತು. ಇಂಟರ್್ವ್ಯೂ ಮುಗಿದು ನೀವು ಆಯ್ಕೆಯಾಗಿದ್ದೀರಿ ಎಂದು ಹೇಳುವಾಗ ನನ್ನ ಕಣ್ಣಾಲಿಗಳು ತುಂಬಿದ್ದವು. ನಾನು ಪತ್ರಕರ್ತೆಯಾಗುತ್ತಿದ್ದೇನೆ ಎಂಬ ಸಂತೋಷ. ಅದೂ ಬೆಂಗಳೂರಲ್ಲಿ...ನನ್ನ ಕನಸು ನನಸಾದ ಕ್ಷಣ...

ಹಲವಾರು ಹುಡುಗಿರಂತೆ ನಾನು ಕೂಡಾ ಮನಸ್ಸಲ್ಲಿ ಹಲವಾರು ಕನಸುಗಳನ್ನು ಹೊತ್ತು ಒಂದು ದಿನ ಬೆಂಗಳೂರಿಗೆ ಬಂದೆ. ರಶ್ಮಿ ಕಾಸರಗೋಡು, ಕೇರಳ ಎಂದು ದಪ್ಪ ಅಕ್ಷರದಲ್ಲಿ ನನ್ನ ಬ್ಯಾಗ್ ಮೇಲೆ ಅಕ್ಕ ಚೀಟಿ ಅಂಟಿಸಿದ್ದಳು. ಕೇರಳ ಸರ್ಕಾರದ ಬಸ್ಸಿನಿಂದ ಇಳಿದು ಬಂದ ಕಾರಣವೇನೋ ಆಟೋಚಾಲಕರು ಅರ್ಧ ಮಲಯಾಳಂ, ಅರ್ಧ ತಮಿಳಲ್ಲಿ ಮಾತನಾಡಿ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಿದ್ದರು. ಹೇಗೋ ಗೆಳತಿಯೊಬ್ಬಳ ಸಹಾಯದಿಂದ ಪಿಜಿ ಸೇರಿದೆ. ಅಲ್ಲಿಂದ ಶುರುವಾಯ್ತು ನನ್ನ ಪಯಣ...ಒಂದಷ್ಟು ಮುಗ್ಗರಿಸಿ, ಮತ್ತೊಮ್ಮೆ ಎದ್ದು, ಬಿದ್ದು, ಅತ್ತು, ನಕ್ಕು....ಹೀಗೇ ಸಾಗುತ್ತಿದೆ. ಕೆಲವೊಮ್ಮೆ ಬದುಕು ಯಾಂತ್ರಿಕವಾಗುತ್ತಿದೆಯೇನೋ ಎಂದು ಅನಿಸಿದ್ದೂ ಉಂಟು. ಹಳೆಯ ನೋವುಗಳು ಕಲಿಸಿದ ಪಾಠ ಬದುಕುವ ಛಲಕ್ಕೆ ಸಾಥ್ ನೀಡಿದೆ.. ಪತ್ರಕರ್ತೆಯಾಗಿದ್ದೇನೆ...ಕನಸುಗಳ ಪಟ್ಟಿ ಬೆಳೆಯುತ್ತಲೇ ಇದೆ... ಸಾಗಬೇಕಾದ ದಾರಿ ಇನ್ನೂ ಇದೆ.

Saturday, July 16, 2011

ನನ್ನದೂ ಒಂದು

ನೂರು ರುಪಾಯಿಗೆ ಸಿಕ್ಕ
ಫ್ಯಾಷನ್ ಚಪ್ಪಲಿ ಮೆಟ್ಟಿ,
ಅದೇ ಜೀನ್ಸು, ಮೇಲೊಂದು ಟೀ ಶರ್ಟು
ಮತ್ತೊಂದು ಬ್ಯಾಗು, ಪರ್ಸ್...

ಬಿಎಂಟಿಸಿಯಲ್ಲಿ ಹೈ ಹೀಲ್ಡ್ ಚಪ್ಪಲಿ
ತುಳಿತಕ್ಕೆ ಚೀರಿ,
ನೂಕು ನುಗ್ಗಲಲ್ಲಿ ಚಡಪಡಿಸಿ
ಬಿದ್ದು ಏಳುತಿದೆ ಬದುಕು...

ಅವಸರದಲ್ಲಿ ಅರ್ಧಂಬರ್ಧ ತಿಂದ
ತಿಂಡಿ ಬಸ್ಸಲ್ಲೇ ಜೀರ್ಣವಾಗಿ
ಹೊಸ ಕನಸುಗಳು ಮತ್ತೆ
ಚಿಗುರುತ್ತಿವೆ ಮನಸ್ಸಲ್ಲಿ
ದಾರಿಯಂಗಡಿಗಳಲ್ಲಿ ತೂಗು ಹಾಕಿದ
ಟೀ ಶರ್ಟು, ಸಲ್ವಾರುಗಳು
ಕೈ ಬೀಸಿ ಕರೆಯುತ್ತಿವೆ...

ನೂರು ರುಪಾಯಿ ಇಡಿ ನೋಟು
ಬಸ್ ಪಾಸು, ಐಡಿ ಕಾರ್ಡಿನ ನಡುವೆ
ಬೆಚ್ಚನೆ ಕುಳಿತಿರಲು
ಹಳೇ ರಸೀದಿ ತುಂಡುಗಳು ನಡುಗ
ತೊಡಗಿದ್ದವು ಒಂದರ ಹಿಂದೆ ಮತ್ತೊಂದರಂತೆ!

ಕಾಯಬೇಕಾಗಿದೆ ತಿಂಗಳ ಪಗಾರಕ್ಕೆ
ಮನೆಗೆ ಕಳುಹಿಸಬೇಕಾಗಿದೆ ಒಂದಿಷ್ಟು ಮೊತ್ತ
ಮನೆ ಬಾಡಿಗೆ, ಕ್ರೀಮು, ಪೌಡರು
ಒಂದಷ್ಟು ಮ್ಯಾರಿ ಬಿಸ್ಕತ್ತು!

ಪಟ್ಟಿ ಬೆಳೆಯುತ್ತಿದ್ದರೆ ಹಣ ಕುಗ್ಗುತ್ತಿತ್ತು ಜೇಬಲ್ಲಿ
ಕೊನೆಗೂ 'ಪಟ್ಟಿ'ಯಲ್ಲಿ ಕೆಲವೊಂದನ್ನು
ಕಳೆದು, ಉಳಿದದ್ದನ್ನು ಕೂಡಿಸಿ
ಹೇಗೋ 'ಅಡ್ಜೆಸ್ಟ್' ಮಾಡಿ
ಮುಂದಿನ ಪಗಾರಕ್ಕಾಗಿ ದಿನ ಎಣಿಕೆ
ಶುರುವಾಗಿದೆ...

Saturday, July 9, 2011

ನಮ್ಮೂರ ಗೋರ್ಮೆಂಟು ಬಾವಿ

"ರಿಗೊಬ್ಬಳೇ ಪದ್ಮಾವತಿ" ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ. ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ...ಎಲ್ಲರೂ ಅದನ್ನು ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು. ಊರ ಮಧ್ಯೆ ಸಿಮೆಂಟು ಕಟ್ಟೆಯ ಈ ಬಾವಿಯ ಪಕ್ಕವೇ ಸಿಮೆಂಟಿನ ಒಂದು ಸಣ್ಣ ಟ್ಯಾಂಕ್ ಕೂಡ ಇದೆ. ನೀರು ಸೇದೋಕೆ ಬಂದೋರು ಯಾರಾದ್ರೂ ಆ ಟ್ಯಾಂಕ್್ಗೆ ಒಂದು ಕೊಡ ನೀರು ಹಾಕಿ ಬಿಟ್ಟರೆ ಅಲ್ಲಿರುವ ಪ್ರಾಣಿ ಪಕ್ಷಿಗಳ ದಾಹವೂ ಇಂಗುತ್ತದೆ. ಗೋರ್ಮೆಂಟು ಬಾವಿ ಅಂದರೆ ಇನ್ನು ಹೇಳಬೇಕೆ? ಸ್ವಂತ ಮನೆ ಕಟ್ಟಿ ಬಾವಿ ತೋಡುವವರೆಗೂ, ಮನೆಯ ಬಾವಿಯಲ್ಲಿ ನೀರು ಬತ್ತಿದಾಗಲೂ ನೆನಪಾಗುವುದೇ ಈ ಬಾವಿ. ಈವಾಗ ಮನೆಗೊಂದು ಬೋರ್್ವೆಲ್ ಜತೆಗೆ ಪಂಚಾಯತ್ ವತಿಯಿಂದ ಮನೆ ಮನೆಗೆ ನೀರು ಸೌಕರ್ಯವಿರುವುದರಿಂದ ಬಾಡಿಗೆ ಮನೆಯಲ್ಲಿ ವಾಸವಿರುವವರೇ ಈ ಬಾವಿಯ ಗಿರಾಕಿಗಳು.

ಬೆಳಗ್ಗೆ ಬೆಳಕು ಮೂಡುತ್ತಲೇ ನೀರೆಯರು ಬಾವಿಯತ್ತ ಧಾವಿಸುತ್ತಾರೆ. ಚಾ ಆಯ್ತಾ? ತಿಂಡಿ ಏನು? ಎಂಬ ಒನ್ ಲೈನ್ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಿ ನೀರು ಸೇದಿ ಗಡಿಬಿಡಿಯಲ್ಲಿ ನೀರು ಕೊಂಡೊಯ್ಯುವುದು ಬೆಳಗ್ಗಿನ ವಿಶೇಷ . ಮಧ್ಯಾಹ್ನದ ವೇಳೆಗೆ ಬಾವಿಕಟ್ಟೆಯ ಸುತ್ತಲೂ ತಟ ಪಟ ಅಂತಾ ಬಟ್ಟೆ ಒಗೆಯುವವರೇ ಜಾಸ್ತಿ. ಅಲ್ಲೇ ಬಟ್ಟೆ ಒಗೆದು ಪಕ್ಕದಲ್ಲಿರುವ ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿಯೋ, ಇಲ್ಲದಿದ್ದರೆ ಅಲ್ಲೇ ಪಾರೆಕಲ್ಲಿನ ಮೇಲೆ ಬಟ್ಟೆ ಒಣಗಿಸಿ ಮನೆಗೆ ಮರಳುವವರೇ ಜಾಸ್ತಿ .

ಸಂಜೆ ವೇಳೆಗೆ ನೋಡ್ಬೇಕಪ್ಪಾ...ನೀರು ಸೇದಲು ನೀರೆಯರ ಕ್ಯೂ... ಜತೆಗೆ ಅಲ್ಲಿ ಒಂದೆರಡು ಗಂಡಸರು ಇದ್ದೇ ಇರುತ್ತಾರೆ. ಅದರಲ್ಲೂ ಮದುವೆಯಾದ ಹೊಸತರಲ್ಲಿ ತನ್ನ ಹೆಂಡತಿಗೆ ನೀರು ತರಲು ಸಹಾಯ ಮಾಡುವ ಗಂಡನ ಗಮ್ಮತ್ತೇ ಬೇರೆಯಿರುತ್ತೆ. ಪಾಪ...ಆ ಹುಡುಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತಾನಲ್ವಾ? ಎಂದು ಒಂದೆರಡು ಹೆಂಗಸರ ಬಾಯಿಯಿಂದ ಕೇಳುವವರೆಗೆ ಆ 'ಗಂಡ' ನೀರು ಸೇದಿದ್ದೇ ಸೇದಿದ್ದು. ಅವ ನೀರು ತೆಗೆದು ಕೊಂಡು ಹೋಗುವ ಸ್ಟೈಲ್ ಬೇರೆ ಇರುತ್ತೆ.

ಇತ್ತ, ತಲೆಯಲ್ಲೊಂದು ಪಾತ್ರೆ, ಸೊಂಟದಲ್ಲೊಂದು ಕೊಡ ಸಿಕ್ಕಿಸಿ ನಡೆಯುವಾಗ ಒದ್ದೆ ಲಂಗ ಕಾಲೆಡೆಯಲ್ಲಿ ಸಿಕ್ಕಿ ಬ್ಯಾಲೆನ್ಸ್ ಮಾಡುವ ಅಮ್ಮಂದಿರು...ನೈಟಿ ಹಾಕಿದ ಆಂಟಿಯರು, ಚೂಡಿದಾರದ ಹುಡ್ಗೀರು ಎಲ್ಲರೂ ಉಸ್ಸಪ್ಪಾ...ಎಂದು ನೀರು ಸೇದುತ್ತಿರುವುದು ಸಾಮಾನ್ಯ ದೃಶ್ಯ. ಸಂಜೆ ನಾಲ್ಕು ಗಂಟೆ ಆಯ್ತು ಎಂದರೆ ಇಲ್ಲಿ ಗೌಜಿಯೋ ಗೌಜಿ. ಸಂಜೆ ಕಾಫಿ ಆಯ್ತಾ? ರಾತ್ರಿ ಊಟಕ್ಕೆ ಮೀನು ಸಿಕ್ಕಿದೆಯಾ? ಎಂಬೆಲ್ಲಾ ಪ್ರಶ್ನೆಗಳಿಂದ ಆರಂಭವಾಗಿ ಮೀನು ಮಾರುವ ಮೊಮ್ಮದ್ ಇಂದು ಬಂದಿಲ್ಲ ಯಾಕೆ? ಕಂತಿಗೆ ಬಟ್ಟೆ ಕೊಡುವ ಅಣ್ಣಾಚಿಯಿಂದ ಖರೀದಿಸಿದ ಹೊಸ ಸೀರೆ, ಧಾರವಾಹಿ, ಸಿನೆಮಾಗಳೂ ಇಲ್ಲಿ ಚರ್ಚೆಯಾಗುವುದುಂಟು.

ಇನ್ನು ಕೆಲವೊಮ್ಮೆ ಯಾವುದೋ ಮನೆಯ ಸಂಭ್ರಮದ ಬಗ್ಗೆ, ಕಳೆದ ರಾತ್ರಿ ಪಕ್ಕದ ಮನೆಯಲ್ಲಿ ಕೇಳಿಬಂದ ಬೆಕ್ಕಿನ ಸದ್ದಿನ ಬಗ್ಗೆ, ಯಾವುದೊ ಮುರಿದ ಸಂಬಂಧಗಳು, ಹೊಸ ಸಂಬಂಧಗಳು, ಓಡಿ ಹೋದವರ ಕಥೆ ಎಲ್ಲವೂ ಮಸಾಲೆ ಮಿಶ್ರಿತವಾಗಿ ಅವರಿವರ ಬಾಯಲ್ಲಿ ಸೇರಿ ಮೆಗಾ ಧಾರವಾಹಿಗಳಾಗಿ ಬಿಡುತ್ತವೆ.. ಕೆಲವರಂತೂ ಈ ಗಾಸಿಪ್್ಗಳನ್ನು ಕೇ(ಹೇ)ಳುವ ಸಲುವಾಗಿಯೇ ನೀರಿಗೆ ಬಂದಿರುತ್ತಾರೆ. ಅಮ್ಮನ ಜತೆ ಬಂದ ಮಗಳನ್ನು ಕಣ್ಣಲ್ಲೇ ಅಳೆದು ನೋಡಿ 'ದೊಡ್ಡವಳಾಗಿದ್ದಾಳಾ?' ಎಂದು ಕೇಳುವುದು ಮಾಮೂಲಿ. ಅಮ್ಮ ಹೇಳುತ್ತಿರುತ್ತಾರೆ, ಮೊದಲೆಲ್ಲಾ ಮೈಲಿಗೆಯಾದ ಹೆಂಗಸರು ಆ ನೀರು ಮುಟ್ಟವಂತಿರಲಿಲ್ಲವಂತೆ. ಆದ್ರೆ ಈವಾಗ ಮಡಿ ಮೈಲಿಗೆ ಅಂತಾ ಯಾರೂ ಹೇಳಿಕೊಳ್ಳೋದಕ್ಕೆ ಹೋಗಲ್ಲ...ಯಾರಿಗೂ ಈ ಬಗ್ಗೆ ತಕರಾರು ಇಲ್ಲ.

ಅದಿರಲಿ ಬಿಡಿ, ಊರಿಗೆ ಬಂದವಳು ನೀರಿಗೆ ಬಾರದಿರುವಳೇ? ಎಂಬಂತೆ ಮದುವೆಯಾಗಿ ಹೊಸ ಹೆಣ್ಣೊಂದು ಊರಿಗೆ ಬಂದರೆ ಬಾವಿ ಕಟ್ಟೆ ಬಳಿಯೇ ಅವಳ ಬಯೋಡಾಟಾ ಕೇಳಲಾಗುತ್ತದೆ. ಈ ಹುಡುಗಿಯಂತೂ ಎಲ್ಲರ ಪ್ರಶ್ನೆಗೆ ಉತ್ತರಿಸಲೇ ಬೇಕು. ಇಲ್ಲದಿದ್ದರೆ ಅವಳ ಅತ್ತೆಯಲ್ಲಿ ನಿಮ್ಮ ಸೊಸೆಗೆ ಅದೆಷ್ಟು ಸೊಕ್ಕು ಎಂದು ಯಾರಾದ್ರೂ ಹೇಳಿ ಬಿಟ್ಟರೆ!. ಅತ್ತೆಯ ಬಗೆಗಿನ ಗುಟ್ಟುಗಳನ್ನು ರಟ್ಟು ಮಾಡಲು ಸೊಸೆಯನ್ನೇ ಏಜೆಂಟ್ ಆಗಿ ಇಟ್ಟು ಕೊಳ್ಳುವ 'ಅತ್ತೆ ವಿರೋಧಿ' ಪಕ್ಷದವರೂ ಸುಮ್ಮನಿರುತ್ತಾರೆಯೇ?

ನೀರಿಗೆ ಬರುವ ನೀರೆಯರ ವಿಷಯಗಳ ಜತೆಗೆ ಗಂಡಸರ ವಿಷಯ ಹೇಳದಿದ್ದರೆ ಹೇಗಪ್ಪಾ? ಕೂಲಿ ಮಾಡುವ ಗಂಡಸರೇ ಜಾಸ್ತಿ ಇರುವ ಈ ಊರಲ್ಲಿ ಸಂಜೆ ವೇಳೆಗೆ ಮಾತ್ರ ಗಂಡಸರು ನೀರಿಗಾಗಿ, ಸ್ನಾನಕ್ಕಾಗಿ ಬಂದಿರುತ್ತಾರೆ. ಬಾವಿ ಕಟ್ಟೆಯ ಪಕ್ಕದಲ್ಲೇ ಪರಿಮಳಭರಿತವಾದ ಸೋಪುಗಳಿಂದ ನೊರೆ ಬರಿಸಿ, ಕೊಡಪಾನದಲ್ಲಿನ ನೀರನ್ನು 'ಧೋ' ಎಂದು ಸುರಿದು ಸ್ನಾನ ಮಾಡುವ ಜವ್ವನಿಗರೇ ಜಾಸ್ತಿ. ಬಾವಿಕಟ್ಟೆಯ ಮೇಲೇ ಸೋಪು ಇರಿಸಿ ಅದು ಜಾರಿ (ಕೆಲವೊಮ್ಮೆ ಒಳಚಡ್ಡಿ) ಬಾವಿಗೆ ಬಿದ್ದದ್ದೂ ಉಂಟು. ಆದ್ರೂ ಅವರ ಸ್ನಾನಕ್ಕಾಗಲೀ, ಬಾವಿ ನೀರಿಗಾಗಲಿ ಯಾವುದೇ ಧಕ್ಕೆ ಉಂಟಾಗಿಲ್ಲ. ಸುಮಾರು 26 ಅಡಿಯಿರುವ ಈ ಬಾವಿಯ ತಳದಲ್ಲಿ ಅದೆಷ್ಟು ಕೊಡಪಾನಗಳು, ಚಡ್ಡಿಗಳು, ಸೋಪುಗಳು ಬಿದ್ದು ಮೀನು ಕಪ್ಪೆಯ ಜತೆಗೆ ಗುದ್ದಾಟ ನಡೆಸುತ್ತಿವೆಯೋ ಎಂಬುದನ್ನು ದೇವರೇ ಬಲ್ಲ!.

