ನಗೀನಾಳ ಡೈರಿಯಿಂದ...

ಅದು ಮರೀನಾ ಬೀಚ್ ನ ಸುಂದರ ಸಂಜೆ. ಜೋಡಿ ಹಕ್ಕಿಗಳು ಕಲರವಗುಟ್ಟುತ್ತಿರುವಂತೆ ಯುವ ಪ್ರೇಮಿಗಳು ಕೈ ಕೈ ಹಿಡಿದು, ಮೈಗೆ ಮೈ ಬೆಸೆದು ಆ ಮನೋಹರವಾದ ಸಂಜೆಯಲ್ಲಿ ತಮ್ಮ ಪ್ರಣಯಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಮರಳದಂಡೆಯಲ್ಲಿ ನಡೆದು ಮೂಡಿದ ಹೆಜ್ಜೆಗುರುತನ್ನು ಅಳಿಸಿ ಹಾಕುತ್ತಿರುವ ತೆರೆಗಳನ್ನು ನೋಡುತ್ತಾ ಅವಳು ನನ್ನೊಂದಿಗೆ ಅವನೂ ಇರುತ್ತಿದ್ದರೆ ಎಂದು ಭಾವಿಸಿರಬಹುದೇನೋ. ಅವಳ ಕಣ್ಣಾಲಿಗಳು ತುಂಬಿದ್ದವು. ಭೋರ್ಗರೆವ ಕಡಲಿನಂತೆ ಅವಳ ದುಃಖ ಹೃದಯದಲ್ಲಿ ಉಮ್ಮಳಿಸಿ ಬರುತ್ತಿದ್ದರೂ, ಅದನ್ನೆಲ್ಲಾ ಬದಿಗೊತ್ತಿ ನಾನು ಬದುಕ ಬೇಕು...ಸೋಲೊಪ್ಪಿಕೊಳ್ಳಲು ತನ್ನಿಂದ ಸಾಧ್ಯವಿಲ್ಲ ಎಂದು ಗಟ್ಟಿ ಮನಸ್ಸು ಮಾಡಿ ನಿಟ್ಟುಸಿರು ಬಿಟ್ಟಳು.

