Posts

Showing posts from 2012

ಅವಳು ಮತ್ತೊಬ್ಬಳು!- ಕೃತಿ ಬಿಡುಗಡೆಗೆ ಆಮಂತ್ರಣ

Image
ಪ್ರಿಯರೇ, 2 ವರ್ಷಗಳ ಹಿಂದೆ ಕನ್ನಡಪ್ರಭ 'ಚುಕ್ಕಿ' ಪುರವಣಿಯಲ್ಲಿ ಸಾಧಕಿಯರ ಬಗ್ಗೆ ನಾನು ಬರೆದ ಲೇಖನಗಳನ್ನು ಇದೀಗ ಪುಸ್ತಕರೂಪದಲ್ಲಿ ಹೊರತರುತ್ತಿದ್ದೇನೆ. ಕೃತಿ ಹೆಸರು ಅವಳು ಮತ್ತೊಬ್ಬಳು!. ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟು ಇದು ನಾಲ್ಕನೇ ವರ್ಷ. ಎರಡು ವರ್ಷಗಳ ಹಿಂದೆ ನನ್ನ ಚೊಚ್ಚಲ ಕವನ ಸಂಕಲನ "ನೆನಪಿನ ಮಳೆಯಲ್ಲಿ" ಬಿಡುಗಡೆಯಾಗಿತ್ತು. ಇದೀಗ ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕಾರ್ಪಣೆಗೆ ಸಿದ್ಧವಾಗಿದೆ. ಡಿಸೆಂಬರ್ 9 ಭಾನುವಾರ ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವಳು ಮತ್ತೊಬ್ಬಳು ಕೃತಿಯನ್ನು ನಟಿ ನೀತೂ ಲೋಕಾರ್ಪಣೆ ಮಾಡಲಿದ್ದಾರೆ. ನನ್ನ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಬರಬೇಕು...ನಿಮ್ಮ ಹಾರೈಕೆ ನನ್ನೊಂದಿಗಿರಲಿ... ಭಾನುವಾರ ಕ.ಸಾ.ಪದಲ್ಲಿ ನಿಮ್ಮನ್ನು ಕಾಯುತ್ತಿರುತ್ತೇನೆ...ನೀವು ಬರಲೇಬೇಕು... ರಶ್ಮಿ ಕಾಸರಗೋಡು.

ಓ ಗಂಡಸರೇ...ನೀವೆಷ್ಟು ಒಳ್ಳೆಯವರು!

Image
ನೀ ನು ಹುಡುಗ ನಮ್ಮ ಜತೆ ಬರಬಾರದು... ನಾವು ಆವಾಗ ಮೂರನೇ ಕ್ಲಾಸು. ನಮ್ಮ ಜತೆಯಲ್ಲೇ ಆಟವಾಡುತ್ತಿದ್ದ ನಮ್ಮ ಸಹಪಾಠಿಯಾಗಿದ್ದ ಆ ಹುಡುಗ ನಾವೆಲ್ಲಾ ಹುಡುಗಿಯರು ಕೈ ಕೈ ಹಿಡಿದು "ಒಂದಕ್ಕೆ" ಹೋಗುವಾಗ ಆತ "ನಾನೂ ಬರ್ತೇನೆ"ಎಂದು ರಾಗ ಎಳೆದಿದ್ದ...ಆವಾಗ ನಾವೆಲ್ಲರೂ ನೀನು ಹುಡುಗ ನಮ್ಮ ಜತೆ ಬರಬಾರದು...ಎಂದು ಒಕ್ಕೊರಲಿನಿಂದ ಹೇಳಿದ್ದೆವು. ನಮ್ಮ ಉತ್ತರ ಅವನಿಗೆ ಬೇಸರ ತರಿಸಿತ್ತು ಎಂದು ಅವನ ಮುಖ ನೋಡಿದಾಗಲೇ ಗೊತ್ತಾಗಿತ್ತು. ಕ್ರಮೇಣ ನಾವು ಬೆಳೆಯುತ್ತಾ ಬಂದಂತೆ ಹುಡುಗರು-ಹುಡುಗಿಯರ ಅಂತರ ಹೆಚ್ಚುತ್ತಾ ಹೋಯ್ತು. ಹೈಸ್ಕೂಲ್ ಮೆಟ್ಟಲು ಹತ್ತಿದಾಗಲಂತೂ ಅವರು 'ಹುಡುಗರು'..ನಾವು ದೊಡ್ಡ ಹುಡುಗೀರು. ನಮ್ಮೂರು ಹಳ್ಳಿಯಾಗಿರುವುದರಿಂದ ಹುಡುಗರು ಹುಡುಗಿಯರು ನಡುವೆ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸಂಬಂಧಿಕರಾಗಿರಲಿ, ಗೆಳೆಯರಾಗಿರಲಿ ಅಲ್ಲೊಂದು ಲಿಂಗಬೇಧದ ಗೆರೆಯಿರುತ್ತಿತ್ತು. ಹುಡುಗರ ಮುಂದೆ ಹೇಗೆ ಮಾತನಾಡಬೇಕು, ಅವರ ಮುಂದೆ ಹೇಗೆ ನಿಲ್ಲಬೇಕು, ನಮ್ಮ ಡ್ರೆಸ್...ಕೂದಲು..ಕಣ್ಣು, ಹಾವಭಾವ ಎಲ್ಲದಕ್ಕೂ 'ನೀನು ಹುಡುಗಿ' 'ಅವನು ಹುಡುಗ' ಹಾಗೆಲ್ಲಾ ಮಾಡಬಾರದೆಂಬ ಉಪದೇಶದ ಲೇಪ ಇದ್ದೇ ಇರುತ್ತಿತ್ತು. ಪ್ಲಸ್ ಟು ...ಹದಿಹರೆಯ...ಲವ್ ಆಗುವ ಸಾಧ್ಯತೆ ಜಾಸ್ತಿಯೇ..ಹುಡುಗರೂ ನಮಗಿಂತ ಕಮ್ಮಿಯೇನಿಲ್ಲ ಬಿಡಿ. ಒಂದು ಕಾಲದಲ್ಲಿ infatuationಗೆ ಒಳಗಾಗಿ ಸಾವಿರಾರು ಕನಸು ಕಂಡು ಅದು ಏನೆಂ

