Saturday, October 12, 2013

ದೇವರಿದ್ದಾನೆ!


ಅಮ್ಮಾ ಈ ಎಳನೀರಲ್ಲಿ

ನೀರು ಹೇಗೆ ಬಂತು

ಎಂದು ಕೇಳುವ ಕೂಸು

ಅಗರಬತ್ತಿಯ ಪರಿಮಳದಲ್ಲಿ

ಉತ್ತರ ಕಂಡು ಕೊಂಡಿತ್ತು...



ದೇವರಿದ್ದಾನೆ!



ನೀ ನೋಡಿದ್ದೀಯಾ?

ಕೇಳಿದ್ದಳು ಗೆಳತಿ..

ಹೂಂ ನೋಡಿದ್ದೇನೆ ಕಣೇ..



ಖಾಲಿ ಹೊಟ್ಟೆಯಲ್ಲಿ ಮಲಗಿರುವಾಗ

ಸಿಕ್ಕ ಬ್ರೆಡ್ಡು ತುಂಡುಗಳಲ್ಲಿ

ಜೇಬು ಖಾಲಿಯಾಗಿರುವಾಗ

ಪ್ರತಿಫಲ ಬಯಸದೆ

ಯಾರೋ ಕೊಟ್ಟ ದುಡ್ಡಲ್ಲಿ

ನಾನವನ ಕಂಡಿದ್ದೆ



ಮೊನ್ನೆ ಮತ್ತೆ ಸಿಕ್ಕಿದ ಕಣೇ

ಕಣ್ಣೀರು ಸುರಿಸಿ ನಡೆಯುವಾಗ

ನೋಡಿ ನಕ್ಕಿದ್ದ

ದುರುಗುಟ್ಟಿ ನೋಡಿದೆ

ನಾನಿದ್ದೀನಿ ಎಂದು ಹೇಳಿದ



ಎಲ್ಲಿ ಎಂದು ಕೇಳಿಯೇ ಬಿಟ್ಟೆ

ನಿನ್ನಲ್ಲಿ ಎಂದು ಬಿಡುವುದೆ?

Wednesday, October 2, 2013

ಗಾಂಧಿ ಬಾ...


ಮೂರು ದಾರಿ ಸೇರುವ ಜಂಕ್ಷನ್ನಲ್ಲಿ

ಕಲ್ಲಿನಲಿ ಕೆತ್ತಿದ ಪ್ರತಿಮೆಯಾಗಿ

ಪ್ರತಿಭಟನೆಗೂ, ಸತ್ಯಾಗ್ರಹಕ್ಕೂ

ಮೌನ ಸಾಕ್ಷಿಯಾಗಿ

ನಿಂತಿರುವ ಭೈರಾಗಿ



ಸರ್ಕಾರಿ ಕಚೇರಿಗಳ ಗೋಡೆಗೆ

ತೂಗು ಹಾಕಿದ ಫೋಟೋಗಳಲಿ

ಭ್ರಷ್ಟಾಚಾರಿಗಳ ನೋಡಿ

ಮರುಗುತ್ತಾ

ಲಂಚದ ನೋಟಿನ ಕಂತೆಗಳಲಿ

ನಗುತಿಹನು ಗಾಂಧಿ



ನೀ ಮಹಾತ್ಮ...ಅಹುದಹುದು

ರಾಷ್ಟ್ರಪಿತ ಎಂದು ಕರೆದಿದ್ದರೂ

ಸಂವಿಧಾನದ 18 (1) ಪರಿಚ್ಛೇದ ಪ್ರಕಾರ

ಇದು ಅಸಂವಿಧಾನಿಕವಂತೆ!



ನಿನ್ನ ಆತ್ಮಕತೆಯನ್ನೋದಿ

ಮನದಲ್ಲೇ ಧ್ಯಾನಿಸಿದೆ

ಗಾಂಧಿ ಸಿನಿಮಾದಲ್ಲಿನ ಪಾತ್ರಧಾರಿಯೇ

ಕಣ್ಮುಂದೆ ಬಂದಾಗ

ಕಣ್ಣು ತೆರೆದೆ...

ನೀನು ಕಣ್ಮುಚ್ಚಿ ನಕ್ಕಿರಬಹುದೆ?



ನಿನ್ನ ಮೇಲೆ ಆರೋಪಗಳನ್ನು

ಹೊರಿಸಿ ಪತ್ರಿಕೆ,

ಫೇಸುಬುಕ್, ಟ್ವೀಟರ್ ಗಳಲ್ಲಿ

ಗಾಂಧಿ ಹೀಗಿದ್ದರು ಎಂದು ಜರೆಯುವಾಗ

ಮನದಲ್ಲಿ ಕಸಿವಿಸಿ

ನೀನದಕೆ ಉತ್ತರ ನೀಡುವಂತಿದ್ದರೆ...



ಅಹಿಂಸೆಯೇ ಧರ್ಮ

ಸತ್ಯವೇ ಬಲವೆಂದು

ಬಾಳಿ ಬದುಕಿದ

ನೀನು

ಸ್ವಾತಂತ್ರ್ಯ ಸಿಕ್ಕಿದಾಗಲೂ

ದೇಶ ವಿಭಜನೆಯ ನೋವಲ್ಲಿ

ಸ್ವಾತಂತ್ರ್ಯದ ಸವಿಯುಣ್ಣಲಿಲ್ಲ



ಕೊನೆಗೆ ಗೋಡ್ಸೆಯ ಗುಂಡೊಂದು

ನಿನ್ನೆದೆಯ ಸೀಳಿದಾಗ

ಹೇ ರಾಮ್ ಎಂಬ ಕೊನೆಯ

ಮಾತಲ್ಲಿ ಎಲ್ಲವೂ ಹೇಳಿಬಿಟ್ಟೆ!



ಹೇ...ಸಬರ್ಮತಿಯ ಸಂತ

ಮತ್ತೊಮ್ಮೆ ಹುಟ್ಟಿ ಬರುವಿಯಾದರೆ

ಬೇಗ ಬಾ...

ಆದರೆ ಒಂದು ಕಂಡೀಷನ್

ಈ ನೆಲದಲ್ಲಿ ಕಾಲಿಡದೆ

ಮನದಲ್ಲಿ ಸ್ಫೂರ್ತಿ ಸೆಲೆಯಾಗಿ ಬಾ...

Wednesday, September 4, 2013

ಜಾಹೀರಾತು


ಸುಗಂಧ ಭರಿತ

ಸೋಪುಗಳನ್ನು

ಮೆಲ್ಲ ಮೆಲ್ಲನೆ ಮೈ ಮೇಲೆ ಜಾರಿಸಿ

ನೊರೆಗಳನ್ನೊಮ್ಮೆ ಊದಿ

ಗುಳ್ಳೆಗಳನ್ನು ಕಂಡು ನಕ್ಕು...



ಅರ್ಧ ದೇಹವನ್ನು ತುಂಡು

ಬಟ್ಟೆಯಲ್ಲಡಗಿಸಿ

ತನಗಾಗಿ ಕಾದು ನಿಂತ

ಪ್ರಿಯಕರನ ತೆಕ್ಕೆಗೆ ಬಿದ್ದು



ಅವನು ಅವಳ ದೇಹ

ಗಂಧದಲ್ಲಿ ತಲ್ಲೀನವಾಗುವ

2 ನಿಮಿಷದ ಜಾಹೀರಾತು



ಹಸಿದ ಹೊಟ್ಟೆಯಲ್ಲಿ ನಗುವುದನ್ನೂ

ಸೌಂದರ್ಯವೆಂದರೆ ದೇಹ

ಮಾತ್ರವಲ್ಲ ಎಂಬುದನ್ನು

ಬದುಕು ಆಕೆಗೆ ಕಲಿಸಿದಾಗ

ಅವಳು ಕ್ಯಾಮೆರಾ ಮುಂದೆ

ಮೀಯಲಿಲ್ಲ...

ಅವಳ ದೇಹಗಂಧವನ್ನರಸಿ

ಯಾರೂ ಬರಲಿಲ್ಲ!

Wednesday, August 28, 2013

ನದಿ


ನಿನ್ನೆವರೆಗೂ ಅವಳ ಪುಟ್ಟ ಕೈಗಳಲ್ಲಿ

ಸಿಕ್ಕು

ಪುಟ್ಟ ಪಾದಗಳಿಗೆ ಮುತ್ತಿಕ್ಕಿ

ಕಿಲಕಿಲ ನಗುವಿಗೆ

ಸಾಥಿಯಾಗಿದ್ದು,

ಇಂದು ಊದಿಕೊಂಡ ಅವಳ

ಶವವನ್ನು ಹೊತ್ತು



ದಡದಲ್ಲಿ, ಮಳೆಯಂತೆ ಕಣ್ಣೀರು

ಸುರಿಸುವ ಅಮ್ಮನನ್ನೂ

ಲೆಕ್ಕಿಸದೆ ಹರಿಯುತ್ತಿದೆ

ನದಿ...



ಇವಳು ನಾವಂದು ಕೊಂಡಂತೆ

ಇಲ್ಲ

ಎಂದು ಜನರಾಡಿಕೊಳ್ತಾರೆ



ಆಷಾಢದಲ್ಲಿ ರಭಸವಾಗಿ

ಹರಿವ ಕೋಪಿಷ್ಠೆ

ಮಕರ ಮಾಸದ ಮಂಜು ಮುಸುಕಿದ

ಮುಂಜಾವಿನಲಿ

ಹುಸಿಕೋಪ ತರಿಸುವ ಪ್ರೇಯಸಿ



ಒಡಲೊಳಗೆ ಪ್ರೇಮದ ತಾಪ

ಹೊರಗೆ ತಂಪಾದ ಮೈ

ಮೆಲುನಗೆಯ ಮೋನಾಲಿಸಾಳಂತೆ

ಚಿತ್ರ ವಿಚಿತ್ರ ಛಾಯೆ...