--------
ಈ ಮೊದಲು ಬಣ್ಣದ ಚಿಟ್ಟೆಯಂತೆ ಹಾರಿ ಕುಣಿದಾಡಿದವಳಲ್ಲ ಅವಳು. ಅವನ ಪರಿಚಯವಾದ ನಂತರ ತನ್ನ ಜೀವನವೇ ಬದಲಾಯಿತು ಎಂದು ಆಕೆ ಪದೇ ಪದೇ ಹೇಳುತ್ತಿದ್ದಳು. ಇದು ನಿಜವೂ ಹೌದು. ಕಾಲೇಜು ದಿನಗಳಲ್ಲಿ ಸ್ವಪ್ನ ಲೋಕದಲ್ಲಿ ವಿಹರಿಸುತ್ತಾ ಮುಗ್ದ ಮನಸ್ಸಿನ ಬಾಲೆಯಂತೆ ತನ್ನದೇ ಪ್ರಪಂಚವನ್ನು ಸೃಷ್ಠಿಸಿಕೊಂಡು ಬೆಳ್ಳಿ ಮೋಡದಂತೆ ತೇಲಾಡುತ್ತಿದ್ದ ಆ ಹುಡುಗಿ ತನ್ನ ಪ್ರೀತಿಗಾಗಿ, ಅವನಿಗಾಗಿ ಎಲ್ಲವನ್ನೂ ತೊರೆದಳು. ಅಂದಹಾಗೆ ಅವರಿಬ್ಬರೂ ಪ್ರೀತಿ ಪ್ರಣಯ ಅಂತಾ ಪಾರ್ಕು, ಹೋಟೆಲ್ ಸುತ್ತಿಲ್ಲ. ಮನಸ್ಸಿನಲ್ಲೇ ತಮ್ಮ ಪ್ರೀತಿಯನ್ನು ಬಚ್ಚಿಟ್ಟು, ಕಣ್ಣಲ್ಲೇ ಮಾತನಾಡಿ ಪ್ರಣಯ ಲೋಕದ ಸುಖ ಪಡೆದವರು. ಅವನಿಗೂ ಇವಳೆಂದರೆ ಬಹಳ ಅಚ್ಚುಮೆಚ್ಚು. ಕಂಡರೆ ಅವಳೇನೂ ಅಷ್ಟು ಸುಂದರಿಯಲ್ಲ. ಅದರೂ ಮುಖದಲ್ಲಿ ಒಂದು ರೀತಿಯ ಕಳೆ. ಸಾದಾ ಹಳ್ಳಿ ಹುಡುಗಿಯ ಮುಗ್ದತೆ, ಪ್ರೀತಿಸಲು ಮಾತ್ರ ತಿಳಿದಿರುವ ಮುಗ್ದ ಮನಸ್ಸಿನ ಆ ಕೃಷ್ಣ ಸುಂದರಿಯನ್ನು ಇಷ್ಟೊಂದು ಹ್ಯಾಂಡ್‌ಸಮ್ ಆಗಿರುವ ಹುಡುಗ ಮೆಚ್ಚಿದ್ದಾದರೂ ಹೇಗೆ? ಎಂದು ಹಲವರು ಹುಬ್ಬೇರಿಸಿದ್ದೂ ಉಂಟು. ಇವನೀಗೇನೂ ಸ್ಟೈಲ್ ಹೈ ಫೈ ಹುಡುಗಿ ಸಿಕ್ಕಿಲ್ಲವೇ? ಎಂದು ಯಾರಿಗಾದರೂ ಅನಿಸಿದರೆ ತಪ್ಪೇನಿಲ್ಲ. ಏತನ್ಮಧ್ಯೆ, ಅವರ ನಡುವೆ ಭೂಮಿ ಆಕಾಶದಷ್ಟು ಅಂತರವಿದೆಯಲ್ವಾ ಎಂದು ಕಾಲೇಜಿನ ಇತರ ಹುಡುಗಿಯರು ಗುಸು ಗುಸು ಹೇಳದೆ ಇರುತ್ತಿರಲಿಲ್ಲ. ಹೋಗಲಿ ಬಿಡಿ ಪ್ರೇಮಕ್ಕೆ ಕಣ್ಣಿಲ್ಲ, ಅದು ಕುರುಡು ಅನ್ನುವುದಕ್ಕೆ ತಕ್ಕುದಾದ ಪರ್ಯಾಯ ಇದು ಅಂತಲೇ ಹೇಳಬಹುದು.

ವರ್ಷಗಳು ಕಳೆದವು. ಇದೀಗ ಅವಳು ಮತ್ತು ಅವನು ಕಾಲೇಜು ವಿದ್ಯಾರ್ಥಿಗಳಲ್ಲ. ತಮ್ಮ ಕಾಲಲ್ಲಿ ತಾವು ನಿಂತುಕೊಳ್ಳುವಷ್ಟರ ಮಟ್ಟಿಗೆ ಉದ್ಯೋಗ ದಕ್ಕಿದೆ. ಇದರೆಡೆಯಲ್ಲಿ ಹಿತ ಮಿತವಾದ ಪ್ರೇಮ. ತನ್ನ ಪ್ರೇಮವನ್ನು ತೋರ್ಪಡಿಸಲು ತನಗೆ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಚಡಪಡಿಕೆ ಅವನದ್ದಾದರೆ ತನ್ನ ಪ್ರೀತಿ ಅವನಿಗೆ ಸಾಕಾಗುತ್ತಿಲ್ಲವೇ ಎಂಬುದು ಅವಳ ಮನದ ತಳಮಳ.