ನಿವೇದನೆ

ಅ ಡುಗೆ ಮನೆಯತ್ತ ಮುಖ ಮಾಡಿದಾಗ ಸಾಲಲ್ಲಿರಿಸಿದ ಡಬ್ಬಗಳ ಕುಹಕ ನಗೆ ಕಾದ ಬಾಣಲೆಯಲ್ಲಿ ಸಾಸಿವೆಯ ಅಟ್ಟಹಾಸ ನನ್ನ ಭಾವನೆಗಳ ಕೆಣಕಿದಂತೆ ಇನ್ನೂ ಓದಿ ಮುಗಿದಿರದ ಪುಸ್ತಕದ ಪುಟವ ವೇಗದಿ ತಿರುವಿದಾಗ ಕೊಚ್ಚಿ ಹೋಗಿತ್ತು ನನ್ನ ಸ್ವಪ್ನ ಸುಂದರ ನೌಕೆ ಈ ನನ್ನ ಪ್ರಸವಕ್ಕೆ ಅಮ್ಮನ ಕಣ್ಣುಗಳಲ್ಲಿರುವ ವ್ಯಾಕುಲತೆಯಿಲ್ಲ ಪತಿಯ ಸಾಂತ್ವನವಿಲ್ಲ ಬಂಧುಗಳ ಮುಂಗಡ ಶುಭಾಶಯದ ಕರೆಗಳೂ ಬಂದಿಲ್ಲ ಅನೈತಿಕ ಗರ್ಭದಂತೆ... ಒಂದಷ್ಟು ಭಯ...ಕೈಗಳಲ್ಲಿ ನಡುಕ ಯಾರಿಗೂ ಕಾಣದಂತೆ ನನ್ನ ಪುಟ್ಟ ಕೋಣೆಯ ತೂಗು ತೊಟ್ಟಿಲಲ್ಲಿ ಖಾಲಿ ಹಾಳೆಗಳ ನಡುವೆ... ನಾನೆಷ್ಟು ಕಾಯಲಿ? ಉಪ್ಪಿಟ್ಟಿಗೆ ಒಗ್ಗರಣೆ ಹಾಕಿ ಒಂದಿಷ್ಟು ತಿಂದು, ಡಬ್ಬಕ್ಕೆ ತುಂಬಿಸಿ ಗುಡಿಸಿ, ಸಾರಿಸಿ, ಪಾತ್ರೆ ತಿಕ್ಕಿ... ಮಿಂದು.....ಬಿಸಿ ನೀರು ಕಾಯಿಸಿ ಸಾಕಪ್ಪಾ....ಸಾಕು! ಎಲ್ಲೋ ಕೇಳಿದೆ ಯಾರೋ ನನ್ನ ಮಗುವನ್ನು ದತ್ತು ತೆಗೆದುಕೊಂಡಿದ್ದಾರಂತ ಅವರು ಮುದ್ದು ಮಾಡಿರಬಹುದೇ? ನನ್ನ ಮಗು....ನನ್ನ ಭಾವನೆಗಳ ಚಿಗುರು ತುಂಟಾಟಿಕೆ- ಕಣ್ಣೀರಿಡುವ ಒಮ್ಮೆ ನಗುವ-ತೂಕಡಿಸುವ ಕೋಪದಿಂದ ಬಿಕ್ಕಳಿಸುವ...ಕೂಸು ಇಲ್ಲೆ ಎಲ್ಲೋ ಕೇಳಿಸಿದಂತಿದೆ ಯಾರದ್ದೋ ದನಿಯಲ್ಲಿ ನನ್ನ ಮಗುವಿನ ತೊದಲು ನುಡಿ ಅಷ್ಟು ಸಾಕು...ನನಗೆ ಬೇಡ... ನನ್ನ ಹಳಿಯಬೇಡಿ ನನ್ನ ಹಂಗಿಸಬೇಡಿ... ಕೋರಿಕೆ...ನಿಮ್ಮಲ್ಲಿ ನನಗೊಂದಷ್ಟು ಸಮಯ ಕೊಡಿ ನನ್ನ ಈ ಸಾಲುಗಳನ್ನು ಹಡೆದು ನಿಟ್ಟುಸಿರು ಬಿಡಲೇ?

ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತಮ್ಮ...

Image
ಹೌ ದು, ಈ ಕರುತ್ತಮ್ಮ ಕಾಡಿದಷ್ಟು ಇನ್ಯಾರೂ ನನ್ನನ್ನು ಕಾಡಿರಲಿಲ್ಲ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ನಾನು ಇಷ್ಟಪಡುವ ಹೆಂಗಸರಲ್ಲಿ ಇವಳೂ ಒಬ್ಬಳು. ನಾನು ಹೀಗೆಹೇಳುತ್ತಿದ್ದರೆ ಆ ಕರುತ್ತಮ್ಮ ಯಾರು ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು ಅಲ್ಲವೇ? ಅವಳು ಮತ್ಯಾರೂ ಅಲ್ಲ ಪ್ರಶಸ್ತಿ ವಿಜೇತ ಹಳೇ ಕಾಲದ ಮಲಯಾಳಂ ಚಿತ್ರ ಚೆಮ್ಮೀನ್್ನ ನಾಯಕಿ. ಚಿತ್ರದಲ್ಲಿ ಕರುತ್ತಮ್ಮನ ಪಾತ್ರ ನಿರ್ವಹಣೆ ಮಾಡಿದ್ದು ನಟಿಶೀಲ. ಮಲಯಾಳಂನಲ್ಲಿ ಚೆಮ್ಮೀನ್ ಅಂದ್ರೆ ಸಿಗಡಿ ಮೀನು. ತಗಳಿ ಶಿವಶಂಕರ ಪಿಳ್ಳೆ ಬರೆದ ಚೆಮ್ಮೀನ್ ಎಂಬ ಕಾದಂಬರಿ ಆಧರಿತ ಚಿತ್ರವಾದ ಚೆಮ್ಮೀನ್ 1965ರಲ್ಲಿ ತೆರೆಕಂಡರೂ ಅದರಯಶಸ್ಸು ಇಂದಿಗೂ ಚಿರನೂತನ. ಅವರ ಕಥೆ, ಹಾಡು, ನಟನೆ ಅಬ್ಬಾ...ಆ ಚಿತ್ರವನ್ನು ನೋಡಿಯೇ ಅನುಭವಿಸಬೇಕು. ಚಿಕ್ಕವರಿರುವಾಗ ಶಾಲೆಯಲ್ಲಿ ಕ್ವಿಜ್್ಗೆ ಚೆಮ್ಮೀನ್ ಕಾದಂಬರಿ ಬರೆದವರು ಯಾರು? ಎಂಬ ಪ್ರಶ್ನೆ ಕಾಮನ್ ಆಗಿತ್ತು. ಮೊದಲಬಾರಿಗೆ ಚೆಮ್ಮೀನ್ ಕಾದಂಬರಿ ಬಗ್ಗೆ ಕುತೂಹಲ ಹುಟ್ಟಿಕೊಂಡದ್ದೇ ಹೀಗೆ. ಅಂತೂ ಕೊನೆಗೂ ಅದೊಂದು ದಿನ ಡಿಡಿ 1 ಚಾನೆಲ್್ನಲ್ಲಿ ಆದಿತ್ಯವಾರ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಚೆಮ್ಮೀನ್ ಚಿತ್ರ ಪ್ರಸಾರವಾಗಿತ್ತು.ನಮ್ಮ ಬ್ಲಾಕ್ ಆ್ಯಂಡ್ ವೈಟ್ ಟೀವಿಯಲ್ಲಿ ಚೆಮ್ಮೀನ್ ಚಿತ್ರ ಮೂಡಿಬರುತ್ತಿದ್ದಂತೆ ಟೀವಿಯಲ್ಲೇ ಗಮನ ಕೇಂದ್ರೀಕರಿಸಿ ಕುಳಿತಿದ್ದೆ. ಚಿತ್ರದುದ್ದಕ್ಕೂ ಕಡಲ ಕಿನಾರೆ...ಮೀನು...ಮೀನುಗಾರರ ಸಂಭಾಷಣೆ..ಅದ್ಭುತ ಸಂಗೀತ...