ಚಂದಿರನ ಬೆಳಕಲ್ಲಿ

ಹಾಲುಕ್ಕಿದಂತೆ ಹರಿವ

ಮತ್ತೊಮ್ಮೆ ಬಿಳಿ ದಿರಿಸು ತೊಟ್ಟ

ಯಕ್ಷಿಯಂತೆ ಭಯಾನಕ ರೂಪ



ಮನದೊಳಗಿರುವ ದುಃಖಗಳನ್ನು

ಬದಿಗೊತ್ತಿ

ಏರಿಳಿದು ಹರಿವಳು



ಮೈ ಮುರಿದು ಕೈ ಚಾಚಿ

ನಡುವ ಬಳುಕಿಸಿ

ಲಜ್ಜೆ ಹೆಜ್ಜೆಯನ್ನಿಟ್ಟು

ಸನಿಹದಲ್ಲಿದ್ದರೂ

ಅದು ನನ್ನದಲ್ಲ ಎಂಬಂತೆ

ಅಳುವ ದಂಡೆಯ ಮೈಗೆ

ಗುದ್ದಿ, ಮುದ್ದಿಸಿ



ಯಾರಿಗೂ ಅರಿವಾಗದಂತೆ

ನೋವ ನುಂಗಿ

ಯಾರಲ್ಲೂ ಕೋಪಿಸದೆ

ಕಾಮುಕ ಹೃದಯೀ ಸಮುದ್ರದ

ಸೆಳೆತಕ್ಕೆ ಸೋತು

ತನ್ನನ್ನೇ ಅರ್ಪಿಸಲು ಹೊರಟು

ನಿಂತಾಗ

ಅವಳಲ್ಲಿ ಪ್ರೇಮವಿತ್ತು,

ಪ್ರೇಮಿಯ ಸೇರುವ ತವಕ

ಸವತಿಯಾಗುವೆನೆಂಬ ನೋವೂ...

Tuesday, August 27, 2013

ನಡೆ ಪಾಡು


ಹಸಿವಿನ ಸಂಪತ್ತು

ಪ್ರೇಮದ ನೋವೂ

ಅಸ್ತಮವಾದಾಗ

ಕತ್ತಲೆಯಲ್ಲಿ ಬೆಂದ ನಾನು

ಬಡತನದ ಮೂಟೆ ಹೊತ್ತು ಹೊರಟಿದ್ದೇನೆ



ಏನೂ ಕೊಡಲಿಚ್ಛಿಸದವರೂ

ಏನೂ ಬಯಸದವರೂ

ತಮ್ಮ ಲೆಕ್ಕಪತ್ರದಲ್ಲಿ

ನನ್ನ ಹಸಿವಿನ ಬಗ್ಗೆ ಬರೆದಿಟ್ಟಿಲ್ಲ



ಕೂಡಿಸುವುದು, ಕಳೆಯುವುದು

ಗುಣಾಕಾರ, ಭಾಗಾಕಾರದಲ್ಲಿ

ವಿಕೃತವಾಗಿರುವ ಶರೀರಗಳು

ನನ್ನನ್ನು ಹಾದು ಹೋದುವು



ರಕ್ತಗಳಿಲ್ಲದ ಆ ದೇಹ ಸೊರಗಿತ್ತು

ಆಶ್ಚರ್ಯ!

ನಾನೂ ಅವರ

ದಾರಿಯಲ್ಲೇ ಸಾಗುತ್ತಿದ್ದೇನೆ



ನನಗೇ ಗೊತ್ತಿಲ್ಲದ

ನನ್ನನ್ನು ಗೊತ್ತಿಲ್ಲದ ದಾರಿಯಲ್ಲಿ

ಯಾರು ಯಾರೊಬ್ಬರಿಗೂ ಗೊತ್ತಿಲ್ಲವೆಂಬಂತೆ

ಒಬ್ಬಂಟಿಯಾಗುತ್ತಾರೆ



ನಾನು ಯಾರೆಂದು ಕೇಳಲು

ಇನ್ಯಾರೂ ಇಲ್ಲದಿದ್ದರೂ

ಎಲ್ಲರೂ ನಾನು ಯಾರೆಂದು

ಗುರುತು ಹಿಡಿದಿದ್ದರು



ಅಟ್ಟಹಾಸಗೈದು ಹಾದು ಹೋದ

ಗಬ್ಬು ನಾತದ ಶುಷ್ಕ ಗಾಳಿ

ನನ್ನನ್ನು ಗಾಯಗೊಳಿಸಿದರೂ

ಸುರಿದ ರಕ್ತಕ್ಕೆ ಗಂಧವಿರಲಿಲ್ಲ



ಸುಸ್ತಾದಾಗ ಮಲಗಲು

ಜಾಗ ಹುಡುಕಿದರೂ

ಹಲವಾರು ಬೆಳಕುಗಳ ನಡುವೆ

ಕಪ್ಪು ಬೆಳಕಿಗೆ ಜಾಗವಿಲ್ಲದೇ ಹೋಯ್ತು



ನೆರಳಿಗಾಗಿ ಬಯಸಿ

ಓಡುವ ಮರಗಳ

ಓಡುತ್ತಿರುವ ನೆರಳನ್ನು ಹಿಡಿಯಲಾಗದೆ

ಸುಸ್ತು ಬಿದ್ದೆ



ಈಗ ನಾನು ಭೂಮಿಗೂ ಬೇಡವಾದೆ



ಅಸ್ತಿತ್ವವಿಲ್ಲದೆ ಅಲೆಯುತ್ತಾ

ಭಾರವಾದ ದೇಹವನ್ನು ಹೊತ್ತು

ಲಕ್ಷ್ಯಗಳಿಲ್ಲದೆ

ನಿಂತೆ!.

Wednesday, August 14, 2013

ಪ್ರಣಯ ಕಾಲ


ಕನ್ನಡಿಯ ಮುಂದೆ

ನಿಂತು ಸಿಂಗರಿಸುವಾಗ

ಅವನ

ನೆನಪು ಕಾಡುತ್ತೆ



ನನ್ನ ಬೆರಳುಗಳನ್ನು

ಮೆಲ್ಲನೆ ಹಿಚುಕಿ

ಕಾಲುಗಳ ಸೌಂದರ್ಯ ವರ್ಣಿಸುತ್ತಾ

ಪಿಸುಗುಡುವಂತೆ ಕಿವಿ ಪಕ್ಕ ಬಂದು

ಕೆನ್ನೆಗೆ ಮುತ್ತಿಟ್ಟ

ಆ ಕ್ಷಣಗಳು...



ಹುಡುಗ ಹುಡುಗಿಯೆಂಬ

ಜೀವಶಾಸ್ತ್ರದ ಸಿದ್ಧಾಂತವೂ

ಈಸ್ಟ್ರೋಜನ್ನೂ ಪ್ರೊಜೆಸ್ಟ್ರಾನ್‌ಗಳು

ನನ್ನಲ್ಲಿ ಜಾಗೃತವಾದಾಗ

ಆಂಡ್ರಾಜನ್‌ನ ಏರಿಳಿತ

ಅವನಲ್ಲಿ...



+ve -ve

ಧ್ರುವಗಳು ಆಕರ್ಷಿಸುತ್ತವೆ

ಎಂಬ ರಸಾಯನ ಶಾಸ್ತ್ರವೂ

ಮೈನೆಸ್ ಮೈನೆಸ್ ಪ್ಲಸ್ ಆಗುವ

ಗಣಿತವೂ ನಮ್ಮೊಡಲಲ್ಲಿ

ಸಮೀಕರಣಗೊಂಡಾಗ



XX, XY

ಕ್ರೋಮೋಸೋಮ್‌ಗಳ

ಬಯಾಲಜಿಯೂ, ಕೆಮೆಸ್ಟ್ರಿಯೂ

ಸೇರಿ ಕೂಡಿ ಕಳೆದು

ಗುಣಿಸಿ, ಭಾಗಿಸಿ ಸಿಕ್ಕ

ಲೆಕ್ಕಚಾರದ ಕನಸುಗಳು



ಹೃದಯವೆಂಬುದು ಬರೀ

ಅಂಗವೆಂದುಕೊಂಡಿದ್ದನೇ ಅವನು?

ಪ್ರಾಕ್ಟಿಕಲ್ ಮನುಷ್ಯ!



ಪ್ರೀತಿ ಹುಟ್ಟುವುದು ಕಣ್ಣಿಂದ

ಎಂದು ಅಂದುಕೊಂಡಿದ್ದ

ಶತ ದಡ್ಡಿ ನಾನು



ಕಣ್ಣು ಮುಚ್ಚಿ ಕುಳಿತರೆ

ಮನುಷ್ಯ-ಮನುಷ್ಯನ

ನಡುವಿನ ಅಂತರವನ್ನು ನೆನೆದು

ನಗು ಬರುತ್ತದೆ...

ಪ್ರೀತಿ ಹುಟ್ಟುವುದು ಕಣ್ಣಿನಿಂದಲೇ?



ನಾನು ಕಣ್ಣು ಮುಚ್ಚಿದ್ದೇನೆ...