ಅವನ ಒಂದೊಂದು ಬಡಿತ, ಉಸಿರಿನ ಏರಿಳಿತಗಳು ಅವಳಿಗೆ ಗೊತ್ತು. ತನ್ನ ಪ್ರೀತಿಯಲ್ಲಿ ಅಪಾರ ವಿಶ್ವಾಸವಿದ್ದರೂ, ಕೆಲವೊಮ್ಮೆ ಅವ ನನ್ನಿಂದ ದೂರವಾದರೆ ಎಂಬ ಆತಂಕ ಅವಳನ್ನು ನಿದ್ದೆಗೆಡಿಸಿತ್ತು. ಈ ಪ್ರೀತಿ ಪ್ರಣಯ ಎಲ್ಲವೂ ಕಾಲ ಬದಲಾದಂತೆ ಬದಲಾಗುತ್ತದೆ. ಹೊಸ ಜೀವನಶೈಲಿಗೆ ಮಾರು ಹೋಗುತ್ತಿದ್ದ ತನ್ನ ಇನಿಯನಿಗೆ ಈ ಹಳ್ಳಿ ಹುಡುಗಿಯ ಪ್ರೀತಿ ಕೂಡಾ ಕೆಲವೊಮ್ಮೆ ಬೋರ್ ಎಂದು ಅನಿಸಿ ಬಿಟ್ಟರೆ... ಇಲ್ಲ ಎಲ್ಲವೂ ತನ್ನ ಭ್ರಮೆ ಅವಳ ಹೃದಯ ಬಡಿತ ಮತ್ತಷ್ಟು ವೇಗವಾಗಿತ್ತು. ಕೂಡಲೇ ಅವನಿಗೆ ಕರೆ ಮಾಡಿದಳು.
"ಏನೋ...ಏನಾದರೂ ಕನಸು ಕಂಡಿದ್ದೀಯೇನೋ? ಯಾಕೆ ಹೀಗೆ ಗಾಬರಿಯಾಗಿದ್ದೀಯಾ?" ಎಂದು ಅವ ಕೇಳಿದ.
"ಏನೂ ಇಲ್ಲ ಯಾಕೋ ನಾನು ಒಬ್ಬಂಟಿಗಳು ಎಂದು ಅನಿಸುತ್ತಿದೆ. ನಿನಗೆ ನನ್ನನ್ನು ಇಷ್ಟ ಅಲ್ವಾ? ನನ್ನನ್ನು ಬಿಟ್ಟು ಹೋಗಲಿಕ್ಕಿಲ್ಲವಲ್ಲಾ... ನೀನಿಲ್ಲದ ಬದುಕು ನನಗೆ ಬೇಡ...ಐ ಲವ್ ಯೂ..ನನ್ನನ್ನು ಬಿಟ್ಟು ಹೋಗ್ಬೇಡಾ...ಪ್ಲೀಸ್..."

"ಯಾಕೆ ಈ ತರಹ ಯೋಚನೆ ಮಾಡ್ತಾ ಇದ್ದೀಯಾ..ಸುಮ್ಮನೆ ಯೋಚನೆ ಮಾಡಿಕೊಂಡು ತಲೆನೋವು ಬರಿಸಿಕೊಳ್ಬೇಡ. ನಾನು ನಿನ್ನವನೇ..ನೀನು ನನ್ನ ಸುಂದರಿ ಹುಡುಗಿ ಅಲ್ವಾ...ಯೋಚನೆ ಮಾಡದೆ ಸುಮ್ಮನೆ ಮಲಗಿಕೋ. ನೋಡು ನಾನಿಂದು ನಿನ್ನ ಕನಸಲ್ಲಿ ಬರುವೆ.."ಎಂದು ಒಂದು ಸಿಹಿ ಮುತ್ತ ನೀಡಿ ಅವ ಫೋನ್ ಕಟ್ ಮಾಡಿದ.

