ಸ್ಮಶಾನದತ್ತ...

ಅಲ್ಲೊಬ್ಬ ಮುದುಕ. ವಯಸ್ಸು ಸುಮಾರು ಎಪ್ಪತ್ತೈದು ದಾಟಿದೆ. ನಾಲ್ಕು ಜನ ಮಕ್ಕಳು, ಈ ನಾಲ್ವರಲ್ಲಿ ಒಬ್ಬಳೇ ಮುದ್ದಿನ ಮಗಳು ಪ್ರೀತಿ. ಮದುವೆಯಾಗಿದೆ. ಅಳಿಯನಿಗೆ ಗಲ್ಫ್‌ನಲ್ಲಿ ಉದ್ಯೋಗ, ಸುಖೀ ಕುಟುಂಬ. ಬಾಕಿ ಉಳಿದ ಮೂವರು ಗಂಡು ಮಕ್ಕಳು ಉದ್ಯೋಗ ಗಿಟ್ಟಿಸಿಕೊಂಡು ಮಡದಿ ಮಕ್ಕಳೊಂದಿಗೆ ಸುಖವಾಗಿದ್ದಾರೆ.

ಇಂತಿರುವಾಗ ಒಂದು ದಿನ ಈ ಮುದುಕ ಅಸ್ವಸ್ಥನಾಗುತ್ತಾನೆ. ಮನೆಯಲ್ಲಿ ಕಿರಿಯ ಮಗ ಸೊಸೆ ಮೊಮ್ಮಕ್ಕಳಿಗೆ ಗಾಬರಿ. ಅಂತೂ, ಈ ಅಜ್ಜ ಬಡವ ಅಂತಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ತನ್ನ ಯೌವನದಲ್ಲಿ ಮಣ್ಣಲ್ಲಿ ಚೆನ್ನಾಗಿ ದುಡಿದು ಹೊನ್ನಿನ ಬೆಳೆ ಪಡೆದವ ಈತ. ಎಕ್ರೆಗಳಲ್ಲಿ ತೆಂಗು ಕಂಗಿನ ತೋಟ, ತರಕಾರಿ, ಬಾಳೆ, ಮರಗೆಣಸು ಹೀಗೆ ಎಲ್ಲಾ ರೀತಿಯ ಕೃಷಿಗಳನ್ನು ಮಾಡಿ ಲಾಭ ಪಡೆದವ. ಹತ್ತು ವರ್ಷಗಳ ಹಿಂದೆಯೇ ತನ್ನ ಕೈ ಹಿಡಿದವಳು ತೀರಿ ಹೋಗಿದ್ದರಿಂದ ಈ ಅಜ್ಜ ಎಲ್ಲದಕ್ಕೂ ಮಕ್ಕಳನ್ನು ಆಶ್ರಯಿಸಬೇಕಾದ ಸ್ಥಿತಿ ಬಂದೊದಗಿತ್ತು.

ಎಷ್ಟಾದರೂ ಅಪ್ಪನಲ್ಲವೇ? ಕಿರಿ ಮಗನಂತೂ ಅತೀವ ಸ್ನೇಹದಿಂದಲೇ ಅಪ್ಪನನ್ನು ನೋಡಿಕೊಳ್ಳುತ್ತಿದ್ದ. ಒಮ್ಮೆ ಅಜ್ಜನಿಗೆ ತನ್ನ ಅವಧಿ ಮುಗಿಯುತ್ತಾ ಬಂತು ಎಂದು ಅನಿಸಿದಾಗ ತನ್ನ ನಾಲ್ಕು ಮಕ್ಕಳನ್ನೂ ಕೂಡಾ ಹತ್ತಿರ ಕರೆದ. ಹಳೆಯ ಮಂಚದ ಮೇಲೆ ಮಲಗಿದ ಮುದಿ ಜೀವದ ಸುತ್ತಲೂ ಮಕ್ಕಳು, ಮೊಮ್ಮಕ್ಕಳು ಹಾಜರಾದರು. ಅಜ್ಜ ಮಾತನಾಡತೊಡಗಿದ. ಮಕ್ಕಳೇ, ನಾನು ಇನ್ನಷ್ಟು ದಿನ ಬದುಕುವೆನೆಂದು ಯಾಕೋ ಅನಿಸುತ್ತಿಲ್ಲ. ನಿಮ್ಮನ್ನೆಲ್ಲಾ ಒಳ್ಳೆಯ ರೀತಿಯಲ್ಲಿ ನೋಡಿಕೊಂಡು, ನಿಮ್ಮ ಬೇಕು ಬೇಡಗಳಿಗೆ ಅಡ್ಡಿಯಾಗದೆ ಸಲಹಿದ್ದೇನೆ. ಅದರಲ್ಲಿ ನನಗೆ ತೃಪ್ತಿಯೂ ಇದೆ. ಇದೀಗ ನನ್ನ ಉಸಿರು ಇಂದೋ ನಾಳೆಯೋ ನಿಂತು ಹೋಗಬಹುದು. ಅದಕ್ಕಿಂತ ಮೊದಲೇ ನನ್ನ ಸೊತ್ತನ್ನು ಪಾಲು ಮಾಡಬೇಕೆಂದು ಬಯಸಿದ್ದೇನೆ. ಆ ಪೆಟ್ಟಿಗೆಯಲ್ಲಿ ಡಾಕ್ಯುಮೆಂಟ್ ಇದೆ. ನಿಮ್ಮ ನಿಮ್ಮ ಹೆಸರಿರುವ ದಾಖಲೆಗಳನ್ನು ತೆಗೆದುಕೊಳ್ಳಿ ಎಂದು ಹೇಳಿದ ಕೂಡಲೇ ನಾಲ್ವರು ಮಕ್ಕಳು ತಮ್ಮ ತಮ್ಮ ದಾಖಲೆಗಳನ್ನು ಕೈಗೆ ತೆಗೆದುಕೊಂಡರು.