ಇರಲಿ, ಇಷ್ಟೊಂದು ಎಂಟರ್್ಟೈನ್್ಮೆಂಟ್ ಜತೆಗೆ ಫೈಟಿಂಗ್ ಇರದಿದ್ದರೆ ಬೋರ್ ಅನಿಸಲ್ವಾ? ಅದೂ ಇರುತ್ತೆ ಕಣ್ರೀ..ನಮಗೆ ಆಗದವರು (ಕುಟುಂಬದ ಜತೆ ಕೋಪ ಇದ್ದವರು) ನಮ್ಮ ಹಗ್ಗ ಮುಟ್ಟಿದರೆ ಇಲ್ಲಿ ಜಗಳ ಗ್ಯಾರೆಂಟಿ. ಇನ್ನು ನನ್ನ ಮಗಳನ್ನು ನಿನ್ನ ಮಗ ನೋಡಿದ, ನಿನ್ನ ಮಗಳು ಅವನತ್ತ ನೋಡ್ತಾನೆ ಇದ್ಳು, ಮಕ್ಕಳ ಜಗಳ, ಅವರಿವರ ಚಾಡಿ ಮಾತು ಕೇಳಿ ರಂಪಾಟ ಮಾಡಿ 'ಧುಮ್ಮಿಕ್ಕುವ ನೀರೆ'ಯರೂ ಈ ಬಾವಿಕಟ್ಟೆಯನ್ನೇ ರಣರಂಗವಾಗಿಸಿದ್ದೂ ಇದೆ. ಅದ್ರೂ ಕುಡಿಯೋಕೆ ನೀರಿಲ್ಲದಿದ್ದರೆ ಹೇಗೆ? ಮತ್ತೆ ಅದೇ ಬಾವಿ... ಅದೇ ನೀರು... ಅವರಿಗೆ ಆಸರೆಯಾಗುತ್ತೆ. ಅಲ್ಲಿಗೆ ಬರುವ ಜನರು ಪರಸ್ಪರ ಕಚ್ಚಾದಿದ್ದರೂ ಎಲ್ಲರೂ ಕುಡಿಯುವ ನೀರೊಂದೇ ಎಂಬಂತೆ ಸಾಮರಸ್ಯ ಹಾಡುವ ನಮ್ಮೂರ ಗೋರ್ಮೆಂಟ್ ಬಾವಿ ಈವರೆಗೆ ಬತ್ತಿ ಹೋಗಿಲ್ಲ ಎಂಬುದೇ ನಮ್ಮ ಪಾಲಿಗೆ ಸಮಾಧಾನಕರ ಸಂಗತಿ.

Sunday, June 19, 2011

ಅಪ್ಪನಿಗೊಂದು ಪತ್ರ

ಪ್ರೀತಿಯ ಪಪ್ಪಾ,

ಹೇಗಿದ್ದೀರಾ? ನಾನು ಚೆನ್ನಾಗಿದ್ದೇನೆ. ಆದರೆ ಮನಸ್ಸು ಯಾವುದೋ ಸುಳಿಯಲ್ಲಿ ಸಿಕ್ಕಿ ಚಡಪಡಿಸುತ್ತಿದೆ. ನನ್ನ ವೇದನೆಯನ್ನು ಯಾರಲ್ಲೂ ಹೇಳಿ ಕೊಳ್ಳಲು ಆಗದೆ ನಾನು ಒದ್ದಾಡುತ್ತಿದ್ದೇನೆ. ಸುಮ್ಮನೆ ಕುಳಿತು ಜೋರಾಗಿ ಅತ್ತು ಬಿಡಬೇಕೆಂದು ಅನಿಸುತ್ತಿದೆ. ಆದರೆ ಅಳುವಷ್ಟು ಸ್ವಾತಂತ್ರ್ಯವೂ ನನ್ನಲ್ಲಿ ಇಲ್ಲಪ್ಪಾ...

ದಿನವೂ ನಗು ನಗುತ್ತಿದ್ದ ಹುಡುಗಿ ನಾನು. ನನ್ನ ಜೀವನದಲ್ಲಿ ನಾನು ಬಯಸಿದ್ದೆಲ್ಲವನ್ನೂ ನೀವು ನನಗೆ ನೀಡಿದ್ದೀರಿ. ಚಿಕ್ಕವಳಿರುವಾಗ ನಾನು ಅತ್ತರೆ ನಿಮ್ಮ ಮನಸ್ಸು ಅದೆಷ್ಟು ನೋಯುತಿತ್ತು!. ನಾನು ದೂರದ ಊರಿಗೆ ಹೊರಟು ನಿಂತಾಗ ನಿಮ್ಮ ಕಣ್ಣಂಚಲ್ಲಿ ನೀರ ಹನಿ ಕಂಡಿದ್ದೆ. ಕಣ್ಣೀರೊರಸುತ್ತಾ ನಿಮ್ಮನ್ನು ಅಪ್ಪಿ ಹಿಡಿದಾಗ, ಪುಟ್ಟೀ...ನೀನು ಪಪ್ಪನ ಮಗಳಲ್ವಾ..ಹೀಗೆಲ್ಲಾ ಚಿಕ್ಕ ಮಕ್ಕಳ ತರ ಅಳ್ಬಾದು೯ ಅಂತಾ ನನಗೆ ಮುತ್ತಿಟ್ಟು ಕಳುಹಿಸಿಕೊಟ್ಟವರು ನೀವು.

ಪಪ್ಪಾ...ನನ್ನ ಜೀವನದಲ್ಲಿ ಬಂದ ಮೊದಲ ಪುರುಷನೇ ನೀವು. ಪಪ್ಪ ಎನ್ನುವುದಕ್ಕಿಂತ ಮಿಗಿಲಾಗಿ ನೀವು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಿರಿ. ನನ್ನ ಕೈಗೆ ಮದರಂಗಿ ಇಡುವಾಗ ನಿಮ್ಮ ಕೈ ಗೂ ಮದರಂಗಿ ಇಟ್ಟು ಸಂಭ್ರಮಿಸುತ್ತಿದ್ದೆ. ನೇಲ್ ಪಾಲಿಶ್ ಖರೀದಿ ಮಾಡುವಾಗ ನೇಲ್ ಪಾಲೀಶ್ ನಿಮ್ಮ ಉಗುರಿಗೆ ಹಚ್ಚಿ ಸ್ಯಾಂಪಲ್ ನೋಡುತ್ತಿದೆ. ಅಮ್ಮ ನನ್ನನ್ನು ಬೈದಾಗೆಲ್ಲಾ ನಿಮ್ಮ ಮಡಿಲಲ್ಲಿ ಬಿದ್ದು ಅಳುತ್ತಿದ್ದೆ. ಅಕ್ಕನ ಜತೆ ಜಗಳವಾಡಿದಾಗ 'ಹೋಗಲಿ ಬಿಡು ಅವಳು ದೊಡ್ಡೋಳು ಅವಳಿಗೆ ನೀನು ಏನೂ ಅನ್ಬಾದು೯' ಅಂತಿದ್ದಿರಿ. ಪುಟ್ಟ ತಮ್ಮ ಕಿತಾಪತಿ ಮಾಡಿದ್ರೆ 'ಅವನು ಚಿಕ್ಕವನಲ್ವಾ ಕ್ಷಮಿಸಿ ಬಿಡು' ಅಂತಾ ಹೇಳುತ್ತಿದ್ದಿರಿ. ನಿನಗೆ ಕೆಟ್ಟದ್ದು ಬಗೆದವರನ್ನೂ ಪ್ರೀತಿಸು, ದ್ವೇಷದಿಂದ ಏನನ್ನೂ ಗೆಲ್ಲೋಕೆ ಆಗಲ್ಲ ಎಂದು ನೀವು ಹೇಳುತ್ತಾ ನನ್ನ ಜೀವನದುದ್ದಕ್ಕೂ ಮಾಗ೯ದಶಿ೯ಯಾದಿರಿ.

ನಿಜ ಹೇಳಲಾ ಪಪ್ಪಾ..ಮನೆಯಿಂದ ಹೊರಬಂದನಂತರವೇ ಈ ಜಗತ್ತು ಹೇಗಿದೆ ಅಂತಾ ನನಗೆ ಗೊತ್ತಾದದ್ದು. ಇಲ್ಲಿ ಹೆಚ್ಚಿನವರೂ ಸ್ವಾಥಿ೯ಗಳು. ತಾನಾಯಿತು, ತನ್ನ ಕೆಲಸವಾಯಿತು ಎಂದು ತೆಪ್ಪಗೆ ಕೂರುವವರೇ ಜಾಸ್ತಿ. ಇಲ್ಲಿ ಭಾವನೆಗಳಿಗೆ ಬೆಲೆಯೇ ಇಲ್ಲ. ಅನ್ಯಾಯವಾಗುತ್ತಿದ್ದರೂ ಅದರ ವಿರುದ್ಧ ಧ್ವನಿಯೆತ್ತಲೂ ಕೂಡಾ ಅಂಜುವ ಅಂಜುಬುರುಕರು ಇವರು. ಹಣದಾಸೆಗಾಗಿ ಏನು ಬೇಕಾದರು ಮಾಡ ಬಲ್ಲ ಧನದಾಹಿಗಳು. ಪರಸ್ಪರ ಹಗೆ ಸಾಧಿಸುತ್ತಾ, ಗುದ್ದಾಡುತ್ತಾ ನಾನೇ ಮೇಲು ಎಂದು ತೋರಿಸಿಕೊಳ್ಳಲು ಇಲ್ಲಿ ಪೈಪೋಟಿ ನಡೆಯುತ್ತಿದೆ. ಮನುಷ್ಯ ಬುದ್ದಿ ಜೀವಿ...ಏನು ಬೇಕಾದರೂ ಸಾಧಿಸಬಲ್ಲ ತಾಕತ್ತು ಅವನಲ್ಲಿದೆ. ಕೆಲಸವನ್ನು ಸುಲಭಗೊಳಿಸುವ ಸಲುವಾಗಿ ಯಂತ್ರಗಳನ್ನು ಕಂಡು ಹಿಡಿದ. ಹುಟ್ಟು ಸಾವುಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಂತೆ ಸಂಶೋಧನೆ ನಡೆಸಿ ಸಫಲನಾದ. ಅತೀ ಚಿಕ್ಕ ಪರಮಾಣುಗಳನ್ನೇ ಛಿದ್ರಗೊಳಿಸಿ ಜಗತ್ತನ್ನೇ ಜಯಿಸುವ ಶಕ್ತಿಯನ್ನು ಗಳಿಸಿದ... ಆದರೆ ತನ್ನ ಅಹಂ ಅನ್ನು ಛಿದ್ರಗೊಳಿಸುವಲ್ಲಿ ವಿಫಲನಾದ!.

ಮಗಳು ಅಂದರೆ ಅವಳು ಅಮ್ಮನ ಇನ್ನೊಂದು ರೂಪ ಅಂತಿದ್ದಿರಿ ನೀವು. ಎಲ್ಲಾ ಅಪ್ಪಂದಿರೂ ನಿಮ್ಮಂತೆಯೇ ಮಗಳನ್ನು ತುಂಬಾ ಪ್ರೀತಿಸುತ್ತಿರುತ್ತಾರೆ ಅಂತಾ ನಾನು ಅಂದುಕೊಂಡಿದ್ದೆ. ಆದರೆ ಅದೆಲ್ಲಾ ನನ್ನ ತಪ್ಪು ಕಲ್ಪನೆಯಾಗಿತ್ತು ಎಂದು ಅರಿವಾದುದು ಜಗತ್ತಿನ ವಿದ್ಯಮಾನಗಳನ್ನು ಗಮನಿಸಿದಾಗಲೇ. "ಅಪ್ಪನೇ ಮಗಳನ್ನು ಅತ್ಯಾಚಾರವೆಸಗಿದ" ಎಂಬ ಸುದ್ದಿ ಓದಿದಾಗೆಲ್ಲಾ ಮೈ ಉರಿಯುತ್ತದೆ. "ಥೂ...ಇಂತಾ ಕಾಮುಕರು 'ಅಪ್ಪ' ಎಂಬ ಸಂಬಂಧಕ್ಕೇ ದ್ರೋಹವೆಸಗಿದರಲ್ಲಾ ಎಂದು ಸಿಡಿಮಿಡಿಗೊಳ್ಳುತ್ತೇನೆ. ಆ ಮಗಳು ಎಷ್ಟು ನೊಂದಿರಬಹುದಲ್ವಾಪ್ಪಾ?

ಇನ್ನು, ಮನೆ ಬಿಟ್ಟು ಪ್ರಿಯಕರನ ಜತೆ ಓಡಿ ಬಂದ ಅದೆಷ್ಟೋ ಹೆಣ್ಮಕ್ಕಳನ್ನು ನಾನಿಲ್ಲಿ ನೋಡಿದ್ದೇನೆ. ಅಂದೊಂದು ದಿನ ಒಬ್ಬಳು ಹುಡುಗಿ ತನ್ನ ಪ್ರೇಮಕ್ಕೆ 'ಅಪ್ಪ' ಅಡ್ಡಿಯಾಗುತ್ತಾನೆ ಎಂಬ ಭಯದಿಂದಲೇ ಮನೆ ಬಿಟ್ಟು ಬಂದಿದ್ದೇನೆ ಎಂದು ಹೇಳಿದ್ದಳು. ನೀವೇ ಹೇಳಿ ಪಪ್ಪಾ...ಮಗಳು ಚೆನ್ನಾಗಿರಬೇಕೆಂದು ತಾನೆ ಎಲ್ಲಾ ಅಪ್ಪಂದಿರ ಆಸೆ. ಅವರಿಗೆ ಹುಡುಗರ ಸ್ವಭಾವ ಚೆನ್ನಾಗಿ ಗೊತ್ತು. ಯಾವುದೋ ಗೊತ್ತು ಗುರಿಯಿಲ್ಲದೆ ಪ್ರೇಮಪಾಶಕ್ಕೆ ಸಿಲುಕಿ ಮಗಳು ಜೀವನ ಹಾಳು ಮಾಡಿಕೊಳ್ಳುವುದು ಬೇಡ ಎಂದೇ ಅಪ್ಪ ಗದರಿಸುತ್ತಾರೆ. ಅಷ್ಟು ಮಾತ್ರಕ್ಕೆ ಅಪ್ಪನಿಗೆ 'ವಿಲನ್' ಪಟ್ಟ ಕಟ್ಟುವುದೇ? ಹಾಗಂತ ಎಲ್ಲಾ ಹುಡುಗರು ಕೆಟ್ಟವರೇನೂ ಅಲ್ಲ. ಒಂದು ವೇಳೆ ಪ್ರೀತಿಸಿದವ ಕೈಕೊಟ್ಟ ಅಂದ್ಕೊಳ್ಳಿ...ಮಗಳು ಮತ್ತೆ ತವರು ಮನೆಗೆ ಬರುತ್ತಾಳೆ. ಅವಳು ಆತನ ಪತ್ನಿಯಾಗಿರುವುದಿಲ್ಲ..ಆದರೆ ಆಕೆ ಸಾಯುವವರೆಗೂ ಮಗಳಾಗಿರುತ್ತಾಳೆ. ಅಪ್ಪನ ಕೈಯಲ್ಲಿ ಆಕೆಯ ಜೀವನ ಮತ್ತೆ ಅರಳುತ್ತದೆ. ನಾವು ಹುಡ್ಗೀರು ಇದನ್ನೆಲ್ಲಾ ಯಾಕೆ ಯೋಚಿಸುವುದಿಲ್ಲ?

ಜೀವನದ ಗತಿ ಯಾವ ರೀತಿ ಯಾವ ದಿಶೆಯಲ್ಲಿ ಸಾಗುತ್ತದೆ ಅಂತಾ ಯಾರಿಗೂ ಗೊತ್ತಿರಲ್ಲ. ಆದರೆ ನಮ್ಮ ಮನಸ್ಸು ನಮ್ಮ ಕೈಯಲ್ಲಿರಬೇಕು ಎಂದು ಹೇಳಿದ ನಿಮ್ಮ ಮಾತು ನಿಜ. ಜೀವನದಲ್ಲಿ ಕಷ್ಟ ಬಂದಾಗಲೇ ಜೀವನ ಏನು ಎಂಬುದು ಅಥ೯ವಾಗುವುದು. ಒಂಟಿತನ ನಮ್ಮನ್ನು ನಾವೇ ಅರಿಯುವಂತೆ ಮಾಡುತ್ತದೆ. ಹೀಗಿರುವಾಗ ಜೀವನವನ್ನು ಹೇಗೆ ನಿಭಾಯಿಸಿ ಮುನ್ನಡೆಸಬೇಕೆಂಬುದನ್ನು ನೀವು ಹೇಳಿಕೊಟ್ಟಿದ್ದೀರಿ. ಈ ಜಗತ್ತಿನ ಜಂಜಾಟಗಳನ್ನೆಲ್ಲಾ ನೋಡುವಾಗ ಬದುಕಲ್ಲಿ ನೊಂದವರಿಗಾಗಿ ನನ್ನಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಕೊರಗು ಮಾತ್ರ ಮನಸ್ಸನ್ನು ಕಾಡುತ್ತಿರುತ್ತದೆ.

ಕೆಲವೊಮ್ಮೆ ಸೋತು ಕಣ್ಣೀರಿಡುವಾಗ ನಿಮ್ಮ ಮಾತು, ನಿಮ್ಮ ನಗು, ಧೈರ್ಯ ಎಲ್ಲವೂ ಕಣ್ಮುಂದೆ ಸುಳಿಯುತ್ತದೆ. ಸೋತ ಕೈಗಳು ಮತ್ತೆ ಲೇಖನಿ ಹಿಡಿದು ಭಾವನೆಗಳೇ ಅಕ್ಷರಗಳಾಗುತ್ತವೆ. ಆಫ್ಟರ್ ಆಲ್ ನಾನು ಪಪ್ಪನ ಮಗಳಲ್ವಾ...ಕಣ್ಣೀರು ಹಾಕುತ್ತಾ ಸುಮ್ನೇ ಕೂರಲ್ಲ ಅಂತಾ ಗೊತ್ತು ತಾನೇ...