ಸುಂದರಿ...ಇಷ್ಟರವರೆಗೆ ನನ್ನನ್ನು ಯಾರೂ ಈ ರೀತಿ ಹೊಗಳಿರಲಿಲ್ಲ. ಶಾಲೆಯ ದಿನಗಳಲ್ಲಿ ಈ ಕಪ್ಪು ಬಣ್ಣದಿಂದಾಗಿ ಅದೆಷ್ಟೋ ಬಾರಿಗೆ ಅವಮಾನಕ್ಕೊಳಗಾದವಳು ನಾನು. ಡ್ಯಾನ್ಸ್ ಗ್ರೂಪ್‌ನಲ್ಲಿ ಮೈ ಕಪ್ಪು ಎಂಬ ಕಾರಣಕ್ಕಾಗಿಯೇ ಕೊನೆಯ ಸಾಲಿನಲ್ಲಿ ನಿಂತು ಹೆಜ್ಜೆ ಹಾಕಿದ್ದು, ಮೇಕಪ್ ಮಾಡಿದರೂ ಚಂದ ಕಾಣಿಸದ ಮುಖ...ಮುಖಕ್ಕೆ ಬಣ್ಣ ಹಚ್ಚಿದರೂ ಕರ್ರಗಿನ ಸಣಕಲು ಕೈ ಕಾಲು..ನನ್ನ ದೇಹವೇ ನನಗೆ ಅಸಹ್ಯ ಹುಟ್ಟಿಸಿತ್ತು. ತನ್ನ ಸಹೋದರ ಸಹೋದರಿಯರೆಲ್ಲಾ ಬೆಳ್ಳಗಿರುವಾಗ, ಯಾವ ಜನ್ಮದ ಪಾಪವಿದು ಎಂಬಂತೆ ನಾನು ಮಾತ್ರ ನನ್ನ ಕಪ್ಪಗಿನ ಮೈಯನ್ನು ನೋಡಿ ಅತ್ತು ಬಿಡುತ್ತಿದೆ. ಈ ನಡುವೆ ನನಗೆ ಸಾಂತ್ವನ ನೀಡುತ್ತಿದ್ದವರು ನನ್ನ ಅಪ್ಪ. ಕಪ್ಪು ಕಸ್ತೂರಿ ಕಣಮ್ಮೀ...ಆ ನಮ್ಮ ದೇವರು ನೋಡು..ಕೃಷ್ಣ ಕಪ್ಪು ಅಲ್ಲವೇ? ಮೈ ಬಣ್ಣದಲ್ಲೇನಿದೆ..ಮನಸ್ಸು ತಿಳಿಯಾಗಿದ್ದರಷ್ಟೇ ಸಾಕು... ಎಂದು ನನ್ನನ್ನು ಎದೆಗೆ ತಬ್ಬಿಕೊಳ್ಳುತ್ತಿದ್ದರು. ಅಪ್ಪ ಏನೋ ನನ್ನ ಸಮಾಧಾನಕ್ಕಾಗಿ ಹೇಳುತ್ತಾರೆ.

ಆದ್ರೆ ನಾನು ಬಾಲ್ಯದಲ್ಲಿ ಅನುಭವಿಸುತ್ತಿರುವ ಅವಮಾನದ ನೋವು ಈಗಲೂ ಹಸಿಯಾಗಿಯೇ ಇದೆ. ಅಲ್ಲಿಯೂ ನಾನು ಸೋಲೊಪ್ಪಿಕೊಡಲಿಲ್ಲ. ಸ್ಟೇಜ್ ಕಾರ್ಯಕ್ರಮದಲ್ಲಿ ನನಗೆ ಹಿಂದಿನ ಸಾಲಿನಲ್ಲೇ ಸ್ಥಾನಕೊಡುವ ಈ ಅಧ್ಯಾಪಕರ ಬಗ್ಗೆ ನನಗೆ ದ್ವೇಷವಿತ್ತು. ಹೇಗಾದರೂ ಮಾಡಿ ಮುಂದೆ ಬರಬೇಕು ಎಂಬುದೇ ನನ್ನ ಛಲವಾಗಿತ್ತು. ಆಗ ನಾನು ನಾಲ್ಕನೇ ಕ್ಲಾಸಿನಲ್ಲಿದ್ದೆ. ಅಂತೂ ಮೊದಲ ಬಾರಿಗೆ ಕವಿತೆ ಬರೆದೆ. ಅದಕ್ಕೆ ಪ್ರಥಮ ಸ್ಥಾನ ಬಂತು. ಅಲ್ಲಿಂದ ಹಿಂತಿರುಗಿ ನೋಡಿಲ್ಲ. ಸ್ಟೇಜ್ ಬಿಟ್ಟು ಆಫ್ ಸ್ಟೇಜ್ ಐಟಂನಲ್ಲಿ ನನ್ನನ್ನು ತೊಡಗಿಸಿಕೊಂಡೆ. ಸ್ಟೇಜಿನಲ್ಲಿ ಅಂದದ ರೂಪವನ್ನು ಪ್ರದರ್ಶಿಸುವ ಸೌಂದರ್ಯವಂತೂ ನನ್ನಲ್ಲಿರಲಿಲ್ಲ ಆದ್ರೆ ನನ್ನ ದುಃಖ ಮನಸ್ಸಿನ ನೋವು ಕತೆಗಳಾಗಿ ಕವಿತೆಗಳಾಗಿ, ನನ್ನ ಕೋಪದ ದನಿ ಭಾಷಣದಲ್ಲಿನ ವಿಷಯಗಳಿಗೆ ಗಟ್ಟಿ ದನಿಯಾಗಿ ಹೊರ ಹೊಮ್ಮಿತು. ನಾನು ಸ್ಟೇಜಿನ ಮರೆಯಲ್ಲಿ ಅಕ್ಷರಗಳ ರೂಪದಲ್ಲಿ ಮಿಂಚಿದೆ, ನನ್ನ ಅನುಭವವೇ ನನಗೆ ಗುರುವಾಗಿತ್ತು.

