Posts

Showing posts from 2008

ನಾನು ಮತ್ತು ಬದುಕು...

ಮನದ ಮೂಲೆಯಲ್ಲಡಗಿದ ಒಂದಷ್ಟು ದುಗುಡಗಳು ಇನ್ನೊಮ್ಮೆ ನನ್ನ ಮನವನ್ನರಳಿಸಿದ ಒಂದಿಷ್ಟು ಭಾವನೆಗಳನ್ನ ಹೆಕ್ಕಿ ಚಿತ್ತಾರ ಬಿಡಿಸಿದಾಗ ಅದನ್ನು ಕವನವೆಂದು ಗೀಚಿದ್ದೆ... ದುಗುಡ ದುಮ್ಮಾನಗಳು ಎದೆಯ ಕುಕ್ಕಿ ಕಣ್ಣೀರು ಹರಿಸಿದಾಗ ಕಷ್ಟದಾ ಸುಳಿಯಲ್ಲಿ ಬೇಸತ್ತಿರಲು ಈ ಜೀವನವ ನಾನಂದು ನರಕವೆಂದು ಕರೆದಿದ್ದೆ.... ಏಳು ಬೀಳುಗಳ ನಡುವೆ ಸಾಗುವುದೀ ಜೀವನವು ಸುಖ ದುಃಖಗಳು ಇವು, ಕ್ಷಣಿಕವೆಂದಾಗ ಒಮ್ಮೆ ಅತ್ತಿದ್ದೆ, ಮತ್ತೆ ನಕ್ಕಿದ್ದೆ ಕಾಲ ಸರಿಯಲು ಹೀಗೆ.. ಜಗದ ನಿಯಮವಿದೆಂದು ನಾನಾಗ ಅರಿತಿದ್ದೆ.

ನೀನು ನನ್ನವನು...

ನನ್ನ ಸ್ವಪ್ನಲೋಕದ ಸುಪ್ತ ಕನಸುಗಳ ಸರಮಾಲೆ ನಿನ್ನನಾವರಿಸಿರಲು ನಿನ್ನ ಬೆಚ್ಚನೆಯ ನೆನಪುಗಳು ಮತ್ತೊಮ್ಮೆ ಕೆಣಕುತಿರಲು ಇನಿಯಾ ಇನ್ನೇಕೆ ತಡ? ಬಂದು ಬಿಡು ಈ ಹೃದಯದಲಿ ಪ್ರೀತಿ ಬಾಗಿಲು ಇದೋ ನಿನಗಾಗಿ ತೆರೆದಿಡುವೆ... ಮಂದ ಮಾರುತವೀಗ ಪ್ರಣಯರಾಗವ ನುಡಿಸಿರಲು ಸುಮಲತೆಯ ನಡುವೆ ದುಂಬಿಗಳ ಚುಂಬನದಿ ಬಿಸಿಯಪ್ಪುಗೆಯ ಸುಖ ನೀಡುವಿಯಂತೆ ಪ್ರೀತಿ ಲೋಕದ ಹಾದಿಯಲಿ ಇದೋ ನಿನಗಾಗಿ ಕಾದಿರುವೆ... ನಿನ್ನ ನಗೆಯಲ್ಲಿ ಲೋಕ ಮರೆಯುವೆನಾಗ ನಿನ್ನ ತೋಳಬಂಧನದಲ್ಲಿ ಒಮ್ಮೆ ಬಂಧಿಯಾಗುವ ಆಸೆ ನಿನ್ನ ಕೈ ಹಿಡಿದು ಮಳೆ ನೆನೆಯುವಾ ಬಯಕೆ ಎಂದೆಂದೂ ನೀ ನನ್ನವನಾಗಿ ಬಿಡು ನೀನು ನನ್ನವನು, ನನ್ನವನು ಮಾತ್ರ ನಾನೆಂದು ನಿನ್ನ ಪ್ರೀತಿಯಾಗಿರುವೆ.

ಮೊಬೈಲ್ ಪ್ರೇಮ...

ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈಲ್ ಗೇಮ್ ಬೋರ್ ಅನಿಸಿದಾಗ ಅವರಿಬ್ಬರೂ ಮಾತಿಗಿಳಿದರು. ಆಕೆ ನಾಚಿಕೊಳ್ಳುತ್ತಾ ಮಾತನಾಡುತ್ತಿದ್ದಂತೆ ಆತ ತನ್ನ ಮೊಬೈಲ್ ನಂಬರ್ ನೀಡಿದ.ರೈಲು ದೂರ ದೂರ ಸಾಗುತ್ತಿದ್ದಂತೆ ಅವರಿಬ್ಬರೂ ಹತ್ತಿರವಾಗುತ್ತಿದ್ದರು. ಅವಳು ಇಳಿಯಬೇಕಾದ ಸ್ಟಾಪ್ ಸಮೀಪಿಸುತ್ತಿದ್ದಂತೆ ಅವಳ ಮೊಬೈಲ್ ನಿಂದ ಒಂದು missed call.ಅವರಿಬ್ಬರೂ ಪರಸ್ಪರ ಮಿಸ್ ಮಾಡಿಕೊಳ್ಳ ತೊಡಗಿದರು. ಸ್ಟಾಪ್ ಬಂತು ಆಕೆ ಇಳಿದು ಹೋದಳು.ಅವಳ missed callಗೆ ಅವ ಕಾಲ್ ಮಾಡಿದ.. ಹೀಗೆ ಆ ಜೋಡಿ ಹಲವಾರು ಬಾರಿ recharge ಮಾಡಿಸಿ ಗಂಟೆಗಟ್ಟಲೆ ಹರಟಿದರು.Inbox ಪ್ರೇಮ ಸಂದೇಶಗಳಿಂದ ತುಂಬಿ ತುಳುಕುವಾಗ,ಪ್ರೇಮದ ringtone ಅವರಿಬ್ಬರ ಮನದಲ್ಲಿ ರಿಂಗಣಿಸುತ್ತಿತ್ತು.ಹೀಗಿರುವಾಗ ಒಂದು ದಿನ ಆ ಜೋಡಿ Out of coverage areaದಲ್ಲಿ ಭೇಟಿಯಾದರು.ಅವನು ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿರುವುದಾಗಿ ಭರವಸೆ ನೀಡಿದ. ಆಕೆ ಅವನ ಹೃದಯದಲ್ಲಿ ತನಗೆ Lifetime Validity ಇದೆ ಎಂದು ನಂಬಿದಳು. ಹೀಗೆ ಕಾಲ ಕಳೆಯಿತು...ನಂತರ ಇವಳ missed callಗೆ ಅವ ಕಾಲ್ ಮಾಡಲಿಲ್ಲ.ಇವಳು ಕಾಲ್ ಮಾಡಿದಳು..Call waiting...ಪುನಃ ಮಾಡಿದಳು..Number Busy... ತನ್ನೊಂದಿ

ಪ್ರೀತಿ -ದೇವರು

ನೀನ್ಯಾಕೆ ನನ್ಮುಂದೆ ನಿನ್ನ ಪ್ರೀತಿ ತೋರಿಸುತ್ತಿಲ್ಲ? ಅವನೆಂದ ಪ್ರೀತಿ ದೇವರಂತೆ! ನಾನು ಪ್ರೀತಿ ತೋರಿಸದಿದ್ದರೂ ನೀನು ನನ್ನನ್ನೇ ಸದಾ ನೆನೆಯುತ್ತಿರುವಿಯಲ್ಲಾ?