ಹೆಣ್ಮಕ್ಕಳಿಗೆ ಕಪಾಳಮೋಕ್ಷ ಮಾಡುವಾಗ ಇವರಿಗೆ 'ಭಾರತೀಯ ಸಂಸ್ಕೃತಿ' ನೆನಪಿಗೆ ಬರಲಿಲ್ಲವೇ?

ಆ ಧುನಿಕ ದುಶ್ಯಾಸನರು! ಹೌದು. ಇವರನ್ನು ದುಶ್ಯಾಸನರು ಎಂದು ಕರೆದರೂ ಸಾಲುವುದಿಲ್ಲ. ಯಾಕೆಂದರೆ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆಯುತ್ತಲೇ ಸುಸ್ತಾಗುತ್ತಾನೆ. ಇವರು ಹಾಗಲ್ಲ ಹೆಣ್ಮಕ್ಕಳ ಕಪಾಳಕ್ಕೆ ಹೊಡೆದು ಅವರ ಮೈಮೇಲೆ ಕೈಯಾಡಿಸುತ್ತಾರೆ. ಅಲ್ಲಿದ್ದ ಹುಡುಗನೊಬ್ಬ 'ಇನಿ ಎನ್ನ ಬರ್ತ್ ಡೇಯೇ...ಹಾಕೊಡ್ಚಿ' (ಇವತ್ತು ನನ್ನ ಹುಟ್ಟುಹಬ್ಬ, ಹೊಡಿಯಬೇಡಿ) ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ಅವನನ್ನು ಅರೆಬೆತ್ತಲೆಯಾಗಿಸಿ ಥಳಿಸುತ್ತಾರೆ. ಹೆಣ್ಮಕ್ಕಳನ್ನು ಹಿಡಿದು, ಗುದ್ದಿ, ದೂಡಿ ಮಂಚಕ್ಕೆ ನೂಕಲಾಗುತ್ತದೆ. ಅದರಲ್ಲಿ ಹುಡುಗಿಯೊಬ್ಬಳ ಕೆನ್ನೆಗೆ 'ಚಟಾರ್್' ಎಂದು ಬಿದ್ದ ಏಟಿನಿಂದ ಆಕೆ ಮಂಚದ ಮೇಲೆ ದೊಪ್ಪನೆ ಬೀಳುತ್ತಾಳೆ. ಅಲ್ಲಿದ್ದ ಯುವಕ ಯುವತಿಯರು ಮುಖ ಮುಚ್ಚಿಕೊಳ್ಳುತ್ತಿದ್ದಂತೆ ಬಲವಂತವಾಗಿ ಅವರ ಕೈ ಹಿಡಿದು ಎಳೆಯುತ್ತಾ, ಹುಡುಗಿ ದೇಹದ ಮುಟ್ಟಬಾರದ ಜಾಗದಲ್ಲೆಲ್ಲಾ ಹಿಡಿದು ಅವರನ್ನು ತಳ್ಳಲಾಗುತ್ತದೆ. ಇದು ಮಂಗಳೂರಿನ ಹೊರವಲಯ ಪಡೀಲ್್ನ ಬಡ್ಲಗುಡ್ಡೆಯಲ್ಲಿರುವ 'ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ' ಮೇಲೆ ಶನಿವಾರ ರಾತ್ರಿ ನಡೆದ 'ನೈತಿಕ ಪೊಲೀಸ್್' ಪುಂಡಾಟಿಕೆಯ ಝಲಕ್. ಈ ಮೊದಲು ಅಂದ್ರೆ 2009 ಜನವರಿ 24ರಂದು ಮಂಗಳೂರಿನ ಪಬ್ ಒಂದರ ಮೇಲೆ ಇದೇ ರೀತಿ ದಾಳಿ ನಡೆಸಲಾಗಿತ್ತು. ಆದರೆ ಶನಿವಾರ ನಡೆದದ್ದು? ಇಲ್ಲಿನ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದಾರೆ ಎಂದು ದಾಳಿ ನಡೆಸಲಾಗ