ಎಲ್ಲರ ಮುಖ ಅರಳಿತು. ತಮಗೆ ಸಾಕಷ್ಟು ಸೊತ್ತನ್ನು ಸಮಪಾಲಾಗಿ ನೀಡಿದ್ದಾನೆ. ಯಾರಿಗೂ ತಕರಾರು ಇಲ್ಲ, ಎಲ್ಲರೂ ಫುಲ್ ಖುಷ್. ಇದೆಲ್ಲಾ ಮುಗಿದ ಮೇಲೆ ತನ್ನ ಮಕ್ಕಳೆಲ್ಲರೂ ಒಂದು ದಿನ ತನ್ನೊಂದಿಗೆ ಇರಬೇಕು. ಮೊಮ್ಮಕ್ಕಳ ಆಟವನ್ನು ನೋಡಿ ಆನಂದಿಸಬೇಕು. ಮುದಿ ಅಜ್ಜ ತನ್ನ ಆಶೆಯನ್ನು ತಿಳಿಸಿದ. ಎಲ್ಲರೂ ತಲೆಯಲ್ಲಾಡಿಸಿದರು. ಅಂದು ಮಧ್ಯಾಹ್ನಕ್ಕೆ ಭಾರೀ ಭೋಜನ. ಎಲ್ಲರಿಗೂ ಸಂತೋಷ. ಅಜ್ಜನಿಗೆ ತನ್ನ ಮಕ್ಕಳ ಮೊಮ್ಮಕ್ಕಳ ನಗು ಕಂಡಾಗ ಎನೋ ಸಮಾಧಾನ, ಸಂತಸ.

ಸಂಜೆಯಾಯಿತು. ಅಜ್ಜನಿಗೆ ಮೈ ಕೈಯೆಲ್ಲಾ ನೋವಾಗ ತೊಡಗಿತು. ಮಕ್ಕಳನ್ನು ಕರೆದ. ಅಜ್ಜ ಮಲಗಿದ್ದ ಕೋಣೆಗೆ ಹೋಗಿ ಎಲ್ಲರೂ ಹೊರ ಬಂದರು. ನಾಲ್ಕು ಮಕ್ಕಳೂ ಹತ್ತಿರದ ಕೋಣೆಯಲ್ಲಿ ಚಿಕ್ಕದೊಂದು ಮೀಟಿಂಗ್ ನಡೆಸಿದರು.