ಅಮ್ಮನ ಒಲವಿನ ಓಲೆ.....

ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ. ಭಾನುವಾರ ಆದ ಕಾರಣ ಹಾಸ್ಟೆಲ್‌ನಲ್ಲಿಯೇ ಇರಬೇಕಾದ ಪರಿಸ್ಥಿತಿ. ವಾರದಲ್ಲಿ ಸಿಗುವ ಒಂದೇ ಒಂದು ದಿನ ರಜಾದಿನ ಹಾಸ್ಟೆಲ್‌ನ ರೂಮಿನಲ್ಲಿ ಕಳೆಯುವಾಗ ಯಾಕೋ "ಏಕಾಂಗಿತನ" ನನ್ನನ್ನು ಆವರಿಸುತ್ತದೆ. ಸಾಧಾರಣ ಹುಡುಗಿಯರಂತೆ ಶಾಪಿಂಗ್, ಔಟಿಂಗ್ ಇಷ್ಟವಿಲ್ಲದ ನನಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ, ಅನ್ಯಭಾಷೀಯರ ಪರಿಸರದಲ್ಲಿ ಪುಸ್ತಕಗಳೇ ಉತ್ತಮ ಸಂಗಾತಿಯಾಗಿವೆ. ಹಾಸ್ಟೆಲ್‌ನ ಕಿಟಿಕಿಯಿಂದ ಹೊರಗಿಣುಕಿದರೆ ತುಂತುರು ಮಳೆಹನಿಗಳು ಮರದೆಲೆಯಿಂದ ಜಾರುತ್ತಿತ್ತು. ಕೈಗೆತ್ತಿದ ಪುಸ್ತಕವೂ ಓದಬೇಕೆಂಬ ಮೂಡ್ ಇರಲಿಲ್ಲ. ಆದಾಗಲೇ ನನ್ನ ಕಣ್ಣಿಗೆ ಬಿದ್ದದ್ದು ಕಂದು ಬಣ್ಣದ ಕವರ್. ಅದು ತುಂಬಾ ಅಮೂಲ್ಯವಾದದ್ದು. ಯಾಕೆ ಗೊತ್ತಾ? ಅದರಲ್ಲಿ ತುಂಬಾ ಸಿಹಿಮುತ್ತುಗಳಿವೆ, ವಾತ್ಸಲ್ಯವಿದೆ. ಸ್ನೇಹ, ಸಲಹೆ, ಮಮತೆ, ಕಾಳಜಿ ತುಂಬಿದ ಪತ್ರ ಅದು. ಈ ಚುಮುಚುಮು ಚಳಿಯಲ್ಲಿ ಕಂದು ಬಣ್ಣದ ಕವರ್‌ನೊಳಗೆ ನನ್ನ "ಅಮ್ಮನ ಪತ್ರ" ಬೆಚ್ಚನೆ ಕುಳಿತುಕೊಂಡಿದೆ. ಅದು ಕೈಗೆತ್ತಿಕೊಂಡ ಕೂಡಲೇ ಯಾಕೋ ಮನಸ್ಸು ನಿರಾಳವಾಗುತ್ತಿದೆ. ಭಗವಾನ್ ಶ್ರೀಕೃಷ್ಣ ಯುದ್ದ ಭೂಮಿಯಲ್ಲಿ ಕುಸಿದು ಕುಳಿತ ಅರ್ಜುನನಿಗೆ ಗೀತೋಪದೇಶ ನೀಡಿ ಹುರುಪು ಹುಟ್ಟಿಸಿದಂತ

ವಾಸ್ತವ

ಮುಂಜಾನೆ ಮಿಂದು ದೇವರಿಗೆ ನಮಿಸುವಾಗ ಅಮ್ಮ ಹೇಳುತ್ತಿದ್ದಳಾಗ, ಕೈ ಮುಗಿದು ಕಣ್ಮುಚ್ಚಿ ಬೇಡಿದರೆ ಈಶ ಒಲಿವನೆಂದು.. ಸಂಧ್ಯಾವಂದನೆ ವೇಳೆ ದೀಪ ಉರಿಸಿ ನನ್ನ ಅಜ್ಜಿ ರಾಮನಾಮ ಜಪಿಸುತಿರಲು ಕಣ್ಣೆರಡು ಮುಚ್ಚಿ ನಾನೂ ದನಿಗೂಡಿಸುತ್ತಿದ್ದೆ.. ಇರುಳ ಬಾನಂಗಳದಲ್ಲಿ ಕೋಟಿ ತಾರೆಗಳು ಮಿನುಗುವಾಗ ನಿದ್ದೆ ಬರುತ್ತಿಲ್ಲ ತಾತ, ಕತೆ ಹೇಳೆಂದು ಸತಾಯಿಸಿದಾಗ ಸುಮ್ಮನೆ ಕಣ್ಣು ಮುಚ್ಚಿರು ನಿದ್ದೆ ತಂತಾನೆ ಬರುವುದು ಎಂದು ಅಪ್ಪ ಗದರಿಸಿದಾಗ ಕಣ್ಣೆರಡು ಮುಚ್ಚಿ ಮಗ್ಗಲೆಳೆದು ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ ಬಾಲ್ಯವೆಷ್ಟು ಮಧುರವಾಗಿತ್ತು! ಕಣ್ತೆರೆದರೆ ಸುಂದರ ಲೋಕ ಮುಚ್ಚಿದರೆ ಸ್ವಪ್ನ ಲೋಕಕ್ಕೆ ಪಯಣ ಬೆಳೆಸುತಲಿದ್ದೆ ಕಾಲ ಚಕ್ರವು ತಿರುಗುತಿರಲು ಪ್ರಸ್ತುತಕ್ಕೆ ಮೊದಲ ಹೆಜ್ಜೆಯಿಟ್ಟು, ಸುತ್ತ ಕಣ್ಣು ಹಾಯಿಸಿದರೆ... ಹಗೆ ಹೊಗೆಯಾಡುವ ಜಗದಲ್ಲಿ ನಗೆ ಮಾಸಿದ ಜೋಲು ಮುಖ! ಜೀವ ತೆಗೆಯಲು ಕತ್ತಿ ಮಸೆಯುವ ಜನ, ಇನ್ನೊಂದೆಡೆ, ಜೀವಕ್ಕಾಗಿ ಬೇಡುವ ಮನ ಹಣದಾಸೆಗಾಗಿ ಜೀವ ಹಿಂಡುವವರು, ಬೇಡುವವರು, ಮುಂದೆ ಕೈ ಚಾಚಿ ಜಗದಳುವಿನ ಮುಂದೆ ನಿಸ್ಸಹಾಯಕ,ಮೂಕಪ್ರೇಕ್ಷಕ ನಾನು ಹಿಂಸೆಗಳು ಕಣ್ಮುಂದೆ ನರ್ತನವಾಡಿದರೂ ನಾ ಬಂಧಿ, ಕಟ್ಟುಪಾಡುಗಳ ಸೆರೆಮನೆಯಲ್ಲಿ ದನಿಯೆತ್ತಲು ಚಡಪಡಿಸಿ ಸೋತಾಗ ಎರಡು ಹನಿ ಕಣ್ಣೀರೆರೆದು ಮತ್ತೆ, ನನಗಿದರ ಅರಿವೇ ಇಲ್ಲದವನಂತೆ ಕಣ್ಣು ಮುಚ್ಚಿಕೊಳ್ಳುತ್ತೇನೆ!