ಕಾಲೇಜು ಮೆಟ್ಟಿಲೇರಿದಾಗಲೂ ಅಷ್ಟೇ, ನನ್ನ ಕವನ, ಕತೆ, ಓದು ಸ್ವಪ್ನ ಇವಿಷ್ಟೇ ನನ್ನ ಗೆಳೆಯರು. ಆದರೆ ಅವ ನನ್ನ ಗೆಳೆಯನಾಗಿ ಸಿಕ್ಕಿದ್ದು ನನ್ನ ಪುಣ್ಯ ಎಂದೇ ಹೇಳಬೇಕು. ಓರ್ವ ಉತ್ತಮ ಗೆಳೆಯನಾಗಿ ನಾನು ಕಣ್ಣೀರಿಡುವಾಗ ಸಂತೈಸಿ ಮುಂದೆ ಬರಲು ಪ್ರೋತ್ಲಾಹ ನೀಡಿದ ಆ ಗೆಳೆಯ ಪ್ರೇಮಿಯಾಗಿ ನನ್ನ ಮನಸ್ಸಲ್ಲಿ ನೆಲೆವೂರಿದ್ದು ಯಾವಾಗ ಅಂತಾ ತಿಳಿದಿಲ್ಲ. ನನ್ನ ಅಪ್ಪನಂತಹ ಸ್ವಭಾವ, ಪ್ರೋತ್ಸಾಹಿಸುವ ಅವನ ಪರಿ ಎಲ್ಲವನ್ನು ಮೆಚ್ಚಿಕೊಂಡಾಗ ನಾನವನ ಪ್ರೇಯಸಿ, ಅವ ನನ್ನ ಪ್ರಿಯಕರನಾಗಿದ್ದ. ಅಂದೊಮ್ಮೆ ನನ್ನ ಬಾಲ್ಯದ ಕಹಿಗಳನ್ನು ಅವನಲ್ಲಿ ಹೇಳಿ ಅತ್ತು ಬಿಟ್ಟು, ನೀನು ಬೆಳ್ಳಗಿದ್ದೀಯಾ ನಿನಗೂ ಕಪ್ಪು ಬಿಳುಪು ಮೈ ಬಣ್ಣದಲ್ಲಿ ತಾರತಮ್ಯ ನೋಡುವ ಮೆಂಟಾಲಿಟಿ ಇರಬಹುದು ಎಂದು ರೇಗಾಡಿದ್ದೆ. ಅವ ಹೇಳಿದ್ದು ಇಷ್ಟೇ..ನೀನು ಸುಂದರಿ...ನಿನ್ನ ಮನಸ್ಸನ್ನು ನೋಡಿ ನಾ ಮೆಚ್ಚಿಕೊಂಡಿದ್ದೇನೆ..ಐ ಲವ್ ಯೂ..ಬಣ್ಣದಲ್ಲೇನಿದೇ? ಎಂದು ನನ್ನ ಕಣ್ಣಿಗೆ ಕಣ್ಣಿಟ್ಟು ಪ್ರಶ್ನೆ ಹಾಕಿದ್ದ.

ನನಗೆ ಅಷ್ಟೇ ಸಾಕಾಗಿತ್ತು. ಬಾಲ್ಯದ ನೋವುಗಳಿಗೆ ಮುಲಾಮು ಹಚ್ಚಿದಂತಿತ್ತು ಅವನ ಆ ಮಾತು. ಆಮೇಲೆ ಸೌಂದರ್ಯ, ಬಣ್ಣ ಯಾವತ್ತೂ ನಮ್ಮ ಪ್ರೀತಿಯೆಡೆಯಲ್ಲಿ ಬಂದಿರಲಿಲ್ಲ. ಅಮರ ಪ್ರೇಮಿಗಳ ಕಥೆಯೋ, ದೇವದಾಸನ ವ್ಯಥೆಯೋ ಯಾವುದೂ ನಮ್ಮ ಪ್ರಣಯದಲ್ಲಿನ ವಿಷಯವಾಗಿರಲಿಲ್ಲ.