Tuesday, August 13, 2013

ಮರಣ

ಕನಸು
ಗಳನ್ನು ಹೆಣೆದು

ಕಾಲವನ್ನು ಹಿಂದಿಕ್ಕಿ

ವರ್ತಮಾನದ ಗಾಲಿಯಲ್ಲಿ

ಸುತ್ತುತ್ತಾ

ಮುಂದೆ ಸಾಗುವ

ಹೊತ್ತು


ಕತ್ತಲೆ
ಜೀವನದ ಹೊದಿಕೆಯಂತೆ

ನಮ್ಮ ಅನುಮತಿಗೆ ಕಾಯದೆ

ಬಂದು

ಮುಂದೆ ನಿಲ್ಲುವಾಗ


ಹೃದಯ
ನನ್ನಲ್ಲಿ ಮುನಿಸಿಕೊಂಡಿದೆ

ಎನ್ನುವ ಹಾಗೆ

ಬಡಿತ ನಿಲ್ಲಿಸಿದಾಗ


ಕಣ್ಣುಗಳು
ಬಣ್ಣಗಳನ್ನು ಧಿಕ್ಕರಿಸಿ

ಕತ್ತಲೆಯನ್ನೇ

ಬಯಸಿದಾಗ


ದೇಹ
ಮಣ್ಣನ್ನಪ್ಪಿ ಪವಡಿಸುವಾಗ

ಒಬ್ಬಂಟಿ

ಪ್ರಶಾಂತ ಗಳಿಗೆ...


ಯಾವುದೇ
ಭಾವನೆಗಳಿಲ್ಲದೆ

ಶೂನ್ಯ ಬಿಂದುವಿನಲ್ಲಿ

ನಾನು

ನಾನು ಮಾತ್ರವಾಗುತ್ತೇನೆ

Saturday, July 6, 2013

ಬದುಕಿನ ಕಹಿ ಸತ್ಯಗಳು


ಮನಸ್ಸಲ್ಲಿ ಎಂದೋ ಅದುಮಿಟ್ಟ ಭಾವನೆಗಳು

ಸ್ವಯಂ

ವಿಧಿಯ ಬರಹದಲ್ಲಿನ ಅಕ್ಷರಗಳಾಗಿ

ಹುಣ್ಣಿಮೆಗೊಮ್ಮೆ ಚಿಮ್ಮುವ ಕಡಲಿನ ಅಲೆಗಳಿಗೆ

ಸಿಕ್ಕಿ, ಮಾಸಿ ಹೋದಾಗ

ಸ್ವರ್ಗಸ್ಥ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದ

ಕೂಳಿಗಾಗಿ ಕಾದಾಡುವ ಕಾಗೆಗಳ

ಸ್ವಾರ್ಥತೆ ಅಣಕಿಸುತ್ತಿತ್ತು...



ಮುಂದೆ ಬಯಲ ದಾರಿಯಲಿ ಸಾಗಿದರೆ

ಕಿತ್ತೋಗಿರುವ ಚಪ್ಪಲಿ

ದುಸ್ಥಿತಿಯಲ್ಲಿರುವ ಬದುಕನ್ನು

ಪರಿಹಾಸ್ಯ ಮಾಡುತ್ತಾ

ದಾರಿ ಮಧ್ಯೆಯಿರುವ ಗಾಂಧಿ

ಪ್ರತಿಮೆಯನ್ನು ಆಲಂಗಿಸಿ ಬಿಕ್ಕಳಿಸಿದೆ



ಜೀವನದ ಪುಸ್ತಕದ

ಒಣಗಿದ ಹಾಳೆಗಳಲ್ಲಿ

ಅಂಧಕಾರ ವ್ಯಾಪಿಸಿದಾಗ

ಅಳುವುದನ್ನು ಮಾತ್ರ ಕಲಿಸಿದ ಜೀವ

'ಮರುಭೂಮಿಯ ಹೂ'

ವನ್ನು ನೋಡಿ ಸಂತಾಪ ಸೂಚಿಸಿ

ಇನ್ನರಳಲಿರುವ ಮೊಗ್ಗುಗಳಿಗೆ

ಶುಭಾಶಯ ಕೋರಿ ಮುಂದೆ ಸಾಗಿದೆ



ತಿರುಗುವ ಕಾಲ ಚಕ್ರವು

ದೂರವನ್ನು ಕ್ರಮಿಸುತ್ತಾ

ನೆನಪುಗಳನ್ನು ಗಾಳಿಯಲ್ಲಿ

ತೇಲಿಸಿ ಹಾರಿ ಹೋಗುವುದು



ಗೆದ್ದಲು ಹಿಡಿದ ನೆನಪುಗಳು

ಫಂಗಸ್ ಹಿಡಿದ ಕನಸುಗಳು

ಗೋರಿಯೊಳಗೆ ನಿದ್ರಿಸುತ್ತಿರೆ

ಗಿಳಿಗಳು, ಹೂಗಳೂ ನವ

ವಸಂತಕ್ಕಾಗಿ ಕಾದು ಕುಳಿತಿವೆ.


(ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಿತ)

Monday, June 24, 2013

ಮಾಯಾನಗರಿ

ಸುತ್ತಲೂ ಪಸರಿದ

ಈ ಗಾಳಿಯಲ್ಲಿ ಯಾವುದೋ

ಗಂಧವಿದೆ

ಮೈಗೆ ಪೂಸಿದ

ಸುಗಂಧ ದ್ರವ್ಯ,

ಬೆವರ ಹನಿಗಳ ನೋವಿನ

ವಾಸನೆ


ಯಾರೋ ಬಿಟ್ಟು ಹೋದ

ಚೀಲ, ಪೆಟ್ಟಿಗೆ, ಚಪ್ಪಲಿ,

ವಾಹನಗಳು ಇಲ್ಲಿ

ಹರಾಜಿಗಿವೆ ಎಂಬ ಬೋರ್ಡುಗಳು

ಮಾಯಾನಗರಿಯ ದುಃಖಗಳನ್ನು

ಗೀಚಿಟ್ಟ ಕಿರುಪತ್ರದಂತಿವೆ


ಭಗ್ನವಾದ ಕನಸುಗಳ ಚೂರು

ಗಳು ಒಂದಕ್ಕೊಂದು ಗುದ್ದಿ

ಸದ್ದು ಮಾಡುತ್ತಿವೆ

ಮುಷ್ಟಿ ಮಣ್ಣಲ್ಲೂ ಅವಿತಿದೆ

ಯಾರೋ ಸವೆದ ಹಾದಿಯ

ಹೆಜ್ಜೆ ಗುರುತು


ನಷ್ಟಗಳ ಲೆಕ್ಕ ಭರಿಸಲಾಗದೆ

ದುರಂತಗಳ ನಡುವೆ ಸಿಕ್ಕ

ಮಧ್ಯಂತರ

ಎಲ್ಲಿಂದಲೋ ಆರಂಭವಾಗುವುದು

ಇನ್ನೇನೋ ನಡೆಯಲಿದೆ

ಎಂದರಿಯುವ ಹಪಾಹಪಿಯಲ್ಲಿ

ಸಮಯ ದಾಟಿದೆ


ಈ ಜಂಜಾಟದ ನಡುವೆ

ಸಿಕ್ಕ ಒಂದಷ್ಟು ನಿಮಿಷ

ಮತ್ತೆ ಬದುಕು ಹಳಿಗೆ ಬಂದಂತೆ

ಆಸೆ ಹುಟ್ಟಿಸಿ

ಇನ್ನೊಂದು ಮಧ್ಯಂತರಕ್ಕೆ ಕಾಲಿಡುವಾಗ

ಕಾಡುವುದು ಅನಿಶ್ಚಿತತೆ!


ಬೀದಿ ನಾಯಿಗಳ ಓಡಾಟದ

ನಡುವೆ

ಹರೆಯದ ಹುಡುಗಿಯೊಬ್ಬಳು

ಹೂ ಮಾರುತ್ತಿದ್ದಾಳೆ


ಅವಳ ಜೀವನ ಲೆಕ್ಕಾಚಾರದಲ್ಲಿ

ಹೆಣೆಯುವ ಆ ಮೊಗ್ಗು

ನಲುಗಿ ಹೋಗಿದೆಯೆ?


ನಾನು ಬಯಸಿದ ಹೂವು

ಕಣ್ಣಿಗೆ ತಂಪು

ಬಿಸಿಯೇರಿದೆ ಮೈ


ಮತ್ತೊಮ್ಮೆ ಯೋಚಿಸಿದೆ

ಆ ತಂಪು

ನನ್ನನ್ನು ಬಿಸಿಯಾಗಿರಿಸಿತೆ?

Sunday, June 23, 2013

ಶಿಲ್ಪಿ


ಸ್ವಪ್ನ ಶಿಲ್ಪಿ ನಾನು

ಸುಂದರ ಶಿಲ್ಪಗಳನ್ನು

ಕೆತ್ತುವುದೇ ನನ್ನ ಕಸುಬು

ಕೈ ತುಂಬಾ ಕೆಲಸಗಳಿವೆ

ಸಂತೃಪ್ತಿಯೇ ನನ್ನ

ಆದಾಯ



ನನ್ನ ಶಿಲ್ಪ ಶಾಲೆಗೆ

ಬಂದಿದ್ದರು ಹಲವು ಜನ

ನನ್ನ ಕೆಲಸದ

ಹರುಕು ಗುಡಿಸಲಿಗೂ

ನಾನೆಲ್ಲಿದ್ದೇನೋ ಅಲ್ಲಿಗೆಲ್ಲಾ

ಬಂದಿದ್ದರು



ಎಲ್ಲರೂ ನನ್ನನ್ನು ಬಯಸಿದರು

ನನ್ನನ್ನು ಪ್ರೀತಿಸಿದರು

ಅವರವರಿಗೆ ಒಪ್ಪುವಂತೆ

ಸ್ವೇಚ್ಛೆಯಿಂದ



ನಾನು

ಸಾಕಷ್ಟು ಕನಸುಗಳನು

ಮೊಗೆ ಮೊಗೆದು ಕೊಟ್ಟೆ

ಕೊನೆಗೆ ಅವರು ಹೇಳಿದ್ದು...

