Saturday, December 12, 2015

ನಾನೆಂಬ ಸ್ತ್ರೀ

ನಾನೆಂಬ ಸ್ತ್ರೀ

ನನ್ನೊಳಗಿನ ಅಗ್ನಿಕುಂಡದಲ್ಲುರಿದು

ಆಹುತಿಯಾಗಲಾರೆ

ಜ್ವಲಂತ ವಿಚಾರಗಳನ್ನೆಲ್ಲಾ

ಶಿಥಿಲವಾದ ಹೆಣ್ಣಿನ ರೆಕ್ಕೆ ಸದ್ದುಗಳಲ್ಲೇ

ಜೋಡಿಸಿಟ್ಟಿದ್ದೀನಿ

ಬಿಕ್ಕಳಿಸುತ್ತಾ ವಿಕಸಿತವಾಗುವ

ಮಣ್ಣಲ್ಲಿ

ನಿದಿರೆಗೆ ಜಾರುವಾಗಲೂ

ಬೆಳಕೆಂಬ ಅಮ್ಮ

ನಂದಾದೀಪವಾಗಿ ಉರಿಯುತಿರಲು

ಹುತ್ತರಿ ತೆನೆ ಗದ್ದೆಗಳ

ಪುಣ್ಯ ಭೂಮಿಯಲಿ

ಬೆಳೆಯುವ ಕ್ರಾಂತಿ ಬೀಜವನು

ಅವಳು ಬಿತ್ತುತ್ತಿದ್ದಾಳೆ



ನೀನಿನ್ನು ಮೈಕೊಡವಿ

ಎದ್ದು ಬಾ

ಅಂಧಕಾರದ ಆತ್ಮವೊಂದು ಕರೆಯುತ್ತಿದೆ



ಬಂಧನದ ಸರಪಳಿ

ನೋವಿನ ವೇಷಗಳನ್ನು ಕಿತ್ತೆಸೆದು

ಅವಳು ಮುಗುಳ್ನಕ್ಕಳು



ದೀರ್ಘ ಶಾಂತ ನಿಗೂಢ

ಜೋಕಾಲಿಯಲಿ ನಿದ್ರಿಸಿದ್ದ

ಬೆಳಗು ಕಿರಣಗಳು ಎಚ್ಚೆತ್ತು

ಮೌನಿ ಮುಕ್ತಿ ಕುಟೀರದ

ನೆತ್ತಿಯಲ್ಲುರಿದು ಕರಗಿ

ಅಗ್ನಿ ಜ್ವಾಲೆಯಾಗಿ

ಧಗಧಗಿಸಿದವು...


(ಆದಿವಾಸಿ ಮಹಾಸಭಾ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಸಿ.ಕೆ ಜಾನು ಬರೆದ ಮಲಯಾಳಂ ಕವಿತೆಯ ಅನುವಾದ) (ಚಿತ್ರ ಕೃಪೆ: ಕೆಪಿಎನ್)

Thursday, May 14, 2015

ಮರಳಲ್ಲಿ ಬರೆದ ಸಾಲುಗಳು

ನೀನು ಅಂತರಾತ್ಮದ ಕರೆಗೆ
ಓಗೊಟ್ಟು ಹೊರ ನಡೆದಾಗ

ಕಡಲತಡಿಯಲ್ಲಿ ಏಕಾಂತದ
ನಿಟ್ಟುಸಿರು


ಪ್ರೀತಿಯ ಆಲಿಂಗನವ ಬಯಸಿದ

ಎಳೆ ಮೈಗೆ ಉಪ್ಪು ನೀರಿನ ಸಿಂಚನ

ತನ್ನೊಳಗಿರುವ ಚಿಪ್ಪಿನೆಡೆಯಲಿ

ಅಡಗಿ ಕುಳಿತಿರುವ ಮುತ್ತು

ಹೊರಬರಲು ಕಾಯುವ ವೇಳೆ

ಏಕಾಂತದಲೊಂದು ಬಯಕೆ


ನಿನ್ನೊಡಲಿಗೆ ಬರಲೆ?


ಹೆಜ್ಜೆ ಮುಂದಿಟ್ಟು ತಿರುಗಿ ನೋಡಿದಾಗ

ಒದ್ದೆ ಮರಳಲ್ಲಿ ಪುಟ್ಟ ಪಾದದ ಗುರುತು



ಅಮ್ಮನಂತಿರುವ ಕಡಲು

ಬೇಡವೆನ್ನುವುದಿಲ್ಲ ನನ್ನನ್ನೂ



ಈ ಬಂಧನವ ಕಳಚಿ

ಸಾಧಿಸುವುದೇನು ಬಂತು?