ಆದರೆ ಇದೀಗ ಜೀವನದಲ್ಲಿನ ಮಹತ್ತರವಾದ ವಿಷಯಕ್ಕೆ ತೀರ್ಪ ಕಲ್ಪಿಸಬೇಕಾಗಿದೆ. ಮನೆಯಲ್ಲಿ ಈ ವಿಷಯ ಗೊತ್ತಾದರೆ? ಮದುವೆ ಪ್ರಾಯ ಹತ್ತಿರವಾಗುತ್ತಿದೆ ಇನ್ನು ವಿವಾಹಲೋಚನೆ ಮಾಡದೆ ಇರುತ್ತಾರೆಯೇ ನಮ್ಮ ಹಿರಿಯರು? ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತೇನೆ ಎಂದು ತಿಳಿದರೆ ಮನೆಯಲ್ಲಿ ಪ್ರಳಯವೇ ಸಂಭವಿಸುತ್ತದೆ. ಪ್ರೀತಿಯ ಜಾಲದಲ್ಲಿ ಸಿಕ್ಕಿ ಬಿದ್ದಾಗಿದೆ ಮನೆಯಲ್ಲಿ ಹೇಳುವಂತ ಧೈರ್ಯ ನಮಗಿಲ್ಲ ಎಂಬ ಚಡಪಡಿಕೆ ನಮ್ಮಿಬ್ಬರಲ್ಲಿತ್ತು. ನಮ್ಮಿಬ್ಬರ ಕುಟುಂಬವೇ ಹಾಗೇ..ಜೀವಕ್ಕೆ ಜೀವ ಕೊಟ್ಟು ಅವರು ನಮ್ಮನ್ನು ಮುದ್ದಿಸುತ್ತಾರೆ. ಅವನಿಗೆಗೆ ಅಮ್ಮ ಎಂದರೆ ಪಂಚಪ್ರಾಣ. ಇತ್ತ ನನ್ನ ಅಪ್ಪ..ಈಗಲೂ ನನ್ನನ್ನು ಎಳೆಗೂಸು ಎಂದೇ ಪರಿಗಣಿಸುತ್ತಾರೆ. ನನ್ನ ಅಪ್ಪ ಅಮ್ಮನ ಮುದ್ದಿನ ಮಗಳು ನಾನೇ. ಈ ರೀತಿ ಮಾಡಿದರೆ ಅದನ್ನ ಸಹಿಸುವಷ್ಟು ಶಕ್ತಿ ಅವರಿಗಿಲ್ಲ ಎಂದು ನನಗೆ ಗೊತ್ತು. ನಮ್ಮಿಬ್ಬರ ಕುಟುಂಬಗಳು ನಮ್ಮ ಮೇಲಿರುವ ವಿಶ್ವಾಸ ಪ್ರೀತಿಗೆ ಮಣ್ಣೆರಚಿ ನಮ್ಮ ಪ್ರಣಯವನ್ನು ಮೆರೆಯಬೇಕೆ? ಬೇಡ..ನಮ್ಮಿಬ್ಬರ ಕುಟುಂಬದ ಕಣ್ಣೀರಿನ ಶಾಪ ನಮಗೆ ಬೇಡ. ಈ ಪ್ರಣಯಕ್ಕೆ ಇಂದೇ ತೆರೆಯೆಳೆಯಬೇಕು. ಎಷ್ಟೋ ಬಾರಿ ಆಲೋಚಿಸಿದಿದ್ದೆ. ಅದರೆ ಸಾಧ್ಯವಾಗಿಲ್ಲ. ಇನ್ನು ಮುಂದೆ ಇದು ಸಾಧ್ಯವಾಗಲೇ ಬೇಕು ಎಂದು ನಾನು ನಿರ್ಧರಿಸಿದ್ದೇನೆ.

ಈ ಸಮುದ್ರ ತೀರದ ಮನೋಹರ ಸಂಜೆಯಲ್ಲಿ ನಾನೊಬ್ಬಳೆ. ಅವ ನನ್ನೊಂದಿಗೆ ಇಲ್ಲ..ಅವನಿಲ್ಲದ ಜೀವನ ಯಾಕೆ?