ನಿನ್ನ ಮನಸ್ಸು

ಬರೀ ಕಲ್ಲು!



ಅದು ನಿಜ

ನನ್ನ ಮನಸ್ಸು ಕಲ್ಲೇ



ಬಯಸದೇ ಬಂದ ಪ್ರೀತಿಯಲ್ಲಿ

ಅದು ಮುಳುಗಿ ಹೋಗಿತ್ತು

ಆ ಕಲ್ಲಿನ ಮೇಲಿರುವ ಗುಳಿಗಳೂ

ಪ್ರೀತಿಯಿಂದಲೇ ತುಂಬಿದ್ದವು



ಪ್ರೀತಿಯ 'ಉಳಿ'ಯಲ್ಲಿ

ಕೆತ್ತುವ ಕೆಲಸ ಬಿರುಸಾಗಿ

ನಡೆದಾಗ

ಕಲ್ಲು ರೂಪಾಂತರಗೊಳ್ಳುತ್ತಿತ್ತು

ಇನ್ನೂ ಕೆತ್ತಿದರೆ

ಅದು

ಒಡೆದು ಹೋಗುತ್ತಿತ್ತೇನೋ!



ಅವರು ಹೇಳಿದ್ದೇ ನಿಜ

ನನ್ನ ಹೃದಯ ಕಲ್ಲಾಗಿತ್ತು



ಒಂದು ಚಿಕ್ಕ ಪೆಟ್ಟು ಸಾಕು

ಅದಿನ್ನು ಒಡೆದು ಹೋಗಲು

ಆದರೆ ಅವರಿಗೇನು ಗೊತ್ತಿತ್ತು

ಕಲ್ಲಿನ ಸ್ಥಿತಿ?

ಸುಂದರ ಶಿಲ್ಪಕ್ಕಾಗಿ

ಅವರು ಬಯಸಿದ್ದರಲ್ಲವೇ?



ಸಾಕು

ನಿಲ್ಲಿಸಿ....



ಹೇಳಬೇಡಿ ಇನ್ನೊಂದು

ಶಿಲ್ಪದ ರಚನೆಗೆ



ನಿಮ್ಮ ಸ್ವಪ್ನಗಳನ್ನು ಕೆತ್ತಿ

ಬೊಬ್ಬೆ ಎದ್ದಿರುವುದು

ನನ್ನ ಕೈಗಳಲ್ಲ...ಮನಸ್ಸಿನಲ್ಲಿ



ಯಾವುದೇ ಕನಸು

ಗಳಿಲ್ಲದ

ಮುಗ್ದ ಹೃದಯದಲ್ಲಿ...

Sunday, June 16, 2013

ಪಪ್ಪನೂ...ನನ್ನ ನಿದ್ದೆಯೂ


ಪಪ್ಪನ ಬಗ್ಗೆ ಏನು ಹೇಳುವಾಗಲೂ ನಾನು ಹಾಗೇನೇ...ನಾನ್ಸ್ಟಾಪ್...ಅವರ ಬಗ್ಗೆ ಹೇಳಿದಷ್ಟು ಮುಗಿಯುವುದಿಲ್ಲ. ಅಫ್ಕೋರ್ಸ್, ಅವರ ಬಗ್ಗೆ ಬರೆಯುವಾಗಲೂ ಅಷ್ಟೇ... ಕೀಲಿಮಣೆಯಲ್ಲಿ ಬೆರಳುಗಳು ಸರಾಗವಾಗಿ ಓಡುತ್ತವೆ. ಮೊನ್ನೆ ಗೆಳೆಯರೊಬ್ಬರು ಅವರ ಅಪ್ಪನ ಬಗ್ಗೆ ಬರೆದ ಲೇಖನದ ಲಿಂಕ್ ಕಳುಹಿಸಿ ಆ ಲೇಖನವನ್ನು ಅಮ್ಮನಿಗೆ ಓದೋಕೆ ಹೇಳಿದ್ದೆ. ಆ ಬ್ಲಾಗ್ ಬರಹದ ಬಗ್ಗೆ ಮಾತನಾಡುವಾಗ ನಿನ್ನ ಅಪ್ಪನ ಬಗ್ಗೆನೂ ಬರೀ ಅಂದಿದ್ರು ಅಮ್ಮ. ಈಗಾಗಲೇ ಅಪ್ಪನ ಬಗ್ಗೆ ಎರಡ್ಮೂರು ಬ್ಲಾಗ್ ಬರಹ ಬರೆದಾಗಿದೆ. ಇನ್ನೆಂಥದ್ದು ಬರೆಯುವುದು? ಎಂದು ಕೇಳಿದಾಗ ಅಮ್ಮ ಹೇಳಿದ್ದು..ಅಪ್ಪನ ನಿದ್ದೆ !

ಹೂಂ...ಅಪ್ಪನ ನಿದ್ದೆ ಬಗ್ಗೆ ಬರೆಯೋದೆ ತುಂಬಾ ಇಂಟರೆಸ್ಟಿಂಗ್. ಇತ್ತೀಚೆಗೆ ಅಂದ್ರೆ ನಿವೃತ್ತಿಯಾದ ನಂತರ ಮನೆಯಲ್ಲೇ ಕೂರುವ ಕಾರಣ ಅಪ್ಪ ಸಿಕ್ಕಾಪಟ್ಟೆ ನಿದ್ದೆ ಮಾಡ್ತಾರೆ. ಯಾವತ್ತು ನೋಡಿದರೂ ಅದೇ ಕೈರಳಿ, ಮನೋರಮ, ಏಷ್ಯಾನೆಟ್ ನ್ಯೂಸ್ ನೋಡ್ತಾ ಇರ್ತಾರೆ ಎಂದು ಅಮ್ಮ ಗೊಣಗುತ್ತಿದ್ದರೂ, ನ್ಯೂಸ್ ನೋಡ್ತಾ ನೋಡ್ತಾ ಅಪ್ಪ ನಿದ್ದೆ ಮಾಡಿಬಿಡುತ್ತಾರೆ. ಅದೇ ವೇಳೆ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ನ ಸೌಂಡ್ ಕೇಳಿದ್ರೆ, ಥಟ್ಟನೆ ಎಚ್ಚರ ಆಗುತ್ತೆ. ಮಾತ್ರವಲ್ಲ ಹಿತ್ತಲಿನ ಯಾವ ಮೂಲೆಯಲ್ಲಿ ತೆಂಗಿನಕಾಯಿ ಬಿದ್ರೂನೂ ಅಪ್ಪನಿಗೇ ಮೊದಲು ಗೊತ್ತಾಗೋದು. ಹೀಗೆ ವಾಹಿನಿಗಳು 5 ನಿಮಿಷಕ್ಕೊಮ್ಮೆ ಬ್ರೇಕಿಂಗ್ ನ್ಯೂಸ್ ಸದ್ದು ಮಾಡುತ್ತಿದ್ದರೆ, ಅಪ್ಪ ಅರೆ ನಿದ್ದೆಯಲ್ಲೇ ಸುದ್ದಿ ನೋಡುತ್ತಾರೆ.

ಅಂದಹಾಗೆ, ಸುದ್ದಿ ಬಗ್ಗೆ ಹೇಳುವಾಗಲೇ ನೆನಪಿಗೆ ಬಂದದ್ದು...ಚಿಕ್ಕಂದಿನಲ್ಲಿ ದಿನಪತ್ರಿಕೆಗಳ ಬಗ್ಗೆ ನನ್ನಲ್ಲಿ ಆಸಕ್ತಿ ಹುಟ್ಟಿಸಿದ್ದೇ ಅಪ್ಪ. ಮನೆಯಲ್ಲಿ ಕನ್ನಡ, ಇಂಗ್ಲಿಷ್, ಮಲಯಾಳಂ ಪತ್ರಿಕೆಗಳಂತೂ ಯಾವತ್ತೂ ಇರುತ್ತಿದ್ದವು. ಭಾನುವಾರದ ಪತ್ರಿಕೆಗಳಂತೂ ಯಾವತ್ತೂ ಮಿಸ್ ಆಗುತ್ತಿರಲಿಲ್ಲ. ಸಾಪ್ತಾಹಿಕದಲ್ಲಿ ಓದೋಕೆ ಸಾಕಷ್ಟು ಇರುತ್ತೆ ಎಂದು ಹೇಳಿ ಬೆಳಗ್ಗೆಯೇ ಪೇಟೆಗೆ ಹೋಗಿ ಪತ್ರಿಕೆ ಖರೀದಿಸುತ್ತಿದ್ದರು ಅಪ್ಪ. ಚಿಕ್ಕವಳಿರುವಾಗ ನನಗೆ ಮಲಯಾಳಂ ಓದೋಕೆ ಬರುತ್ತಿರಲಿಲ್ಲ. ಆವಾಗ ಅಪ್ಪನೇ ಮಲಯಾಳಂ ಪತ್ರಿಕೆಗಳನ್ನು ಓದಿ ಹೇಳುತ್ತಿದ್ದರು. ಸಂಜೆ ಹೊತ್ತು ನಮ್ಮ ಮನೆಯಲ್ಲಿ ಸುದ್ದಿವಾಚನವೇ ಜೋರಾಗಿ ಇರುತ್ತಿತ್ತು. ಟೀ ಕುಡಿಯುವ ಹೊತ್ತಲ್ಲಿ ಸುದ್ದಿ ಬಗ್ಗೆಯೇ ಚರ್ಚೆಯಾಗುತ್ತಿದ್ದು, ಅದೊಂದು ಪೇನಲ್ ಡಿಸ್ಕಶನ್ ತರಾನೇ ಇರುತ್ತಿತ್ತು.