ಒಂದೊಂದು ಹೆಜ್ಜೆಯಲೂ

ಕಂಬನಿಯ ಕತೆಗಳ ಅಳಿದುಳಿದ ಸಾಲು

ಹರಿದು ಹಾಕಿದ ಪುಟಗಳಲಿ

ನೆನಪುಗಳ ಕುರುಹು



ಕಲ್ಲು ಬಂಡೆಯನ್ನಪ್ಪಳಿಸಿದ ನೀರ ಹನಿಯೊಂದು

ಪ್ರೀತಿಯನು ಚಿಮ್ಮಿಸಿ

ಮುಳುಗಿ ಹೋಗುತಿದೆ



ನೀರ ಗುಳ್ಳೆಗಳಲಿ ಬಣ್ಣ ಬಣ್ಣದ ಪ್ರತಿಬಿಂಬ

ಅಲೆಗಳಲಿ ಒಂದಾಗುತ್ತಾ ಮಾಯವಾದಾಗ



ಏಕಾಂತದ ಕೋಟೆಯಲಿ

ನಾನು ಸ್ವತಂತ್ರಳಾಗುತ್ತಿದ್ದೆ

Wednesday, March 11, 2015

ಹಸಿವು


ಹಸಿವಿನ ಸುಖ, ಪ್ರಣಯದ ನೋವು

ಅಸ್ತಮಿಸಿದ ಹೊತ್ತು

ಕತ್ತಲೆಯಲಿ ಎಲ್ಲವನು ನುಂಗಿ ಬದುಕಿದ ನಾನು

ವಿಷಯ ದಾರಿದ್ರ್ಯದ ಮೂಟೆಯನ್ನು ಹೊತ್ತು

ಭಿಕ್ಷಾಟನೆಗೆ ಹೊರಟು ನಿಂತಿದ್ದೇನೆ



ನನಗೇನೂ ಕೊಡಲು ಬಯಸದವರು

ನನ್ನಿಂದ ಪಡೆಯಲಿಚ್ಛಿಸದವರು

ಬರೆದಿಟ್ಟ ಲೆಕ್ಕ ಪುಸ್ತಕದಲ್ಲಿ

ನನ್ನ ಹಸಿವಿನ ಲೆಕ್ಕ ಸೊನ್ನೆಯಾಗಿಯೇ ಉಳಿದಿತ್ತು



ಎಲ್ಲವನ್ನೂ ಕೂಡಿಸಿ, ಕಳೆದು

ಗುಣಿಸಿ, ಭಾಗಿಸಿದ ದೇಹಗಳು

ನನ್ನ ಹಾದು ಹೋದವು

ರಕ್ತವೇ ಇಲ್ಲದ ಮೂಳೆ ಮಾಂಸಗಳ ತಡಿಕೆ

ನೋಡಿ ನನಗೆ ಅಚ್ಚರಿ!

ಅವರ ಹೆಜ್ಜೆ ಬೆನ್ನತ್ತಿ ಮುಂದೆ ನಡೆದೆ



ನನಗೆ ಗೊತ್ತಿಲ್ಲದ, ನನ್ನನ್ನು ಅರಿಯದ ದಾರಿಯಲ್ಲಿ
ಅಪರಿಚಿತ ಮುಖಗಳೆಡೆ ನಾನು ಒಬ್ಬಂಟಿ

ನಾನಾರೆಂದು ಕೇಳಲು

ಯಾರೂ ಇಲ್ಲದ ಬೀದಿಯಲಿ

ಎಲ್ಲರೂ ನಾನಾರೆಂದು ಪಿಸುಗುಡುವ ಸದ್ದು



ಗಹಗಹಿಸಿ ನಕ್ಕು ನನ್ನ ಸೋಕಿದ

ಬರಡು ಭೂಮಿಯ ಉಷ್ಣ ಗಾಳಿ

ದೇಹವನು ಗೀರಿ ರಕ್ತ ಹರಿಸಿದಾಗ

ಆ ರಕ್ತಕ್ಕೆ ಗಂಧವಿರಲಿಲ್ಲ..

ಹೀಗೂ ಇರಬಹುದೆ?



ದೇಹ ದಣಿದಿತ್ತು,

ನಿದ್ರಿಸಲು ರಾತ್ರಿಯನ್ನರಸಿದೆ

ಬೆಳಕಿನ ಕಿರಣಗಳು ವಕ್ರೀಭವನಗೊಂಡ

ದಾರಿಗಳಲ್ಲಿ ಕಪ್ಪು ಬೆಳಕಿಗೆ ಜಾಗವಿರಲಿಲ್ಲ



ನೆರಳು ಬಯಸಿ, ಓಡುವ ಮರಗಳ ಹಿಂದೆ

ಓಡಿ ಹೋಗುತ್ತಿರುವ ನೆರಳುಗಳ ಹಿಂದೆ

ಓಡುತ್ತಾ, ಓಡಲಾರದೆ ಬಿದ್ದು ಬಿಟ್ಟೆ!



ಕುಸಿದು ಬಿದ್ದ ನನ್ನ ದೇಹ

ಆ ಭೂಮಿಗೂ ಬೇಡವಾಗಿತ್ತು

ಅಸ್ತಿತ್ವವಿಲ್ಲದ ನಾನು ಭಾರವಾದ ದೇಹ ಹೊತ್ತು

ಮತ್ತೆ ಹೊರಟು ನಿಂತಿದ್ದೇನೆ

ಗಮ್ಯದ ಅರಿವಿಲ್ಲದೆ..ದೂರ..ದೂರ