ದ್ವಂದ್ವ

ನಿರೀಕ್ಷೆಗಳೇ… ನನ್ನ ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ? ಅತೃಪ್ತ ಜೀವನದಿ ತೃಪ್ತಿಯ ಕೃತಕ ನಗುವನು ಚೆಲ್ಲಿ ಮುಸುಕೆಳೆದು ಮಲಗಿದರೂ ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು? ಪ್ರತೀಕ್ಷೆಗಳೇ….. ಬರಡು ಜೀವನವೆಂದು ಬಿಕ್ಕಿ, ಕಣ್ಣ ಹನಿ ಉಕ್ಕಿದಾಗ ಭೂತಕಾಲದ ನಗುವ ಸೆಲೆಯನು ವರ್ತಮಾನದ ತೀರಗಳಿಗಪ್ಪಳಿಸಿ ಭವಿಷ್ಯದ ಹಾಲನೊರೆಯಲಿ ಸಿಹಿಯುಣಿಸುವಿರೇಕೆ? ಪರೀಕ್ಷೆಗಳೇ… ನಾಲ್ಕು ದಿನದ ಜೀವನವು ಬೇವು ಬೆಲ್ಲ, ಹಾವು ಹೂವಿನ ಹಾದರವು ಇದುವೆಂದು ಕಲಿಸುವ ಗುರುಗಳೇ.. ದಿನವೂ ಬರುವಿರಿ ಕ್ಷಣ ಕ್ಷಣದ ಹೆಜ್ಜೆಯಲಿ ಗುರುತ ಮೂಡಿಸಿ ಮತ್ತೊಮ್ಮೆ ಛೇಡಿಸಿ, ಜೀವನದ ನಕ್ಷೆಯಲಿ ಮೈಲಿಗಲ್ಲುಗಳಂತೆ ಹುಟ್ಟುಹಾಕುವಿರಿ ಅನುಭವದ ಒರತೆಯನು ಕಟ್ಟಿ ಹಾಕುವಿರಿ ಪ್ರೀತಿ-ದ್ವೇಷದ ಸರಪಳಿಯಲ್ಲಿ ಜೀವನವ ತೇಯ್ದು ತೆವಳುವಾಗ… ಇದನೇನೆಂದು ಕೊಳ್ಳಲಿ ಶಿಕ್ಷೆಯೇ? ಅಥವಾ ಬದುಕಲಿರುವ ಅಪೇಕ್ಷೆಯೇ???

ನಾನು- ನೀನು

ನಿನಗೆ, ನನ್ನೊಳಗಿನ ಪ್ರೀತಿ ಕಾಣುವುದಿಲ್ಲ ಭೂತ ಕನ್ನಡಿ ಹಿಡಿದು ಹುಡುಕಿದಾಗಲೂ ನನ್ನ ದನಿ ಕೇಳುವುದಿಲ್ಲ ಗಂಟಲು ಬಿರಿದು ನಾನೆಷ್ಟು ಕರೆದರೂ ಮೌನ ಆವರಿಸಿದೆ ಸುತ್ತ ಬರಡು ಜೀವನವೆಂಬ ವ್ಯಥೆಯಲಿ ಕ(ವಿ)ತೆಗಳಿಗೆ ಬರಗಾಲ ಬಂದಿದೆ, ಕೈ ಬಂಧಿ ತೊಡಿಸಿದಾಗ ಮನದಲ್ಲಿ ಬೆಂಕಿ ಉರಿದು ಉಕ್ಕುವವು ಕಣ್ಣ ಹನಿ ಕೊರಗಿ ಕರಗುವ ಚಿತ್ತದಲಿ ಜ್ವಾಲಾಮುಖಿಗಳಂತೆ! ಮತ್ತೊಮ್ಮೆ ಭರವಸೆಯ ಆಗಸದಿ ಭವಿಷ್ಯದ ಹೊಂಗನಸ ಬಿಳಿ ಮೇಘ ವರ್ಷಧಾರೆಯೆರೆದಾಗ ಕನಸ ದೋಣಿಯಲಿ ಸಾಗುವ ಈ ಬಾಳ ಪಯಣ ಪ್ರಕ್ಷುಬ್ದ ಬದುಕಿನಲಿ ನಿನ್ನ ನೆರಳಾಗಿ, ಇನಿಯಾ ಕನಸ ಮಗ್ಗುಲ ಸರಿಸಿ ಕವಲೊಡೆದ ಓಣಿಯಲಿ ಮೆಲ್ಲ ಹೆಜ್ಜೆಯನ್ನಿಡುವಾಗ... ಗಜ್ಜೆ ದನಿಗಳ ಕಂಪು ನಿನ್ನೊಡಲ ಸೇರಿ ದುಗುಡಗಳ ದನಿಯಾಗಿ ಮಾರ್ದನಿಸುವುದೇಕೆ?