ಹಾಂ...ನಾನು ಹೇಳೋಕೆ ಹೋಗಿದ್ದು ನಿದ್ದೆ ಬಗ್ಗೆ ತಾನೇ?.ಹೇಳ್ತೀನಿ ಕೇಳಿ... ಶಾಲಾ ಕಾಲೇಜು ದಿನಗಳಲ್ಲಿ ನಿದ್ರಾಪ್ರಿಯೆ ನಾನು. ಕ್ಲಾಸಿನಲ್ಲಿ ತೂಕಡಿಸುತ್ತಾ ಇದ್ದು, ಅದೆಷ್ಟೋ ಬಾರಿ ಟೀಚರ್ ಬಿಸಾಡಿದ ಚಾಕ್ ಪೀಸ್ಗಳು ನನ್ನ ನಿದ್ದೆಗೆ ಭಂಗ ತಂದಿವೆ. ಹಾಗಂತ ಸುಮ್ ಸುಮ್ನೆ ಏನೂ ನಿದ್ದೆ ಮಾಡಲ್ಲ.. ಪ್ರತಿಯೊಂದು ನಿದ್ದೆಯಲ್ಲೂ ಒಂದೊಂದು ಕನಸು. ಕಣ್ಣು ಮುಚ್ಚಿದರೆ ಸಾಕು ಕನಸು ಕಾಣುವ ಜೀವಿ ನಾನು. "ಕ್ಲಾಸಿನಲ್ಲಿ ನಿದ್ದೆ ಮಾಡುವವರು ಪುಣ್ಯವಂತರು ಅವರಿಗೆ ಅವರ ಕನಸುಗಳು ನಷ್ಟವಾಗುವುದಿಲ್ಲವಲ್ಲಾ" ಎಂದು ಕವಿ ಸಚ್ಚಿದಾನಂದನ್ ಹೇಳಿದ್ದು ನಮ್ಮಂಥವರನ್ನು ಉದ್ದೇಶಿಸಿಯೇ. ಹೋಗಲಿ ಬಿಡಿ, ಬೆಳಗ್ಗೆ ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿರುವ ಕಾರಣ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಆವಾಗೆಲ್ಲಾ ಪುಸ್ತಕಗಳನ್ನು ಓದುತ್ತಾ ಕೂರುತ್ತಿದ್ದೆ. ಆದರೆ ಪಠ್ಯಪುಸ್ತಕಗಳನ್ನು ಹಿಡಿದರೆ ಸಾಕು ಕ್ಷಣಮಾತ್ರಕ್ಕೆ ನಿದ್ರಾದೇವಿ ನನ್ನನ್ನು ಆವರಿಸಿಬಿಡುತ್ತಿದ್ದಳು. ಇನ್ನು ಪರೀಕ್ಷಾ ಸಮಯದಲ್ಲಂತೂ ಹೇಳುವುದೇ ಬೇಡ. ಕೊನೇಕ್ಷಣದಲ್ಲಿ ಪರೀಕ್ಷಾ ಸಿದ್ಧತೆ ನಡೆಸುವ ಸ್ವಭಾವ ನನ್ನದಾಗಿದ್ದರಿಂದ ಪರೀಕ್ಷೆ ಬಂತೆಂದರೆ ಚಡಪಡಿಕೆ. ಅದರೆಡೆಯಲ್ಲಿ ಹಾಳಾದ ನಿದ್ದೆ ಬೇರೆ. ಪರೀಕ್ಷೆಗೆ ಮುನ್ನಾದಿನವಂತೂ ವಿಪರೀತ ನಿದ್ದೆ. ಪುಸ್ತಕ ತೆರೆದಿಟ್ಟು ಅಲ್ಲೇ ನಿದ್ದೆ ಹೋದರೆ ಅಮ್ಮ ಬಂದು ಎಬ್ಬಿಸಿ ಮತ್ತೆ ಓದುವಂತೆ ಒತ್ತಾಯಿಸುತ್ತಿದ್ದರು. ಆದರೆ ಅಪ್ಪ ಹಾಗಲ್ಲ...ನಿನಗೆ ತುಂಬಾ ಸುಸ್ತಾಗಿದೆ.. ಹೋಗಿ ಮಲಗು..ಬೆಳಗ್ಗೆ 4 ಗಂಟೆಗೆ ಬೇಗ ಎದ್ದು ಓದುವಿಯಂತೆ ಎಂದು ಹೇಳಿ ಮಲಗಿಸುತ್ತಿದ್ದರು. ಆದರೆ ಬೆಳಗ್ಗೆ ಏಳುವಾಗ ಗಂಟೆ 7.30! ಸಮಯ ನೋಡಿ ಅಪ್ಪ ಯಾಕೆ ನನ್ನನ್ನು ಎಬ್ಬಿಸಿಲ್ಲ? ಎಂಬ ರಂಪಾಟ ಶುರು ಮಾಡುತ್ತಿದ್ದೆ. ಆವಾಗ ಅಪ್ಪ..ನೀನು ತುಂಬಾ ಗಾಢ ನಿದ್ದೆಯಲ್ಲಿದ್ದೆ..ಆ ನಿದ್ದೆಯಿಂದ ನಿನ್ನನ್ನು ಎಬ್ಬಿಸೋಕೆ ಮನಸು ಬರಲ್ಲ ಎನ್ನುತ್ತಿದ್ದರು. ನಾನು ಸ್ವಲ್ಪ ಆಕಳಿಸಿದರೆ ಸಾಕು..ನಿದ್ದೆ ಬರ್ತಿದೆಯಾ ಹೋಗಿ ಮಲಗು ಅಂತಿದ್ದರು. ಅಮ್ಮ ಮಧ್ಯಾಹ್ನ ಹೊತ್ತು ಹೆಣ್ಮಕ್ಕಳು ನಿದ್ದೆ ಮಾಡಬಾರದು ಎಂದು ಗದರಿಸುತ್ತಿದ್ದರೂ, ಪಾಪ..ಮಕ್ಕಳು ನಿದ್ದೆ ಬಂದಾಗ ನಿದ್ದೆ ಮಾಡ್ಬೇಕು, ಎಲ್ಲರಿಗೂ ಎಲ್ಲ ಸಮಯದಲ್ಲೂ ನಿದ್ದೆ ಬರುವುದಿಲ್ಲ ಎಂದು ಹೇಳುವ ಮೂಲಕ ಅಪ್ಪ ನಿದ್ದೆ ಬಗ್ಗೆ ತಮ್ಮ ವಾದ ಮಂಡಿಸುತ್ತಿದ್ದರು.

ನಾವು ಎಲ್ಲಿಗಾದರೂ ದೂರ ಯಾತ್ರೆ ಹೋದರೂ ಅಷ್ಟೇ..ಸುಸ್ತಾದರೆ ಪಪ್ಪನ ತೋಳಲ್ಲಿ ತಲೆಯಿಟ್ಟು ಮಲಗೋಕೆ ನನಗಿಷ್ಟ. ಮನೆಯಲ್ಲಿ ಅಪ್ಪ ಗೋಡೆಗೊರಗಿ ಕುಳಿತುಕೊಂಡರೆ ಸಾಕು, ಅಪ್ಪನ ಮಡಿಲಲ್ಲಿ ಸುಖ ನಿದ್ದೆ. ಆದ್ರೆ ಒಬ್ಬಳೇ ಯಾತ್ರೆ ಮಾಡುವಾಗ ಎಷ್ಟೇ ಸುಸ್ತಾಗಿರಲಿ, ಒಂಚೂರು ಕಣ್ಣುಮುಚ್ಚದೆ ಎಚ್ಚರದಿಂದಲೇ ಇರುವ ಜಾಯಮಾನ ನನ್ನದು. ದಿನಾ ಮನೆಗೆ ಫೋನ್ ಮಾಡಿದರೆ, ಅಮ್ಮ ಏನಾದರೂ ಬರೆದಿದ್ದೀಯಾ? ಏನೆಲ್ಲಾ ಓದಿದೆ ಎಂಬ ಪ್ರಶ್ನೆ ಕೇಳ್ತಾರೆ. ಆದ್ರೆ ಅಪ್ಪ ಹಾಗಲ್ಲ...ಪುಟ್ಟಾ... ಚೆನ್ನಾಗಿ ನಿದ್ದೆ ಮಾಡುತ್ತೀಯಾ? ಚೆನ್ನಾಗಿ ನಿದ್ದೆ ಮಾಡ್ಬೇಕು, ನಿದ್ದೆ ಬಿಟ್ಟು ಓದೋದು ಬರೆಯೋದು ಮಾಡ್ಬೇಡ...ಆರೋಗ್ಯ ಹಾಳಾಗುತ್ತೆ ಅಂತಾರೆ. ಬೆಂಗಳೂರಿನಿಂದ ಊರಿಗೆ ಹೋಗುವುದಾದರೆ ರಾತ್ರಿಯಿಡೀ ಪ್ರಯಾಣ ಮಾಡಿ ಬೆಳ್ಳಂಬೆಳಗ್ಗೆ ಮನೆಗೆ ತಲುಪುತ್ತೇನೆ. ಮನೆ ತಲುಪಿದ ಕೂಡಲೇ ಸ್ನಾನ ಮುಗಿಸಿ ಅಪ್ಪನ ಪಕ್ಕ ಹೋಗಿ ಮಲಗಿದರೆ, ಅದೆಂಥಾ ಗಾಢ ನಿದ್ರೆ! ಅಲ್ಲಿಯವರೆಗಿದ್ದ ಕೆಲಸದ ಒತ್ತಡ, ಪ್ರಯಾಣದ ಆಯಾಸವೆಲ್ಲಾ ಪಪ್ಪನ ತೋಳಲ್ಲಿ ತಲೆಯಿಟ್ಟು ಮಲಗಿದರೆ ಮಾಯವಾಗಿ ಬಿಡುತ್ತದೆ.

