Friday, April 22, 2011

'ಎಂಡೋ ನಿಷೇಧಿಸಿ' - ಶರದ್ ಪವಾರ್ ಗೊಂದು ಬಹಿರಂಗ ಪತ್ರ

ಶರದ್ ಪವಾರ್ ಜೀ,
ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದಷ್ಟು ಹೊತ್ತು ವಿರಾಮ ಸಿಕ್ಕರೆ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಒಮ್ಮೆ ದೃಷ್ಟಿ ಹಾಯಿಸಿ. ಕೇರಳದ ಪುಟ್ಟ ಜಿಲ್ಲೆಯಾದ ಕಾಸರಗೋಡಿನ ಎಣ್ಮಕಜೆ, ಬೋವಿಕ್ಕಾನ, ಪೆರ್ಲ, ಪೆರಿಯ ಮೊದಲಾದ ಊರುಗಳಲ್ಲಿ ಎಂಡೋಸಲ್ಫಾನ್ ಎಂಬ ವಿಷದಿಂದಾಗಿ ಪ್ರಾಣ ಕಳೆದುಕೊಂಡವರೆಷ್ಟು ಮಂದಿ? ಇನ್ನೂ ಜೀವಂತ ಶವವಾಗಿರುವವರು, ಅಂಗವೈಕಲ್ಯತೆಯಿಂದು ಬಳಲುತ್ತಿರುವ ಮಕ್ಕಳು ...ಇಲ್ಲೊಂದು ನರಕವಿದೆ. ಸಂಕಷ್ಟಕ್ಕೆ ಸಿಲುಕಿರುವ ಈ ಜನರ ಕೂಗು ನಿಮಗೆ ಕೇಳಿಸುತ್ತಿಲ್ಲವೇ?

ಗೇರುಬೀಜದ ಮರಗಳಿಗೆ ಈ ವಿಷವನ್ನು ಸಿಂಪಡಿಸಿ ಜನರ ಬಾಳನ್ನು ನರಕವಾಗಿಸಿದ ಪ್ಲಾಂಟೇಷನ್ ಕಾರ್ಪರೇಷನ್ ಇದೀಗ ಮೌನ ವಹಿಸಿರುವುದು ಎಷ್ಟು ಸರಿ?. ಕಾಸರಗೋಡಿನ 11 ಪಂಚಾಯತುಗಳ ಜನರು ಎರಡು ದಶಕಗಳಿಂದ ಎಂಡೋ ಪೀಡೆಗೆ ಬಲಿಯಾಗುತ್ತಾ ಬಂದಿರುವುದು ನಿಮಗೆ ಕಾಣಿಸುವುದಿಲ್ಲವೇ? ಎಂಡೋ ಪೀಡಿತರ ಸಂಕಷ್ಟಗಳ ಬಗ್ಗೆ ದಿನ ನಿತ್ಯವೂ ಒಂದಲ್ಲ ಒಂದು ಸುದ್ದಿ ವರದಿಯಾಗುತ್ತಲೇ ಇದ್ದರೂ ನೀವು ಕಿವಿ, ಕಣ್ಣು ಮುಚ್ಚಿ ಕುಳಿದ್ದೀರಾ? 'ಎಂಡೋ' ವಿಷ ಎಂದು ಇಷ್ಟರವರೆಗೆ ಪ್ರೂವ್ ಆಗಿಲ್ಲ ಆದ್ದರಿಂದ ಎಂಡೋ ನಿಷೇಧ ಯಾಕೆ ಅಂತಾ ಕೇಳ್ತಿದ್ದೀರಲ್ಲಾ? ಎಂಡೋ ಪೀಡಿತ ಪ್ರದೇಶಗಳಿಗೊಮ್ಮೆ ಭೇಟಿ ನೀಡಿ ನೋಡಿ. ಈ ಜನರ ಸಂಕಷ್ಟಕ್ಕೆ ನಿಮ್ಮ ಮನ ಮರುಗದೇ ಇದ್ದರೆ ನಿಮ್ಮದು 'ಕಲ್ಲು ಹೃದಯ' ಅಂತಾ ಅಂದುಕೊಳ್ಳುತ್ತೀನಿ.