ಬದುಕು ಪಯಣ

ಮನೆ ಮುಂದಿನ ಹಾದಿ ಬದಿಯಲಿ ಕೇಕೆ ಹಾಕಿ, ಗೋಲಿಯಾಡುವಾಗ ಹಾಲಿರದ ಎದೆಗಂಟಿದ ಅಳುವ ಕಂದನ ದನಿಗೆ ನಾನೆಂದೂ ಕಿವಿಕೊಟ್ಟಿಲ್ಲ ಕಪ್ಪು ಕನ್ನಡಕ ಧರಿಸಿ, ಮನದಲ್ಲಿ ಅಹಂಕಾರ ತುಂಬಿರಲು ಭಿಕ್ಷೆ ಬೇಡುವ ಮುದ್ದು ಕೈಗಳ ಕಂಡು ಕತ್ತು ತಿರುಗಿಸಿ, ಸುಮ್ನೆ ಜೇಬು ತಡಕಾಡಿದ್ದೂ ಇದೆ ದಾರಿಯಿಕ್ಕೆಲಗಳಲಿ ಕೈ ಚಾಚುವ ಜನರು, ಕಸದ ತೊಟ್ಟಿಯಿಂದ ಕೂಳು ಹೆಕ್ಕಲು ನಾಯಿ, ದನಗಳನ್ನೋಡಿಸುವ ಮನುಜನ ನೋಡಿ ಕೋಲಾ ಕುಡಿದು ತೇಗು ಬಿಟ್ಟಿದ್ದೆ! ಗತ್ತು ಹೊತ್ತಿನಲಿ ಪಯಣ ಬೆಳೆಸುವಾಗ ಕಳ್ಳ ನಿದ್ದೆಯಾವರಿಸಿ, ಸೀಟು ಕಸಿದಿದ್ದೆ, ನಡುಕದಿಂದ ತಾತ ನನ್ನ ಪಕ್ಕ ಸರಿದಾಗ, ಟೈ ಬಿಗಿದು ಕೈ ಕಟ್ಟಿ ಕುಳಿತು, ಹಾಡು ಕೇಳಿದ್ದೆ ಬಾಳ ಪಯಣದಲಿ ತಿಂದು ಬೀಗುತ ಬಣ್ಣ ಬಣ್ಣದ ಬದುಕಿನಲಿ ತೇಲಾಡಿ ಒದ್ದೆ, ಕೊನೆಗೆ ಆಯಾಸದಲಿ ಎಡವಿ ಬಿದ್ದೆ ತುಳಿದರನೆನು ಜನ, ಹಣೆಗೆ ಕೈಯನು ಜಜ್ಜಿ ತಲೆ ಕೂದಲು ಉದುರಿವೆ, ಎಲ್ಲವೂ ಹಣ್ಣು ಹಣ್ಣು ಕಣ್ಣು ಮಂಜಾಗಿವೆ, ಇಲ್ಲ ನಿದ್ದೆ, ನೀರಡಿಕೆ ಬದುಕ ಬಂಜರು ಬಯಲಲಿ ಒಂಟಿ ಕಲ್ಲು ಕೈ ನಡುಗುತಿವೆ, ದೇಹ ಕಂಪಿಸುತಿದೆ ಒಣ ಬೀಡಿಯ ಧೂಮದಲಿ ಉಸಿರುಗಟ್ಟುತಿರುವಾಗ ತಡಕಾಡಿದೆ ಅಂಗಿಯ ಮೂಲೆ ಮೂಲೆಗಳಲ್ಲಿ ಅದಾಗಲೇ ನಿಜವರಿತದ್ದು, ಆಸೆಗಳ ಓಟದಲಿ ನಾನು ಜೇಬು ಹೊಲಿಸಿರಲಿಲ್ಲವೆಂದು!

ಅಲೆಮಾರಿ ಬದುಕು

ಕನಸುಗಳ ಮರಳದಂಡೆಯಲಿ ನೋವ ಹೊತ್ತು ನಡೆವೆವು ಬೆನ್ನಿಗಂಟಿದ ಹೊಟ್ಟೆ, ಅಳುವ ಕೂಸು ಹೊತ್ತು, ಇನ್ನೊಂದು ಮೂಟೆ ರಟ್ಟೆಯಲಿ ವೇದನೆಯ ಗಂಟು ಅಲ್ಲ ಇದು, ಜೀವನದ ಕುಂಟುಗಳಿವು ಪ್ರಕ್ಷುಬ್ಧ ಬದುಕಿನ ಭಗ್ನ ಕನವರಿಕೆ ಅಲೆಮಾರಿಗಳು ನಾವು, ಬದುಕ ಅಲೆ ಸುಳಿಗೆ ಸಿಕ್ಕಿದರೂ ತುಂಡು ರೊಟ್ಟಿ, ಹೊತ್ತು ಕೂಳಿಗಾಗಿ ಸಾಗುವೆವು ಇನ್ನೂ ಮುಂದೆ ಮುಂದೆ ಬರಿಗಾಲ ಪಾದ ಒಡೆದು ರಕ್ತ ಚಿಮ್ಮುತಿರೆ ಬೆವರ ಹನಿ ಮಾಲೆಗಳು ಎದೆ ನಡುವೆ ಹರಿದು ಹೊಕ್ಕಳ ಬಳ್ಳಿಯಲ್ಲಿ ತಂಗಿ ಮತ್ತೂ ಹರಿದಾಗ ಎದೆಗೂಡಿನೊಳು ಚಿಗುರೊಡೆದ ನೆನಪುಗಳ ಒರೆಸಿಟ್ಟ ಮುಗ್ದ ಬೆರಳು ಬೆಳಕು ಸಾಯುವ ಮುನ್ನ ಬೀಡು ಸೇರುವ ತವಕ, ಗೆಜ್ಜೆ ದನಿಗಳ ನಡುವೆ ಸರಿದ ನೆರಳು ಹೃದಯದಲಿ ಅದುಮಿಟ್ಟ ನೋವಿನಾ ಸೆಲೆಯು ಹಾಡಾಗಿ ಉಕ್ಕಿ ಕಪ್ಪು ತುಟಿಗಳಲಿ ಉಸಿರ ಬಿಗಿ ಹಿಡಿದು ಬಿಕ್ಕಿ ಅತ್ತಾಗ, ಬಾಹು ಬಲವಿಲ್ಲದೆ ಬಾಹುಬಲಿಗಳಾದೆವು ಒಂದೆಡೆ ಇನ್ನೊಂದೆಡೆ ಭವಿಷ್ಯ ನುಡಿಯುವ ಮಂಡ ಕಪ್ಪೆಗಳಾಗಿ ಸುಖದ ರೂಪದ ಬಯಕೆ ದುಃಖದಲಿ ದಿನರಾತ್ರಿ ಹದವಾಗಿ ಹರಿಯುತಿರೆ ಗುರಿಯಿರದ ದಾರಿಯೊಳು ತೆವಳುವೆವು ನಿಡುಸುಯ್ವ ಕ್ಷಿತಿಜದಂಚಿಗೆ.

ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?