ಹಿರಿಯವ ಹೇಳಿದ ಅಪ್ಪನ ಅವಧಿ ಮುಗಿಯುತ್ತಾ ಬಂದಿದೆ. ಈಗಲೇ ಉಸಿರೆಳೆದು ಬಿಟ್ಟರೆ ಸ್ಮಶಾನಕ್ಕೆ ಒಯ್ಯುವವರು ಯಾರು? ಎರಡನೆಯವನೆಂದ ಇದೆಲ್ಲಾ ಜವಾಬ್ದಾರಿ ಚಿಕ್ಕವನಿಗೆ. ಅವನಿಗೆ ಅಪ್ಪಾ ಅಂದ್ರೆ ತುಂಬಾ ಇಷ್ಟ ಅಲ್ವಾ..ಅಪ್ಪನಿಗೂ ಹಾಗೆಯೇ..ಅವನೇ ಎಲ್ಲಾ ಮಾಡಿದ್ರೆ ಒಳ್ಳೆದು ಅಂತ ಹೇಳಿದ. ನೀವೆಲ್ಲಾ ನಿಮ್ಮ ನಿಮ್ಮ ಮನೆಯಲ್ಲಿ ಸುಖವಾಗಿ ಇದ್ದೀರಾ. ನಾನಿಲ್ಲಿ ಈ ಮುದಿಯನೊಂದಿಗೆ ಹೇಗೆ ಕಾಲ ಕಳೆಯುತ್ತಾ ಇದ್ದೆ ಅಂತಾ ನಿಮಗೆ ಗೊತ್ತಾ? ಈವರೆಗೆ ನಾನು ಅಪ್ಪನ ಚಾಕರಿ ಮಾಡಿದ್ದೇನೆ. ಸ್ಮಶಾನಕ್ಕೆ ಸಾಗಿಸುವ ಕಾರ್ಯವನ್ನಾದರೂ ನಿಮಗೆ ಮಾಡಬಾರದಾ?ಎಂದು ಸಿಟ್ಟಿನಿಂದಲೇ ಕೇಳಿದ ಕಿರಿಯವ. ಈ ಮೂವರು ಅಣ್ಣದಿಂದ ನಡುವೆ ಪ್ರೀತಿ ಸುಮ್ಮನೇ ನಿಂತು ಬಿಟ್ಟಳು. ಸದ್ಯ ನಾನು ಮಗಳಾಗಿದ್ದು ಬಚಾವ್!ಇಲ್ಲದಿದ್ದರೆ ಗಂಡು ಮಕ್ಕಳಂತೆ ನಾನು ಕೂಡಾ ಈ ಹೆಣದ ಹೊಣೆಯನ್ನು ಹೊರಬೇಕಾದ ಸ್ಥಿತಿ ಬರುತ್ತಿತ್ತು ಎಂದು ಮನಸ್ಸಲ್ಲೇ ಅಂದು ಕೊಂಡಳು.

ಇವರು ಇಲ್ಲಿ ಮಾತನಾಡುತ್ತಿದ್ದಂತಯೇ ಅಜ್ಜನ ಕೋಣೆಯಿಂದ ಏನೋ ಸದ್ದಾಯಿತು. "ಬುಡ್ಡ ಮರ್ ಗಯಾ" ಅನ್ನೋ ನಿಟ್ಟಿನಲ್ಲಿ ಎಲ್ಲರೂ ಅತ್ತ ಧಾವಿಸಿದರು. ಎಲ್ಲರೂ ನೋಡುತ್ತಿದ್ದರಂತೆ ಅಜ್ಜ ತನ್ನ ವಾಕಿಂಗ್ ಸ್ಟಿಕ್ ಹಿಡಿದು ಕೊಂಡು ಹೊರಟು ನಿಂತಿದ್ದಾರೆ. ಅಪ್ಪಾ ನೀವೆಲ್ಲಿಗೇ? ಮಗಳು ಪ್ರೀತಿ ಗಾಬರಿಯಾಗಿ ಕೇಳಿದಳು.. ನಿಮಗೆ ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ. ಅದಕ್ಕೇ....ನಾನೇ ಸ್ಮಶಾನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಮುದಿ ಜೀವ ಭಾರವಾದ ಹೆಜ್ಜೆಗಳನ್ನು ಹಾಕಿತು.

(ಗೆಳೆಯರೇ, ಈ ಕಥೆ ಮೂಲ ಮಲಯಾಳಂನಲ್ಲಿದೆ. ಇದನ್ನು ಯಾರು ಬರೆದದ್ದು ಅಂತಾ ಗೊತ್ತಿಲ್ಲ. ಪ್ರಸ್ತುತ ಕಥೆ ಓದಿದಾಗ ಭಾಷಾನುವಾದ ಮಾಡಬೇಕೆಂದೆನಿಸಿತು. ಭಾಷಾನುವಾದವೆಂಬ ಸಾಹಸದ ಮೊದಲ ಹೆಜ್ಜೆಯನ್ನು ಈ ಕಥೆ ಮೂಲಕ ಮುಂದಿರಿಸಿದ್ದೇನೆ. ನಿಮಗೆ ಇದು ಚೆನ್ನಾಗಿದೆ ಎಂದು ಅನಿಸಿದರೆ ಅಥವಾ ತಪ್ಪುಗಳನೇದರೂ ಕಂಡು ಬಂದರೆ ದಯವಿಟ್ಟು ನನಗೆ ತಿಳಿಸಿ.)

Comments

Popular posts from this blog

ಬಸ್ ಪಯಣದ ಸುಖ

ಕಾಡುವ ನೆನಪುಗಳಿಗೂ ಇದೆ ಘಮ

ನಾನೆಂಬ ಸ್ತ್ರೀ