ಕಚೇರಿಯಲ್ಲಿ ನೈಟ್ಶಿಫ್ಟ್ ಮಾಡುವುದರಿಂದ ಬೆಳಗ್ಗಿನ ಹೊತ್ತು ನಿದ್ದೆ ಮಾಡುವುದು ಕೂಡಾ ಕಷ್ಟವಾಗಿದೆ. ಅದರಲ್ಲೂ ರೂಮ್ಮೇಟ್ಸ್ಗಳ ಗಲಾಟೆ, ಫೋನ್ ಮಾತುಕತೆ ಎಲ್ಲವನ್ನೂ ಸಹಿಸಿಕೊಂಡು ಅಸಮಯದಲ್ಲಿ ನಿದ್ದೆಗೆ ಜಾರಲು ಹರಸಾಹಸ ಪಡಬೇಕಾಗುತ್ತದೆ. ಇಲ್ಲಿಯವರೆಗೆ ಅಪ್ಪ ನಿದ್ದೆಯ ಬಗ್ಗೆ ಲೆಕ್ಚರ್ ಕೊಡುವಾಗ ನಕ್ಕು ತಮಾಷೆಯಾಗಿ ಪರಿಗಣಿಸುತ್ತಿದ್ದ ನನಗೆ ಇದೀಗ ನಿದ್ದೆ ಎಷ್ಟು ಅಮೂಲ್ಯ ಎಂಬುದು ಅರ್ಥವಾಗುತ್ತಿದ್ದೆ. ರಾತ್ರಿಪಾಳಿ ಮುಗಿಸಿ ಬೆಳಗ್ಗಿನ ಜಾವ 4 ಗಂಟೆಗೆ ಮನೆ ಸೇರಿದರೂ ಆಮೇಲೆ ನಿದ್ದೆ ಬರಬೇಕಾದರೆ ಅಷ್ಟೇ ಒದ್ದಾಡಬೇಕು. ಏತನ್ಮಧ್ಯೆ, ಭಾನುವಾರ ಲೇಟಾಗಿ ಹೋದರೆ ಅಂಗಡಿಯಲ್ಲಿ ಪೇಪರ್ ಖಾಲಿಯಾಗುತ್ತದೆ ಎಂದು 6 ಗಂಟೆಗೇ ಎದ್ದು ರೂಮಿನಿಂದ ಹೊರಬರುವಾಗ ಹಾಸ್ಟೆಲ್ನ ಹುಡುಗಿಯರೆಲ್ಲಾ ರಜಾ ದಿನದ ನಿದ್ದೆ ಎಂಜಾಯ್ ಮಾಡುತ್ತಿರುತ್ತಾರೆ. ಬೆಳಗ್ಗೆದ್ದು ಪೇಪರ್ ಓದಿ ಮುಗಿಸಿ, ಮನೆಗೆ ಫೋನ್ ಮಾಡಿದರೆ ನೀನ್ಯಾಕೆ ಇಷ್ಟು ಬೇಗ ಎದ್ದೆ? ಹೋಗಿ ತಿಂಡಿ ತಿಂದು ನಿದ್ದೆ ಮಾಡು ಅಂತಾರೆ ಅಪ್ಪ. ಫೋನ್ ಡಿಸ್ಕನೆಕ್ಟ್ ಮಾಡಿದ ಕೂಡಲೇ ನಾನು ನಿದ್ದೆಗೆ ಜಾರಿರುತ್ತೇನೆ ಎಂದು ಅಪ್ಪ ಅಂದುಕೊಂಡಿರುತ್ತಾರೆ. ಹಾಸ್ಟೆಲ್ನ ಗೌಜಿ ಗದ್ದಲಗಳ ನಡುವೆ ಚಡಪಡಿಸುತ್ತಾ ನಾನು ಕಣ್ಮುಚ್ಚಿ ನಿದ್ದೆಗಾಗಿ ಕಾಯುತ್ತಿರುತ್ತೇನೆ. ಅರೆಬರೆ ನಿದ್ದೆ ಮುಗಿಸಿ ಮತ್ತೆ ಸುದ್ದಿ ಮನೆ ಸೇರಿದರೆ ಮತ್ತೆ ಕೆಲಸ ಮುಗಿಯುವವರೆಗೆ ನಿದ್ದೆ ನನ್ನ ಪಕ್ಕ ಸುಳಿಯುವುದೇ ಇಲ್ಲ. ಅಲ್ಲಿ... ಮನೆಯಲ್ಲಿ ಅಪ್ಪ ಸುದ್ದಿ ನೋಡುತ್ತಾ ತೂಕಡಿಸುತ್ತಿರುತ್ತಾರೆ.

ಇವತ್ತು ಅಪ್ಪಂದಿರ ದಿನ ಅಲ್ವಾ...ಆದ್ದರಿಂದ ಅಪ್ಪನ ಬಗ್ಗೆ ಇಷ್ಟೆಲ್ಲಾ ಬರೆಯಬೇಕಾಗಿ ಬಂತು ನೋಡ್ರಿ...

ಹ್ಯಾಪಿ ಫಾದರ್ಸ್ ಡೇ...

ಫೋಟೋ ಕೃಪೆ: ಅಂತರ್ಜಾಲ ಚಿತ್ರ

Monday, January 14, 2013

ಮದರಂಗಿ ಪುರಾಣ


ಕೈಗಳಿಗೆ ಮದರಂಗಿ ಹಚ್ಚಿ ಸಿಂಗರಿಸುವುದು ಯಾರಿಗೆ ಇಷ್ಟ ಇಲ್ಲ ಹೇಳಿ? ಚಿಕ್ಕಂದಿನಿಂದಲೂ ನನಗೆ ಕೈ ಕಾಲಲ್ಲಿ ಮದರಂಗಿ ಚಿತ್ತಾರ ಬಿಡಿಸುವುದೆಂದರೆ ತುಂಬಾ ಇಷ್ಟ. ಕೃಷ್ಣವರ್ಣವಾಗಿರುವುದರಿಂದ ನನ್ನ ಕಾಲಲ್ಲ ಕೆಂಪು ಬಣ್ಣ ಎದ್ದು ಕಾಣುತ್ತಿರಲಿಲ್ಲ...ಆದ್ರೆ ಅಂಗೈ ತುಂಬಾ ಕೆಂಪು ಕೆಂಪು ಚಿತ್ತಾರ. ಅದೂ ಎರಡೂ ಕೈಗೆ. ಎರಡೂ ಕೈಗಳಿಗೆ ಮದರಂಗಿ ಹಚ್ಚಿದ್ದನ್ನು ನೋಡಿ ಗೆಳತಿಯರು ನೀನೇನು ಮದುಮಗಳಾ? ಎಂದು ಕೇಳಿದರೆ ಐ ಡೋಂಟ್ ಕೇರ್. ಮದರಂಗಿಯ ಕೆಂಪು, ಕಂಪು ನನಗೆ ಖುಷಿ ಕೊಡುತ್ತದೆ ಎಂದಾದರೆ ನಾನ್ಯಾಕೆ ಇಂಥಾ ಪ್ರಶ್ನೆಗಳಿಗೆ ತಲೆ ಕೆಡಿಸಿಕೊಳ್ಳಲಿ? ಜನ್ಮಾಷ್ಟಮಿ ಬಂದರಂತೂ ಕೈಯಲ್ಲಿ ಮೆಹಂದಿ ಇರಲೇ ಬೇಕು. ಇನ್ನು ಸಂಬಂಧಿಕರ ಮದುವೆ ಹೋಗುವಾಗ ಕೈಯಲ್ಲಿ ಮದರಂಗಿ ಇಲ್ಲದೇ ಇದ್ದರೆ ಹೇಗೆ? ಏನಿದ್ದರೂ ಮೆಹಂದಿ ಹಚ್ಚಿಕೊಳ್ಳುವ ಸಂಭ್ರಮ, ಆ ಚಿತ್ತಾರದ ಸೊಬಗನ್ನು ನೋಡಿ ಆಸ್ವಾದಿಸುವ ಪರಿ ಇದೆಲ್ಲವೂ ಪದಗಳಿಗೆ ನಿಲುಕದ್ದು..