ಅವಳ ಡೈರಿಯ ಕೊನೆಯ ಪುಟದಲ್ಲಿ ನನ್ನ ಮರಣಕ್ಕೆ ಯಾರು ಹೊಣೆಯಲ್ಲ ಎಂದು ಬರೆಯಲಾಗಿತ್ತು.

ಆ ಸಂಜೆ ತನ್ನ ದುಃಖವನ್ನೆಲ್ಲಾ ಮರೀನಾಳ ಮರಳಲ್ಲಿ ಹೂತು ಹಾಕಿ ಮರಳುತ್ತೇನೆ..

ಕೊನೆಯ ಬಾರಿಗೆ ನಾನು ಅವನಲ್ಲಿ ಹೇಳಿದ್ದು.."ಮುಂದಿನ ಜನ್ಮದಲ್ಲಿ ನೀನು ನನ್ನವನಾಗಿರು. ನಾನು ನಿನ್ನವಳು ಮಾತ್ರ.."
ಅವ ಹೇಳಿದ್ದು.... "ಈ ಕುಟುಂಬ, ಸಂಸಾರದ ಪ್ರೀತಿಗಾಗಿ ನಾವು ನಮ್ಮ ಪ್ರೀತಿಯನ್ನು ತ್ಯಾಗ ಮಾಡಿದ್ದೇವೆ. ಮುಂದಿನ ಜನ್ಮದಲ್ಲಿ ನಾವಿಬ್ಬರೂ ಅನಾಥರಾಗಿ ಹುಟ್ಟೋಣ...."

----------------
ನಾನು ಇನ್ನು ಹೊರಡಬೇಕು. ಎಲ್ಲರೂ ಜೊತೆ ಜೊತೆಯಾಗಿ ಹೊರಡುವಾಗ ನಾನೊಬ್ಬಳೇ ಆ ಮರಳ ತಡಿಯಲ್ಲಿ ನಿಂತು ವಿಸ್ತಾರವಾಗಿ ಹರಡಿರುವ ಆ ಕಡಲನೊಮ್ಮೆ ದಿಟ್ಟಿಸಿದೆ. ಸೂರ್ಯ ಕೆಂಪಾಗಿ ಅದಾಗಲೇ ಜಾರಿದ್ದ. ಇದು ನನ್ನ ಜೀವನದ ಕೊನೆಯ ದಿನ..ಗುಡ್ ಬೈ ಮರೀನಾ..ಮತ್ತೊಮ್ಮೆ ತಿರುಗಿ ನೋಡಿದೆ. ದೂರದಲ್ಲಿ ಕಾಣುವ ಆ ನೀಲಿ ಅಂಚಿನಲ್ಲಿ ಏನೋ ಸೆಳೆತವಿದೆ. ಅಲ್ಲೇ ನಿಂತು ಮತ್ತೊಮ್ಮೆ ನೋಡಿದೆ. ಜೀವನದಲ್ಲಿ ಕಷ್ಟಗಳು ಕ್ಷಣಿಕ, ಅದಕ್ಕಂಜಿ ಜೀವನವೇ ಬೇಡ ಅಂದು ಕೊಂಡರೆ?. ಕಣ್ಣಿಗೆ ಕಾಣುವ ಸಾಗರದ ಆ ನೀಲಿಯಂಚನ್ನು ನೋಡಿ ಅದೇ ಕೊನೆ ಅಂದು ಕೊಂಡಿದ್ದೀಯೇನು? ಅಲ್ಲಿ ನಿಂತು ಒಮ್ಮೆ ನೋಡು ಈ ನೀಲಿಯಂಚಿನಾಚೆಗೂ ವಿಶಾಲವಾಗಿ ಹರಡಿಕೊಂಡಿರುವ ನೀರಿದೆ, ಹಾಗೆ ಮುಂದೆ ಮುಂದೆ ಹೋದಂತೆ ಮುಗಿಯಷ್ಟು ನೀರು, ಆಳ, ಎಲ್ಲವೂ ಇದೆ. ಕಷ್ಟಗಳು ನಮಗೆ ಬದುಕಲು ಕಲಿಸುತ್ತವೆ, ಈಸ ಬೇಕು ಜಯಿಸಬೇಕು..ಅದುವೇ ಜೀವನ..ಅವನಿಲ್ಲ ಎಂಬ ಕೊರಗಿನಲ್ಲಿ ಜೀವನವೇ ಬೇಡವೆಂದರೆ ನಿನ್ನ ಪ್ರೀತಿಗೂ ನೀನು ಕೊನೆ ಹಾಡಿದಂತೆ ಅಲ್ಲವೇ? ಪ್ರೀತಿಯನ್ನು ಕೊಲ್ಲಬೇಡವೋ...ಅದು ನಿನ್ನ ಹೃದಯದಲ್ಲಿ ಭದ್ರವಾಗಿರಲಿ ಎಂದೆಂದಿಗೂ..