ಮಹಿಳೆಯರ ಮೇಲಿನ ದಬ್ಬಾಳಿಕೆ ಶೋಷಣೆ ಇಂದು ನಿನ್ನೆಯ ಕಥೆಯಲ್ಲ. ಮನೆಯಲ್ಲಾದರೂ, ಕಚೇರಿಯಲ್ಲಾದರೂ ಶೋಷಣೆಗೆ ಒಳಪಡುವವಳು ಮಹಿಳೆಯೇ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಶೋಷಣೆ ನಡೆಸುತ್ತಾ ಬಂದಿರುವ ಪುರುಷ ಪ್ರಧಾನ ಸಮಾಜವು ಶೋಷಣೆಗೊಳಗಾದ ಮಹಿಳೆಯನ್ನು ಯಾವ ರೀತಿ ಸ್ವೀಕರಿಸಿದೆ ಎಂಬುದು ಚಿಂತಿಸಬೇಕಾದ ವಿಷಯ. ಯಾವುದೇ ರೀತಿಯಲ್ಲಿಯೂ ಮಹಿಳೆ ಶೋಷಣೆಗೊಳಗಾದರೆ, ಅದರಲ್ಲೂ ದೈಹಿಕ ಶೋಷಣೆಗೊಳಗಾದರೆ ಸಮಾಜವು ಅವಳ ಜೊತೆ ಹೇಗೆ ವರ್ತಿಸುತ್ತದೆ ಎಂಬುದು ಇಲ್ಲಿ ಪ್ರಧಾನವಾದುದು. ಹೆಣ್ಣಿನ ದೈಹಿಕ ಸುಖ ಬಯಸುವ ಪುರುಷ ವರ್ಗ ಯಾವ ಸಂದರ್ಭದಲ್ಲೂ ಬೇಕಾದರೂ ಮಹಿಳೆಯ ಮೇಲೆ ಅತ್ಯಾಚಾರ ನಡೆಸಬಹುದು. ಹಾಡಹಗಲೇ ಅದೆಷ್ಟೋ ಹೆಣ್ಣು ಮಕ್ಕಳು ಕಾಮದ ಬಲೆಗೆ ಬಿದ್ದು ನರಳುತ್ತಿರುವಾಗ ಇನ್ನು ರಾತ್ರಿ ಕಾಲದ ಬಗ್ಗೆ ಹೇಳುವುದೇನಿದೆ? ಹೆಣ್ಣು ಒಂಟಿ ಎಂದು ಅನಿಸಿದಾಕ್ಷಣ ಕಾಮಣ್ಣರ ಕಣ್ಣಿಗೆ ಗುರಿಯಾಗ ತೊಡಗುವ ಮಹಿಳೆಗೆ ಒಂದೆಡೆಯಾದರೆ, ಪುರುಷ ಜೊತೆಗಿದ್ದರೂ ಕೆಲವೊಮ್ಮೆ ಇಂತಹ ದುರಂತಗಳಿಗೆ ಎಡೆಯಾಗುವ ಪರಿಸ್ಥಿತಿ ಬಂದಿದೆ. ಉದಾಹರಣೆಗೆ ಪ್ರಸ್ತುತ ಹೊಸ ವರ್ಷ ದಿನಾಚರಣೆ ವೇಳೆ ಮುಂಬೈಯಲ್ಲಿ ನಡೆದ ಘಟನೆಯನ್ನೇ ನೆನಪಿಸಿಕೊಳ್ಳಿ. ಹೆಣ್ಣು ಎಷ್ಟು ಸುರಕ್ಷಿತಳು ಎಂದು ಇದರಿಂದ ತಿಳಿಯುತ್ತದೆ. ಬರೀ ಪ್ರಾಯಕ್ಕೆ ಬಂದ ಹೆಣ್ಣು ಮಾತ್ರವಲ್ಲ ದಿನೇ ದಿನೇ ಹೆಣ್ಣು ಹಸುಗೂಸಿನಿಂದ ಹಿಡಿದು ವೃದ್ಧೆಯರ ವರೆಗೆ ಇಂದು ಮಾನಭಂಗಗಳು ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕುವವರು ಯಾರು? ಅತ್

ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....

ಮಹಿಳಾ ದಿನಾಚರಣೆಯ ನೂರನೇ ವರ್ಷವನ್ನು ಆಚರಿಸುವ ಈ ಸಂದರ್ಭನಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಆರ್ಥಿಕ ಮತ್ತು ಲಿಂಗ ಸಮಾನತೆ"ಎಂಬ ಧ್ಯೇಯವಾಕ್ಯ ಘೋಷಿಸಿದೆ. ಆದರೆ ಶತಮಾನ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಕನಿಷ್ಠ ಕೂಲಿಗಾಗಿ ದಿನವಿಡೀ ದುಡಿಯುವ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ ಎನ್ನುವುದು ನಮ್ಮ ಕಣ್ಣ ಮುಂದಿರುವ ಜ್ವಲಂತ ಸಾಕ್ಷಿಯ ನಡುವೆ ಮಹಿಳೆಯರ ವೇತನ ಸಮಾನತೆಯ ಘೋಷಣೆಯೊಂದಿಗಿನ ನೂರನೇ ವರ್ಷಾಚರಣೆ ವಿಪರ್ಯಾಸವಲ್ಲವೇ? ಇತ್ತೀಚೆಗೆ ಅಮೆರಿಕವು ಪ್ರಕಟಿಸಿದ "2007 ಜಾಗತಿಕ ನಗರಾಭಿವೃದ್ಧಿ ಪರಿಷ್ಕರಣಾ ವರದಿ"ಯಲ್ಲಿ ಭಾರತದ ಅತೀ ಹೆಚ್ಚು ಜನರು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನಾವೀಗಾಗಲೇ ಓದಿದ್ದೇವೆ. ಪ್ರಸ್ತುತ ವರದಿ ಪ್ರಕಾರ ಭಾರತದ ಜನಸಂಖ್ಯೆಯ 70 ಪ್ರತಿಶತ ಮಂದಿಯೂ ಹಳ್ಳಿಗಳಲ್ಲಿ ವಾಸವಾಗಿದ್ದಾರೆ ಇನ್ನುಳಿದ 30% ಮಂದಿ ಮಾತ್ರ ನಗರವಾಸಿಗಳಾಗಿದ್ದಾರೆ. ಅಂದರೆ ಇಲ್ಲಿನ ಬಹುತೇಕ ಮಂದಿಯೂ ಕೃಷಿಯನ್ನು ಅವಲಂಬಿಸಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಂಡುಕೊಳ್ಳಬೇಕಾದುದು ಅತೀ ಅಗತ್ಯ ಎಂದಾಯಿತು. ಇದರ ಜೊತೆಗೆ ಗ್ರಾಮೀಣ ಜನರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಯನ್ನು ಹೊಂದಬಹುದೆಂದು ತಜ್ಞರ ಅಭಿಪ್ರಾಯ. ಅದೇನೇ ಇರಲಿ ಗ್ರಾಮೀಣ ಜನರ ಅಥವಾ ಮಧ್ಯಮ ವರ್ಗದ ಜನರ ಆರ್ಥಿಕತೆಯ

ಒಲವಿನ ಉಡುಗೊರೆ ಕೊಡಲೇನು..