ಸ್ಮೈಲ್ ಪ್ಲೀಸ್....
ನೀವು ನಕ್ಕಾಗ ತುಂಬಾ ಕ್ಯೂಟ್ ಕಾಣಿಸ್ತೀರಿ ಎಂಬುದು ನನಗೊಬ್ಬಳಿಗೇ ಗೊತ್ತು. ;)

ಪಪ್ಪಾ...ಮೊನ್ನೆ ಅಮ್ಮ ಏನೋ ಹೇಳ್ತಿದ್ರಲ್ವಾ ಹೊಸ ಪ್ರೊಪೋಸಲ್ ಬಗ್ಗೆ...ಆ ಹುಡುಗನಿಗೆ ನಿಮ್ಮಂತದ್ದೇ ಗುಣವಿದ್ದರೇ ಫಿಕ್ಸ್ ಮಾಡಿ ಬಿಡಿ...ನಿಮ್ಮ ಸೆಲೆಕ್ಷನ್ 100%ಚೆನ್ನಾಗಿಯೇ ಇರುತ್ತೆ ಎಂಬ ವಿಶ್ವಾಸ ನನಗಿದೆ.
ಬಾಕಿ ಉಳಿದ ವಿಷಯ ಎಲ್ಲಾ ಮನೆಗೆ ಬಂದ ನಂತರ ಹೇಳ್ತೇನೆ.

ಹ್ಯಾಪಿ ಫಾದರ್ಸ್ ಡೇ...
LOVE YOU ಪಪ್ಪಾ...

ಇತೀ ನಿಮ್ಮ
ಕಣ್ಮಣಿ.

Tuesday, June 14, 2011

ಹ್ಯಾಪಿ ಬರ್ತ್ ಡೇ ಟು ಮೀ...



ವತ್ತು ನನ್ನ ಬ್ಲಾಗ್ ಅನುರಾಗದ ಹುಟ್ಟು ಹಬ್ಬ. ಕಳೆದ 4 ವಷ೯ಗಳಿಂದ ನನ್ನ ಮನಸ್ಸಿಗೆ ತೋಚಿದ್ದೆಲ್ಲವನ್ನೂ ಈ ಬ್ಲಾಗ್ ನಲ್ಲಿ ಗೀಚಿದ್ದೇನೆ. ಉದ್ಯೋಗದ ನಿಮಿತ್ತ ಚೆನ್ನೈಗೆ ತೆರಳಿದಾಗ ಕನ್ನಡದಲ್ಲಿ ಹೇಗೆ ಟೈಪ್ ಮಾಡಬೇಕೆಂದೇ ಗೊತ್ತಿರಲಿಲ್ಲ. ಅಲ್ಲಿ ಕನ್ನಡ ಟೈಪ್ ಮಾಡಲು ಕಲಿತೆ. ಇಂಟರ್ನೆಟ್ ನಲ್ಲಿ ಇನ್ನೊಬ್ಬರ ಬ್ಲಾಗ್ ನೋಡುತ್ತಿದ್ದರೆ ನನಗೂ ಒಂದು ಬ್ಲಾಗ್ ಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಆವಾಗ ಹುಟ್ಟಿಕೊಂಡದ್ದೇ ಅನುರಾಗ. ಆಮೇಲೆ ಸಮಯ ಸಿಕ್ಕಾಗೆಲ್ಲಾ ಬ್ಲಾಗ್ ನಲ್ಲಿ ಗೀಚಿದ್ದೇ ಗೀಚಿದ್ದು, ಕೆಲವೇ ಸಮಯಗಳಲ್ಲಿ ನಾನೂ ಬ್ಲಾಗ್ ಲೋಕದಲ್ಲಿ ಪರಿಚಿತಳಾಗಿಬಿಟ್ಟೆ.ಅನುರಾಗದೊಂದಿಗೆ ಇನ್ನು ಮೂರು ಬ್ಲಾಗ್ ಗಳನ್ನು ಆರಂಭಿಸಿದೆ. ಬ್ಲಾಗ್ ಲೋಕದಲ್ಲಿನ ಈ ಪಯಣದಲ್ಲಿ ಹಲವಾರು ಗೆಳೆಯರು ಹಿತೈಷಿಗಳು ಸಿಕ್ಕಿದರು.ನನ್ನ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಪ್ರೋತ್ಸಾಹಿಸಿದರು. ಇನ್ನು ಕೆಲವರು ಕಾಲೆಳೆದರು. ಕೆಲವು ಕಾಲಗಳ ವರೆಗೆ ನನ್ನ ಬ್ಲಾಗ್ ನಿದ್ರಾವಸ್ಥೆಯಲ್ಲಿತ್ತು. ಈಗ ಮತ್ತೆ ಎಚ್ಚೆತ್ತುಕೊಂಡಿದೆ.

ನಿಮ್ಮೆಲ್ಲರ ಆಶೀವಾ೯ದ ಮತ್ತು ಪ್ರೋತ್ಸಾಹದೊಂದಿಗೆ ಬ್ಲಾಗ್ ಲೋಕದಲ್ಲಿ ನನ್ನ ಪಯಣ ಸಾಗುತ್ತಿದೆ...ಅನುರಾಗದೊಂದಿಗೆ...

ಎಲ್ಲರಿಗೂ ನನ್ನಿ,
ರಶ್ಮಿ ಕಾಸರಗೋಡು.

Wednesday, June 8, 2011

ಇಲ್ಲ..ನನಗೆ ನಿನ್ನಲ್ಲಿ ಮುನಿಸು

ನಾ ನಡೆವ ದಾರಿಯಲಿ
ನಿನ್ನ ಪಾದದ ಗುರುತು
ಇರದೇ ಇರಬಹುದು ನಿನ್ನ ನೆರಳು
ನಿನ್ನ ಕನಸಿನಲಿ ನಾ
ಇಲ್ಲದಿರಬಹುದು ಗೆಳೆಯಾ...


ನೀ ಸುರಿವ ಮಳೆಯಾದರೇನು?
ಇಂಗಲು ನನ್ನೊಡಲ ತಳವಿದೆ
ನೀ ಸುಡುವ ಬಿಸಿಲಾದರೇನು?
ನನ್ನ ಹೃದಯದ ಗುಡಿಸಲೊಳಗೆ
ತಣ್ಣನೆಯ ನೆರಳಿದೆ....

ನಿನ್ನ ಹೃದಯ ಬಾನಂತಿದ್ದರೇನು?
ಹಕ್ಕಿಯಾಗಿ ನಿನ್ನತ್ತ ಹಾರಿ ಬರುವೆ
ನೀನು ಭುವಿಯಂತೆ ಮಲಗಿದ್ದರೇನು?
ಹನಿ ಹನಿಯಾಗಿ ಬಿದ್ದು
ಪನ್ನೀರ ಚಿಮುಕಿಸುವೆ!


ಸಮಾಂತರ ರೇಖೆಗಳು ನಾವು
ಬಾಳ ಪಯಣಯದಲ್ಲಿ
ಬೆಳಗು ರಜನಿಯಂತಿದೆ ನಮ್ಮ ಮಿಲನ
ಜತೆಯಾಗಿದ್ದರೂ ಸೇರಲ್ಲ
ಸೇರಿದರೂ ಬೆರೆಯಲ್ಲ

ನಿನ್ನ ಪುಟ್ಟ ಹೃದಯದಲ್ಲಿ
ನಾನಾಗಲಾರೆ ನಿನ್ನ 'ಕೆಟ್ಟ' ನೆನಪು
ನಿನ್ನ ಹೃದಯವ ಕದ್ದೊಯ್ಯಲಾರೆ
ನನ್ನಾಣೆಗೂ,
ಇಲ್ಲ..ನನಗೆ ನಿನ್ನಲ್ಲಿ ಮುನಿಸು

Tuesday, June 7, 2011

ಏಕಾಂತತೆ ಮತ್ತು ನಾನು...

'ಎಂಥಾ ಮಳೆಯಪ್ಪಾ...ಈ ಟ್ರಾಫಿಕ್ ಜಾಮ್ ನಲ್ಲಿ ಮಳೆ ಬಂದರೆ ಕಿರಿಕಿರಿಯೇ.'."ನಾವು ಕೇಳಿದಷ್ಟು ದುಡ್ಡು ಕೊಟ್ಟರೆ ಬರುತ್ತೇವೆ" ಎಂದು ಹೇಳಿದ ರಿಕ್ಷಾವಾಲನಿಗೆ ಮನಸ್ಸಲ್ಲೇ ಹಿಡಿಶಾಪ ಹಾಕಿ ಅದೇ ರಿಕ್ಷಾ ಏರಿ ಮನೆಯತ್ತ ಹೊರಟ ಮಂದಿ. ಈ ನೂಕು ನುಗ್ಗಲಿನಲ್ಲಿಯೂ 'ನಾ ಫಸ್ಟು...ನಾ ಮುಂದೆ' ಎಂದು ಪುಟ್ಟ ಮಕ್ಕಳು ಉಚ್ಚೆ ಹೊಯ್ದು ಓಡಿಕೊಂಡು ಬರುವ ಹಾಗೆ ಬಿಎಂಟಿಸಿ ಬಸ್ ಗಳೆಡೆಯಲ್ಲೇ ನುಗ್ಗುವ ಬೈಕುಗಳು.

ಬದುಕು ಬವಣೆಗಳ ನಡುವೆಯೂ ಮಳೆ ಸುರಿದಿದೆ. ಕಾಮೋ೯ಡ ಕವಿದಿದ್ದ ಬಾನು ತಿಳಿಯಾಗುತ್ತಿದೆ. ಕತ್ತಲ ಬದುಕಿನಲ್ಲಿ ಮಿಂಚು ಹರಿದು ಬೆಳಕಿನ ಸ್ಪಶ೯ ನೀಡಿದಾಗ ಭಾರವಾದ ಎದೆ ನಡುಗಿದೆ.

ಈ ನೀರವತೆಯಲ್ಲಿನ ಏಕಾಂತತೆಯಲ್ಲಿ ನೆನಪುಗಳು ಮಾತ್ರ ಸದ್ದಿಲ್ಲದೆ ಬಂದು ಮನದ ಕದ ತಟ್ಟಿವೆ. ಪೀಜಿಯ ಕಿಟಿಕಿಯ ಮೂಲಕ ಇಣುಕಿದರೆ ಧೋ ಎಂದು ಸುರಿವ ಮಳೆ...ಒಣಗಲು ಹಾಕಿದ ಬಟ್ಟೆ ತಾರಸಿ ಮೇಲೆ ಹಾಗೆಯೇ ಇದೆ. ಮಳೆಯೊಂದಿಗೆ ತೀಡಿ ಬರುತ್ತಿರುವ ಗಾಳಿಯು ಆ ಬಟ್ಟೆಯನ್ನು ತನ್ನೊಡನೆ ಬಾ ಎಂದು ಕರೆಯುತ್ತಿದೆ. ಅದನ್ನು ನಾ ಬಿಡಲಾರೆ ಎಂದು ಬಟ್ಟೆಗೆ ಸಿಕ್ಕಿಸಿದ ಕ್ಲಿಪ್ ಗಾಳಿ ಜತೆ ಗುದ್ದಾಟಕ್ಕೆ ತೊಡಗಿದೆ.

ರೂಮ್ ಮೇಟ್ ಲ್ಯಾಪ್ ಟಾಪ್ ಹಿಡಿದು ಧ್ಯಾನದಲ್ಲಿ ಕುಳಿತಂತಿದ್ದಾಳೆ. ಇಂಟರ್ ನೆಟ್ ಗೆ ಸಿಗ್ನಲ್ ಸಿಗುತ್ತಿಲ್ಲ ಎಂದು ಗೊಣಗುತ್ತಾ ಕಿಟಕಿಯ ಗಾಜು ಸರಿಸಿದ್ದಾಳೆ. ಆವಾಗಲೇ ತಣ್ಣನೆ ಗಾಳಿ ರೂಮಿನೊಳಗೆ ಪ್ರವೇಶಿಸಿದೆ. ಅಬ್ಬಾ ಸಿಗ್ನಲ್ ಸಿಕ್ತು ಎಂದು ಫೇಸ್ ಬುಕ್ ನಲ್ಲಿ ಆಕೆ 'ಲೈಕ್' ಮಾಡುತ್ತಾ ಕಾಮೆಂಟಿಸುತ್ತಿದ್ದಾಳೆ.

ಎಲ್ಲವೂ ಬದಲಾಗಿದೆ. ನಾವು ಜನರು....ಎಲ್ಲರೂ...ಆದರೆ ಮಳೆ...ನಿನ್ನೆಯೂ ಹೀಗೆ ಸುರಿಯುತ್ತಿತ್ತು. ಇವತ್ತೂ ಹಾಗೆಯೇ ಸುರಿಯುತ್ತಿದೆ. ಮೊನ್ನೆ ಮೊನ್ನೆಯವರೆಗೆ ಅಂಗಳದ ಮೂಲೆಯಲ್ಲಿ ಗುಟರ್ ಗುಟರ್ ಎನ್ನುತ್ತಿದ್ದ ಆ ಗೋಂಕುರು ಕಪ್ಪೆಗಳು ಎಲ್ಲಿ ಹೋದವು? ಮಳೆ ಬಂದ ಕೂಡಲೇ ಕಾಣಿಸಿಕೊಳ್ಳುತ್ತಿದ್ದ ವೆಲ್ವೆಟ್ ಹುಳ ಈಗ ಕಾಣಿಸುವುದೇ ಇಲ್ಲ. ಪ್ರೈಮರಿ ಕ್ಲಾಸಿನಲ್ಲಿರುವಾಗ ಸ್ಲೇಟ್ ಒರೆಸುತ್ತಿದ್ದ ಆ ನೀರಕಡ್ಡಿ ಎಲ್ಲಿ ಹೋಯ್ತ?

ವತ೯ಮಾನದ ಅರಿವೇ ಇಲ್ಲ ಎಂಬಂತೆ ಮನಸ್ಸು ಬಾಲ್ಯದ ದಿನಗಳತ್ತ ಮತ್ತೆ ವಾಲುತ್ತಿದೆ. ಮಳೆಯೊಂದಿಗೆ ನೆನಪುಗಳು ಮರುಕಳಿಸುತ್ತವೆ. ನಾನು ಮತ್ತು ನನ್ನ ಏಕಾಂತತೆ ಸುರಿವ ಮಳೆಯಲ್ಲಿ ತೊಯ್ದು ಸುಮ್ಮನಾಗಿದ್ದೇವೆ.

"ಇನ್ಮುಂದೆ ನಿನ್ನ ಯಾವುದೇ ವಿಷಯಕ್ಕೆ ತಲೆ ಹಾಕಲ್ಲ" ಎಂದು ಅವ ಹೇಳಿ ಹೋಗಿದ್ದಾನೆ. ಅವನ ಎಸ್ಸೆಮ್ಮೆಸ್, ಕಾಲ್ ...ಯಾವುದೂ ಇಲ್ಲ. ನೆಟ್ವಕ್೯ ಸಿಗದೇ ಇದ್ದರೆ?

ಅವನಿಗೆ ನನ್ನಲ್ಲಿ ದ್ವೇಷವಿರಬಹುದಾ? ಇದ್ಯಾವುದೂ ನನಗೊತ್ತಿಲ್ಲ. ಆದರೆ ನಾನು ಪ್ರೀತಿಸಿದ್ದೇನೆ. ಅವನೊಂದಿಗೆ ಅವನ ಕನಸುಗಳನ್ನು, ಅವನ ಪೆದ್ದುತನವನ್ನು...ಅವನ ಸಿಟ್ಟನ್ನು...ಅವನ ಜೀವನವನ್ನು..

ಈ ಮಳೆ ನನ್ನನ್ನು ಒದ್ದೆಯಾಗಿಸಿದೆ. ಕಂಬನಿಯೂ ಮಳೆ ನೀರ ಸೇರಿ ಮೋಡವಾಗಿದೆ. ಆದರೆ ನನ್ನ ಒಡಲಾಳದಲ್ಲಿರುವ'ಪ್ರೀತಿ'ನಂಬಿಕೆಯ ಹೊದಿಕೆ ಹೊದ್ದು ಬೆಚ್ಚನೆ ಮಲಗಿದೆ.

Sunday, June 5, 2011

ನೈಂಟಿ ಜತೆಗಿನ ನಂಟು!!!

ನೈಂಟಿ! ಅದೊಂದು ಥರಾ ಕಿಕ್ ಕೊಡುವಂತದ್ದೇ. ಅರೇ..ನೀವು ಉದ್ದೇಶಿಸುತ್ತಿರುವ 'ಬಾಟಲಿ' ಬಗ್ಗೆ ನಾನು ಹೇಳುತ್ತಿಲ್ಲ. ನಾನು ಹೇಳೋಕೆ ಹೊರಟಿರುವುದು 90ರ ದಶಕದ ಟಿವಿ ಕಾರ್ಯಕ್ರಮಗಳ ಬಗ್ಗೆ. ದೂರದರ್ಶನ ಅದೊಂದೇ ಚಾನೆಲ್ ಸಾಕು...ಎಲ್ಲ ತಿಳಿಯೋಕೆ, ಕಲಿಯೋಕೆ. ಹಿಂದಿ ಅರ್ಥವಾಗುತ್ತಿಲ್ಲವಾದರೂ ಟಿವಿ ಮುಂದೆ ನಾವು ಹಾಜರು. ಆವಾಗನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಆದರೂ ಒಂದು ಕಿಮೀ ನಡೆದು ಪಕ್ಕದ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆ. ಅದೂ ಮಹಾಭಾರತ ನೋಡಲು. ಮಹಾ....ಭಾರತ್ ಅಂತ ಅದರ ಹಾಡು ಶುರುವಾಗುವ ಹೊತ್ತಿಗೆ ನಾವು ಮೂವರು (ಜತೆಗೆ ಅಣ್ಣ, ಅಕ್ಕ) ಅಲ್ಲಿ ಹಾಜರು. ಅಲ್ಲಿ ಯುದ್ಧ ನಡೆಯುತ್ತಿದ್ದರೆ ಕಣ್ಣು ಮುಚ್ಚಿ ನೋಡುವುದು, ಮರಣ ಶಯ್ಯೆಯಲ್ಲಿರುವ ಬೀಷ್ಮನನ್ನು ನೋಡಿ ಅಳುವುದು ಹೀಗೆ ಸಾಗುತ್ತಿತ್ತು ನಮ್ಮ 'ಮಹಾ' ಭಾರತ. ಆಮೇಲೆ ನಮ್ಮ ಮನೆಗೂ ಬ್ಲಾಕ್ ಆ್ಯಂಡ್ ವೈಟ್ ಟಿವಿ ಬಂತು. ಟಿವಿ ಬಂದ ಮೊದಲ ದಿನ ಫುಲ್ ಚಾಲೂ. ಪ್ರೋಗ್ರಾಂ ಮುಗಿದು ಬಣ್ಣ ಬಣ್ಣದ ಸ್ಟೈಪ್ ಕಾಣಿಸಿಕೊಂಡರೂ ಅದನ್ನೇ ನೋಡುತ್ತಾ ಕುಳಿತಿರುತ್ತಿದ್ದೆವು. ರುಕಾವಟ್ ಕೆ ಲಿಯೆ ಕೇದ್ ಹೈ ಅಂದ್ರೆ ಏನೂ ಅಂತಾ ಗೊತ್ತಿಲ್ಲದಿದ್ದರೂ ಸ್ವಲ್ಪ ಸಮಯದ ನಂತರ ಪ್ರೋಗ್ರಾಂ ಬರುತ್ತೆ ಅಂತಾ ಗೊತ್ತಿತ್ತು. "ಟಿವಿ ಬಂತಾ...ಇನ್ನು ಮಕ್ಕಳು ಓದಲ್ಲ ಬಿಡಿ" ಅಂತಾ ಅಮ್ಮನಿಗೆ ಚಾಡಿ ಹೇಳುವ ನೆರೆಯವರು ಬೇರೆ. ಅಂತೂ ಟಿವಿಯ ಮೂಲಕ ಹಿಂದಿ ಬೇಗನೆ ಕಲಿತುಕೊಳ್ಳುವಂತಾಯಿತು.