ಪ್ರಸ್ತುತ ಪ್ರದೇಶದಲ್ಲಿನ ಅಮ್ಮಂದಿರ ಬವಣೆ ನಿಮಗೆ ಗೊತ್ತೇನು? ಇಲ್ಲಿನ ಮಕ್ಕಳಿಗೆ ಬುದ್ಧಿ ಮಾಂದ್ಯತೆ, ಅಂಗವೈಕಲ್ಯತೆ, ಇದ್ದ ಬದ್ದ ಸರ್ವರೋಗಗಳೂ ಇವೆ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಕೂಲಿನಾಲಿ ಮಾಡಿ ಜೀವಿಸುವ ಅಪ್ಪ ಅಮ್ಮ ಮನೆಯಲ್ಲೇ ಕೂರುತ್ತಾರೆ. ಮಕ್ಕಳ ಭವಿಷ್ಯ ಚಿವುಟಿ ಹೋಗಿದೆ. ಇಂತಹಾ ಅಂಗ ವೈಕಲ್ಯತೆಯಿರುವ ಮಕ್ಕಳ ಕಷ್ಟದ ಬದುಕನ್ನು ನೋಡಿ ಕೊರಗುವ ಬದಲು ಮಕ್ಕಳೇ ಬೇಡ ಎಂಬ ನಿರ್ಧಾರವನ್ನು ಈ ಅಮ್ಮಂದಿರು ಕೈಗೊಂಡಿದ್ದಾರೆ. ತನ್ನ ಗರ್ಭದಲ್ಲಿರುವ ಶಿಶುವಿಗೆ ವೈಕಲ್ಯತೆಯಿದೆ ಎಂದು ತಿಳಿದ ಕೂಡಲೇ ಅಬಾರ್ಶನ್ ಮಾಡಿಸುವ ಅಮ್ಮಂದಿರ ನೋವು ಕೇಳುವವರಾರು? ನಾಳಿನ ಭವಿಷ್ಯವೇ ಇಲ್ಲದಂತೆ ಮಾಡಿದ 'ಎಂಡೋ' ಪೀಡೆಯಿಂದ ಈ ಕುಟುಂಬಗಳಿಗೆ ಮುಕ್ತಿಯಿಲ್ಲವೇ? ಸಾವು ನೋವುಗಳಿಂದ ಕಂಗೆಟ್ಟ ಈ ಜನತೆಗೆ ಸಾಂತ್ವನ ಹೇಳುವವರು ಯಾರು? ಈ ಮೊದಲು ಗೇರು ಬೀಜದ ಮರಗಳಿದ್ದ ಪ್ರದೇಶಗಳಲ್ಲಿ ಅದನ್ನು ಕಡಿದು ರಬ್ಬರ್ ಕೃಷಿ ಆರಂಭಿಸಿದ ಪ್ಲಾಂಟೇಷನ್ ಕಾರ್ಪರೇಶನ್್ನ ಕೆಟ್ಟ ಚಿಂತನೆಗೆ ಏನೆನ್ನಬೇಕೋ ತಿಳಿಯದಾಗಿದೆ. ಸಮಸ್ತ ಜನತೆ ಎಂಡೋಸಲ್ಫಾನ್ ನಿಷೇಧಿಸಿ ಎಂದು ಕೂಗುತ್ತಿದ್ದರೂ ಅದನ್ನು ಕೇಳದಂತೆ ನಟಿಸುವ ನೀವೊಬ್ಬ ಮನುಷ್ಯ ಎಂದು ಹೇಳಲೂ ಲಜ್ಜೆಯಾಗುತ್ತಿದೆ. ತನ್ನ ಹೊಟ್ಟೆ ತುಂಬಿಸುವ ಸಲುವಾಗಿ ಕೋಟಿ ಕೋಟಿ ಜನರನ್ನು ಮೋಸ ಮಾಡಿದ ನಿಮಗೆ ಸಾಮಾನ್ಯ ಜನರ ಕಣ್ಣೀರ ಶಾಪವಿದೆ. ದೇವರ ಸ್ವಂತ ಊರು ಎಂದು ಹೇಳುವ ಕೇರಳದಲ್ಲಿನ ಎಂಡೋ ಪೀಡಿತರ ನರಕ ಯಾತನೆ ನಿಮಗೆ ಅರ್ಥವಾಗುವುದಿಲ್ಲವೇ? ಇದೇ ಪರಿಸ್ಥಿತಿ ನಿಮ್ಮ ಮಕ್ಕಳಿಗೆ ಒದಗಿಬಂದರೆ ಏನ್ಮಾಡುತ್ತೀರಿ? ಶರದ್ ಪವಾರ್ ಜೀ, ಪ್ಲೀಸ್...ಎಂಡೋಸಲ್ಫಾನ್ ನಿಷೇಧಿಸಿ, ಭವಿಷ್ಯದ ಮಕ್ಕಳಿಗೆ ಬದುಕಲು ಅನುಮತಿಸಿ.

ಇಂತೀ,
ರಶ್ಮಿ. ಕಾಸರಗೋಡು.

Tuesday, April 19, 2011

ಈ ಮಳೆಯೇ ಹಾಗೆ...