ಒಂದು ಪೈದ್ಯ

ಇವತ್ತು 22/ 7 ಅಂದ್ರೆ Pi Approximation Day. π (ಪೈ) ಬಗ್ಗೆ ಈ ತಿಂಗಳ ರೀಡರ್ಸ್ ಡೈಜೆಸ್ಟ್್ನಲ್ಲಿ ತುಂಬಾ ಮಾಹಿತಿಪೂರ್ಣ ಲೇಖನ ಬಂದಿತ್ತು. ಅದರಲ್ಲಿ Piems (pi and poem) ಬಗ್ಗೆ ಓದಿದಾಗ ಇಂಥದ್ದೇ ಕವನ (ಪೈದ್ಯ) ಕನ್ನಡದಲ್ಲಿ ಯಾಕೆ ರಚಿಸಬಾರದು ಎಂದು ಅನಿಸಿತು. Piems ನಲ್ಲಿ ಪೈ ಬೆಲೆಯ ಪ್ರತಿಯೊಂದು ಅಂಕಿಗೆ ಸಮವಾಗಿ ಕವನದ ಅಕ್ಷರಗಳ ಜೋಡಣೆ ಇರುತ್ತದೆ. ಅಂದರೆ 3.14159265358... ಈ ಅಂಕಿಗಳಿಗೆ ಸಮವಾಗಿ ಅಕ್ಷರ ಜೋಡಿಸಿದಾಗ ಕವನ ಈ ರೀತಿ ಮೂಡಿಬಂತು. ಗೆಳೆಯಾ ನಾ ಹೇಳಲೇನು ನಾ ಬರೆದಿರುವ ಹೃದಯದಾಕವನವನು ನನ್ನ ಹೃದಯವೀಣೆಯು ಮಿಡಿಯುತಿದೆ ಇನಿಯಾ ಕಾಯುತಿರುವೆ ಒಲುಮೆಯಭಿಕ್ಷೆಗಾಗಿ

ಮಗಳು ಫೋನ್ ಮಾಡಿದ್ಳು...ಇವತ್ತು ಅಪ್ಪಂದಿರ ದಿನ ಅಂತೆ

Image
ಹಲೋ ಪಪ್ಪಾ....ಇವತ್ತು ಅಪ್ಪಂದಿರ ದಿನ...ಹ್ಯಾಪಿ ಫಾದರ್ರ್ಸ್ ಡೇ" ಹೌದೇನಮ್ಮಾ...ಥ್ಯಾಂಕ್ಯೂ...ಅಂತೂ ಅಪ್ಪನಿಗೂ ಒಂದು ದಿನ ಇದೆಯಲ್ಲಾ ಎಂದು ಹೇಳಿದೆ. ಹೇಗಿದ್ದೀರಾ ಪಪ್ಪಾ? ಎಂದು ಕೇಳಿ, ಪಪ್ಪಾ... ಅಮ್ಮನಿಗೆ ಫೋನ್ ಕೊಡು ಎಂದು ಅಂದ್ಳು... ಅಷ್ಟೊತ್ತಿಗೆ ನನ್ನಾಕೆ ನನ್ನ ಬಳಿ ಬಂದು ನಿಂತಿದ್ದಳು. ಫೋನ್ ಆಕೆಯ ಕೈಗಿತ್ತು ನಾನು ಟೀವಿ ಮುಂದೆ ಕೂತೆ. ಅಮ್ಮ ಮಗಳು ಸುಮಾರು ಅರ್ಧ ಗಂಟೆಯವರೆಗೆ ಹರಟುತ್ತಲೇ ಇದ್ದರು. ಹೌದು, ನನ್ನ ಪುಟ್ಟಿ ಚಿಕ್ಕವಳಿರುವಾಗ ಅವಳಿಗೆ ಎಲ್ಲವೂ ನಾನೇ ಆಗಿದ್ದೆ. ನನ್ನನ್ನು ಬಿಟ್ಟು ಆಕೆ ಎಲ್ಲಿಯೂ ಹೋಗಲ್ಲ. ಪಪ್ಪಾ..ಪಪ್ಪಾ ಎನ್ನುತ್ತಾ ನನ್ನ ಕಿರು ಬೆರಳು ಹಿಡಿದು ನಡೆದ ಮಗಳು ಈಗ ದೊಡ್ಡವಳಾಗಿದ್ದಾಳೆ. ಹೆಣ್ಮಕ್ಕಳು ಎಷ್ಟು ಬೇಗ ಬೆಳೆದು ಬಿಡ್ತಾರೆ ಅಲ್ವಾ? ನನ್ನ ಚಪ್ಪಲಿಯೊಳಗೆ ಅವಳ ಪುಟ್ಟ ಪಾದಗಳನ್ನು ತುರುಕಿ ಹೆಜ್ಜೆಯಿಡುತ್ತಾ, ನನ್ನ ಶರ್ಟ್ ಹಾಕಿ ದೊಗಳೆ ಶರ್ಟ್್ನೊಳಗೆ ನಿಂತು "ನೋಡು ಪಪ್ಪಾ ನಿಮ್ಮ ತರಾನೇ ಕಾಣ್ತಾ ಇಲ್ವಾ?" ಎಂದು ಕೇಳುತ್ತಿದ್ದ ಮಗಳು....ನಿದ್ದೆ ಮಾಡುವಾಗಲೂ ಅಷ್ಟೇ...ನನ್ನ ಪಕ್ಕದಲ್ಲೇ ಮಲಗಿ ಒಮ್ಮೊಮ್ಮೆ ನನ್ನ ಹೊಟ್ಟೆ ಮೇಲೆ ಮಲಗಿ ಉಚ್ಚೆ ಹೊಯ್ದು ಒದ್ದೆಯಾಗಿಸುತ್ತಿದ್ದ ನನ್ನ ಪುಟ್ಟಿಗೆ ಈಗ ಮದುವೆ ವಯಸ್ಸು. ಚಿಕ್ಕವಳಿದ್ದಾಗ ಅವಳು ಕೇಳಿದ್ದನ್ನೆಲ್ಲಾ ನಾನು ಕೊಡಿಸುತ್ತಿದ್ದೆ. ಹಾಗಂತ ಅವಳು ಪಪ್ಪಾ...ನನಗೆ ಅದು ಕೊಡಿಸು, ಇದು ಕೊಡಿಸು ಎಂದು ಹಠ ಹಿಡಿದವಳ