ಭಾನುವಾರ ಬಂತೆಂದರೆ ಊಟ ತಿಂಡಿ ಎಲ್ಲವೂ ಟಿವಿ ಮುಂದೆಯೇ. ರಂಗೋಲಿ ಆರಂಭವಾಗುವ ಮುನ್ನವೇ ಅಂಗಳ ಗುಡಿಸಿ, ಪಾತ್ರ ತೊಳೆದು, ಸ್ನಾನ ಮಾಡಿ ಕುಳಿತುಕೊಳ್ಳುತ್ತಿದ್ದೆ. 'ಚಾರ್ಲಿ ಚಾಪ್ಲಿನ್' ಮುಗಿದ ನಂತರ ಬ್ರೇಕ್್ನ ಸಮಯದಲ್ಲಿ ಬೆಳಗ್ಗಿನ ತಿಂಡಿಯಾಗುತ್ತಿತ್ತು. ಇನ್ನು ಜಂಗಲ್ ಬುಕ್ ನ ಮೋಗ್ಲಿಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ಟಾಮ್ ಆ್ಯಂಡ್ ಜೆರ್ರಿ, ಪೋಟಲಿ ಬಾಬಾ, ಆಲೀಸ್ ಇನ್ ವಂಡರ್ ಲ್ಯಾಂಡ್, ಡಕ್ ಟೇಲ್ಸ್ , ಸಿಂದಾಬಾದ್ ದ ಸೈಲರ್ ಮೊದಲಾದ ಮಕ್ಕಳ ಧಾರವಾಹಿಗಳು, 9 ಗಂಟೆಯ ವೇಳೆಗೆ 'ಚಂದ್ರಕಾಂತ ಕಿ ಕಹಾನಿ ಯೇ ಮಾನಾ ಹೆ ಪುರಾನಿ...' ಎಂಬ ಟೈಟಲ್ ಸಾಂಗ್್ನೊಂದಿಗೆ ಆರಂಭವಾಗುವ ಚಂದ್ರಕಾಂತ ಸೀರಿಯಲ್ ನಲ್ಲಿ ಯಕ್ಕ್...ಎಂದು ಹೇಳುವ ವಿಲನ್ ಕ್ರೂರ್ ಸಿಂಗ್, ಶಿವ್್ದತ್ ಕೋ ಕೋಯಿ ಶಕ್ ನಹೀ ಎನ್ನುವ ಪಂಕಜ್ ಧೀರ್ ನ ಅಭಿನಯ ಇನ್ನೂ ಮನಸ್ಸಿನಿಂದ ಮಾಸಿಲ್ಲ. ಅದೇ ವೇಳೆ ಚಾಣಕ್ಯ, ಶ್ರೀಕೃಷ್ಣ ಮೊದಲಾದ ಪುರಾಣ ಕಥೆಗಳ ಜತೆಗೆ ಚುಟ್ಟಿ ಚುಟ್ಟಿ, ತರಂಗ್, ಸ್ಕೂಲ್ ಡೇಸ್ ಕೂಡಾ ಪ್ರಿಯವಾದುದೇ. ನನ್ನ ನೆನಪಿನ ಪ್ರಕಾರ 11 ಗಂಟೆಗೆ 'ದ ನ್ಯಾಷನಲ್ ಪ್ರೋಗ್ರಾಂ ಆಫ್ ಡ್ಯಾನ್ಸ್ 'ಎಂಬ ಕಾರ್ಯಕ್ರಮವೂ ಪ್ರಸಾರವಾಗುತ್ತಿತ್ತು. ಹನ್ನೆರಡು ಗಂಟೆಯ ಹೊತ್ತಿಗೆ 'ಶಕ್ತಿಮಾನ್ ' ಪ್ರತ್ಯಕ್ಷವಾಗುತ್ತಿದ್ದ. ಮಧ್ಯಾಹ್ನ ಮೂಕರಿಗಾಗಿರುವ ವಾರ್ತೆ, ಸಂಸ್ಕೃತ ವಾರ್ತೆ, ಹಿಂದಿ, ಇಂಗ್ಲಿಷ್ ಎಲ್ಲ ವಾರ್ತೆಯನ್ನೂ ನಾನು ನೋಡುತ್ತಿದ್ದೆ.

ಕೃಷಿ ದರ್ಶನ್, ನಾಪತ್ತೆಯಾದ ವ್ಯಕ್ತಿಗಳ ಬಗ್ಗೆ ಮಾಹಿತಿ, ಟಿವಿ ಕಾರ್ಯಕ್ರಮಕ್ಕೆ ಬಂದ ಪತ್ರಗಳನ್ನು ಓದುವುದು, ಪ್ರಾಯೋಜಿತ ಕಾರ್ಯಕ್ರಮ ಏನೇ ಬರಲಿ ಟಿವಿ ಮುಂದೆಯಿಂದ ಕದಲುತ್ತಿರಲಿಲ್ಲ ನಾನು.

ಇನ್ನು ಸೀರಿಯಲ್್ಗಳ ಸರದಿ. ವಿಕ್ರಮ್ ಬೇತಾಳ್ ಕಥೆಗಳನ್ನು ಚಂದಮಾಮದಲ್ಲಿ ಓದಿದ್ದರೂ, ಟಿವಿ ಮೂಲಕ ಬೇತಾಳ ಹೇಗಿರುತ್ತಾನೆ? ಎಂಬುದು ಗೊತ್ತಾಯ್ತು. ಅಪರಾಹ್ನ ಸೀರಿಯಲ್ ಗಳದ್ದೇ ಕಾರುಬಾರು. ಹಮ್್ಲೋಗ್ ಎಂಬ ಸೋಪ್ ಅದೆಷ್ಟು ಕಂತು ಓಡಿತ್ತೋ ನೆನಪಿಲ್ಲ. ಆದರೆ ಅಪರಾಜಿತ, ಔರತ್, ಸಮುಂದರ್, ಯುಗ್, ಜುನೂನ್, ಶಾಂತಿ, ಸ್ವಾಭಿಮಾನ್ ಮೊದಲಾದ ಸೀರಿಯಲ್ ಗಳು ಒಂದರ ನಂತರ ಒಂದರಂತೆ ಪ್ರಸಾರವಾಗುತ್ತಿತ್ತು. ಸಂಜೆಯ ವೇಳೆಗೆ ಬುಧವಾರ ಚಿತ್ರಹಾರ್, ಶುಕ್ರವಾರ ಚಿತ್ರಗೀತ್ ಯಾವುದೂ ಮಿಸ್ ಮಾಡಲ್ಲ.

ರಾತ್ರಿ ವೇಳೆ ಸರಳಾ ಮಹೇಶ್ವರಿ, ಶಮ್ಮೀ ನಾರಂಗ್ ಓದುವ ಹಿಂದೀ ವಾರ್ತೆ, ರಿನ್ನಿ ಕಣ್ಣನ್್ನ ಇಂಗ್ಲೀಷ್ ವಾರ್ತೆ ಅದೂ ಇಷ್ಟಾನೇ. ಇದಾದ ನಂತರ ರಾತ್ರಿ ವೇಳೆ ಸೀರಿಯಲ್್ಗಳ ಸುರಿಮಳೆ.. ಉಡಾನ್, ಅಲೀಫ್ ಲೈಲಾ, ಹಮ್್ರಾಹಿ, ಕಕ್ಕಾಜಿ ಕಹಿಯೆ, ಸಂಸಾರ್, ಅಮರಾವತಿ ಕಿ ಕಹಾನಿಯಾ, ಆನಂದಿ ಗೋಪಾಲ್, ಫುಲ್್ವಂತೀ, ರಿಪೋರ್ಟರ್,ಕಶೀಶ್, ಕೋಶಿಶ್, ಉಪಾಸನಾ, ವಿಲಾಯ್ತಿ ಬಾಬು, ಮುಂಗೇರಿ ಕೆ ಭಾಯಿ ನೌರಂಗಿ, ಪರಖ್,ಓಂ ನಮಃ ಶಿವಾಯ್, ಜೈ ಹನುಮಾನ್, ದ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್, ಕಯರ್, ಓಶಿಯಾನಾ ಮೊದಲಾದ ಸೀರಿಯಲ್್ಗಳು. ಅದರಲ್ಲಿಯೂ ಬ್ಯೋಮ್ ಕೇಶ್ ಭಕ್ಷಿ, ಸುರಾಗ್, ತೆಹೆತಿಕಾತ್ ಮೊದಲಾದ ಪತ್ತೆದಾರಿ ಧಾರವಾಹಿಗಳು ಇನ್ನೂ ಥ್ರಿಲ್ಲಿಂಗ್ ಆಗಿರುತ್ತಿತ್ತು. ಇದೆಲ್ಲದರ ಜತೆಗೆ ಭಾರತ್ ಏಕ್ ಕೋಜ್, ತಾನಾ ಬಾನಾ, ಸುರಭಿ, ದ ವರ್ಲ್ಡ್ ದಿಸ್ ವೀಕ್ ಮೊದಲಾದವುಗಳು ಜ್ಞಾನ ವರ್ಧನೆಯ ಕ್ಯಾಪ್ಸೂಲ್ ಗಳಂತಿದ್ದವು.
ವರ್ಲ್ಡ್ ಆಫ್ ಸ್ಪೋಟ್ಸ್ ಮೂಲಕ ಕ್ರೀಡೆ, ಆವಾಗಿನ ಕ್ರಿಕೆಟ್ ಟೆಸ್ಟ್ ಮ್ಯಾಚ್ ಗಳು...ಬಾಕ್ಸಿಂಗ್ ಗುದ್ದಾಟ ನೋಡುತ್ತಿದ್ದರೆ ಮೈ ನಡುಗುತ್ತಿತ್ತು!!

ಮೇರಿ ಆವಾಜ್ ಸುನೋ ಎಂಬ ರಿಯಾಲಿಟಿ ಶೋ, ಏಕ್ ಸೆ ಬಡ್ಕರ್ ಏಕ್ ಎಂಬ ಕಾಮಿಡಿ ಸೀರಿಯಲ್ ನಡುವೆ ಬರುವ ಟಾಪ್ 10 ಹಿಂದಿ ಚಿತ್ರಗೀತೆಗಳು, ಸುನೆಹರೇ ಪಲ್, ಪಾರ್ವತಿ ಖಾನ್ ನಡೆಸಿಕೊಡುತ್ತಿದ್ದ ಹಾಟ್ ಸ್ಪಾಟ್ ಮೊದಲಾದವುಗಳು ಬಾಲಿವುಡ್ ನ ಬಗ್ಗೆ ಹೆಚ್ಚು ಒಲವನ್ನುಂಟು ಮಾಡುವಂತಿತ್ತು.

ಮೂವಿಗಳ ಬಗ್ಗೆ ಹೇಳುವುದೇ ಬೇಡ. ಅಮಿತಾಬ್ ಬಚ್ಚನ್, ಜಿತೇಂದ್ರ, ಮಿಥುನ್ ಚಕ್ರವರ್ತಿ, ರಿಷಿ ಕಪೂರ್, ಅನಿಲ್ ಕಪೂರ್, ಸಲ್ಮಾನ್, ಜಯಾ ಬಚ್ಚನ್, ಮೀನಾಕ್ಷಿ ಶೇಷಾದ್ರಿ, ಶ್ರೀದೇವಿ, ಮಾಧುರಿ ಹೀಗೆ ಭಾಷೆ ಅರ್ಥವಾಗದಿದ್ದರೂ ಅವರ ನಟನೆಗೆ ಮನಸ್ಸು ಮಾರು ಹೋಗಿತ್ತು. ಹಿಂದಿ ಚಿತ್ರಗಳನ್ನು ನೋಡುವಾಗ ನನ್ನ ಅಪ್ಪ ಆ ಚಿತ್ರವನ್ನು ಎಲ್ಲಿ ನೋಡಿದ್ದರು? ನೋಡಬೇಕಾದರೆ ಏನೆಲ್ಲಾ ಸಾಹಸ ಮಾಡುತ್ತಿದ್ದರು ಎಂದೆಲ್ಲಾ ವಿವರಿಸುತ್ತಿದ್ದರು. ಭಾನುವಾರ ಮಧ್ಯಾಹ್ನ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಸಾರವಾಗುತ್ತಿದ್ದು, ಕನ್ನಡ, ಮಲಯಾಳಂ ಚಿತ್ರಗಳು ಬಂದರಂತೂ ಹಬ್ಬವೇ. ಕನ್ನಡ ಮೂವಿಯಲ್ಲಿನ ನಟರ ಬಗ್ಗೆ ಅಮ್ಮ ಹೇಳುತ್ತಿದ್ದರೆ, ಮಲಯಾಳಂ ನಟರ ಬಗ್ಗೆ ಅಪ್ಪ ವಿವರಿಸುತ್ತಿದ್ದರು. ;) ಯಾವತ್ತೋ ಒಂದ್ಸಾರಿ ತುಳು ಚಿತ್ರ 'ಬಂಗಾರ್ ಪಟ್ಲೇರ್ ' ನೋಡಿದ ನೆನಪು.

ಇಷ್ಟೆಲ್ಲಾ ಹೇಳಿದ ಮೇಲೆ ಕಮರ್ಷಿಯಲ್ ಬ್ರೇಕ್ ಇಲ್ಲದಿದ್ದರೆ ಹೇಗೆ? ಐ ಲವ್ ಯೂ ರಸ್ನಾ...ಐ ಆ್ಯಮ್ ಎ ಕಾಂಪ್ಲಾನ್ ಬಾಯ್, ಲಿಜ್ಜತ್ ಪಾಪ್ಪಡ್, ಘಡೀ ಡಿಟರ್ಜಂಟ್, ಎಂಡಿಚ್...ಎಂಡಿಚ್ ಎನ್ನುವ ಎಂಡಿಚ್ ಮಸಾಲೆ...ಸಿರ್ಫ್ ಏಕ್ ಸಾರಿಡಾನ್...ಸರ್ದದ್ ಸೆ ಆರಾಮ್ (ಸಾರಿಡಾನ್), ಉಹ್..ಆ..ಔಚ್ (ಐಯೋಡೆಕ್ಸ್), ಓಯೇ..ಓಯೇ ಕುಜಲೀ ಕರ್್ನೇ ವಾಲೇ (ಬೀಟೆಕ್ಸ್), ಗುಂಡು ಹಾರಿಸಿ 'ಗೋಲಿಯೋಂಕಾ ಬಿ ಅಸರ್ ನಹೀ' ಎನ್ನುವಾಗ ಸಾಧು 'ಇಸ್್ಕಾ ಇಲಾಜ್ ಕಾಯಮ್ ಚೂರ್ಣ್ 'ಅಂತಾನೆ..
"ಯೇ ಜಮೀ..ಯೇ ಆಸ್ ಮಾನ್...ಹಮಾರಾ ಕಲ್, ಹಮಾರಾ ಆಜ್...ಬುಲಂದ್ ಭಾರತ್ ಕೀ ಬುಲಂದ್ ತಸ್ವೀರ್.." (ಹಮಾರಾ ಬಜಾಜ್), ಯೇ ರಿಶ್ತೇ ಯೇ ನಾಥೆ...ಕಿತ್ ನೇ ಅಪ್ ನೇ ಅಪ್ ನೇ (ಎಸ್ ಕುಮಾರ್ಸ್), ಜಲೇಬಿ.... ಎಂದು ಕಣ್ಣರಳಿಸುವ ಬಾಲಕ (ಧಾರಾ ಎಣ್ಣೆ), ಸಂತೂರ್ ಸಂತೂರ್..., ಜಬ್ ಘರ್ ಕಿ ರೋನಕ್ ಬಡಾನಿ ಹೋ...(ಮ್ಯಾರೋಲಾಕ್ ಪೈಂಟ್ಸ್), ಡೂಂಡ್ ತೇ ರೆಹಜಾವೋಗೆ (ಸರ್ಫ್), ಸಬ್ ಕಿ ಪಸಂದ್ 'ನಿರ್ಮಾ', ಚುಪ್ಕೆ ಚುಪ್ಕೆ ಬೈಟಿ ಹೋ ಜೂರ್ ಕೋಯಿ ಬಾತ್ ಹೈ (ಕೇರ್ ಫ್ರೀ ), ಯೇ ಹೇ ಹಮಾರಾ ಸುರಕ್ಷಾ ಚಕ್ಕರ್ (ಕೋಲ್ಗೇಟ್), ಡಾಬರ್ ಲಾಲ್ ದಂತ್ ಮಂಜನ್, ವಿಕೋ ಟರ್ಮರಿಕ್ ಹೀಗೆ ನೆನಪಿನಲ್ಲಿ ಉಳಿಯುವ ಅದೆಷ್ಟು ಜಾಹೀರಾತುಗಳು!!

ಬ್ರೇಕ್ ನ ನಂತರ ಕಾರ್ಯಕ್ರಮ ಮುಂದುವರಿಯುತ್ತದೆ...

'ಬಜೇ ಸರ್ ಗಂ ಹರ್ ತರಫ್ ಸೇ ಗೂಂಜ್ ಬನ್ ಕರ್ ದೇಶ್ ರಾಗ್' ...ಮೇಣದ ದೀಪಗಳನ್ನು ಉರಿಸುವ ಮಕ್ಕಳು...'ಸುನ್ ಸುನ್ ಸುನ್ ಮೇರೆ ಮುನ್ನೆ ಸುನ್' ಎಂಬ ಹಾಡಿನಲ್ಲಿ ಬರುವ ಎಲ್ಲಾ ಪ್ರಮುಖ ನಟರು (ನಮ್ಮ ಮಮ್ಮುಟ್ಟಿಯೂ ಇರ್ತಿದ್ರು)...'ಭಾರತ್ ಭಾರತ್ ಹಮ್ ಇಸ್ ಕಿ ಸಂತಾನ್ '..., 'ಹಮ್ ಹೋಂಗೆ ಕಾಮ್ ಯಾಬ್', 'ವಿಜಯಿ ವಿಶ್ವ ತಿರಂಗಾ ಪ್ಯಾರಾ' ಮೊದಲಾದ ಭಾವೈಕ್ಯತೆಯ ಗೀತೆಗಳು.. 'ಮಿಲೇ ಸುರ್ ಮೇರಾ ತುಮ್ಹಾರಾ ....' ಈ ಹಾಡಿನ ಮೋಡಿಗೊಳಗಾಗದ ಜನರಿದ್ದಾರೆಯೇ?

ಡಿಡಿ ನ್ಯಾಷನಲ್ ನಲ್ಲಿ ಯಾವಾಗ ಡಿಡಿ ಮಲಯಾಳಂ ಕೂಡಾ ಲಭಿಸಿತೋ ಟಿವಿ ನೋಡುತ್ತಾ ಮಲಯಾಳಂ ಓದೋಕೆ ಕಲಿಯುವುದರ ಜತೆ ಶುದ್ಧ ಮಲಯಾಳಂನಲ್ಲಿ ಮಾತನಾಡಲು ಕೂಡಾ ಕಲಿತು ಬಿಟ್ಟೆ.
ಅಬ್ಬಾ ದೂರದರ್ಶನದ ಬಗ್ಗೆ ಹೇಳೋಕೆ ಹೋದರೆ ಅದೂ ಮೆಗಾ ಸೀರಿಯಲ್ ಆಗ್ಬಹುದು. ಸದ್ಯ ಇಷ್ಟು ಸಾಕು.