ವ್ಯಾಲೆಂಟೇನ್ಸ್ ದಿನ ಹತ್ತಿರ ಬರುತ್ತಿದ್ದಂತೆ ಅವಳಿಗೆ ನಿದ್ದೆ ಹತ್ತುತ್ತಲೇ ಇರಲಿಲ್ಲ. ರಾತ್ರಿ ಮುಗ್ಗುಲ ಬದಲಿಸಿ ಕಾಲ ಕಳೆದರೂ ತನ್ನ ಪ್ರಿಯತಮನಿಗೆ ಯಾವ ರೀತಿಯ ವ್ಯಾಲೆಂಟೇನ್ಸ್ ಡೇ ಗಿಫ್ಟ್ ಕೊಡಲಿ ಎಂದು ಅವಳು ಪದೇ ಪದೇ ಚಿಂತಿಸುತ್ತಿದ್ದಳು . ಅವನೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ನೆನೆದು ಸುಮ್ ಸುಮ್ನೆ ನಕ್ಕು ಅಪ್ಪಿಕೊಳ್ಳುತ್ತಿದ್ದ ತಲೆದಿಂಬು, ಒಂದು ಗಳಿಗೆ ಅವನಿಂದ ದೂರವಿರಲಾರದೆ ಚಡಪಡಿಸುವಾಗ ಕಣ್ಣೀರು ಸುರಿದು ಮುಸು ಮುಸು ಅತ್ತು ಮುಖ ಮರೆಸಿಕೊಂಡ ಆ ದಿಂಬು..ಅಬ್ಬಾ ಮನಸ್ಸಿನ ಎಷ್ಟು ಭಾವನೆಗಳನ್ನು ನಾವು ಆ ದಿಂಬಿನೊಂದಿಗೆ ಹಂಚಿಕೊಳ್ಳುವುದಿಲ್ಲ!!!. ಗಿಫ್ಟ್ ..ಗಿಫ್ಟ್ ಅದು ಮಾತ್ರವೇ ಇದೀಗ ಅವಳ ಕನಸು ಮನಸ್ಸಿನಲ್ಲಿತ್ತು. ಯಾವ ತರದ ಉಡುಗೊರೆ ನೀಡಿ ತನ್ನ ಪ್ರೀತಿಯನ್ನು ಪ್ರಕಟಿಸಲಿ? ಸಾಗರದಷ್ಟು ಆಳವೂ ಆಗಸದಂತೆ ವಿಶಾಲವಾಗಿರುವ ನನ್ನ ಪ್ರೀತಿಯನ್ನಳೆಯಲು ಈ ಒಂದು ಉಡುಗೊರೆಗೆ ಸಾಧ್ಯವೇ? ಪ್ರೇಮ ಲೋಕದಲ್ಲಿ ಹಲವು ಕಾಲ ವಿಹರಿಸಿದವರಿಗೆ ಕಳೆದ ವ್ಯಾಲೆಂಟೇನ್ಸ್ ಗಿಫ್ಟ್ ಗಿಂತ ಮಿಗಿಲಾದದ್ದು ಈ ಬಾರಿ ನೀಡ ಬೇಕೆನಿಸಿದರೆ, ಮೊದ ಮೊದಲು ಹೊಸ ಚಿಗುರ ಪ್ರೇಮಕ್ಕೆ ಯಾವ ಉಡುಗೊರೆ ಆರಿಸ ಬೇಕೆಂಬ ಗೊಂದಲ. ಇನ್ನು ಕೆಲವರಿಗೆ ಗಿಫ್ಟ್ ಆರಿಸಿ ಆಯ್ತು ಅದನ್ನು ಕೊಡುವುದೇಗೆ? ಪಡೆಯುವುದು ಹೇಗೆ? ಒಂದು ವೇಳೆ ಗಿಫ್ಟ್ ಸಿಕ್ಕಿದರೆ ಅದನ್ನು ಮನೆಯವರ ಮುಂದೆ ಹೇಗೆ ಬಚ್ಚಿಡ ಬೇಕೆಂಬ ಸಮಸ್ಯೆ. ಅದನ್ನು ಚಿರಕಾಲ ಕಾಪಾಡಿ ಕೊಂಡು ಬಂದು "ಯಹ್ ಪ್

ಸಲ್ಲಾಪ

ಮುನಿದಾಗ ಸತಿ ಕೇಳಿದ ಪತಿ ನಿನಗಾಗಿ ತರಲಾ ಗಗನದಾ ತಾರೆ ಕಣ್ಣು ಕೆಂಪಾಗಿಸಿ ಎಂದಳಾಕೆ ತರಲಾರದವನು ಸೀರೆ ಕೊಂಡು ಬರುವನೇ ತಾರೆ?

ವ್ಯಥೆ

ನನ್ನ ಪ್ರೇಯಸಿಗಾಗಿ ತೆರೆದಿಟ್ಟ ಹೃದಯದ ಬಾಗಿಲು ಚಿಲಕ ಹಾಕಿ ಬೀಗ ಜಡಿದಳು ನನ್ನ ಮಾವನ ಮಗಳು!!

ಕಿಂಡಿಗಳು ಮುಚ್ಚಿವೆ !

ನಾವು, ಬಳಲಿ ಬೆಂಡಾದವರು ಬೆವರು ನೀರ ಸುರಿಸಿ ಎದೆಗೂಡನುಬ್ಬಿಸಿ ಮೂಳೆ ಮುರಿತದ ಹೊತ್ತಲೂ ಸತ್ತು ಬೇಸತ್ತ ನಾವು ಕೂಲಿಯವರು || 1 || ಚಿತ್ರ ವಿಚಿತ್ರ ಛಾಯೆಗಳು ಅಸ್ಪಷ್ಟ ಬದುಕ ಚಿತ್ರದ ಮೇಲೆ ಚಿತ್ತಾರ ಬರೆದಿರಲು ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ ನಾವು ಕೂಲಿಯವರು || 2 || ಬದುಕು-ಬವಣೆಯ ನಡುವೆ ಹರಿದ-ಕರಿದ ಬೆಂದ ರೊಟ್ಟಿ ಗಳ ಒಳಗೆ ರಕ್ತ ಮಡುಗಟ್ಟಿ ಎದೆಗುಂದದೆ ಈಸಿ ಜೈಸುವ ನಾವು ಕೂಲಿಯವರು || 3 || ಬಂದು, ಕೊಂದು, ತಿಂದ ಜನರೆಡೆಯಲಿ ರಕ್ತದೋಕುಳಿಯ ಮಾಸದಾ ಹೆಜ್ಜೆಯದು ನಾತ ಬೀರುವ ಕೊಳೆತ ಅಸ್ಥಿಮಜ್ಜೆ ಯೆಡೆಯಲ್ಲಿ ಹಗಲಿರುಳೆನ್ನದೆ ದುಡಿವ ನಾವು ಕೂಲಿಯವರು || 4 || ಹಬ್ಬ ದಿಬ್ಬಣದಿ ಹಿಟ್ಟಿರದ ಬರಿ ಹೊಟ್ಟೆ ಮುರುಕಲು ಗುಡಿಸಲ ಹಳೆ ಮಂಚದಲಿ ಗೆದ್ದಲು ಕೆಡವಿ ಬಣ್ಣ ತೊಯ್ದ ಉಡುಬಟ್ಟೆ ಆದರೂ ಗಟ್ಟಿಯಿದೆ ನಮ್ಮ ರಟ್ಟೆ ನಾವು ಕೂಲಿಯವರು || 5 || ಕನಸುಗಳ ಹೆಣೆಯುವೆವು ಆ ಒಣದೇಹದ ಬತ್ತಿದಾ ಹೃದಯದಲಿ ನಭವ ಚುಂಬಿಸಿ, ತಾರೆಗೀಳಲು ಸದಾ ಬಯಸುವೆವು ಮೇಲೆ ಬರಲೆಂದೂ ನಾವು ಕೂಲಿಯವರು || 6|| ಏಳ ಬಯಸುವೆವು ಶಿರವೆತ್ತಿ ದೊಡ್ಡ ಪಾದ ಗಳ ದಮನ ತುಳಿತಗಳಡಿಯಿಂದ ರವಿ ರಶ್ಮಿಯ ಮುಂದೆ ದೀವಟಿಗೆ ಹಿಡಿದು ಚಂದಿರನ ಮಡಿಲಲ್ಲಿ ಜೋ ಹಾಡಲಿರುವ ನಾವು ಕೂಲಿಯವರು || 7|| ನಾವು ಅಳುವುದಿಲ್ಲ ಅತ್ತಿಲ್ಲ ದಿನಾ ಅಳುವವರಿಗೆ ಎಲ್ಲಿಂದ ಕಣ್ಣೀರು? ರಕ್ತ ಹಿಂಡಿದರೆ ರಕ್ತವೂ ಖಾಲಿ ಜೀವನದ ಗೋಳೇ ನಮ್ಮ ಈದ್, ಹೋಳಿ ! ನಾವು ಕೂಲಿಯವರು || 8 || ಎಂದೆನಿತು ಬಾಯ್

ನಿರೀಕ್ಷೆ....