ಪ್ರಜಾವಾಣಿಗೆ 'ಅನುರಾಗ'ದ ನನ್ನಿ...

ಮಾರ್ಚ್ 9, 2012ರ ಪ್ರಜಾವಾಣಿ ಮೆಟ್ರೋ ಪುರವಣಿಯ 'ಬ್ಲಾಗಿಲನು ತೆರೆದು' ಅಂಕಣದಲ್ಲಿ ನನ್ನ ಬ್ಲಾಗ್ 'ಅನುರಾಗ'ದ ಬಗ್ಗೆ ಬರೆಯಲಾಗಿದೆ. ಇವತ್ತಿನ ದಿನ ಡಬಲ್ ಖುಷಿ ನನಗೆ. ಯಾಕೆ ಗೊತ್ತಾ? ಮಾರ್ಚ್ 9 ನನ್ನ ಅಪ್ಪ ಅಮ್ಮನ 35ನೇ wedding anniversary...ಸುದ್ದಿ ತಿಳಿದು ಅಪ್ಪ ಅಮ್ಮ ಫುಲ್ ಖುಷಿಯಾಗಿದ್ದಾರೆ. ಅವರ ಮುಖದಲ್ಲಿ ಖುಷಿ ಕಂಡು ನನಗೂ ಸಂತೋಷವಾಗಿದೆ. ನಮ್ಮೆಲ್ಲರ ಸಂತಸಕ್ಕೆ ಕಾರಣವಾದ ಪ್ರಜಾವಾಣಿಗೆ 'ಅನುರಾಗ'ದ ಧನ್ಯವಾದಗಳು. ನನ್ನಿ, ರಶ್ಮಿ. ಕಾಸರಗೋಡು.

'ಅವಳ್ಯಾಕೆ' ನಮ್ಮ ರೋಲ್ ಮಾಡೆಲ್ ಆಗ್ಬಾರ್ದು?