Friday, April 22, 2011

'ಎಂಡೋ ನಿಷೇಧಿಸಿ' - ಶರದ್ ಪವಾರ್ ಗೊಂದು ಬಹಿರಂಗ ಪತ್ರ

ಶರದ್ ಪವಾರ್ ಜೀ,
ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದಷ್ಟು ಹೊತ್ತು ವಿರಾಮ ಸಿಕ್ಕರೆ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಒಮ್ಮೆ ದೃಷ್ಟಿ ಹಾಯಿಸಿ. ಕೇರಳದ ಪುಟ್ಟ ಜಿಲ್ಲೆಯಾದ ಕಾಸರಗೋಡಿನ ಎಣ್ಮಕಜೆ, ಬೋವಿಕ್ಕಾನ, ಪೆರ್ಲ, ಪೆರಿಯ ಮೊದಲಾದ ಊರುಗಳಲ್ಲಿ ಎಂಡೋಸಲ್ಫಾನ್ ಎಂಬ ವಿಷದಿಂದಾಗಿ ಪ್ರಾಣ ಕಳೆದುಕೊಂಡವರೆಷ್ಟು ಮಂದಿ? ಇನ್ನೂ ಜೀವಂತ ಶವವಾಗಿರುವವರು, ಅಂಗವೈಕಲ್ಯತೆಯಿಂದು ಬಳಲುತ್ತಿರುವ ಮಕ್ಕಳು ...ಇಲ್ಲೊಂದು ನರಕವಿದೆ. ಸಂಕಷ್ಟಕ್ಕೆ ಸಿಲುಕಿರುವ ಈ ಜನರ ಕೂಗು ನಿಮಗೆ ಕೇಳಿಸುತ್ತಿಲ್ಲವೇ?

ಗೇರುಬೀಜದ ಮರಗಳಿಗೆ ಈ ವಿಷವನ್ನು ಸಿಂಪಡಿಸಿ ಜನರ ಬಾಳನ್ನು ನರಕವಾಗಿಸಿದ ಪ್ಲಾಂಟೇಷನ್ ಕಾರ್ಪರೇಷನ್ ಇದೀಗ ಮೌನ ವಹಿಸಿರುವುದು ಎಷ್ಟು ಸರಿ?. ಕಾಸರಗೋಡಿನ 11 ಪಂಚಾಯತುಗಳ ಜನರು ಎರಡು ದಶಕಗಳಿಂದ ಎಂಡೋ ಪೀಡೆಗೆ ಬಲಿಯಾಗುತ್ತಾ ಬಂದಿರುವುದು ನಿಮಗೆ ಕಾಣಿಸುವುದಿಲ್ಲವೇ? ಎಂಡೋ ಪೀಡಿತರ ಸಂಕಷ್ಟಗಳ ಬಗ್ಗೆ ದಿನ ನಿತ್ಯವೂ ಒಂದಲ್ಲ ಒಂದು ಸುದ್ದಿ ವರದಿಯಾಗುತ್ತಲೇ ಇದ್ದರೂ ನೀವು ಕಿವಿ, ಕಣ್ಣು ಮುಚ್ಚಿ ಕುಳಿದ್ದೀರಾ? 'ಎಂಡೋ' ವಿಷ ಎಂದು ಇಷ್ಟರವರೆಗೆ ಪ್ರೂವ್ ಆಗಿಲ್ಲ ಆದ್ದರಿಂದ ಎಂಡೋ ನಿಷೇಧ ಯಾಕೆ ಅಂತಾ ಕೇಳ್ತಿದ್ದೀರಲ್ಲಾ? ಎಂಡೋ ಪೀಡಿತ ಪ್ರದೇಶಗಳಿಗೊಮ್ಮೆ ಭೇಟಿ ನೀಡಿ ನೋಡಿ. ಈ ಜನರ ಸಂಕಷ್ಟಕ್ಕೆ ನಿಮ್ಮ ಮನ ಮರುಗದೇ ಇದ್ದರೆ ನಿಮ್ಮದು 'ಕಲ್ಲು ಹೃದಯ' ಅಂತಾ ಅಂದುಕೊಳ್ಳುತ್ತೀನಿ.

ಪ್ರಸ್ತುತ ಪ್ರದೇಶದಲ್ಲಿನ ಅಮ್ಮಂದಿರ ಬವಣೆ ನಿಮಗೆ ಗೊತ್ತೇನು? ಇಲ್ಲಿನ ಮಕ್ಕಳಿಗೆ ಬುದ್ಧಿ ಮಾಂದ್ಯತೆ, ಅಂಗವೈಕಲ್ಯತೆ, ಇದ್ದ ಬದ್ದ ಸರ್ವರೋಗಗಳೂ ಇವೆ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಕೂಲಿನಾಲಿ ಮಾಡಿ ಜೀವಿಸುವ ಅಪ್ಪ ಅಮ್ಮ ಮನೆಯಲ್ಲೇ ಕೂರುತ್ತಾರೆ. ಮಕ್ಕಳ ಭವಿಷ್ಯ ಚಿವುಟಿ ಹೋಗಿದೆ. ಇಂತಹಾ ಅಂಗ ವೈಕಲ್ಯತೆಯಿರುವ ಮಕ್ಕಳ ಕಷ್ಟದ ಬದುಕನ್ನು ನೋಡಿ ಕೊರಗುವ ಬದಲು ಮಕ್ಕಳೇ ಬೇಡ ಎಂಬ ನಿರ್ಧಾರವನ್ನು ಈ ಅಮ್ಮಂದಿರು ಕೈಗೊಂಡಿದ್ದಾರೆ. ತನ್ನ ಗರ್ಭದಲ್ಲಿರುವ ಶಿಶುವಿಗೆ ವೈಕಲ್ಯತೆಯಿದೆ ಎಂದು ತಿಳಿದ ಕೂಡಲೇ ಅಬಾರ್ಶನ್ ಮಾಡಿಸುವ ಅಮ್ಮಂದಿರ ನೋವು ಕೇಳುವವರಾರು? ನಾಳಿನ ಭವಿಷ್ಯವೇ ಇಲ್ಲದಂತೆ ಮಾಡಿದ 'ಎಂಡೋ' ಪೀಡೆಯಿಂದ ಈ ಕುಟುಂಬಗಳಿಗೆ ಮುಕ್ತಿಯಿಲ್ಲವೇ? ಸಾವು ನೋವುಗಳಿಂದ ಕಂಗೆಟ್ಟ ಈ ಜನತೆಗೆ ಸಾಂತ್ವನ ಹೇಳುವವರು ಯಾರು? ಈ ಮೊದಲು ಗೇರು ಬೀಜದ ಮರಗಳಿದ್ದ ಪ್ರದೇಶಗಳಲ್ಲಿ ಅದನ್ನು ಕಡಿದು ರಬ್ಬರ್ ಕೃಷಿ ಆರಂಭಿಸಿದ ಪ್ಲಾಂಟೇಷನ್ ಕಾರ್ಪರೇಶನ್್ನ ಕೆಟ್ಟ ಚಿಂತನೆಗೆ ಏನೆನ್ನಬೇಕೋ ತಿಳಿಯದಾಗಿದೆ. ಸಮಸ್ತ ಜನತೆ ಎಂಡೋಸಲ್ಫಾನ್ ನಿಷೇಧಿಸಿ ಎಂದು ಕೂಗುತ್ತಿದ್ದರೂ ಅದನ್ನು ಕೇಳದಂತೆ ನಟಿಸುವ ನೀವೊಬ್ಬ ಮನುಷ್ಯ ಎಂದು ಹೇಳಲೂ ಲಜ್ಜೆಯಾಗುತ್ತಿದೆ. ತನ್ನ ಹೊಟ್ಟೆ ತುಂಬಿಸುವ ಸಲುವಾಗಿ ಕೋಟಿ ಕೋಟಿ ಜನರನ್ನು ಮೋಸ ಮಾಡಿದ ನಿಮಗೆ ಸಾಮಾನ್ಯ ಜನರ ಕಣ್ಣೀರ ಶಾಪವಿದೆ. ದೇವರ ಸ್ವಂತ ಊರು ಎಂದು ಹೇಳುವ ಕೇರಳದಲ್ಲಿನ ಎಂಡೋ ಪೀಡಿತರ ನರಕ ಯಾತನೆ ನಿಮಗೆ ಅರ್ಥವಾಗುವುದಿಲ್ಲವೇ? ಇದೇ ಪರಿಸ್ಥಿತಿ ನಿಮ್ಮ ಮಕ್ಕಳಿಗೆ ಒದಗಿಬಂದರೆ ಏನ್ಮಾಡುತ್ತೀರಿ? ಶರದ್ ಪವಾರ್ ಜೀ, ಪ್ಲೀಸ್...ಎಂಡೋಸಲ್ಫಾನ್ ನಿಷೇಧಿಸಿ, ಭವಿಷ್ಯದ ಮಕ್ಕಳಿಗೆ ಬದುಕಲು ಅನುಮತಿಸಿ.

ಇಂತೀ,
ರಶ್ಮಿ. ಕಾಸರಗೋಡು.

Tuesday, April 19, 2011

ಈ ಮಳೆಯೇ ಹಾಗೆ...

ಈ ಮಳೆಯೇ ಹಾಗೆ...
ನಮ್ಮೂರಿನ ಮಳೆಯಂತಿಲ್ಲ ಇದು
ಮಳೆ ಬಂದ ಕೂಡಲೇ ಮಣ್ಣಿನ ವಾಸನೆ
ಮೂಗನ್ನು ಮೆತ್ತಿ ಕೊಳ್ಳುವುದಿಲ್ಲ...

ಈ ಮಳೆಯೇ ಹಾಗೆ...
ಮನೆ ಬಿಟ್ಟು ಹೊರಗೆ ಕಾಲಿಡಲು ಬಿಡುವುದಿಲ್ಲ
ಚರಂಡಿ ನೀರು ರೋಡಲ್ಲಿ ಹರಿದರೂ
ನಾವ್ಯಾರು ತಲೆ ಕೆಡಿಸಿಕೊಂಡಂತ್ತಿಲ್ಲ

ಈ ಮಳೆಯೇ ಹಾಗೆ...
ಬಿರುಸಿನ ಮಳೆಗೆ ಕೊಡೆ ಹಾರುವುದಿಲ್ಲ
ರೈನ್್ಕೋಟ್್ಗಳೆಡೆಯಲ್ಲಿ ಮಿಣುಕುವ ಕಣ್ಣುಗಳು
ಲಿಫ್ಟ್ ಕೇಳಿದರೂ ಕೊಡುವುದಿಲ್ಲ

ಈ ಮಳೆಯೇ ಹಾಗೆ...
ಒಮ್ಮೆ ಪಿರಿ ಪಿರಿ, ಎಡೆ ಬಿಡದೆ ಸುರಿಯೆ ಕಿರಿಕಿರಿ
ಕೆಂಪು ದೀಪದಡಿಯಲ್ಲಿ ವಿಷಣ್ಣನಾಗಿ ನಿಂತ ಗಾಡಿಗಳ
ಗಾಲಿಗಳು ಮುಂದೆ ಚಲಿಸುವುದೇ ಇಲ್ಲ

ಈ ಮಳೆಯೇ ಹಾಗೆ...
ತಂಗಾಳಿಯೊಂದಿಗೆ ನೆನಪು ಹೊತ್ತು ತರುತಿದೆ
ಕಳೆದ ಬಾಲ್ಯ, ಯೌವನದ ಮಿಡಿತ ತುಡಿತದೊಳು
ಕಣ್ಣೀರಾಗಿ ಹರಿದು, ಮತ್ತೆ ಮೋಡವಾಗುತಿದೆ.

Friday, April 8, 2011

ಯುರೇಕಾ...ಯುರೇಕಾ

ನೋಡು..ಮಗು ಅಲ್ಲಿದೆ ಅಜ್ಜಿಮನೆ
ಇನ್ನೊಂದು ಹೆಜ್ಜೆ ಅಷ್ಟೇ..
ಈಗ ನಡೆದದ್ದು 2 ಮೈಲಿಯಷ್ಟಾಗಿತ್ತು
ಇನ್ನೂ ಸ್ವಲ್ಪ ದೂರ..
ಅಪ್ಪ ಮಗನನ್ನು ಪುಸಲಾಯಿಸಿ
ಹೆಜ್ಜೆ ಹಾಕುತ್ತಿದ್ದ ಅಪ್ಪ....

ವರುಷ ಸರಿದಾಗ ಮನೆಯ ಮುಂದಿನ
ಡಾಂಬರು ರೋಡಿನಲ್ಲಿ ಮಗ ಓಡಾಡಿದ
ಮಗು ಓಡು, ಇನ್ನೂ ಜೋರಾಗಿ ಓಡು
ಅಪ್ಪ ಹುರಿದುಂಬಿಸಿದ
ಮಗ ಓಡುತ್ತಲೇ ಇದ್ದ

ಇದು ಮ್ಯಾರಥಾನ್ ಅಲ್ಲ, ಕ್ರಾಸ್್ಕಂಟ್ರಿ ರೇಸ್ ಅಲ್ಲ...
ಬದುಕ ಬಂಡಿಯನ್ನೆಳೆಯಲು ಅವ ಓಡುತ್ತಿದ್ದ
ಮುದ್ದು ಗಲ್ಲದಲ್ಲಿ ಕಾಣಿಸಿತ್ತು ಗಡ್ಡ
ಹೆಗಲ ಮೇಲಿತ್ತು ಕನಸುಗಳ ಭಾರ

ಓಡು ಮಗು ಓಡು ಇನ್ನೂ ಓಡಬೇಕೆಂದ
ಮುದಿ ಕೂದಲಿನ ಅಪ್ಪ...
ಗಮ್ಯ ಸ್ಥಾನವೆಲ್ಲೋ ಯಾರಿಗೇನು ಗೊತ್ತು?

ನಿನ್ನ ಮುಂದಿರುವ ಜನರ ಕಾಲೆಳೆದು ಹೊರದಬ್ಬು
ಹಿಂದಿರುವ ಮಂದಿಯನ್ನು ಒದೆಕೊಟ್ಟು ತಳ್ಳು
ಇಷ್ಟು ಸಾಕಾಗದಿದ್ದರೆ ಅವರ ಮನ ಚಿವುಟು
ಅವರ ಕಣ್ಣೀರಲಿ ತೇಲುತ್ತಾ ನೀ ದಡವ ಸೇರು

ಮಗ ಓಡುತ್ತಲೇ ಇದ್ದ ಪಿತೃ ವಾಕ್ಯ ಪಾಲಕನಂತೆ
ಲಜ್ಜೆ ಬಿಡು ನೀನು...ಎಲ್ಲರಿಂದ ಮುಂದೆ ಸಾಗು
ಕಿವಿ ಕೇಳಿಸದು, ಕಣ್ಣು ಕಾಣಿಸದು...
ಲಜ್ಜೆ ಬಿಟ್ಟು ವಿವಸ್ತ್ರನಾಗಿ ಮಗ ಓಡುತ್ತಿದ್ದ
ಜನ ನಕ್ಕಾಗ ಅಪ್ಪ ಹೇಳಿದ
ಯುರೇಕಾ....ಯುರೇಕಾ...

Wednesday, April 6, 2011

ಉದಯೋನ್ಮುಖ ಬರಹಗಾರರಿಗೆ ಆಮಂತ್ರಣ

ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಆಮೇಲೆ ತಿಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಭಾಷೆ, ಪ್ರಸ್ತುತ ಪರಿಸ್ಥಿತಿ, ಸವಾಲುಗಳು, ದೋಷಗಳು ಹೀಗೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಇದು ಚರ್ಚಾಗೋಷ್ಠಿಯಲ್ಲ, ಸಮ್ಮೇಳನವೂ ಅಲ್ಲ. ಬದಲಾಗಿ ನಾವಿಲ್ಲಿ ಕೈಗೊಳ್ಳುವಂತಹ ತೀರ್ಮಾನಗಳು ಚಾಲ್ತಿಗೆ ಬರಬೇಕು. ನಾವು ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಕೈಗೊಂಡಿಲ್ಲ. ಏನಿದ್ದರೂ ಇದು ಕನ್ನಡದ ಸೇವೆ, ಇದು ನಮ್ಮ ಭಾಷೆಗೆ ಸಲ್ಲಬೇಕು. ಇದಕ್ಕಾಗಿ ನಿಮ್ಮ ಸಹಕಾರ ಬೇಕು. ಕನ್ನಡಕ್ಕಾಗಿ ತುಡಿಯುವ ಮನ ನಿಮ್ಮದಾಗಿದ್ದರೆ ಬನ್ನಿ... ನಾವೆಲ್ಲರೂ ಒಟ್ಟಾಗಿ ಸೇರೋಣ..

ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಾನದಂಡದಗಳು ಇಂತಿವೆ:
1. ಉದಯೋನ್ಮುಖ ಬರಹಗಾರರು (ಬರವಣಿಗೆಯಲ್ಲಿ ಆಸಕ್ತಿಯುಳ್ಳವರು) ಮಾತ್ರ
1. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಜ್ಞಾನ
2. ಕನ್ನಡಕ್ಕಾಗಿ ತುಡಿಯುವ ಮನಸ್ಸು
3. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅರಿವು
5. ಭಾಗವಹಿಸಲಿಚ್ಛಿಸುವವರು ಈ ಕೆಳಗಿನ ಪ್ರಶ್ನೆಗೆ 100 ಪದಗಳಿಗೆ ಮೀರದಂತೆ ಉತ್ತರಿಸಬೇಕು.

ಪ್ರಶ್ನೆ: ಸಾಹಿತ್ಯಕ್ಕೆ ಓದು ಅಗತ್ಯವೇ? ಸಾಹಿತಿ ಆದವನಿಗೆ ಸಾಮಾಜಿಕ ಬದ್ಧತೆಗಳಿರಬೇಕೆ?

ನಿಮ್ಮ ಉತ್ತರವನ್ನು ಏಪ್ರಿಲ್ 25ರ ಮೊದಲು sanakabrahma@gmail.com ಈ ವಿಳಾಸಕ್ಕೆ ಕಳುಹಿಸಿ.
ನಿಮ್ಮ ಮಿಂಚಂಚೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಮರೆಯದಿರಿ. ಈ ಕೂಟದಲ್ಲಿ ಭಾಗವಹಿಸಲು ಆಯ್ಕೆಯಾದ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಆಹ್ವಾನವನ್ನು ಕಳುಹಿಸಲಾಗುವುದು.

Friday, March 25, 2011

ಅಪ್ಪನ ಮನದಲ್ಲೊಮ್ಮೆ ಇಣುಕಿ...

ಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳುವ ಆ ಚಿಕ್ಕ ಬೂಟಿನ ಸದ್ದಿಗೆ ಅವ ನಗುತ್ತಾನೆ. ಎರಡು ಜಡೆಯಲ್ಲೂ ಮಲ್ಲಿಗೆ ಮುಡಿದು, ಬಣ್ಣ ಬಣ್ಣದ ಫ್ರಾಕ್ ಹಾಕಿಕೊಂಡು ಅಪ್ಪನ ಕಿರುಬೆರಳು ಹಿಡಿದು ನಡೆಯುವ ಮಗಳು ಈವಾಗ ಕೂದಲು ಹರಡಿ ಬಿಟ್ಟು ಸುಯ್ಯಿ ಅಂತಾ ಸ್ಕೂಟಿಯೇರುತ್ತಾಳೆ. ಕೈ ತುಂಬಾ ಬಳೆ ಬೇಕು ಎಂದು ಹಠ ಹಿಡಿಯುತ್ತಿದ್ದ ಪೋರಿ ಈಗ ರಟ್ಟೆಯಲ್ಲಿ ಟ್ಯಾಟೂ ಹಾಕಿಸಿ ಸ್ಲೀವ್ ಲೆಸ್ ಟೀಶರ್ಟ್ ಹಾಕ್ತಾಳೆ. ಅವಳ ಹೈ ಹೀಲ್ಡ್ ಶೂವಿನ ಟಕ್ ಟಕ್ ಸದ್ದು ಮಹಡಿಯವರೆಗೂ ಕೇಳಿಸುತ್ತದೆ. ಅಪ್ಪನ ಜತೆ ಕುಳಿತು ಬಟ್ಟಲಿಗೆ ಕೈ ಹಾಕಿ ದೋಸೆ ತಿನ್ನುತ್ತಿದ್ದ ಮಗಳು ಡಯಟ್ ಅಂತಾ ಕ್ಯಾರೆಟ್ ಜೂಸ್ ಕುಡಿದು ಹೊಟ್ಟೆ ತುಂಬುತ್ತಾಳೆ.

ಮಗಳು ಬದಲಾಗಿದ್ದಾಳೆ. ಕಾಲಕ್ಕೆ ತಕ್ಕಂತೆ ಅವಳು ಜೀವನದಲ್ಲಿ ಬಣ್ಣ ತುಂಬಿಕೊಂಡಿದ್ದಾಳೆ. ದಿನಪತ್ರಿಕೆ ಕೈಯಲ್ಲಿ ಹಿಡಿದು ನಿತ್ಯ ಭವಿಷ್ಯ ಪುಟ ತಿರುವಿದರೂ, ಮಗಳ ಭವಿಷ್ಯದ ಬಗ್ಗೆ ಅಪ್ಪ ಚಿಂತೆಯಲ್ಲಿ ಮುಳುಗುತ್ತಾನೆ. ಅವನ ಕಣ್ಣುಗಳು ಮಸುಕಾದರೂ ಮನಸ್ಸಿನ ದೃಷ್ಟಿ ಶುಭ್ರವಾಗಿದೆ. ರಂಗು ಕಾಣದ ಕೂದಲುಗಳಲ್ಲಿ, ಸುಕ್ಕುಗಟ್ಟಿದ ಚರ್ಮದಲ್ಲಿ ಬದುಕಿನ ಕಪ್ಪು ಬಿಳುಪು ಚಿತ್ರಗಳ ಛಾಯೆಯಿದೆ. ಕಲರ್್ಫುಲ್ ಬದುಕಿನಲ್ಲಿ ಓಡಾಡುವ ಮಗಳ ಹಾದಿಯನ್ನೇ ನೋಡುತ್ತಾ ಅಪ್ಪನಿಗೆ ನಿದ್ದೆ ಬಂದಿದೆ. ಮಗಳು ನಿದ್ದೆಯಿರದ ರಾತ್ರಿಗಳಲ್ಲಿ ಬದುಕಿನ ಕನಸುಗಳಿಗೆ ಬಣ್ಣ ಮೆತ್ತುತ್ತಾಳೆ...

'ಅಪ್ಪ' ಮೊದಲಿನಂತಿಲ್ಲ. ಅವ ಡ್ಯಾಡಿಯಾಗಿದ್ದಾನೆ. ಮಗಳಿಗೆ ಉಪದೇಶ ಕೊಡುವ ಹಕ್ಕು ಅವನಿಗಿಲ್ಲ. ತನ್ನ ಬದುಕಿನ ಹಳೆಯ ಪುಟಗಳನ್ನು ತಿರುವಿ ನೋಡಿದರೆ ಎಲ್ಲವೂ ಎಷ್ಟು ಬೇಗ ಕಳೆದು ಹೋಯಿತಲ್ಲಾ ಎಂದು ಅನಿಸುತ್ತದೆ. ಡೆಲಿವರಿ ರೂಮ್್ನ ಮುಂದಿರುವ ಬೆಂಚಲ್ಲಿ ಕಾದು ಕುಳಿತ ಆ ಸಂಜೆ. ಆಸ್ಪತ್ರೆಯಲ್ಲಿನ ಫಿನಾಯಿಲ್ ವಾಸನೆಗೆ ಜಿಡ್ಡು ಕಟ್ಟಿದ ಮೂಗು...ರಾತ್ರಿ ಒಂದೂವರೆ ಗಂಟೆಯ ಹೊತ್ತಿಗೆ ನಿದ್ದೆ ತೂಕಡಿಸುತ್ತಿದ್ದಂತೆ ಮಗುವಿನ ಅಳು.. .ನಾನು ಅಪ್ಪನಾಗಿ ಬಿಟ್ಟೆ! ಆಸ್ಪತ್ರೆಯ ಕೆಟ್ಟ ವಾಸನೆಗೆ ಒಣಗಿದ ಮೂಗಿಗೆ ಬೇಬಿ ಪೌಡರ್್ನ ಘಮಘಮ. ಮುದ್ದಾದ ಹೆಣ್ಮಗು ನನ್ನಾಕೆಯ ಬಳಿ ಮಲಗಿದ್ದಳು. ಮುದ್ದು ಮುದ್ದಾಗಿದ್ದ ಅವಳ ಪುಟ್ಟ ಕೆನ್ನೆಗೆ ಚುಂಬಿಸುತ್ತಾ ಅಮ್ಮೀ ಅಂತಾ ಕರೆದಿದ್ದೆ. ಅವಳ ಬಾಲ್ಯದೊಂದಿಗೆ ನನ್ನ ಯೌವನ ಕರಗಿತು. ರಾತ್ರಿಯೆಲ್ಲಾ ಕಥೆ ಹೇಳುವಂತೆ ಕಾಡಿಸಿ ನನ್ನೆದೆಯಲ್ಲಿ ಬೆಚ್ಚನೆ ಮಲಗಿ ನಿದ್ದೆ ಮಾಡಿದ್ದು, ಮಡಿಲಲ್ಲಿ ಕುಳಿತು ಉಚ್ಚೆ ಹೊಯ್ದಾಗ ನನಗಾದ ಬೆಚ್ಚನೆಯ ಅನುಭವ...ಮಾತಿಗೆ ನಿಲುಕದ್ದು. ನಾನು ಏನು ಹೇಳಿದರೂ ಹೂಂ ಅನ್ನುವ ನನ್ನ ಹುಡುಗಿ ಬೆಳೆಯುತ್ತಾ ಬಂದಂತೆ ಆಕೆಯ ಆಸೆಗಳ ಪಟ್ಟಿಯೂ ಬೆಳೆಯುತ್ತಾ ಹೋಯಿತು. ಎಲ್ಲದಕ್ಕೂ ನಾನು ಹೂಂ ಅಂದೆ. ಅವಳು ಹಾರುವ ಚಿಟ್ಟೆಯಾದಳು. ಅವಳನ್ನು ಹಿಡಿಯ ಹೊರಟರೆ ನನಗೆ ದಕ್ಕಿದ್ದು ಅದರ ಪುಟ್ಟ ರೆಕ್ಕೆಯ ಬಣ್ಣ ಮಾತ್ರ...

ಅವಳ ಬಣ್ಣದ ಲೋಕದಲ್ಲಿ ನಾನು ಬರೀ ಕುಂಚ ಅದ್ದಿ ತೆಗೆಯುವ ನೀರು. ವಿವಿಧ ಬಣ್ಣಗಳು ನನ್ನೊಡಲನ್ನು ಸೇರಿದ ನಾನು ರಂಗೀಲ. ಕಾಮನ ಬಿಲ್ಲು ಯಾಕೆ ಬಾಗುತ್ತೆ ಅಂತಾ ಪ್ರಶ್ನೆ ಕೇಳುತ್ತಿದ್ದವಳು ಕಾಮನ ಬಿಲ್ಲನ್ನು ಹಿಡಿಯ ಹೊರಟಿದ್ದಳು. ಅಪ್ಪಾ...ನಾನೂ ನಿನ್ನೊಂದಿಗೆ ಬರುತ್ತೇನೆ ಎಂದು ರಚ್ಚೆ ಹಿಡಿಯುತ್ತಿದ್ದ ಬಾಲೆ, ನಾನೇ ಹೋಗಿ ಬರ್ತೀನಿ ಅಂತಾಳೆ. ನನ್ನ ಕಿರುಬೆರಳು ಹಿಡಿಯುತ್ತಿದ್ದ ಅವಳ ಕೈಗಳ ಮದರಂಗಿ ಕೆಂಪಾಗಿದೆ. ಬೈತಲೆ ತೆಗೆದು ಬಾಚಿ ಎರಡು ಜಡೆ ಹಾಕಿ ಕಣ್ಣಿಗೆ ಕಾಡಿಗೆ ತೀಡುತ್ತಿದ್ದ ಅವಳ ಮುದ್ದು ಕಂಗಳಲ್ಲಿ ನೀರು ಜಿನುಗುತ್ತಿದ್ದೆ. ಡ್ಯಾಡಿ...ಎಂದು ನನ್ನ ಎದೆಗೊರಗಿ ಅಳುವಾಗ, ನನ್ನ ಅಳುವನ್ನು ನುಂಗಿದ್ದೇನೆ. ಅವಳು ಕೈಯನ್ನು ಗಟ್ಟಿಯಾಗಿ ಹಿಡಿದು ಕೊಂಡು ಅವ ಹೆಜ್ಜೆ ಹಾಕುವಾಗ ಅವಳ ಗೆಜ್ಜೆಯ ನಾದಕ್ಕೆ ನನ್ನೆದೆಯು ಕಂಪಿಸುತ್ತದೆ. ಸಪ್ತಪದಿ ತುಳಿದು ಆಕೆ ಹೊರಟು ನಿಂತಿದ್ದಾಳೆ. ಮುಂದಿನ ಆಷಾಡ ಬರುವ ವರೆಗೆ ನನ್ನ ಜೀವ ಬಿಗಿಹಿಡಿದಿದ್ದೇನೆ.

Wednesday, March 23, 2011

ಹಳೇ ನಿದ್ರೆ ಪುರಾಣ...

ತ್ತೀಚೆಗೆ ಬ್ಲಾಗ್ ಬರೆಯೋದು ಕಡಿಮೆ ಆಗಿದೆ. ಕೆಲಸದ ಒತ್ತಡ, ಸಮಯದ ಅಭಾವ ಮತ್ತೊಮ್ಮೆ ಮೂಡ್ ಇಲ್ಲ ಹೀಗೆ ಹಲವಾರು ಕಾರಣಗಳಿಂದ ಬ್ಲಾಗ್ ಬರವಣಿಗೆ ನಿಂತುಹೋಗಿದೆ. ಏನಾದರೂ ಬರೆಯೋಣ ಎಂದು ಕೂತರೆ ವಿಷಯಗಳೇ ಸಿಗಲ್ಲ. ಈ ವಿಷಯಗಳೇ ಹಾಗೇ...ಏನಾದರೂ ಕೆಲಸ ಮಾಡುವಾಗ ಬ್ಲಾಗ್ ಬರೆಯೋಣ ಅಂತಾ ಅನಿಸುತ್ತೆ. ಟಾಯ್ಲೆಟ್್ನಲ್ಲೇ ಹೆಚ್ಚಿನ ವಿಷಯಗಳು ನೆನಪಿಗೆ ಬರುತ್ತೆ, ಆಮೇಲೆ ಬಂದು ಬರೆಯೋಣ ಎಂದು ಕೂತರೇ ಪದಗಳೇ ಸಿಗದು. ಕೆಲವೊಮ್ಮೆ ಬರೆಯಲು ವಿಷಯಗಳು ಸುಮಾರು ಇರುತ್ತದೆ, ಇವುಗಳಲ್ಲಿ ಯಾವುದನ್ನು ಬರೆಯಲಿ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುವುದೂ ಉಂಟು. ಅಂತೂ ಬ್ಲಾಗ್್ಗೆ ಏನು ಬರೆಯಲಿ? ಎಂಬ ಚಿಂತೆಯಿಂದ ಮುಕ್ತಳಾಗಲು ಅಪ್ಪನಿಗೆ ಫೋನಾಯಿಸಿ, ಏನಾದರೂ ವಿಷಯ ಹೇಳಿ ಅಂದೆ. ನಿನಗಿಷ್ಟವಿರುವ ವಿಷಯದ ಬಗ್ಗೆ ಬರಿ..ಅಂದ್ರು. ಆಮೇಲೆ ನನಗಿಷ್ಟವಿರುವ ವಿಷಯಗಳನ್ನು ಪಟ್ಟಿ ಮಾಡತೊಡಗಿದೆ. ಅರೇ..ವಿಷಯ ಸಿಕ್ಕಿತು.. ನಿದ್ದೆ!

ನಿದ್ದೆ ಯಾರಿಗೆ ಇಷ್ಟ ಇಲ್ಲ ಹೇಳಿ? ನಮ್ಮ ದೇವೇಗೌಡ್ರನ್ನು ನೋಡಿ...ಇನ್ನು ವಿಧಾನಸಭೆ, ಲೋಕ ಸಭಾ ಕಲಾಪದ ನಡುವೆ ಗಡದ್ದಾಗಿ ನಿದ್ದೆ ಹೋಗುವ ಮಂದಿಯನ್ನಂತೂ ನಾವು ನೋಡಿಯೇ ಇರುತ್ತೇವೆ. ನಿದ್ದೆ ಅದೊಂದು ಸುಖ, ಭಾಗ್ಯ...ಅದು ಎಲ್ಲರಿಗೂ ಒಲಿಯುವುದಿಲ್ಲ. ನನಗಂತೂ ನಿದ್ದೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಕಣ್ರೀ..ನಾನು ಪಾಪುವಾಗಿದ್ದಾಗ ನಿದ್ದೆ ಮಾಡ್ತಾನೇ ಇರ್ತಿಲ್ವಂತೆ. ಹಾಗಂತ ರಾತ್ರಿ ವೇಳೆ ರಂಪಾಟ ಮಾಡಿ ಅಮ್ಮನ ನಿದ್ದೆಯನ್ನೂ ಕೆಡಿಸುತ್ತಿರಲಿಲ್ಲ. ಸುಮ್ಮನೆ ಕಣ್ಣು ಬಿಟ್ಟು ನೋಡ್ತಾ ಇರ್ತಿದ್ದೆ ಅಂತಾ ಅಮ್ಮ ಹೇಳ್ತಿದ್ರು. ಪಾಪುವಾಗಿರುವಾಗ ನಾನು ತುಂಬಾ ಪಾಪ, ಕೋಪನೇ ಬರ್ತಿರ್ಲಿಲ್ಲ ಅಮ್ಮ ಹೇಳ್ತಾರೆ.(ಈವಾಗ ನಾನು ಹಾಗಿಲ್ಲ :))

ಶಾಲೆಗೆ ಹೋಗುವ ಸಮಯಲ್ಲೂ ಹಾಗೆ, ಬೆಳಗ್ಗೆ ಬೇಗನೆ ಏಳ್ತಾ ಇದ್ದೆ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ ನನಗಿತ್ತು. ಆದ್ರೆ ಕ್ಲಾಸಿನಲ್ಲಿ ಬೋರ್ ಹೊಡೆಯೋಕೆ ಶುರುವಾದರೆ ಸಾಕು ನಾನು ನಿದ್ರಾದೇವಿಯ ಧ್ಯಾನದಲ್ಲಿ ಮುಳುಗುತ್ತಿತ್ತೆ. ಸಾಮಾಜಿಕ ಅಧ್ಯಯನ ಪಾಠ ಮಾಡುತ್ತಿದ್ದರೆ ನನಗೆ ಜೋರು ನಿದ್ದೆ, ಆದ್ರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆಯುತ್ತಿದ್ದೆ ಎಂಬ ಕಾರಣಕ್ಕೆ ನಿದ್ದೆ ಮಾಡಿದ್ರೂ ಟೀಚರ್ ಏನೂ ಹೇಳ್ತಿರಲಿಲ್ಲ. ಮನೆಯಲ್ಲಿಯೂ ಹಾಗೇನೇ..ಟಿವಿ ನೋಡ್ತಿದ್ರೆ ನಿದ್ದೆ ಹತ್ತಿರ ಸುಳಿಯಲ್ಲ, ಹೋಗಿ ಪಾಠ ಪುಸ್ತಕ ತೆರೆದರೆ ಸಾಕು ನಿದ್ದೆ ಹಾಜರ್. ನಾನು ಪರೀಕ್ಷೆ ಬಂದಾಗ ಮಾತ್ರ ಓದುವ ವಿದ್ಯಾರ್ಥಿಯಾಗಿದ್ದರಿಂದ ಅದಕ್ಕಿಂತ ಮುಂಚೆ ಎಷ್ಟೇ ಓದಿದರೂ ತಲೆಗೆ ಹತ್ತುತ್ತಿರಲಿಲ್ಲ. ಟೀವಿಯಲ್ಲಿರುವ ಎಲ್ಲಾ ಜಾಹೀರಾತುಗಳು ಬಾಯಿಪಾಠ ಬರುತ್ತಿತ್ತು. ಅದೇ ವೇಳೆ ಪದ್ಯವನ್ನು ಬಾಯಿಪಾಠ ಮಾಡಲು ಕಷ್ಟಪಡುತ್ತಿದ್ದೆ.