ಈಗಿನ ಜಮಾನದ ಮಕ್ಕಳಂತೆ ನಾವು ಚಿಕ್ಕವರಿರುವಾಗ ಮೆಹಂದಿ cone ಬಳಸುತ್ತಲೇ ಇರಲಿಲ್ಲ. ಮನೆಯ ಮುಂದೆ ಮದರಂಗಿ ಗಿಡ ಇತ್ತು. ಅದರ ಎಲೆ ಕೊಯ್ದು...ನುಣ್ಣನೆ ಅರೆದು ಅದಕ್ಕೆ ಅಳೆದು ತೂಗಿ ನೀರು ಹಾಕಿ ಕೈಗೆ ಮೆತ್ತುತ್ತಿದ್ದೆವು. ಮದರಂಗಿ ಕೆಂಪಾಗಲಿ ಎಂದು ಅದಕ್ಕೆ ಚಹಾ Decoction ಹಾಕ್ತಿದ್ದೆವು. ಇಲ್ಲದೇ ಇದ್ದಲ್ಲಿ ಮೆಹಂದಿ ಒಣಗುತ್ತಿದ್ದಂತೆ ಸಕ್ಕರೆ ನೀರು ಇಲ್ಲವೇ ಲಿಂಬೆ ಹುಳಿ ಹಿಂಡುತ್ತಿದ್ದೆವು. ಅಕ್ಕ ಹಾಸ್ಟೆಲ್್ನಲ್ಲಿದ್ದ ಕಾರಣ ನನ್ನ ಕೈಗೆ ಮದರಂಗಿ ಹಚ್ಚುತ್ತಿದ್ದುದ್ದು ಅಮ್ಮನೇ. ಸಂಜೆ ಹೊತ್ತು ಮದರಂಗಿಯನ್ನು ಅರೆದು ತೆಂಗಿನ ಗೆರಟೆಯಲ್ಲಿರಿಸುತ್ತಿದ್ದರು ಅಮ್ಮ. ನಾನಂತೂ ಅದನ್ನು ಹತ್ತಾರು ಬಾರಿ ಹೋಗಿ ನೋಡಿ ಗೆರಟೆ ಕೆಂಪಾಗಿದೆಯೋ ಎಂದು ಪರೀಕ್ಷಿಸುತ್ತಿದ್ದೆ. ರಾತ್ರಿ ಊಟ ಮಾಡಿದ ಮೇಲೆ ಮದರಂಗಿ ಹಾಕ್ತೀನಿ ಅಂತಾ ಅಮ್ಮ...ನಮ್ಮ ಊಟ ಮುಗಿದ ಮೇಲೆ ಅಮ್ಮ ಅಡುಗೆಮನೆಯ ಕೆಲಸ ಮುಗಿಸಿ ಬಂದಳೆಂದರೆ ಖುಷಿಯೋ ಖುಷಿ. ಅಮ್ಮನ ಮಡಿಲಲ್ಲಿ ಅಂಗೈಯನ್ನಿಟ್ಟು ಕುಳಿತರೆ, ಅಮ್ಮ ಅಂಗೈಯಲ್ಲೆಲ್ಲಾ ಚಿಕ್ಕ ಚಿಕ್ಕ ಚುಕ್ಕಿಯನ್ನಿಡುತ್ತಿದ್ದರು. ಕೈ ಅಲ್ಲಾಡಿಸಿದರೆ ದೊಡ್ಡ ಚುಕ್ಕಿಯಾಗಿ ಬಿಡುತ್ತಿತ್ತು. ಮದರಂಗಿ ಚೆಂದ ಕಾಣಬೇಕೆಂಬ ಆಸೆಯಿಂದ ನಿದ್ದೆ ಬಂದರೂ ಅದನ್ನು ಹಿಡಿದಿಟ್ಟು ಕೈ ಅಲುಗಾಡಿಸದೆ ಕೂತಿರುತ್ತಿದ್ದೆ.

ನನಗೆ ಒಂದು ಕೈಗೆ ಮದರಂಗಿ ಇಟ್ಟರೆ ಸಾಲದು ಇನ್ನೊಂದು ಕೈಗೂ ಇಡಬೇಕಾಲ್ವಾ? ಇನ್ನೊಂದು ಕೈಯಲ್ಲಿ ಬೇರೆ ಡಿಸೈನ್..ಅದೇನು ಗೊತ್ತಾ? ಅಂಗೈ ಮಧ್ಯೆ ಒಂದು ದೊಡ್ಡ ಬೊಟ್ಟು. ಅದರ ಸುತ್ತಲೂ ನಾಲ್ಕು ಚಿಕ್ಕ ಬೊಟ್ಟು..ಬೆರಳಿನುದ್ದಕ್ಕೂ ಒಂದು ಗೆರೆ ಎಳೆದು ಅದಕ್ಕೆ ಹತ್ತಾರು ಕವಲುಗಳು...ಬೆರಳ ತುದಿಗೆ ಸ್ವಲ್ಪ ಮದರಂಗಿ ಮೆತ್ತಿದರೆ ಮುಗೀತು. ಇನ್ನೂ ಸ್ಲಲ್ಪ ದೊಡ್ಡವಳಾದ ಕೂಡಲೇ ಅಮ್ಮ ಇಡುತ್ತಿದ್ದ ಡಿಸೈನ್ "ಡಬ್ಬಾ" ಅಂತಾ ಅನಿಸಿ ಬಿಡ್ತು. ಆವಾಗ ಶುರುವಾಯ್ತು ನೋಡಿ ಹುಡುಕಾಟ. ಅದೇ ಮನೆಯ ಮುಂದಿನ ತೋಡಿನ ಬದಿಯಲ್ಲಿ ಬೆಳೆಯುವ ಯಾವುದೋ ಡಿಸೈನ್್ನಂತೆ ಕಾಣುವ ಎಲೆಯನ್ನು ತಂದು ಅಂಗೈ ಮೇಲಿಟ್ಟು ಅದರ ಮೇಲೆ ಮದರಂಗಿ ಸುರಿದದ್ದಾಯ್ತು. ಸ್ವಲ್ಪ ಹೊತ್ತು ಕಳೆದ ಮೇಲೆ ನೋಡಿದರೆ ಕೈಯೆಲ್ಲಾ ಕೆಂಪಾಯಿತೇ ವಿನಾ ಡಿಸೈನ್ ಬಂದಿರಲಿಲ್ಲ. ಹೋಗಲಿ ಬಿಡಿ ಇನ್ನೇನು ಮಾಡುವುದು ಎಂದು ಕೈಯಲ್ಲಿನ ಮದರಂಗಿ ಹೋಗಲು ಬಟ್ಟೆ ಒಗೆಯುವ ಕಲ್ಲಿಗೆ ಉಜ್ಜಿದ್ದೂ ಆಯ್ತು. ಇಷ್ಟೆಲ್ಲಾ ಆದ್ರೂ ಡಿಸೈನ್ ಬಿಡಿಸಬೇಕೆಂಬ ಹಠ ಮಾತ್ರ ಕಡಿಮೆಯಾಗಿರಲಿಲ್ಲ. ನನ್ನ ಗೆಳತಿಯರ ಕೈಯಲ್ಲಿ ವಿಧವಿಧದ ಡಿಸೈನ್ ಅದೂ ಮುಸ್ಲಿಂ ಮಕ್ಕಳ ಕೈಯಲ್ಲಿ ಡಿಸೈನ್ ನೋಡುವಾಗ ಆಸೆಯಾಗುತ್ತಿತ್ತು. ನನ್ನ ಕಾಟ ತಡೆಯಲಾರದೆ ಅಮ್ಮ ಒಂದು ದಿನ ಪ್ರಯೋಗ ಮಾಡಲು ಮುಂದಾದರು. ಆವಾಗ ನಾನು 3 ನೇ ಕ್ಲಾಸಿನಲ್ಲಿದ್ದೆ. ಅದೇನು ಗೊತ್ತಾ...ಹಲಸಿನ ಕಾಯಿಯ ಅಂಟು (ಒಣಗಿರುವುದು) ಅದನ್ನು ಸ್ವಲ್ಪ ಬಿಸಿ ಮಾಡಿ ಕೈಗೆ ಹನಿ ಹನಿಯಾಗಿ ಸುರಿದಿದ್ದರು. ಕಾದ ಅಂಟು ಕೈಗೆ ಬಿದ್ದು ಜುಂ ಅನಿಸಿದ್ದರೂ ಚೆನ್ನಾಗಿ ಡಿಸೈನ್ ಮೂಡುತ್ತದಲ್ವಾ ಎಂಬ ಆಸೆ. ಹಾಗೆ ಅಂಟಿನಲ್ಲಿ ಚಿಕ್ಕ ಚಿಕ್ಕ ಬೊಟ್ಟು ಇಟ್ಟು ಅದರ ಮೇಲೆ ಮದರಂಗಿ ಮೆತ್ತಿದರು ಅಮ್ಮ. ಅಂಟು ಇದ್ದ ಜಾಗ ಖಾಲಿ ಖಾಲಿಯಾಗಿದ್ದು ಬಾಕಿ ಜಾಗದಲ್ಲಿ ಕೆಂಪಾದ ಮದರಂಗಿ ಗೋಚರಿಸಿದರೆ ಅದೂ ಒಂದು ಡಿಸೈನ್!. ಆದರೇನು ಮಾಡುವುದು ಆ ಅಂಟು ಒಣಗಿ ಕೈಯಿಂದ ಎದ್ದು ಹೋಗಿ ಡಿಸೈನ್್ನ್ನು ಮದರಂಗಿ ನುಂಗಿತ್ತು. ಅಮ್ಮ ಈ ಪ್ರಯೋಗದ ನಂತರ ಇನ್ನೊಂದು ಪ್ರಯೋಗ ಮಾಡಿದರು. ಅದೇನೆಂದರೆ ಸುಣ್ಣದಲ್ಲಿ ಚಿಕ್ಕ ಚಿಕ್ಕ ಚುಕ್ಕಿಗಳನ್ನಿಟ್ಟು ಅದು ಒಣಗಿದ ಮೇಲೆ ಅದರ ಮೇಲೆ ಮದರಂಗಿ ಮೆತ್ತುವುದು. ಕೊನೆಗೂ ಇದು ಸ್ಲಲ್ಪ ವರ್ಕೌಟ್ ಆಯ್ತು. ಅಂತೂ ಅಮ್ಮ ನನ್ನ ಕೈಯಲ್ಲಿ ಹೊಸತೊಂದು ಡಿಸೈನ್ ಮಾಡಿಯೇ ಬಿಟ್ಟರು.