Image
ಈ ಜಗತ್ತಿನಲ್ಲಿ ಎಷ್ಟು ರೀತಿಯ ಮಹಿಳೆಯರಿದ್ದಾರೆ? ಎಂಬ ಪ್ರಶ್ನೆಯನ್ನು ನಿಮ್ಮಲ್ಲಿ ನೀವೇ ಕೇಳಿ ನೋಡಿ. ಮೊದಲಿಗೆ ಸುಂದರಿಯಾದ ಮಹಿಳೆಯ ಚಿತ್ರಣ ನಿಮ್ಮ ಮುಂದೆ ಬರುತ್ತದೆ ನಂತರ ನೊಂದ ಮಹಿಳೆ, ಯಶಸ್ವೀ ಮಹಿಳೆ, ದೌರ್ಜನ್ಯಕ್ಕೊಳಗಾದ ಮಹಿಳೆ, ಖಿನ್ನಳಾದ ಮಹಿಳೆ, ಸುಖಿ ಮಹಿಳೆ, ಅಹಂಕಾರಿ ಮಹಿಳೆ, ಮಾನ ಮಾರಿದ ಮಹಿಳೆ, ಮಕ್ಕಳನ್ನೇ ಕೊಂದ ಪಾಪಿ ಮಹಿಳೆ, ಕೈಕೊಟ್ಟ ಮಹಿಳೆ, ಕೈ ಹಿಡಿದ ಮಹಿಳೆ...ಹೀಗೆ ಮಹಿಳೆಯ ಹಲವಾರು 'ರೂಪ'ಗಳು ನಿಮ್ಮ ಕಣ್ಣ ಮುಂದೆ ಸುಳಿಯುತ್ತವೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಸಂದರ್ಭದಲ್ಲಿ ಚರ್ಚಾ ವಿಷಯಗಳಿಗೊಳಗಾಗುವ ಮಹಿಳೆಯರೆಂದರೆ ಒಂದು ಯಶಸ್ವೀ ಮಹಿಳೆ ಇನ್ನೊಂದು ದೌರ್ಜನ್ಯಕ್ಕೊಳಗಾದ ಮಹಿಳೆ. ಇಂತಹಾ ದಿನಾಚರಣೆಗಳಲ್ಲಿ ಯಶಸ್ವೀ ಮಹಿಳೆಯ ಸಾಧನೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯ 'ರೋದನೆ' ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ. ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ನಾವು ಓರ್ವ ಸಾಧಕಿಯ ಸಾಧನೆಗಳನ್ನು ಮೆಚ್ಚಿ ಕರತಾಡನ ಮಾಡಿದರೆ ಇನ್ನೊಂದೆಡೆ ದೌರ್ಜನ್ಯಕ್ಕೊಳಗಾದ ಮಹಿಳೆಯ ಪರ ದನಿಗೂಡಿಸುತ್ತೇವೆ. ಒಬ್ಬಳು ಯಶಸ್ಸಿನ ಮೆಟ್ಟಿಲು ಹತ್ತುತ್ತಿದ್ದರೆ ಇನ್ನೊಬ್ಬಳು ದೌರ್ಜನ್ಯದ ನೋವು ಅನುಭವಿಸುತ್ತಿರುತ್ತಾಳೆ. ಹಾಗೆ ನೋಡಿದರೆ ಯಶಸ್ವೀ ಮಹಿಳೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಎರಡು ಗುಂಪುಗಳಿಗೆ ಸೇರಿಸಿ ಪ್ರತ್ಯೇಕಿಸಬಹುದು. ಆದರೆ ಕೆಲವೊಂದು ಮಹಿಳೆಯರ ಮೇಲೆ ಆಗುವ ದೌ