ದಿನ ದಿನದ ಪಾಠವನ್ನು ಓದಿಕೋ, ಟೈಂ ಟೇಬಲ್ ಮಾಡಿ ಓದು ಅಂತಾ ಅಕ್ಕ ಉಪದೇಶ ಕೊಡುತ್ತಿದ್ದರೂ ಟೈಂ ಟೇಬಲ್ ಮಾತ್ರ ಸಿದ್ಧವಾಗುತ್ತಿತ್ತೇ ಹೊರತು ಬೇರೇನೂ ಬೆಳವಣಿಗೆ ಕಾಣುತ್ತಿರಲಿಲ್ಲ. ಪರೀಕ್ಷೆಯ ಮುನ್ನಾ ದಿನ ಕಣ್ಣಿಗೆ ನೀರು ಹಾಕಿ, ಟಬ್್ನಲ್ಲಿ ನೀರಿಟ್ಟು ಅದರಲ್ಲಿ ಕಾಲು ಮುಳುಗಿಸಿ ನಿದ್ದೆ ಬಾರದಂತೆ ಕಸರತ್ತು ಮಾಡಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ತಮಾಷೆಯೆಂದರೆ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಾಗಬೇಕು ಎಂಬ ಲೇಖನವನ್ನು ನಾನು ಆವಾಗ ನಮ್ಮೂರಿನ ಪತ್ರಿಕೆಗೆ ಬರೆಯುತ್ತಿದ್ದೆ. ಅಕ್ಕ, ಪರೀಕ್ಷೆಯ ಮುನ್ನಾ ದಿನ ಗಡದ್ದಾಗಿ ನಿದ್ದೆ ಹೋಗುತ್ತಿರುವುದನ್ನು ಕಂಡರೆ ನನಗೆ ಹೊಟ್ಟೆಉರಿಯುತ್ತಿತ್ತು. ಹೇಗೋ ಹೈಸ್ಕೂಲ್ ಮುಗಿಸಿ ಪ್ಲಸ್ ಟು ಕ್ಲಾಸಿನಲ್ಲಾದರೂ ನಿದ್ದೆ ಮಾಡಬಾರದೆಂದು ನಿರ್ಧರಿಸಿದೆ. ಆದರೆ, ಅಲ್ಲಿಯೂ ನಿದ್ರಾ ದೇವಿ ನನ್ನನ್ನು ಬಿಡಲಿಲ್ಲ. ಫಿಸಿಕ್ಸ್ ಪಿರಿಯಡ್್ನಲ್ಲಿ ನನಗೆ ಜೋರು ನಿದ್ದೆ ಬರುತ್ತಿತ್ತು. ಹಿಟ್ಲರ್ ಎಂದು ಕರೆಯಲ್ಪಡುವ ನಮ್ಮ ಫಿಸಿಕ್ಸ್ ಸರ್್ಗೆ ನಾನು ನಿದ್ದೆ ಮಾಡುವುದನ್ನು ನೋಡಿದ್ರೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಸಿಟ್ಟು ಬಂದಾಗ ಅವರು ಚಾಕ್ ಪೀಸ್ ಬಿಸಾಡುತ್ತಿದ್ದರು. ಅದು ಹೆಚ್ಚಾಗಿ ನನ್ನ ಹಿಂದಿನ ಬೆಂಚಲ್ಲಿ ಕುಳಿತಿರುವ ಹುಡುಗಿಯ ತಲೆಗೇ ಬೀಳುತ್ತಿತ್ತು. ನಾನು ಶತಾಯಗತಾಯ ಪ್ರಯತ್ನಿಸಿದರೂ ನಿದ್ದೆ ನನ್ನನ್ನು ಬಿಟ್ಟು ಹೋಗ್ತಿರಲಿಲ್ಲ. ಅದಕ್ಕಾಗಿ ನನ್ನ ಪಕ್ಕ ಕುಳಿತುಕೊಳ್ಳುವ ಗೆಳತಿಯಲ್ಲಿ ಹೇಳಿದ್ದೆ, ನನಗೆ ನಿದ್ದೆ ಬಂದಾಗ ಜೋರಾಗಿ ಪಿಂಚ್ ಮಾಡು ಎಂದು. ಅವಳು ಪಿಂಚ್ ಮಾಡಿದಾಗ ಮಾತ್ರ ನಿದ್ದೆ ಮಾಯ, ಮತ್ತೆ ಅದು ಪ್ರತ್ಯಕ್ಷವಾಗಿ ನನ್ನನ್ನು ಕನಸಿನ ಲೋಕದಲ್ಲಿ ತೇಲಿಸುತ್ತಿತ್ತು. ಕಣ್ಮುಚ್ಚಿದರೆ ಸಾಕು ಕನಸು ಕಾಣುವ ವ್ಯಕ್ತಿ ನಾನಾಗಿದ್ದರಿಂದ ಪಾಠದ ವೇಳೆಯಲ್ಲೂ ನನ್ನ ಕನಸುಗಳಿಗೆ ತೊಂದರೆಯಾಗಿರಲಿಲ್ಲ. ಕ್ಲಾಸಿನಲ್ಲಿ ಗಡದ್ದಾಗಿ ನಿದ್ದೆ ಮಾಡಿರುವ ಕಾರಣ ಮನೆಯಲ್ಲಿ ನಿದ್ದೆ ಬರುತ್ತಿರಲಿಲ್ಲ.

ಮತ್ತೆ ನಿದ್ದೆ ಕಾಟ ಕೊಟ್ಟದ್ದು ಕಾಲೇಜಿನಲ್ಲಿ. ನನಗೆ ಇಷ್ಟವಿಲ್ಲದ ವಿಷಯಗಳ ಬಗ್ಗೆ ಪಾಠ ಮಾಡುತ್ತಿದ್ದರೆ ಸಾಕು, ನಾನು ಆರಾಮವಾಗಿ ನಿದ್ದೆ ಮಾಡುತ್ತಿದ್ದೆ. ಶಾಲಾ ದಿನಗಳಲ್ಲಿ ಪಾಠ ಮಾಡುವಾಗ ನಿದ್ದೆ ಮಾಡಿ ಸುಮಾರು 12 ವರ್ಷಗಳ ಅನುಭವವಿದ್ದ ನನಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಣ್ಣು ಮುಚ್ಚದೆಯೇ ನಿದ್ದೆ ಮಾಡುವುದು ಹೇಗೆ ಎಂಬ ವಿದ್ಯೆ ಕರಗತವಾಗಿತ್ತು. ಕ್ಲಾಸಿನಲ್ಲಿ ಟೀಚರ್ ಪಾಠ ಮಾಡುತ್ತಿದ್ದರೆ ನಾನಿಲ್ಲಿ ಕನಸು ಕಾಣುತ್ತಿದ್ದೆ. ಅದೂ ಅಂತಾ ಇಂತಾ ಕನಸು ಅಲ್ಲಾರೀ...ಮಹಾನ್ ವ್ಯಕ್ತಿಗಳನ್ನು ಇಂಟರ್್ವ್ಯೂ ಮಾಡುವುದು, ಮಿಸೈಲ್ ತಯಾರಿಕೆ, ಬಾಹ್ಯಾಕಾಶ ಯಾನ ಹೀಗೆ ದೊಡ್ಡ ದೊಡ್ಡ ಕನಸುಗಳೇ ನನಗೆ ಬೀಳುತ್ತಿತ್ತು. ಯಾವುದಾದರೂ ಕಥೆ, ಸಿನಿಮಾ, ಕ್ರಿಕೆಟ್ ನೋಡಿದರೆ ಅದರಲ್ಲಿರುವ ವ್ಯಕ್ತಿಗಳನ್ನು ಭೇಟಿ ಮಾಡಿ ಕನಸಿನಲ್ಲೇ ಮಾತಾಡಿ ಬರುತ್ತಿದ್ದೆ. ಕನಸಿನಿಂದ ಎಚ್ಚರವಾದಾಗ ಅದೇ ಹಳೇ ಬೋರ್ಡು, ಅದೇ ಟೀಚರ್...
ಪಾಠದೊಂದಿಗೆ ನೋಟ್ಸ್ ಕೊಟ್ಟರೆ ಬರೆಯುತ್ತಾ ಬರೆಯುತ್ತಾ ಅಕ್ಷರಗಳು ಎಲ್ಲೋ ಹೋಗಿ ಬಿಡುತ್ತಿದ್ದವು. ಕೆಲವೊಮ್ಮೆ ನೋಟ್ಸ್್ನ ಪೇಜ್ ದಾಟಿ ಡೆಸ್ಕ್ ಮೇಲೂ ಬರೆದದ್ದು ಇದೆ. ಮರುದಿನ ಆ ಪುಟ ನೋಡಿದರೆ ಇದನ್ನು ಬರೆದದ್ದು ನಾನೇನಾ? ಅಂತಾ ಗಾಬರಿಯಾಗುತ್ತಿತ್ತು. ಇಂಜಿನಿಯರಿಂಗ್ ಅಲ್ವಾ ಹೇಗಾದರೂ ಪಾಸ್ ಆಗ್ಬೇಕು ಅಂತಾ ಓದಲು ಕುಳಿತರೆ ಮತ್ತೆ ಅದೇ ನಿದ್ದೆ. ಅಪ್ಪ ನನ್ನನ್ನು ಬೆಳಗ್ಗೆ 5 ಗಂಟೆಗೆ ಎಬ್ಬಿಸಬೇಕು ಅಂತಾ ಹೇಳಿ ಮಲಗಿದರೆ ಬೆಳಗ್ಗೆ 5 ಗಂಟೆಯಿಂದ 6 ಗಂಟೆಯವರೆಗೆ ಅಪ್ಪ ರಾಗ ಎಳೆಯಬೇಕು. ಅಲರಾಂ ಇಟ್ಟು ಮಲಗಿ ಕೊಂಡರೂ ಅದೇ ಕಥೆ. ಅದು ಕಿರುಚ ತೊಡಗಿದೊಡನೆ ಅದರ ತಲೆಗೆ ಬಡಿದು ಮತ್ತೆ ಗಡದ್ದಾಗಿ ನಿದ್ದೆ ಹೋಗುತ್ತಿದ್ದೆ. ನಿಜ ಹೇಳಲಾ...ಅಲರಾಂ ಆಫ್ ಆದ್ಮೇಲೆ ಚೆನ್ನಾಗಿ ನಿದ್ದೆ ಬರುತ್ತಿತ್ತು. ಆಮೇಲೆ ಎದ್ದು ಪುಸ್ತಕ ಹಿಡಿದು ಕೂತರೆ ನಾಲ್ಕು ಪೇಜ್ ಓದುವಷ್ಟರೊಳಗೆ ನಿದ್ದೆ ಬಂದು ಬಿಡ್ತಿತ್ತು. ನಾನು ಒಂದು ಗಂಟೆಯ ಮೊದಲು ನೋಡಿದಾಗಲೂ ಇದೇ ಪೇಜ್ ಇತ್ತು ಅಂತಾ ಅಪ್ಪ ಹೇಳಿದಾಗಲೇ ಎಚ್ಚರವಾಗುತ್ತಿತ್ತು. ಟೇಬಲ್ ಮೇಲೆ ಬಿಡಿಸಿಟ್ಟ ಪುಸ್ತಕವೇ ತಲೆದಿಂಬು ಆದದ್ದೂ ಇದೆ. ಇಂಜಿನಿಯರಿಂಗ್ ಕಲಿಯುವಾಗ ಅನ್್ಲೀಶ್್ಡ್ ಜಾವಾ ಎಂಬ ಪಠ್ಯ ಪುಸ್ತಕ ನನ್ನ ಫೇವರಿಟ್. ಅದು ತುಂಬಾ ದಪ್ಪವಿದ್ದ ಕಾರಣ ಅದರ ಮೇಲೆ ತಲೆಯಿಟ್ಟರೆ ಬೇಗ ನಿದ್ದೆ ಬರುತ್ತಿತ್ತು. ನಿದ್ದೆಯನ್ನೋಡಿಸಲು ತಲೆಗೆ ಸ್ನಾನ ಮಾಡಿದ್ದಾಯ್ತು, ಕಾಫಿ ಕುಡಿದದ್ದೂ ಆಯ್ತು..ಏನೆಲ್ಲಾ ಕಸರತ್ತು ಮಾಡಿದರೂ ನಿದ್ದೆ ನನ್ನನ್ನು ಬಿಟ್ಟು ಹೋಗಲು ಒಪ್ಪಲೇ ಇಲ್ಲ. ಕೆಲವೊಮ್ಮೆ ಎಕ್ಸಾಂ ಹಾಲ್್ನಲ್ಲಿಯೂ ನಿದ್ದೆ ಬರುತ್ತಿತ್ತು. ಅಂತೂ ಇಂತೂ ನೀನಿಲ್ಲದೆ ನಾನಿಲ್ಲ ಎಂದು ಹೇಳುವ ನಿದ್ದೆಯನ್ನು ಸ್ವಲ್ಪ ದೂರ ಮಾಡಿ ಇಂಜಿನಿಯರಿಂಗ್ ಮುಗಿಸಿದ್ದಾಯ್ತು.


ಇನ್ನು ಕೆಲಸ. ಯಾವಾಗ ನಾನು ಕೆಲಸಕ್ಕೆ ಸೇರಿದನೋ ನಿದ್ರಾದೇವಿ ನನ್ನಿಂದ ದೂರವಾಗತೊಡಗಿದಳು. ಚೆನ್ನೈಯಿಂದ ಊರಿಗೆ ಬರಬೇಕಾದರೆ ರಾತ್ರಿ ಹೊತ್ತಿನಲ್ಲಿ ಯಾತ್ರೆ. ಟ್ರೈನ್್ನಲ್ಲಿ ನಿದ್ದೆ ಮಾಡದೆಯೇ ಸುರಕ್ಷಿತವಾಗಿ ಮನೆಗೆ ತಲುಪಿತ್ತಿದ್ದೆ. ಟ್ರೈನ್್ನಲ್ಲಿ ನಿದ್ದೆ ಮಾಡ್ಬಾದ್ರು...ಎಂಬ ಅಮ್ಮನ ಆಜ್ಞೆ, ಆದ್ದರಿಂದ ಸ್ಲೀಪರ್್ನಲ್ಲಿ ಮಲಗಿದ್ರೂ ಕಣ್ಣು ತೆರೆದೇ ಮಗಲುತ್ತಿದ್ದೆ. ನಂತರ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು. ರಾತ್ರಿ ಪಾಳಿ ಬೇರೆ. ಆದ್ರೂ ಬೆಳಗ್ಗಿನ ಹೊತ್ತು ನಿದ್ದೆ ಸ್ಕಿಪ್ ಮಾಡಿ ಡೆಡ್್ಲೈನ್್ಗೆ ಲೇಖನ ಸಬ್್ಮಿಟ್ ಮಾಡುವ ಗಡಿಬಿಡಿ. ಕೆಲವೊಮ್ಮೆ ಡೆಡ್್ಲೈನ್ ಮೀಟ್ ಮಾಡಲಿರುವ ಒತ್ತಡದಿಂದ ನಿದ್ದೆ ಹತ್ತಿರ ಸುಳಿಯುವುದೇ ಇಲ್ಲ. ಹೇಗಾದರೂ ನಿದ್ದೆ ಮಾಡಬೇಕಲ್ವಾ..ಅದಕ್ಕೆ ಯಾವುದಾದರೊಂದು ಪುಸ್ತಕವನ್ನು ಕೈಗೆತ್ತಿಕೊಳ್ಳುತ್ತೇನೆ. ಅದೂ ಥ್ರಿಲ್ಲಿಂಗ್ ಆಗಿದ್ದರೆ, ನಿದ್ದೆಯೂ ದೂರ ದೂರ...

ಅಬ್ಬಾ..ಈವಾಗ ನಿದ್ದೆ ಬೇಕು, ನಿದ್ದೆ ಬರ್ತಿಲ್ಲಾ..ಈ ಮೊದಲು ನಿದ್ದೆಯೇ ದೂರ ಹೋಗು ಎಂದಾಗ ಅದು ನನ್ನಗಂಟಿಕೊಂಡಿತ್ತು. ಎಂಥಾ ವಿಪರ್ಯಾಸ ಅಲ್ವಾ. ಆ ಶಾಲಾ ದಿನಗಳಲ್ಲಿ ನಾನು ಮಾಡಿದ ನಿದ್ದೆಯ ಗಮ್ಮತ್ತನ್ನು ನೆನೆಸಿಕೊಂಡಾಗ ಏನೋ ಒಂಥರಾ ಸುಖ. "ತರಗತಿಯಲ್ಲಿ ನಿದ್ದೆ ಹೋಗುವವರು ನಿಜವಾಗಿಯೂ ಭಾಗ್ಯವಂತರು, ಅವರಿಗೆ ಅವರ ಕನಸುಗಳು ನಷ್ಟವಾಗುವುದಿಲ್ಲವಲ್ಲಾ" ಎಂದು ಕವಿ ಸಚ್ಚಿದಾನಂದನ್ ನನ್ನಂತವರನ್ನು ಉದ್ದೇಶಿಸಿಯೇ ಹೇಳಿದ್ದು ಅಂತಾ ಅನಿಸುತ್ತಿದೆ.ಆ ನಿದ್ದೆಯ ಗಮ್ಮತ್ತೇ ಅಂತದ್ದು.

Tuesday, March 8, 2011

ಆಕೆ 'ಸ್ವಬಂಧನ'ದಿಂದ ಮುಕ್ತವಾಗಲಿ...

ದಿನವಿಡೀ ಕೀಲಿಮಣೆ ಕುಟ್ಟುತ್ತಾ ಡೆಡ್್ಲೈನ್ ಎಂಬ ಭೂತಕ್ಕೆ ಭಯ ಪಡುತ್ತಾ ನನ್ನ ದಿನಚರಿ ಮುಗಿಯತ್ತೆ. ಇಂದು ಮಹಿಳಾ ದಿನಾಚರಣೆ ಅದಕ್ಕೆ ಏನಾದರೂ ಗೀಚೋಣ ಎಂದು ಕುಳಿತಾಗ ಹೊಳೆದ ಕೆಲವೊಂದು ವಿಚಾರಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಇದು.

ಮಹಿಳಾ ದಿನಾಚರಣೆ ಎಂದ ಕೂಡಲೇ ಮಹಿಳೆಯ ಬಗ್ಗೆ ಬರೆಯಬೇಕಲ್ವಾ. ಇರಲಿ, ಮಹಿಳೆಯ ಬಗ್ಗೆ ಓದುವಾಗ ನಾನು ಗಮನಿಸಿದ್ದು ಅದರಲ್ಲಿ ಹೆಚ್ಚಾಗಿ ಸ್ತ್ರೀ ಶೋಷಣೆಯ ಬಗ್ಗೆಯೇ ಪುಟಗಟ್ಟಲೆ ವಿವರಣೆ ನೀಡಲಾಗುತ್ತದೆ. ಯಾವುದೇ ಮಹಿಳಾ ವಿಚಾರಗೋಷ್ಠಿಗೆ ಹೋಗಿ, ಅಲ್ಲಿ ಕೇಳುವುದೇ ಅಂದಿನ ಕಾಲದಿಂದ ಇಂದಿನ ಕಾಲದ ವರೆಗೆ ಪುರುಷರು ದಬ್ಬಾಳಿಕೆ ನಡೆಸುತ್ತಾ ಇದ್ದಾರೆ. ಪುರುಷರು ಹಾಗೆ ಮಾಡಿದ್ರು, ಹೀಗೆ ಮಾಡಿದ್ರು... ಸ್ತ್ರೀ ಶೋಷಣೆ!...
ಸ್ತ್ರೀ ಎಂಬ ಪದ ಹೆಡ್್ಲೈನ್ ಆಗಿದ್ದರೆ ಅಲ್ಲಿ ಶೋಷಣೆ ಕಿಕ್ಕರ್. ಹಾಗಂತ ಇಂದಿನ ಕಾಲದಲ್ಲಿ ಸ್ತ್ರೀ ಶೋಷಣೆ ನಡೆಯುತ್ತಿಲ್ಲ ಎಂದು ನಾನು ಹೇಳಲ್ಲ. ಶೋಷಣೆ, ದಬ್ಬಾಳಿಕೆಗಳಿಗೆ ಎಂದೂ ಬ್ರೇಕ್ ಬಿದ್ದಿಲ್ಲ. ಆದರೆ ಬೇಜಾರಿನ ವಿಷ್ಯ ಏನಪ್ಪಾ ಅಂದ್ರೆ ಇಂತಹಾ ಕಥೆಗಳನ್ನು ಹೇಳುತ್ತಾ ಕೆಲವರು ತಮ್ಮನ್ನು ತಾವೇ ಸ್ತ್ರೀವಾದಿ ಎಂದು ಬಿಂಬಿಸಿಕೊಳ್ಳುತ್ತಾರೆ. ನಿಜ ಹೇಳಬೇಕಾದ್ರೆ ಓರ್ವ 'ಸ್ತ್ರೀವಾದಿ' ಎಂದರೆ ಪುರುಷರನ್ನು ದೂರುವ ಮೂಲಕ, ಆತನನ್ನು ಜರೆಯುವ ಮೂಲಕ ಸ್ತ್ರೀಯನ್ನೇ ಹೊಗಳುವ ಮೂಲಕ ಪಟ್ಟಗಿಟ್ಟಿಸಿಕೊಳ್ಳುವುದಲ್ಲ. ದಬ್ಬಾಳಿಕೆ ಮಹಿಳೆಯಿಂದಲೂ ಆಗಲ್ವಾ? ವರದಕ್ಷಿಣೆ ವಿಷಯದಲ್ಲಿ ಸೊಸೆ ಅಡುಗೆ ಮನೆಯಲ್ಲಿ ಸ್ಟೌ ಸಿಡಿದು ಸಾಯುತ್ತಾಳೆ. ಅದು ಆಕೆಯ ದುರ್ವಿಧಿ. ಇಂತಹ ಸುದ್ದಿಯನ್ನೋದುವಾಗ ನನ್ನ ಮನಸ್ಸಲ್ಲಿ ಕಾಡಿದ ಪ್ರಶ್ನೆ .ಯಾವತ್ತೂ ಅಡುಗೆ ಮನೆಯಲ್ಲಿ ಸ್ಟೌ ಸಿಡಿದು ಸೊಸೆ ಮಾತ್ರ ಯಾಕೆ ಸಾಯ್ತಾಳೆ? ಅತ್ತೆ ಅಡುಗೆ ಮನೆಗೆ ಹೋದಾಗ ಸಿಡಿಯದ ಸ್ಟೌ, ಸೊಸೆ ಬಂದಾಕ್ಷಣ ಯಾಕೆ ಸಿಡಿಯುತ್ತೆ?