ಈ ಮಳೆಯೇ ಹಾಗೆ...
ನಮ್ಮೂರಿನ ಮಳೆಯಂತಿಲ್ಲ ಇದು
ಮಳೆ ಬಂದ ಕೂಡಲೇ ಮಣ್ಣಿನ ವಾಸನೆ
ಮೂಗನ್ನು ಮೆತ್ತಿ ಕೊಳ್ಳುವುದಿಲ್ಲ...

ಈ ಮಳೆಯೇ ಹಾಗೆ...
ಮನೆ ಬಿಟ್ಟು ಹೊರಗೆ ಕಾಲಿಡಲು ಬಿಡುವುದಿಲ್ಲ
ಚರಂಡಿ ನೀರು ರೋಡಲ್ಲಿ ಹರಿದರೂ
ನಾವ್ಯಾರು ತಲೆ ಕೆಡಿಸಿಕೊಂಡಂತ್ತಿಲ್ಲ

ಈ ಮಳೆಯೇ ಹಾಗೆ...
ಬಿರುಸಿನ ಮಳೆಗೆ ಕೊಡೆ ಹಾರುವುದಿಲ್ಲ
ರೈನ್್ಕೋಟ್್ಗಳೆಡೆಯಲ್ಲಿ ಮಿಣುಕುವ ಕಣ್ಣುಗಳು
ಲಿಫ್ಟ್ ಕೇಳಿದರೂ ಕೊಡುವುದಿಲ್ಲ

ಈ ಮಳೆಯೇ ಹಾಗೆ...
ಒಮ್ಮೆ ಪಿರಿ ಪಿರಿ, ಎಡೆ ಬಿಡದೆ ಸುರಿಯೆ ಕಿರಿಕಿರಿ
ಕೆಂಪು ದೀಪದಡಿಯಲ್ಲಿ ವಿಷಣ್ಣನಾಗಿ ನಿಂತ ಗಾಡಿಗಳ
ಗಾಲಿಗಳು ಮುಂದೆ ಚಲಿಸುವುದೇ ಇಲ್ಲ

ಈ ಮಳೆಯೇ ಹಾಗೆ...
ತಂಗಾಳಿಯೊಂದಿಗೆ ನೆನಪು ಹೊತ್ತು ತರುತಿದೆ
ಕಳೆದ ಬಾಲ್ಯ, ಯೌವನದ ಮಿಡಿತ ತುಡಿತದೊಳು
ಕಣ್ಣೀರಾಗಿ ಹರಿದು, ಮತ್ತೆ ಮೋಡವಾಗುತಿದೆ.

Friday, April 8, 2011

ಯುರೇಕಾ...ಯುರೇಕಾ

ನೋಡು..ಮಗು ಅಲ್ಲಿದೆ ಅಜ್ಜಿಮನೆ
ಇನ್ನೊಂದು ಹೆಜ್ಜೆ ಅಷ್ಟೇ..
ಈಗ ನಡೆದದ್ದು 2 ಮೈಲಿಯಷ್ಟಾಗಿತ್ತು
ಇನ್ನೂ ಸ್ವಲ್ಪ ದೂರ..
ಅಪ್ಪ ಮಗನನ್ನು ಪುಸಲಾಯಿಸಿ
ಹೆಜ್ಜೆ ಹಾಕುತ್ತಿದ್ದ ಅಪ್ಪ....

ವರುಷ ಸರಿದಾಗ ಮನೆಯ ಮುಂದಿನ
ಡಾಂಬರು ರೋಡಿನಲ್ಲಿ ಮಗ ಓಡಾಡಿದ
ಮಗು ಓಡು, ಇನ್ನೂ ಜೋರಾಗಿ ಓಡು
ಅಪ್ಪ ಹುರಿದುಂಬಿಸಿದ
ಮಗ ಓಡುತ್ತಲೇ ಇದ್ದ

ಇದು ಮ್ಯಾರಥಾನ್ ಅಲ್ಲ, ಕ್ರಾಸ್್ಕಂಟ್ರಿ ರೇಸ್ ಅಲ್ಲ...
ಬದುಕ ಬಂಡಿಯನ್ನೆಳೆಯಲು ಅವ ಓಡುತ್ತಿದ್ದ
ಮುದ್ದು ಗಲ್ಲದಲ್ಲಿ ಕಾಣಿಸಿತ್ತು ಗಡ್ಡ
ಹೆಗಲ ಮೇಲಿತ್ತು ಕನಸುಗಳ ಭಾರ

ಓಡು ಮಗು ಓಡು ಇನ್ನೂ ಓಡಬೇಕೆಂದ
ಮುದಿ ಕೂದಲಿನ ಅಪ್ಪ...
ಗಮ್ಯ ಸ್ಥಾನವೆಲ್ಲೋ ಯಾರಿಗೇನು ಗೊತ್ತು?