ಈ ಮಾತು ಯಾರೂ ಹೇಳಿದರು? ಯಾರೂ ಇಲ್ಲ.. ಮರೀನಾ ಹೇಳಿದ್ದಾಗಿರಬಹುದೇ? ಇಲ್ಲ...ಅದು ಸಾಧ್ಯವಿಲ್ಲ. ಇದು ಯಾರೂ ಹೇಳಿದ್ದಲ್ಲ.

ನನ್ನ ಮನಸ್ಸು ನನ್ನಲ್ಲಿಯೇ ಹೇಳಿಕೊಂಡದ್ದು. ಸಾಯಬೇಕೆಂದಿರುವ ನನ್ನ ಮನಸ್ಸು ಥಟ್ಟನೆ ಇಂತಹ ನಿರ್ಧಾರ ಕೈಗೊಂಡಿತೇ? ಏನೇ ಆಗಲಿ..ಆತ್ಮಹತ್ಯೆ ಮಾಡಿ ಹೇಡಿ ಅನಿಸುವುದಕ್ಕಿಂತ ಧ್ಯೆರ್ಯದಿಂದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದ್ದೇನೆ. ಈವರೆಗೆ ನನ್ನ ಕ(ವ್ಯ)ಥೆಗಳನ್ನು ಈ ಡೈರಿಯಲ್ಲಿ ಬರೆದಿದ್ದೇನೆ. ಮನಸ್ಸು ನಿರಾಳವಾಗಿದೆ. ಹೊಸತೊಂದು ಜೀವನ...ಹೊಸ ಭಾವನೆಗಳನ್ನು ಸ್ವೀಕರಿಸಲು ನಾನು ಮನಸ್ಸು ಮಾಡಿದ್ದೇನೆ. ಹಳೆಯದೆಲ್ಲವನ್ನು ಮರೆತು ಹೊಸತಿಗೆ ಪ್ರವೇಶಿಸುತ್ತಿದ್ದೇನೆ.

ಮರೀನಾ..ಈ ಡೈರಿ ನಿನ್ನ ತೆಕ್ಕೆಯಲ್ಲಿರಲಿ..ಎಂದು ನಗೀನಾ ತನ್ನ ಡೈರಿಯನ್ನು ಮರೀನಾಳ ಅಬ್ಬರದ ತೆರೆಯ ಮುಂದೆ ಬೀಸಿ ಎಸೆದಳು. ತೆರೆಮಾಲೆಗಳ ಬಡಿತಕ್ಕೆ ಸಿಕ್ಕಿ, ದಡಕ್ಕೆ ಅಪ್ಪಳಿಸುತ್ತಾ ಆ ಡೈರಿ ತೇಲಾಟವಾಡುವಾಗ, ನಗೀನಾ ಹೊಸ ಜನ್ಮ ಪಡೆದವಳಂತೆ ಉಲ್ಲಸಿತಳಾಗುತ್ತಿದ್ದಳು.

Comments

Three passions have governed my life:
The longings for love, the search for knowledge,
And unbearable pity for the suffering of [humankind].

Love brings ecstasy and relieves loneliness.
In the union of love I have seen
In a mystic miniature the prefiguring vision
Of the heavens that saints and poets have imagined.

With equal passion I have sought knowledge.
I have wished to understand the hearts of [people].
I have wished to know why the stars shine.

Love and knowledge led upwards to the heavens,
But always pity brought me back to earth;
Cries of pain reverberated in my heart
Of children in famine, of victims tortured
And of old people left helpless.
I long to alleviate the evil, but I cannot,
And I too suffer.

This has been my life; I found it worth living.

-Bertrand Russell
Anonymous said…
Really very good writing Anuragha...

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