ಕಾದು ಕುಳಿತಿರುವೆ ಕವಿತೆಗಾಗಿ ಮುಂಜಾನೆಯ ಇಬ್ಬನಿಯಲಿ ಮೈನೆನೆವ ಹಸಿರು ಹುಲ್ಲುಗಳ ನೋಡಿ... ಕವಿತೆ ಬರೆಯ ಬೇಕೆಂದೆನಿಸಿತು ಆದರೆ ಅವು, ನನಗೆ ಕಂಬನಿಗಳಂತೆ ಕಂಡವು ಮನಸ್ಸಿನಲ್ಲಿ ದುಗುಡ, ಕೈ ನಡುಗಿತು ಬರೆಯಲಾಗದು ನನ್ನಿಂದ ಕವಿತೆ.... ಎಳ ಬಿಸಿಲ ಹೊಂಗಿರಣದಿ ನಗುವ ಸೂರ್ಯಕಾಂತಿಯ ನೋಡಿ ಬರೆಯ ಬೇಕೆನಿಸಿತು ಕವಿತೆ... ಮತ್ತೊಮ್ಮೆ, ಅದೇ ಯೋಚನೆ ಮುಸ್ಸಂಜೆಗೆ ಮುದುಡಿ ಹೋಗುವ ಈ ಸುಮದ ಬದುಕು, ಅದೇ ನಡುಕ ಎಂದೆನಿತು ಕವಿತೆ ಬರೆಯಲೇನು? ಉರಿಯುವ ಮಧ್ಯಾಹ್ನದ ಬೇಗೆಯಂತೆ ಮನದಾಳದ ಯಾತನೆ... ಮುಸ್ಸಂಜೆಯಲಿ ಬಿರಿಯುವ ಬಯ್ಯ ಮಲ್ಲಿಗೆ, ಗೂಡು ಸೇರುವ ಹಕ್ಕಿ ಚುಕ್ಕಿಯಂತೆ ನಭದಲ್ಲಿ ತೋರುತಿರಲು ಕವಿತೆಗಾಗಿ ಹುಡುಕಿದರೆ ಪದ ಪುಂಚಗಳು ಸಿಗಲೇ ಇಲ್ಲ....ಏನ ಬರೆಯಲಿ ನಾ? ಬಿರಿದ ಬಾನಂಗಳದಿ ನಸುನಗುವ ಚಂದಿರ, ಇಕ್ಕೆಲಗಳಲ್ಲಿ ಕಣ್ಣು ಮಿಟುಕಿಸುವ ತಾರೆಗಳತ್ತ ದೃಷ್ಟಿ ಹಾಯಿಸಿರೆ... ಆಗೊಮ್ಮೆ ಈಗೊಮ್ಮೆ ಬೀಳುವ ಉಲ್ಕೆಗಳಂತೆ ಜೀವನದಿ ಕಷ್ಟ ಸುಖಗಳ ದ್ವಂದ್ವ.. ಒಂದೆರಡು ಸಾಲು ಬರೆಯಲು ತಡಕಾಡಿದರೆ ಮುನಿಸೇತಕೆ ನಿಮಗೆ? ಕವಿತೆಗಳೇ ನೀವು ಬರುವಿರೆಂದು?

ಅಪ್ರಕಟಿತ

ಆಕೆ, ಹದಿನೇಳರ ಬೊಗಸೆ ಕಂಗಳ ಚೆಲುವೆ ಮೈಮನದಿ ಪುಟಿದೆದ್ದ ಯೌವನ ತುಂಬಿದ ಕುಡಿನೋಟದಿ, ಚಿಗುರು ಮೀಸೆಯವ ಕೇಳಿದನಿನಿತು ಅವಳ ಪ್ರೇಮಭಿಕ್ಷೆ ನಾಚಿ ಕೆಂಪಾದ ಕೆನ್ನೆ, ಹೃದಯದಲಿ ತುಡಿತ ಮಿಡಿತದೊಳು ಅವನೆಂದ "ಎಲೆ ಚೆಲುವಿ, ನೀನೇ ನನ್ನ ಮನದನ್ನೆ ನೀನು ಒಂದು ನಾನು ಬರೀ ಸೊನ್ನೆ!" ಪ್ರೇಮಪಾಶದೊಳು ಜಾರಿ ಬಿದ್ದಳಾಕೆ ಬಂಧಿಯಾದಳು ಅವನ ಬಿಸಿ ಅಪ್ಪುಗೆಯಲಿ ತುಟಿಯಂಚಿನ ಸಿಹಿ ಚುಂಬನದಿ ಮೈ ಮರೆತಳು ಪ್ರೇಮ- ಪ್ರೇಮಿಗಾಗಿ ಪ್ರೇಮಸಾಗರದೆಡೆಯಲ್ಲಿ ಕಾಮ ಸುಳಿಗೆ ಸಿಕ್ಕ ಹೆಣ್ಣು- ಬದುಕು ವ್ಯರ್ಥವಾಯಿತು ಮೋಹ ನಾಟಕ -ದಲ್ಲಿ ವೇಷ ಕಳಚಿದಾಗ ಆಕೆ ಬಸುರಿ ಹೊಸ ಜೀವ ಗರ್ಭದೊಳು ಚಿಗುರೊಡೆ ದಿರಲು ಒಲ್ಲೆನೆಂದನು ನಲ್ಲ ಬಸುರಿಯನು ವರಿಸುವುದೇ? ಛೀ... ಇದು ನನ್ನದಲ್ಲ! ಕೆಟ್ಟು ಹೋಯಿತು ಮಾನ-ಮೌನ ತಳೆಯಿತು ಮನ, ತುಂಬಿ ದುಃಖ ದುಮ್ಮಾನ ಬಂಧಿಯಾದಳಾಕೆ ಮನೆ, ಮನಗಳಂತಿರಲು ನವಮಾಸ ತುಂಬದೆ ಕಾಣಿಸಿದ ಹೆರಿಗೆ ಬೇನೆ ನೋವು ಸಹಿಸಿದಳಾ ಮಾತೆ ಕಂದನ ಮುಖಕಂಡು ನೋವ ಮರೆಯುವೆನೆಂದು ಆದರೆ ಕಂಡಿಲ್ಲ ಆಕೆ ಮಗುವಿನ ಹೊಸರೂಪ ಆಗಲೇ ನಡೆದಿತ್ತು ಆಕೆಯ ಗರ್ಭಪಾತ!!! ಇತ್ತ ಕನಸುಗಳ ಗಾಳಿ ಗೋಪುರದಿ ದುಃಖ ಮಡುಗಟ್ಟಿದ ಹೃದಯ, ಕೃಶ ದೇಹ ತುಡಿವುದು ನಿಶ್ಕಲ್ಮಷ ಸ್ನೇಹ -ಕರುಣೆಗಾಗಿ ಅವಳ ಆಸೆ ಆಕಾಂಶೆಗಳು ರಚಿತವಾದರೂ ಅಸ್ಪಷ್ಟ ಅಪ್ರಕಟಿತ !!