ಹೀಗೆ ಅನೇಕ ಪ್ರಶ್ನೆಗಳು ನಮ್ಮ ಮನಸ್ಸನ್ನು ಕಾಡುವುದು ಸಾಮಾನ್ಯ. ಆದಾಗ್ಯೂ, ಸಮಾಜದಲ್ಲಿ ಸ್ತ್ರೀ ಪುರಷರು ಸಮಾನರು. ಇಬ್ಬರಿಗೂ ಬದುಕುವ ಸಮಾನ ಹಕ್ಕಿದೆ, ಮಾಡಬೇಕಾದ ಕರ್ತವ್ಯಗಳ ಪಟ್ಟಿ ಒಂದೇ ರೀತಿ ಇದೆ. ಹೀಗಿರುವಾಗ ಸ್ತ್ರೀ ಪುರುಷರ ನಡುವೆ ಕಂದಕ ಯಾಕೆ? ಕೇವಲ ಹೆಣ್ಣೊಬ್ಬಳು ಸ್ತ್ರೀವಾದಿಯಾಗಬೇಕಿಂದಿಲ್ಲ. ಪುರುಷರು ಸ್ತ್ರೀ ವಾದಿಗಳಾಗಬಹುದು. ಮಹಿಳೆಯನ್ನು ಗೌರವಿಸುವ, ಆಕೆಯ ಸಾಧನೆಗೆ ಪ್ರೋತ್ಸಾಹ ನೀಡಿ, ಸಮಾನ ಅವಕಾಶಗಳನ್ನು ಕಲ್ಪಿಸುವವರೇ ನಿಜವಾದ ಸ್ತ್ರೀವಾದಿಗಳು. ಬಾಕಿ ಉಳಿದವರೆಲ್ಲ ಸ್ತ್ರೀ ವ್ಯಾಧಿಗಳು ಅಷ್ಟೇ...

ಎಲ್ಲಾ ಶೋಷಣೆ ದಬ್ಬಾಳಿಕೆಯಿಂದ ಮುಕ್ತವಾಗಲು ಮಹಿಳೆಯರು ಮೊದಲು ಮುಖ್ಯವಾಹಿನಿಗೆ ಬರಬೇಕು. ವಿದ್ಯಾರ್ಜನೆಯಿಂದಲೇ ಇದು ಸಾಧ್ಯವಾಗಿದ್ದರೂ, ಕೆಲವೊಂದು ಮಹಿಳೆಯರು ತನ್ನನ್ನು ತಾನೇ ಬಂಧಿಯಾಗಿರಿಸುವ ಮೂಲಕ ಮೂಲೆ ಗುಂಪಾಗುತ್ತಾರೆ. ಇದು ಕೇವಲ ಸಾಧನೆ ಮಾಡಬೇಕೆಂದಿರುವ ಮಹಿಳೆಯರನ್ನು ಉದ್ದೇಶಿಸಿ ಹೇಳಿದ್ದು. 'ಸ್ವಬಂಧನ 'ಕ್ಕೊಳಗಾದ ಮಹಿಳೆಯರು ಅದೆಲ್ಲಾ ನನ್ನ ಕೈಯಿಂದ ಆಗಲ್ಲ ಎಂದು ತಮ್ಮ ಮುಂದೆಯೇ ಲಕ್ಷ್ಮಣರೇಖೆ ಎಳೆದು ಕೊಂಡು ಕೂರುತ್ತಾರೆ. ಅವರು ಏನಂತಾರಪ್ಪಾ, ಇವರು ಏನಂತಾರಪ್ಪಾ ಎಂದು ಆಕೆಯ ಮನಸ್ಸಲ್ಲಿ ಭಯ. ಇಂತಹಾ ಭಯಗಳು ಸಾಮಾನ್ಯ ಇದ್ದೇ ಇರುತ್ತದೆ. ಯಾಕೆಂದರೆ ಇದು ಭಾರತ. ಇಲ್ಲಿ ಸಂಸ್ಕೃತಿಗೆ ಬೆಲೆ ಇದೆ. ಇದರರ್ಥ ಹೆಣ್ಣು ಮನಸೋಇಚ್ಛೆ ವರ್ತಿಸಬೇಕೆಂದಲ್ಲ. ಉದಾಹರಣೆಗೆ ಮಹಾನಗರದಲ್ಲಿ ಟೀಶರ್ಟ್ ಜೀನ್ಸ್ ಹಾಕಿ ಓಡಾಡುವ ಹುಡುಗಿ, ತನ್ನ ಊರಲ್ಲಿ ಸಲ್ವಾರ್ ಹಾಕಿ ಲಜ್ಜೆಯಿಂದ ನಡೆಯುತ್ತಾಳೆ. ಇದು ಭಯವಲ್ಲ, ಆಕೆ ಈ ಮೂಲಕ ಸಮಾಜವನ್ನು ಆಕೆ ಗೌರವಿಸುತ್ತಾಳೆ. ಸಮಾಜದಲ್ಲಿ ಒಳಿತು ಕೆಡುಕು ಇದ್ದೇ ಇರುತ್ತೆ. ಹೀಗಿರುವಾಗ ಸಾಧನೆ ಮಾಡಬೇಕೆಂದು ಹೊರಟ ಮಹಿಳೆ ಯಾವುದನ್ನೂ ಲೆಕ್ಕಿಸಬಾರದು. ನನ್ನ ವೃತ್ತಿ ಜೀವನದಲ್ಲಿ ಈವರೆಗೆ ನಾನು ಸುಮಾರು 30 ರಷ್ಟು ಸಾಧಕಿಯರನ್ನು ನಾನು ಭೇಟಿ ಮಾಡಿದ್ದೇನೆ. ಸಾಧನೆಗೆ ಅಡ್ಡಿ ಆತಂಕಗಳು ಇದ್ದೇ ಇರುತ್ತೆ, ಆದರೆ ಅದನ್ನು ನಿಭಾಯಿಸಿ ಮುಂದೆ ಬರುವುದೇ ಜೀವನ ಅಲ್ವಾ ಎಂದು ಹೇಳುವ ಅವರ ಮಾತು ಎಷ್ಟೊಂದು ಸ್ಪೂರ್ತಿದಾಯಕ ಅಲ್ವಾ? ಏನೇ ಮಾಡಿದರೂ ಸಮಾಜದಲ್ಲಿ ಕಾಲೆಳೆಯುವ ಜನ ಇದ್ದೇ ಇರುತ್ತಾರೆ. ಹಾಗಂತ ಅಂಜಿಕೆಯಿಂದಲೇ ಜೀವನ ಸಾಗಿಸಲು ಸಾಧ್ಯನಾ? ನಾವು ಸತ್ಯ, ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದರೆ ಅಂಜಿಕೆ ಏತಕ್ಕೆ? ಆದ್ದರಿಂದ, ಹಳೆಯದನ್ನೆಲ್ಲಾ ಮರೆತು, ಹೊಸ ದಾರಿಯಲ್ಲಿ ಚಲಿಸುವ ಪ್ರಯತ್ನ ಆಕೆಯಿಂದ ಆಗಬೇಕು, ಜತೆಗೆ ನಮ್ಮೆಲ್ಲರ ಪ್ರೋತ್ಸಾಹ ಆಕೆಗೆ ಸಿಗಬೇಕು. ಏನಂತೀರಾ?

Friday, February 18, 2011

ಬಚ್ಚಿಡಲು ಬರುವುದಿಲ್ಲ...

ಚ್ಚಿಡಲು ಬರುವುದಿಲ್ಲ ನನಗೆ
ಹಳೆಯ ಕಹಿ ನೆನಪುಗಳ
ಮನದ ಕೋಣೆಗೆ ಸದ್ದಿಲ್ಲದೆ
ಬರುವ ಆ ಕೆಟ್ಟ ಕನಸುಗಳ...

ಮುಚ್ಚಿಡಲು ಬರುವುದಿಲ್ಲ
ಒತ್ತರಿಸುವ ಕಂಬನಿಯ
ಕಷ್ಟಗಳ ಸರಮಾಲೆಗಳ ನಡುವೆ
ಬರುವ ಇಷ್ಟಗಳ ಸಿಂಚನವ....

ಸುಮ್ಮನಿರುವುದಿಲ್ಲ ಮನಸು
ಇಂದು ನಾಳಿನ ಚಿಂತೆಯಲಿ
ವರ್ತಮಾನದ ಬೇಗುದಿಯಿದೆ
ಉಸಿರಾಡುವ ಜೀವದಲಿ


ಮರೆಯಲಾಗುವುದಿಲ್ಲ ಅತ್ತರೂ
ನೋವು ನಲಿವಿನ ದಿನಗಳ
ತೊರೆದು ಹೋಗಲಾರೆನು ಬದುಕು
ನಾನಷ್ಟು ಹೇಡಿಯಲ್ಲ!

ಸೋಲುವುದಿಲ್ಲ...ದೂರುವುದಿಲ್ಲ
ಯಾರು ಏನೇ ಬಗೆದರೂ
ಈ ಕ್ಷಣವು ಕ್ಷಣಿಕ ಎನ್ನುತಿರೆ ಮನ
ಮತ್ತೆ ನಡೆವೆನು ಹೊಸ ಛಲದಲಿ.

Thursday, January 20, 2011

ಕರ್ನಾಟಕ ಸರ್ಕಾರ ಯಾಕೆ 'ಥಿಂಕ್' ಮಾಡಲ್ಲ?

ರ್ನಾಟಕದಲ್ಲಿ 'ಪವರ್' ಸಮಸ್ಯೆ ಇದ್ದದ್ದೇ. (ರಾಜಕಾರಣಿಗಳ ಪವರ್ ಅಲ್ಲ !).ಒಂದು ದಿನ ನೀರು ಇದ್ದರೆ ಇನ್ನೊಂದಿನ ಪವರ್ ಇಲ್ಲ. ರಾಜ್ಯಕ್ಕೆ ವಿದ್ಯುತ್ ಸಾಕಾಗ್ತಾ ಇಲ್ಲ ಎಂಬುದು ಮಂತ್ರಿವರ್ಯರ ವರಸೆ. ಬುರುಡೆ ಬಲ್ಬ್ ಬೇಡ ಎಂದು ಸರ್ಕಾರ ಹೇಳಿದ್ದೂ ಆಯ್ತು. ಅದೂ ಬುರುಡೆ ಬಿಟ್ಟದ್ದೋ ಅಂತಾ ಗೊತ್ತಿಲ್ಲ :)
ಅಲ್ಲಾ ಮಾರಾಯ್ರೆ ... ಏನೇ ಹೇಳಿ ಬುರುಡೆ ಅಥವಾ ಇನ್ಯಾವುದೇ ಬಲ್ಬ್ ಉರಿಯಲು ವಿದ್ಯುತ್ ಬೇಕಲ್ವಾ? ವಿದ್ಯುತ್ ಇಲ್ಲದಿದ್ದರೆ ಬಲ್ಬ್ ವಿಷ್ಯ ಯಾಕೆ ಬೇಕು?
ಕರ್ನಾಟಕದಲ್ಲಿ ವಿದ್ಯುತ್್ನ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ತೀನಿ. ಆದರೆ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಯಾಕೆ ವಿಫಲವಾಗುತ್ತಿದೆ? (ರಾಜ್ಯದ ರಾಜಕೀಯ ಡೊಂಬರಾಟ ವಿದ್ಯುತ್ತಿಗೇ 'ಶಾಕ್್' ನೀಡಿದೆಯೇ ಎಂಬುದು ನನ್ನ ಅನುಮಾನ)

ಸದ್ಯ ಈ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಸೌರಶಕ್ತಿಯ ಮೊರೆ ಯಾಕೆ ಹೋಗಬಾರದು? ಇಲ್ಲಿ ಲಭ್ಯವಾಗುವಂತಹ ಸೌರಶಕ್ತಿಯನ್ನು ಸದುಪಯೋಗಿಸಿಕೊಂಡರೆ ರಾಜ್ಯಕ್ಕೆ ಬೇಕಾದಷ್ಟು ವಿದ್ಯುತ್ತನ್ನು ಪಡೆಯಬಹುದು ಎಂಬ ಯೋಚನೆ ಸರ್ಕಾರಕ್ಕೆ ಹೊಳೆದಿಲ್ಲವೇ? ಇಲ್ಲಿರುವ ಕಟ್ಟಡಗಳ ಮೇಲೆ ಸೋಲಾರ್ ಪೇನಲ್ ಹಾಕಿಸಿದ್ರೆ ಕನಿಷ್ಠ ನಿತ್ಯೋಪಯೋಗಿ ವಿದ್ಯುತ್ ಪಡೆಯಬಹುದು ಎಂಬುದರ ಬಗ್ಗೆ ಜನರು ಯಾಕೆ ಯೋಚನೆ ಮಾಡಲ್ಲ?

ಇನ್ನು ನೀರಿನ ಸಮಸ್ಯೆ, ಮಳೆ ನೀರು ಅದೆಷ್ಟು ಪೋಲಾಗುತ್ತಿದೆ? ಇಲ್ಲಿ ಯಾರು ಮಳೆ ನೀರು ಸಂಗ್ರಹದತ್ತ ಗಮನ ಕೊಡುತ್ತಿಲ್ಲ ಎಂಬುದೇ ಸತ್ಯ. ಮನೆ ಅಥವಾ ಯಾವುದೇ ಕಟ್ಟಡ ನಿರ್ಮಿಸುವಾಗ ಮಳೆ ನೀರು ಸಂಗ್ರಹ ಯೋಗ್ಯವಾಗುವಂತೆ ಟ್ಯಾಂಕ್ ನಿರ್ಮಿಸಿದರೆ ಮನೆಗೆ ಬೇಕಾದ ನೀರನ್ನು ಪಡೆಯಬಹುದು ಎಂಬ ಸಾಮಾನ್ಯಜ್ಞಾನ ಜನರಿಗೆ ಇಲ್ಲವಾಯಿತೇ?. ಮಳೆ ನೀರು ಸಂಗ್ರಹದ ಬಗ್ಗೆ ಪುಟಗಟ್ಟಲೆ ಬರೆದದನ್ನು ಓದಿ, ಅದನ್ನು ಅನುಷ್ಠಾನಕ್ಕೆ ತರಲು ಜನರು ಯಾಕೆ ಹಿಂದೇಟು ಹಾಕುತ್ತಾರೆ?

ನಮ್ಮೂರಲ್ಲಿ (ಕೇರಳದ ಕಾಸರಗೋಡು ಜಿಲ್ಲೆ) ನೀರು ಬೇಕಾದಷ್ಟು ಇದೆ, ಕಾಲಕ್ಕೆ ತಕ್ಕಂತೆ ಮಳೆಯೂ ಬರುತ್ತಿದೆ. ಆದರೂ ಜನರು ಇಂಗು ಗುಂಡಿಗಳನ್ನು ತೋಡಿ ಭೂಜಲ ಬತ್ತಿ ಹೋಗದಂತೆ ಕಾಪಾಡುತ್ತಾರೆ. ಕಟ್ಟಡಗಳಲ್ಲಿ ಮಳೆನೀರು ಸಂಗ್ರಹ ಮಾಡಲಾಗುತ್ತದೆ. ನಮ್ಮ ನೆರೆಹೊರೆಯಲ್ಲೇ ಈ ತರಹ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಇಲ್ಲಿಯವರು ಮಲ್ಟಿ ನ್ಯಾಷನಲ್ ಕಂಪೆನಿಯ ಉದ್ಯೋಗಿಗಳೋ, ಸಾಫ್ಟ್್ವೇರ್ ಇಂಜಿನಿಯರ್್ಗಳೋ ಅಲ್ಲ. ಅಬ್ಬಬ್ಬಾ ಅಂದ್ರೆ ಹತ್ತನೇ ತರಗತಿಯ ವರೆಗೆ ಓದಿದ ಸಾಮಾನ್ಯ ಕೂಲಿ ಕಾರ್ಮಿಕರು. ಇವರ ಮನೆಯಲ್ಲಿ ಮಳೆನೀರು ಸಂಗ್ರಹ ಟ್ಯಾಂಕ್್ಗಳಿವೆ, ಸೌರಶಕ್ತಿಯಿಂದ ವಿದ್ಯುತ್ ಪಡೆಯಲಾಗುತ್ತದೆ.

ನಮ್ಮ ನೆರೆ ರಾಜ್ಯಗಳನ್ನೇ ನೋಡಿ...ಕೇರಳ ಮತ್ತು ತಮಿಳುನಾಡಿನಲ್ಲಿ ಮಳೆನೀರು ಸಂಗ್ರಹಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇದೀಗ ಚೆನ್ನೈಯಲ್ಲಿ ಮಳೆ ನೀರು ಸಂಗ್ರಹ ಮಾಡುವ ಕಟ್ಟಡಗಳು ಸಾಕಷ್ಟು ಇವೆ. ಆದರೆ ಕರ್ನಾಟಕ ಇಂಥಹ ವ್ಯವಸ್ಥೆಗಳಿಗೆ ಕೈ ಹಾಕುವುದಿಲ್ಲ ಯಾಕೆ? ಎಂಬುದು ನನ್ನ ಪ್ರಶ್ನೆ.

ಅದೇ ವೇಳೆ ಗುಜರಾತ್್ನಲ್ಲಿ ಮೋದಿ ಸರ್ಕಾರ ಸಾಗರದ ಅಲೆಯಿಂದ ವಿದ್ಯುತ್ ಉತ್ಪಾದಿಸಲು ಹೊರಟು ನಿಂತಿದೆ. ಇಂಥಹ ವಿಚಾರಗಳು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಯಾಕೆ ಹೊಳೆಯುವುದಿಲ್ಲ? ಇಲ್ಲಿನ ಜನತೆಯೇ ಉತ್ತರಿಸಬೇಕಾಗಿದೆ.