ಪ್ರೀತಿ, ಸಿನಿಮಾ ಮತ್ತು ಫೇಸ್ ಬುಕ್

Image
ಶೀ ರ್ಷಿಕೆ ನೋಡಿದ ಕೂಡಲೇ ವಿಷಯ ಏನೂಂತಾ ನಿಮಗೆ ಗೊತ್ತಾಗಿರಬೇಕು ಅಲ್ವಾ? ಹೌದು ಇವತ್ತು ವ್ಯಾಲೆಂಟೈನ್ಸ್ ಡೇ(ಪ್ರೇಮಿಗಳ ದಿನ). ಪಾಶ್ಚಾತ್ಯರಿಂದ ಬಳುವಳಿಯಾಗಿ ಸಿಕ್ಕ ಈ ಆಚರಣೆ ಭಾರತದಲ್ಲಿ ಇಂದು ಗಣರಾಜ್ಯೋತ್ಸವ, ಶಿವರಾತ್ರಿಯಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರೆ ತಪ್ಪಾಗಲಾರದು. ಪ್ರೇಮಿಗಳ ದಿನ ಎಂದ ಕೂಡಲೇ ಪ್ರೀತಿಸಲು ಪ್ರತ್ಯೇಕ ದಿನ ಬೇಕಾ? ಅದೊಂದಿನ ಪ್ರೀತಿ ಮಾಡಿದರೆ ಸಾಕಾ? ಕೆಂಪು ಗುಲಾಬಿ ಕೊಟ್ಟು ಐ ಲವ್ ಯೂ ಅಂತಾ ಹೇಳಿ ಇಲ್ಲವೇ ದುಬಾರಿ ಗಿಫ್ಟ್, ಕಾರ್ಡ್ ಕೊಟ್ಟು ಪಾರ್ಕ್ ಸಿನಿಮಾ ಸುತ್ತಾಡಿ ವ್ಯಾಲೆಂಟೈನ್ಸ್ ಡೇ ಆಚರಿಸುವ ಪಾಶ್ಚಾತ್ಯರ ಪ್ರೇಮದ ಹುಚ್ಚು ಭಾರತೀಯರಾದ ನಮಗ್ಯಾಕೆ ಬೇಕು? ಎಂಬ ಪ್ರಶ್ನೆ ಪ್ರತೀ ವ್ಯಾಲೆಂಟೈನ್ಸ್ ಡೇ ದಿನದಂದು ಕೇಳಿ ಬರುತ್ತದೆ. ಈ ಬಗ್ಗೆ ಮಾಧ್ಯಮಗಳು ಸಾಕಷ್ಟು ಚರ್ಚೆಗಳನ್ನು ನಡೆಸಿದರೆ, ಕೆಲವೊಂದು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ವಿರೋಧಿಸಿ ಎಂಬ ಘೋಷಣೆಗಳನ್ನು ಕೂಗುತ್ತವೆ. ಆದರೂ ಭಾರತದಲ್ಲಿ ವ್ಯಾಲೆಂಟೈನ್ಸ್ ಆಚರಣೆ ಮುಂದುವರಿಯುತ್ತಲೇ ಇದೆ. ಯಾಕೆಂದರೆ ಇಂತಹ ಚರ್ಚೆ, ಪ್ರತಿಭಟನೆಗಳಿಂದಲೇ ವ್ಯಾಲೆಂಟೈನ್ಸ್ ಡೇ ಇನ್ನಷ್ಟು ಪ್ರಚಾರ ಗಿಟ್ಟಿಸಿಕೊಂಡಿವೆ ಎಂದರೆ ತಪ್ಪಾಗಲಾರದು. ಪ್ರತೀವರ್ಷ ಫೆ.14 ಬಂತೆಂದರೆ ಸಾಕು...ಪಾರ್ಕ್, ಸಿನಿಮಾ ಹಾಲ್ ಎಲ್ಲೆಡೆಯೂ ಪ್ರೇಮಿಗಳ ಕಲರವ. ಪ್ರೀತಿಯ ಮೆಸೇಜ್್ಗಳಿಂದ ತುಂಬಿ ತುಳುಕುವ ಐನ್್ಬಾಕ್ಸ್, ಈ ಮೇಲ್, ಗಿಫ್ಟ್... ಬೆಳಗ್ಗಿನಿಂದ ರಾತ್ರಿ ವರೆಗಿನ ಸಮಯ

ಅತ್ತು ಬಿಡು ನೀನೊಮ್ಮೆ...

ಅ ತ್ತು ಬಿಡು ನೀನೊಮ್ಮೆ ಕಣ್ಣೀರು ಹರಿದು ಬಿಡಲಿ ಮುಗ್ದ ಕೆನ್ನೆಯನು ಸೋಕಿ ಮೌನಿ ನಾನು ನಿನ್ನೊಲುಮೆಗೆ... ಅತ್ತು ಬಿಡು ನೀನೊಮ್ಮೆ ಚೂರಾದ ಹೃದಯವು ಮತ್ತೊಮ್ಮೆ ಮಿಡಿಯಲಿ ಮೌನಿ ನಾನು ನಿನ್ನ ಎದೆಬಡಿತಕೆ.. ಅತ್ತು ಬಿಡು ನೀನೊಮ್ಮೆ ನಿನ್ನ ಕರಗಳ ಬೆಚ್ಚನೆಯ ಸ್ಪರ್ಶದಲಿ ಬೆರೆವಾಗ ಮೌನಿ ನಾನು ಬಿಸಿ ಅಪ್ಪುಗೆಯಲಿ ಅತ್ತು ಬಿಡು ನೀನೊಮ್ಮೆ ಮತ್ತದೇ ಪಿಸುಮಾತು ಕಿವಿಯಲ್ಲಿ ಗುನುಗಲಿ ಮೌನಿ ನಾನು ನಿನ್ನ ದನಿಗೆ... ಅತ್ತು ಬಿಡು ನೀನೊಮ್ಮೆ ಸದ್ದು ಮಾಡದೆ ನನ್ನ ಕಣ್ಗಳಲಿ ಓ ನನ್ನ ಇನಿಯಾ... ಮೌನಿ ನಾನು...ಅತ್ತು ಬಿಡಲೇ?