ನಿನ್ನ ಮುಂದಿರುವ ಜನರ ಕಾಲೆಳೆದು ಹೊರದಬ್ಬು
ಹಿಂದಿರುವ ಮಂದಿಯನ್ನು ಒದೆಕೊಟ್ಟು ತಳ್ಳು
ಇಷ್ಟು ಸಾಕಾಗದಿದ್ದರೆ ಅವರ ಮನ ಚಿವುಟು
ಅವರ ಕಣ್ಣೀರಲಿ ತೇಲುತ್ತಾ ನೀ ದಡವ ಸೇರು

ಮಗ ಓಡುತ್ತಲೇ ಇದ್ದ ಪಿತೃ ವಾಕ್ಯ ಪಾಲಕನಂತೆ
ಲಜ್ಜೆ ಬಿಡು ನೀನು...ಎಲ್ಲರಿಂದ ಮುಂದೆ ಸಾಗು
ಕಿವಿ ಕೇಳಿಸದು, ಕಣ್ಣು ಕಾಣಿಸದು...
ಲಜ್ಜೆ ಬಿಟ್ಟು ವಿವಸ್ತ್ರನಾಗಿ ಮಗ ಓಡುತ್ತಿದ್ದ
ಜನ ನಕ್ಕಾಗ ಅಪ್ಪ ಹೇಳಿದ
ಯುರೇಕಾ....ಯುರೇಕಾ...

Wednesday, April 6, 2011

ಉದಯೋನ್ಮುಖ ಬರಹಗಾರರಿಗೆ ಆಮಂತ್ರಣ

ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಆಮೇಲೆ ತಿಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಭಾಷೆ, ಪ್ರಸ್ತುತ ಪರಿಸ್ಥಿತಿ, ಸವಾಲುಗಳು, ದೋಷಗಳು ಹೀಗೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಇದು ಚರ್ಚಾಗೋಷ್ಠಿಯಲ್ಲ, ಸಮ್ಮೇಳನವೂ ಅಲ್ಲ. ಬದಲಾಗಿ ನಾವಿಲ್ಲಿ ಕೈಗೊಳ್ಳುವಂತಹ ತೀರ್ಮಾನಗಳು ಚಾಲ್ತಿಗೆ ಬರಬೇಕು. ನಾವು ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಕೈಗೊಂಡಿಲ್ಲ. ಏನಿದ್ದರೂ ಇದು ಕನ್ನಡದ ಸೇವೆ, ಇದು ನಮ್ಮ ಭಾಷೆಗೆ ಸಲ್ಲಬೇಕು. ಇದಕ್ಕಾಗಿ ನಿಮ್ಮ ಸಹಕಾರ ಬೇಕು. ಕನ್ನಡಕ್ಕಾಗಿ ತುಡಿಯುವ ಮನ ನಿಮ್ಮದಾಗಿದ್ದರೆ ಬನ್ನಿ... ನಾವೆಲ್ಲರೂ ಒಟ್ಟಾಗಿ ಸೇರೋಣ..

ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಾನದಂಡದಗಳು ಇಂತಿವೆ:
1. ಉದಯೋನ್ಮುಖ ಬರಹಗಾರರು (ಬರವಣಿಗೆಯಲ್ಲಿ ಆಸಕ್ತಿಯುಳ್ಳವರು) ಮಾತ್ರ
1. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಜ್ಞಾನ
2. ಕನ್ನಡಕ್ಕಾಗಿ ತುಡಿಯುವ ಮನಸ್ಸು
3. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅರಿವು
5. ಭಾಗವಹಿಸಲಿಚ್ಛಿಸುವವರು ಈ ಕೆಳಗಿನ ಪ್ರಶ್ನೆಗೆ 100 ಪದಗಳಿಗೆ ಮೀರದಂತೆ ಉತ್ತರಿಸಬೇಕು.

ಪ್ರಶ್ನೆ: ಸಾಹಿತ್ಯಕ್ಕೆ ಓದು ಅಗತ್ಯವೇ? ಸಾಹಿತಿ ಆದವನಿಗೆ ಸಾಮಾಜಿಕ ಬದ್ಧತೆಗಳಿರಬೇಕೆ?

ನಿಮ್ಮ ಉತ್ತರವನ್ನು ಏಪ್ರಿಲ್ 25ರ ಮೊದಲು sanakabrahma@gmail.com ಈ ವಿಳಾಸಕ್ಕೆ ಕಳುಹಿಸಿ.
ನಿಮ್ಮ ಮಿಂಚಂಚೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಮರೆಯದಿರಿ. ಈ ಕೂಟದಲ್ಲಿ ಭಾಗವಹಿಸಲು ಆಯ್ಕೆಯಾದ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಆಹ್ವಾನವನ್ನು ಕಳುಹಿಸಲಾಗುವುದು.