ವರ್ತಮಾನ

ಎದೆಯ ತಲ್ಪದಲವಿತ ಕಲ್ಪನೆಗಳ ನಗ್ನಶಿಲೆಯನು ಕೆತ್ತಿ ಬಿರಿದ ಆಗಸದಿ ಚುಕ್ಕಿಗಳ ಚಿತ್ತಾರ ಬಣ್ಣ ಜಾಲದಲಿ ಸಿಕ್ಕಿ, ರೂಪ ತಳೆದ ಕನಸುಗಳ ಕರಡು ರೇಖಾಚಿತ್ರ ಹೊಸ ದಿನದ ಹೊಂಗಿರಣ ಪ್ರಸ್ತುತಕೆ ಧಿಕ್ಕರಿಸಿ, ವರ್ತಮಾನದ ನಡುವೆ ಅಜ್ಜ ನೆಟ್ಟಾಲದ ರೆಂಬೆಗಳ ಸೀಳಿ ಉದುರುವುವು, ಸ್ವಪ್ನರಶ್ಮಿಗಳ ಸುತ್ತ ಹಾರುವ ಕ್ಷಣಿಕ ಜೀವನ ಸುಖದ ಪುಟ್ಟ ಹಾತೆಗಳು ಮಂಜುಮುಸುಕಿದ ಓಣಿಯಲಿ ನಡೆದು ನಗ್ನ ಪಾದದ ಗುರುತು ಮೂಡಿರೆ ಇಕ್ಕೆಲದಿ ಇಬ್ಬನಿಯು ಕಿಕ್ಕಿರಿದು ನಗುವಾಗ ದಳ ಪಕಳೆ ಬಿಚ್ಚಿ, ಸುಮಗಳನು ಮುತ್ತಿಕ್ಕಿ ಬಿರಿದೆದೆಯನ್ನು ಕೆಣಕಿಸುವ ಭ್ರಮರ ಕೂಟ ಪೊರೆ ಕಳಚಿ ಧುಮ್ಮಿಕ್ಕುವ ಹೊಂಗನಸ ಸುಪ್ತಭಾವನೆಗಳಂತೆ, ಬೆಳ್ಮುಗಿಲ ಬಾನಿನಲಿ ರೆಕ್ಕೆ ಬಿಚ್ಚಿ ಹಾರುವ ಗುಬ್ಬಚ್ಚಿ, ಬೆಡಗು ಬೆಳಕಿನ ಜೀವ ಬೆನ್ನ ಹತ್ತಿಕ್ಕಿ ಮೂಡುವುದು ನವವರುಷದ ಕಲ್ಪನೆಯ ವರ್ಣಚಿತ್ರ !!

ನೆನಪಾಗಿದೆ... ಆ ದಿನಗಳು ಆ ಕ್ಷಣಗಳು

ನೀನಂದು ನನ್ನ ಮೊಬೈಲ್ ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.." ಮೇರೆ ಹಾಥ್ ಮೆ ತೇರಾ ಹಾಥ್ ಹೋ.. ಸಾರಿ ಜನ್ನತೆ ಮೇರೆ ಸಾತ್ ಹೋ " ಎಷ್ಟು ಸುಂದರವಾದ ಸಾಲುಗಳು..ನಮ್ಮ ಕಾಲೇಜ್ ಡೇ ಸೆಲೆಬ್ರೇಶನ್ ಹಾಗೇ ಅಲ್ವಾ. ಐದು ರುಪಾಯಿ ಕೊಟ್ಟು ಡೆಡಿಕೇಶನ್ ಕೌಂಟರ್‌ಗೆ ಹೋಗಿ ಕಂಪ್ಯೂಟರ್‌ನಲ್ಲಿ ನಮ್ಮವರಿಗೊಂದು ಹಾಡು ಡೆಡಿಕೇಟ್ ಮಾಡುವುದೇ ಒಂದು ಥ್ರಿಲ್. ಅನು, ಅಂದು ಮೊದಲ ಬಾರಿಗೆ ಮೈಕ್‌ನಲ್ಲಿ "ದ ನೆಕ್ಟ್ಸ್ ಸೋಂಗ್ ಈಸ್ ಡೆಡಿಕೇಟೆಡ್ ಫ್ರಮ್ ಅನು, ಟು..." ಎಂದು ನನ್ನ ಹೆಸರು ಕರೆದು ಹೇಳಿದಾಗ ನಾನು ಒಮ್ಮೆ ಲೆ ಶಾಕ್ ಆಗಿ ಬಿಟ್ಟೆ ಮಾರಾಯ್ರೆ. ಆ ಹಾಡು ಕೇಳಿದಾಗ ಎಂದೂ ನನಗೆ ನೀನು ನೆನಪಾಗುತ್ತೀಯೆ. ಅಂದು ನನಗೆ ಎಷ್ಟು ಖುಷಿಯಾಗಿತ್ತು ಗೊತ್ತಾ? ಅದಕ್ಕಾಗಿಯೇ ನಾನು ಅದನ್ನು ಕಾಲರ್ ಟ್ಯೂನ್ ಆಗಿ ಸೆಲೆಕ್ಟ್ ಮಾಡಿದ್ದು. ಖಂಡಿತವಾಗಿಯೂ ನಾವು ಕಾಲೇಜ್‌ನಲ್ಲಿ ಕಳೆದ ಅದೆಷ್ಟು ಸುಮಧುರ ಗಳಿಗೆಗಳು ಇಂದಿಗೂ ಹಸುರಾಗಿಯೇ ಇವೆ. ನೀನು ನನ್ನ ಗೆಳೆಯನಾಗಿ ದೊರೆತದ್ದೇ ನನ್ನ ಭಾಗ್ಯ. ನಮ್ಮಿಬ್ಬರ ಗೆಳೆತನ ನಂತರ ಅದು ಪ್ರೇಮವಾಗಿ ಬದಲಾದದ್ದು...ಎಲ್ಲಾ ಕಾಲದ ಲೀಲೆಯಲ್ಲದೆ ಮತ್ತೇನು? ಅನು, ನೀನು ನನ್ನನ್ನು ಪ್ರೊಪೋಸ್ ಮಾಡುವುದಕ್ಕಿಂತ ಮೊದಲೇ ನಾನು ನಿನ್ನನ್ನ