ಇನ್ನೂ ಸ್ವಲ್ಪ ದೊಡ್ಡವಳಾದ ಮೇಲೆ ಅಪ್ಪ ಪ್ಲಾಸ್ಟಿಕ್ ಡಿಸೈನ್ ತಂದು ಕೊಟ್ಟರು. ಆ ಡಿಸೈನ್ ತುಂಬಾ ದೊಡ್ಡದಾಗಿದ್ದುದರಿಂದ ನನ್ನ ಪುಟ್ಟ ಅಂಗೈಯಲ್ಲಿ ಸರಿಯಾಗಿ ಮೂಡುತ್ತಲೇ ಇರಲಿಲ್ಲ. ಹೈಸ್ಕೂಲ್್ಗೆ ಕಾಲಿಟ್ಟ ಮೇಲೆ ಮನೆಯಲ್ಲೇ ಅರೆದು ಮದರಂಗಿ ಇಡುವುದನ್ನು ಬಿಟ್ಟು cone ತೆಗೆದುಕೊಳ್ಳ ತೊಡಗಿದೆ. ಯಾವುದೇ ಹಬ್ಬ ಇರಲಿ, ವಿಶೇಷ ದಿನವಿರಲಿ ನನ್ನ ಕೈಯಲ್ಲಿ ಮದರಂಗಿ ರಾರಾಜಿಸುತ್ತಿತ್ತು. ಆವಾಗ ಡಿಸೈನ್ ಅಂದರೆ ಯಾವುದೋ ಒಂದು ಹೂವಿನ ಚಿತ್ರ..ಇಲ್ಲದೇ ಇದ್ದರೆ ಇಂಗ್ಲಿಷ್್ನಲ್ಲಿ ಆರ್ ಮತ್ತು ಎಸ್ (ಸಚಿನ್ ತೆಂಡೂಲ್ಕರ್ ಮೇಲಿನ ಪ್ರೀತಿಯಿಂದ) ಎಂದು ಬರೆಯುವುದು. ಕಾಲೇಜಿಗೆ ತಲುಪಿದಾಗ ಕೈಯಲ್ಲಿ ಹಾರ್ಟ್ (ಲವ್) ಚಿಹ್ನೆ. ಯಾರಿಗೂ ಗೊತ್ತಾಗದಂತೆ ಡಿಸೈನ್ ಮಧ್ಯೆ ಆವಾಗಿದ್ದ ಕ್ರಷ್್ನ ಮೊದಲಕ್ಷರ ಮೂಡುತ್ತಿತ್ತು. ಕಾಲೇಜಿನ ಗೆಳತಿಯರಲ್ಲಿ ಹೆಚ್ಚಿನವರಿಗೆ ಮೆಹಂದಿ ಡಿಸೈನ್ ಚೆನ್ನಾಗಿ ಗೊತ್ತಿತ್ತು, ಕೆಲವೊಮ್ಮೆ ಅವರೂ ನನ್ನ ಕೈಯಲ್ಲಿ ಡಿಸೈನ್ ಬಿಡಿಸುತ್ತಿದ್ದರು. ಹೀಗೆ ಅರೇಬಿಕ್, ಪರ್ಷಿಯನ್, ಇನ್ನೂ ಮತ್ತೇನೋ ಎಲ್ಲವೂ ನನ್ನ ಕೈಯಲ್ಲಿ ಇರುತ್ತಿತ್ತು. ಕಾಲೇಜು ಮುಗಿಸಿ ವೃತ್ತಿ ಜೀವನ ಆರಂಭಿಸಿದ ನಂತರ ಮೆಹಂದಿ ಹುಚ್ಚಿಗೆ ಸ್ವಲ್ಪ ಬ್ರೇಕ್ ಬಿತ್ತು. ಕೆಲಸ ನಿಮಿತ್ತ ದೂರದೂರಲ್ಲಿ ಪಿಜಿಯಲ್ಲಿರಬೇಕಾದ ಪರಿಸ್ಥಿತಿ. ಅಲ್ಲಿ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕಲ್ವಾ? ಮೆಹಂದಿ ಇಟ್ಟು ಕುಳಿತುಕೊಂಡರೆ ತಿನಿಸುವ, ಹಾಸಿಗೆ ಹಾಸಿಕೊಡುವ ಅಮ್ಮ ಅಲ್ಲಿಲ್ವಲ್ಲಾ? ಇನ್ನೊಂದು ಕೈಗೆ ಮೆಹಂದಿ ಹಚ್ಚಿದ ಕೂಡಲೇ ತಲೆ ತುರಿಕೆ ಇಲ್ಲದಿದ್ದರೆ ಬೆನ್ನು ತುರಿಕೆ ಆರಂಭವಾಗುತ್ತದೆ. ಆವಾಗೇನು ಮಾಡಲಿ? ಆ ಹೊತ್ತಲ್ಲೇ ಫೋನ್ ಬಂದರೆ? ಅದೂ ಕಷ್ಟವೇ...

ನನ್ನ ಅಮ್ಮನಿಗೆ ಡಿಸೈನ್ ಮಾಡೋಕೆ ಬರಲ್ಲ ಎಂದು ಮೊದಲೇ ಹೇಳಿದ್ದೆನಲ್ಲಾ..ಅದಕ್ಕೆ ನಾನೇ ಡಿಸೈನ್ ಬಿಡಿಸಲು ಪ್ರಯತ್ನವನ್ನೂ ಮಾಡಿದ್ದೇನೆ. ಅದೂ ನನ್ನ ಅಪ್ಪನ ಕೈಯಲ್ಲಿ. ರಾತ್ರಿ ವೇಳೆ ಅಪ್ಪ ಸುಮ್ಮನೆ ಕುಳಿತಿರುತ್ತಾರಲ್ಲಾ ಎಂಬ ಕಾರಣದಿಂದ ಅಪ್ಪನ ಕೈಯಲ್ಲಿ ಚಿತ್ತಾರ ಬಿಡಿಸುತ್ತಿದ್ದೆ. ಅದು ಕೆಟ್ಟದಾಗಿದ್ದರೂ ಅಪ್ಪ ಏನೂ ಅನ್ನುತ್ತಿರಲಿಲ್ಲ. ಅಪ್ಪನ ಮಗಳು ನಾನು, ಅದಕ್ಕೆ ಚಿಕ್ಕಂದಿನಲ್ಲಿ ಅಪ್ಪನ ಜತೆಗೇ ಮಲಗುತ್ತಿದ್ದೆ. ಮದರಂಗಿ ಕೈಗಿಟ್ಟು ಮಲಗಿದರೆ ಬೆಳಗೆದ್ದಾಗ ಅಪ್ಪನ ಮುಖ, ಎದೆಯಲ್ಲೆಲ್ಲಾ ಮದರಂಗಿ. ಕೈ ಅಲುಗಾಡಿಸದೆ ಮಲಗಬೇಕು ಎಂದು ಅಮ್ಮ ತಾಕೀತು ಮಾಡಿದ್ದರೂ, ರಾತ್ರಿ ನಿದ್ದೆಯಲ್ಲಿ ಅಪ್ಪನ ಎದೆಗೊರಗಿಯೇ ನಿದ್ದೆ ಮಾಡುವ ಬುದ್ದಿ ನನ್ನದು. ಹೀಗಿರುವಾಗ ಅಪ್ಪನಿಗೂ ಮದರಂಗಿಯ ಕೆಂಪು ತಾಗದೇ ಇರುತ್ತದೆಯೇ?

ಈಗಲೂ ನನಗೆ ಯಾವುದಾದರೂ ಹಬ್ಬ ಬಂದರೆ ಮದರಂಗಿ ಹಚ್ಚಿಕೊಂಡು ಸಿಂಗಾರ ಮಾಡಬೇಕೆಂಬ ತುಡಿತವಿರುತ್ತದೆ. ಕೆಲವೊಮ್ಮೆ ಇದು ಸಾಧ್ಯವಾಗುವುದೂ ಇಲ್ಲ. ಮೊನ್ನೆ ಹೊಸ ವರುಷಕ್ಕೆ ನನ್ನ ರೂಂಮೇಟ್ ನನ್ನ ಕೈಯಲ್ಲಿ ಮದರಂಗಿ ಡಿಸೈನ್ ಬಿಡಿಸಿದ್ಳು...ನನಗೆ ಡಿಸೈನ್ ಬರಲ್ಲ ಕಣೇ ಎಂದು ಅವಳು ಹೇಳಿದರೂ ಪರ್ವಾಗಿಲ್ಲ..ಅದೊಂದು ಹೊಸ ಡಿಸೈನ್ ಆಗಬಹುದು ಎಂದು ಎರಡೂ ಕೈಗಳಲ್ಲಿ ಡಿಸೈನ್ ಮಾಡಿಸಿದ್ದೆ. ನಿಜವಾಗಿಯೂ ಅದೊಂದು ಹೊಸ ಡಿಸೈನ್ ಆಗಿತ್ತು...ಸಾದಾ ಡಿಸೈನ್ ಎಂದು ಅನಿಸಿದರೂ ಅದರಲ್ಲಿ ಗೆಳತಿಯ ಪ್ರೀತಿಯಿತ್ತು. ಈ ಡಿಸೈನ್್ನಲ್ಲೂ ಪುಟ್ಟದಾದ ಲವ್ ಸಿಂಬಲ್್ನ್ನು ಹಾಕಲು ನಾನು ಮರೆತಿಲ್ಲ. ಇವತ್ತು ಕೈಯಲ್ಲಿನ ಮದರಂಗಿ ಮಾಸಿ ಹೋಗುತ್ತಿದ್ದುದನ್ನು ನೋಡಿ ಇದೆಲ್ಲಾ ನೆನಪಾಯ್ತು...
ಚಿತ್ರ -ಸಾಂದರ್ಭಿಕ ಚಿತ್ರ